ತಿರುವನಂತಪುರಂ:
ಕೇರಳ ರಾಜಕೀಯದಲ್ಲಿ ಕಳೆದ ಹಲವು ದಿನಗಳಿಂದ ಮುಂದುವರಿದಿದ್ದ ಮುಖ್ಯಮಂತ್ರಿ ಆಯ್ಕೆ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಕಾಂಗ್ರೆಸ್ ಹೈಕಮಾಂಡ್ ಹಿರಿಯ ನಾಯಕ ವಿ ಡಿ ಸತೀಶನ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಘೋಷಿಸಿದೆ. 2026ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಸರ್ಕಾರ ರಚನೆಗೆ ಸಜ್ಜಾಗಿದೆ.

ಹತ್ತು ದಿನಗಳ ಕಾಲ ನಡೆದ ಚರ್ಚೆ, ಆಂತರಿಕ ಸಮಾಲೋಚನೆ ಹಾಗೂ ಮಿತ್ರಪಕ್ಷಗಳ ಅಭಿಪ್ರಾಯಗಳ ಬಳಿಕ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಕೆ ಸಿ ವೇಣುಗೋಪಾಲನ್ ಹೆಸರು ಸಹ ಪ್ರಬಲವಾಗಿ ಕೇಳಿಬಂದಿದ್ದರೂ, ತಳಮಟ್ಟದ ಕಾರ್ಯಕರ್ತರ ಬೆಂಬಲ ಹಾಗೂ ಯುಡಿಎಫ್ನ ಪ್ರಮುಖ ಮುಖವಾಗಿ ಹೊರಹೊಮ್ಮಿದ್ದ ಕಾರಣ ಸತೀಶನ್ ಅವರಿಗೆ ಕೊನೆಗೂ ಅವಕಾಶ ದೊರೆತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸತೀಶನ್ ಆಸ್ತಿ ಎಷ್ಟು?
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಸತೀಶನ್ ಅವರ ಆಸ್ತಿ ವಿವರಗಳು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. 2026ರ ವಿಧಾನಸಭಾ ಚುನಾವಣೆಯ ವೇಳೆ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ, ಸತೀಶನ್ ಕುಟುಂಬದ ಒಟ್ಟು ಚರ ಮತ್ತು ಸ್ಥಿರ ಆಸ್ತಿಗಳ ಮೌಲ್ಯ ಸುಮಾರು 6.69 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.

ಅವರ ವೈಯಕ್ತಿಕ ಚರಾಸ್ತಿಗಳ ಮೌಲ್ಯ 53.82 ಲಕ್ಷ ರೂಪಾಯಿ ಎಂದು ಘೋಷಿಸಲಾಗಿದೆ. ಪತ್ನಿ ಲಕ್ಷ್ಮಿ ಪ್ರಿಯಾ ಅವರ ಹೆಸರಿನಲ್ಲಿ 68.45 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿಗಳಿವೆ. ಬ್ಯಾಂಕ್ ಠೇವಣಿ, ಷೇರುಗಳು, ನಗದು ಹಾಗೂ ಚಿನ್ನದ ಆಭರಣಗಳು ಇದರಲ್ಲಿ ಸೇರಿವೆ.
ಅಫಿಡವಿಟ್ ಪ್ರಕಾರ, ಸತೀಶನ್ ಅವರ ಬಳಿ 35 ಗ್ರಾಂ ಚಿನ್ನವಿದ್ದು, ಪತ್ನಿ ಲಕ್ಷ್ಮಿ ಪ್ರಿಯಾ ಅವರ ಬಳಿ ಸುಮಾರು 1,128 ಗ್ರಾಂ ಚಿನ್ನ ಇದೆ ಎಂದು ಉಲ್ಲೇಖಿಸಲಾಗಿದೆ.

ಕೋಟಿ ಮೌಲ್ಯದ ಭೂಮಿ, ಮನೆ
ಪರವೂರು ಹಾಗೂ ನೆಟ್ಟೂರು ಪ್ರದೇಶಗಳಲ್ಲಿ ಸತೀಶನ್ ಕುಟುಂಬದ ಹೆಸರಿನಲ್ಲಿ ಭೂಮಿ ಮತ್ತು ವಸತಿ ಆಸ್ತಿಗಳಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 4.27 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮಗಳ ಹೆಸರಿನಲ್ಲಿ ಸುಮಾರು 9.61 ಲಕ್ಷ ರೂಪಾಯಿ ಮೌಲ್ಯದ ಕಾರು ಕೂಡ ಇದೆ.
ಇದಕ್ಕೂ ಜೊತೆಗೆ ಕುಟುಂಬದ ಮೇಲೆ ಸುಮಾರು 41.5 ಲಕ್ಷ ರೂಪಾಯಿ ಮೌಲ್ಯದ ಗೃಹ ಹಾಗೂ ವಾಹನ ಸಾಲಗಳೂ ಇರುವುದಾಗಿ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
2026ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಮೈತ್ರಿಕೂಟ 140 ಕ್ಷೇತ್ರಗಳ ಪೈಕಿ 102 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷ ಮಾತ್ರವೇ 63 ಸ್ಥಾನಗಳನ್ನು ಗೆದ್ದಿದೆ.ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಎಡ ಪ್ರಜಾಸತ್ತಾತ್ಮಕ ರಂಗ (LDF) ಈ ಬಾರಿ ಕೇವಲ 35 ಸ್ಥಾನಗಳಿಗೆ ಸೀಮಿತವಾಗಿದೆ. ಈ ಫಲಿತಾಂಶದೊಂದಿಗೆ ಕೇರಳದಲ್ಲಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಗುವ ರಾಜಕೀಯ ಸಂಪ್ರದಾಯ ಮತ್ತೆ ಮರುಕಳಿಸಿದೆ.
ಸತೀಶನ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ.






