ಮಂಗಳೂರು : ಕರಾವಳಿ ಜಿಲ್ಲೆಯ ಪ್ರಸಿದ್ಧ ಪುತ್ತೂರು ಶ್ರೀ ಮಹಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಈ ಬಾರಿ ಪುತ್ತೂರು ಮಹಲಿಂಗೇಶ್ವರ ಜಾತ್ರೆಯಲ್ಲಿ ಈ ಬಾರಿ ಎರಡು ಪ್ರಮುಖ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಪುತ್ತೂರು ಜಾತ್ರೆಗೆ ಈ ಬಾರಿ ನೂತನ ವಸ್ತ್ರ ಸಂಹಿತೆ ಜಾರಿಯಾಗಿದೆ. ಇದರ ಜೊತೆಯಲ್ಲಿ ಅನ್ಯಧರ್ಮೀಯರಿಗೆ ಜಾತ್ರೆಯಲ್ಲಿ ಸಂತೆ ವ್ಯಾಪಾರ ಮಾಡದಂತೆ ನಿರ್ಬಂಧ ಹೇರಲಾಗಿದೆ.
ಏಪ್ರಿಲ್ 10 ರಿಂದ 20ನೇ ತಾರೀಖಿನವರೆಗೆ ಜಾತ್ರೆ ನಡೆಯಲಿದೆ. ಏಪ್ರಿಲ್ 17ರಂದು ಪ್ರಸಿದ್ಧ ಸುಡುಮದ್ದು ಪ್ರದರ್ಶನಗಳ ʼಪುತ್ತೂರು ಬೆಡಿʼ ಕಾರ್ಯಕ್ರಮ ನಡೆಯಲಿದೆ. ಸದ್ಯ ಕರಾವಳಿ ಜಿಲ್ಲೆಯಲ್ಲಿ ನಡೆದ ಬಹುತೇಕ ಜಾತ್ರೆಗಳಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ. ಪುತ್ತೂರು ಮಹಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿಯೂ ಈ ನಿರ್ಬಂಧ ಮುಂದುವರಿದಿದೆ.

ದೇಗುಲದ ಪುಷ್ಕರಣಿಯಲ್ಲಿ ವರುಣ ದೇವರ ವಿಗ್ರಹ ಪ್ರತಿಷ್ಠಾಪನೆ ಸಂದರ್ಭದಲ್ಲಿ ಪುಷ್ಕರಣಿಗೆ ಇಳಿಯುವ ಭಕ್ತಾದಿಗಳು ಕಡ್ಡಾಯ ವಸ್ತ್ರ ಸಂಹಿತೆ ಪಾಲಿಸಬೇಕು. ಪುರುಷರು ಲುಂಗಿ, ಧೋತಿ ಧರಿಸಿದ್ರೆ ಮಹಿಳೆಯರು ಕಡ್ಡಾಯವಾಗಿ ಸೀರೆ ಉಡಬೇಕು ಎಂದು ಸೂಚಿಸಲಾಗಿದೆ. ಬ್ರಹ್ಮರಥ ಸೇವೆಯಲ್ಲಿ ಭಾಗಿಯಾಗುವವರಿಗೂ ವಸ್ತ್ರ ಸಂಹಿತೆ ಕಡ್ಡಾಯವಾಗಿದ್ದು , ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗುವವರಿಗೂ ವಸ್ತ್ರ ಸಂಹಿತೆ ಇರಲಿದೆ.
ಇನ್ನು ದೇವರ ಬ್ರಹ್ಮರಥ ಸೇವೆ ಮಾಡುವವರಿಗೂ ಈ ಕಡ್ಡಾಯ ವಸ್ತ್ರಸಂಹಿತೆ ನಿಯಮ ಅನ್ವಯವಾಗಲಿದೆ. ಕ್ಷೇತ್ರದಲ್ಲಿ ನಡೆಯುವ 10 ದಿನದ ಜಾತ್ರಾ ಮಹೋತ್ಸವದಲ್ಲೂ ಭಕ್ತರು ಸಾಂಪ್ರದಾಯಿಕ ಉಡುಗೆ ತೊಟ್ಟು ಕ್ಷೇತ್ರಕ್ಕೆ ಬರಬೇಕು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮನವಿ ಮಾಡಿಕೊಂಡಿದೆ.






