ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಒಂದು ವರ್ಷದ ಕಾಲ ಅನಗತ್ಯ ಚಿನ್ನ ಖರೀದಿ ಕಡಿಮೆ ಮಾಡುವಂತೆ ಕರೆ ನೀಡಿದ ಬೆನ್ನಲ್ಲೇ ಚಿನ್ನದ ಮಾರುಕಟ್ಟೆಯಲ್ಲಿ ಚರ್ಚೆ ಜೋರಾಗಿದೆ. ಇದೇ ವೇಳೆ ಕರ್ನಾಟಕ ಜುವೆಲರಿ ಅಸೋಸಿಯೇಷನ್ ಅಧ್ಯಕ್ಷ ಟಿ.ಎ. ಶರವಣ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಚಿನ್ನಾಭರಣ ಖರೀದಿಯನ್ನು ನಿಯಂತ್ರಿಸುವುದು ಭಾರತೀಯ ಸಂಪ್ರದಾಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಚಿನ್ನ ಖರೀದಿಯಲ್ಲಿ ಹೂಡಿಕೆ ಉದ್ದೇಶದ ಸಾಲಿಡ್ ಗೋಲ್ಡ್ ಖರೀದಿ ಮತ್ತು ಚಿನ್ನಾಭರಣ ಖರೀದಿ ಎಂಬ ಎರಡು ವಿಭಾಗಗಳಿವೆ. ಸಮಸ್ಯೆ ಉಂಟುಮಾಡುತ್ತಿರುವುದು ಸಾಲಿಡ್ ಗೋಲ್ಡ್ ಖರೀದಿಯೇ ಹೊರತು, ಮದುವೆ, ನಿಶ್ಚಿತಾರ್ಥ, ಕಿವಿ ಚುಚ್ಚಿಸುವ ಕಾರ್ಯಕ್ರಮ ಸೇರಿದಂತೆ ಕುಟುಂಬ ಸಂಪ್ರದಾಯಗಳಿಗೆ ಬಳಸುವ ಚಿನ್ನಾಭರಣವಲ್ಲ” ಎಂದು ಹೇಳಿದರು.

ಮುಂದು
“ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಾಭರಣ ಖರೀದಿ ಒಂದು ಭಾಗ. ಅದನ್ನು ಸಂಪೂರ್ಣವಾಗಿ ತಡೆಯುವುದು ಸಾಧ್ಯವಿಲ್ಲ. ವಿಶೇಷವಾಗಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನಾಭರಣ ಖರೀದಿಸುತ್ತಾರೆ. ಈಗಾಗಲೇ ತೆರಿಗೆ ಹೆಚ್ಚಳದಿಂದ ಅವರಿಗೆ ಸಂಕಷ್ಟ ಉಂಟಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ಚಿನ್ನದ ಮೇಲೆ ತೆರಿಗೆ ಹೆಚ್ಚಳವಾಗಿರುವುದರಿಂದ ಸಣ್ಣ ಮತ್ತು ಮಧ್ಯಮ ಜುವೆಲರಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದ ಅವರು, “ಸಣ್ಣ ಅಂಗಡಿದಾರರು ಸಾಲ ಮಾಡಿ ವ್ಯಾಪಾರ ನಡೆಸುತ್ತಿದ್ದಾರೆ. ಈ ಉದ್ಯಮದ ಮೇಲೆ ನೇರ ಮತ್ತು ಪರೋಕ್ಷವಾಗಿ ಸಾವಿರಾರು ಕುಟುಂಬಗಳು ಅವಲಂಬಿತವಾಗಿವೆ. ಹಾಲ್ಮಾರ್ಕ್, ಪ್ಯಾಕಿಂಗ್, ಡಿಸ್ಟ್ರಿಬ್ಯೂಷನ್ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಹೊಡೆತ ಬೀಳಲಿದೆ” ಎಂದು ಹೇಳಿದರು.
ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದ ಶರವಣ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು.ಇನ್ನೊಂದೆಡೆ ಪ್ರಧಾನಿ ಮೋದಿ ನೀಡಿದ ವಾಹನ ಬಳಕೆ ಕಡಿತ, ವರ್ಕ್ ಫ್ರಂ ಹೋಂ ಹಾಗೂ ಆನ್ಲೈನ್ ತರಗತಿಗಳ ಕುರಿತ ಸಲಹೆಗಳಿಗೂ ಟ್ರಾವೆಲ್ಸ್ ಉದ್ಯಮದಿಂದ ವಿರೋಧ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯ ಟ್ರಾವೆಲ್ಸ್ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಮಾತನಾಡಿ, “ಕೋವಿಡ್ ಬಳಿಕ ಈಗಷ್ಟೇ ಟ್ರಾವೆಲ್ ಉದ್ಯಮ ಚೇತರಿಸಿಕೊಳ್ಳುತ್ತಿದೆ. ಮತ್ತೆ ವರ್ಕ್ ಫ್ರಂ ಹೋಂ ಹೆಚ್ಚಾದರೆ ನಮ್ಮ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರ ಮಿತ ವ್ಯಯದ ಕರೆ ದೇಶದ ಆರ್ಥಿಕತೆ, ವಿದೇಶಿ ವಿನಿಮಯ ಉಳಿತಾಯ ಹಾಗೂ ಇಂಧನ ಬಳಕೆ ಕಡಿತದ ಉದ್ದೇಶ ಹೊಂದಿದ್ದರೂ, ಅದರ ಪರಿಣಾಮ ವಿವಿಧ ಉದ್ಯಮ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದೆ.





