ಲೋಕಸಭಾ ಚುನಾವಣಾ ಪ್ರಕ್ರಿಯೆಗಳು ಮುಕ್ತಾಯ ಆಗುವ ಕೊನೇ ಹಂತದಲ್ಲಿ ಭಾರತೀಯರು ಬಂದು ನಿಂತಿದ್ದಾರೆ. NDA ಮೈತ್ರಿಕೂಟಕ್ಕೆ ಬಹುಮತ ಬಂದಿದ್ದು, ಎನ್ಡಿಎ ಮೈತ್ರಿಕೂಟದಿಂದ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ನರೇಂದ್ರ ಮೋದಿ ಅವರಿಗೆ ಎನ್ಡಿಎ ಮೈತ್ರಿಕೂಟದ ಸಂಪೂರ್ಣ ಬೆಂಬಲ ಇದೆ ಎಂದು ಈಗಾಗಲೇ ಮೈತ್ರಿಕೂಟದ ನಾಯಕರು ಸಹಿ ಹಾಕಿ ಕೊಟ್ಟಿದ್ದಾರೆ ಎನ್ನುವ ಮಾಹಿತಿ ದೆಹಲಿಯ ಕೆಂಪುಕೋಟೆಯಿಂದ ಹೊರ ಬಿದ್ದಿದೆ. ಆದರೆ ಎನ್ಡಿಎ ಮೈತ್ರಿಕೂಟ ಆಯ್ಕೆ ಮಾಡಿದ ವ್ಯಕ್ತಿ ಪ್ರಧಾನಿ ಆಗುವುದರಲ್ಲಿ ಯಾವುದೇ ಕಾನುನು ತೊಡಕು ಇರುವುದಿಲ್ಲ. ಆದರೆ ನೈತಿಕತೆ ಪ್ರಶ್ನೆ ಎನ್ನುವುದು ಬಂದಾಗ ಬಿಜೆಪಿ ಸೋಲಿನ ಹೊಣೆಯನ್ನು ಹೊರುವುದು ಯಾರು..? ಅನ್ನೋ ಪ್ರಶ್ನೆ ಎದುರಾಗಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಹಾಗು ಎನ್ಸಿಪಿ ಪಾರ್ಟಿಯನ್ನು ಇಬ್ಭಾಗ ಮಾಡಿ ಅಧಿಕಾರ ಹಿಡಿದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈ ಬಾರಿ ಲೋಕಸಭೆಯಲ್ಲಿ ಬಿಜೆಪಿ ಸೇರಿದಂತೆ ಸರ್ಕಾರದಲ್ಲಿ ಭಾಗಿಯಾಗಿರುವ ಎನ್ಸಿಪಿ ಹಾಗು ಶಿವಸೇನೆ ಹೀನಾಯ ಫಲಿತಾಂಶ ಪಡೆದಿವೆ. ಇಬ್ಭಾಗದಿಂದ ಹಿಂಸೆ ಅನುಭವಿಸಿದ್ದ ಉದ್ಧವ್ ಠಾಕ್ರೆ ಬಣದ ಶಿವಸೇನೆ ಹಾಗು ಶರದ್ ಪವಾರ್ ಬಣದ ಎನ್ಸಿಪಿ ಜೊತೆಗೆ ಕಾಂಗ್ರೆಸ್ ಭರ್ಜರಿ ಸ್ಥಾನಗಳಲ್ಲಿ ಗೆದ್ದು ಬೀಗುತ್ತಿದೆ. ಈ ಸೋಲಿನ ಹೊಣೆಯನ್ನು ನಾನು ಹೊರುತ್ತೇನೆ ಎಂದು ಡಿಸಿಎಂ ಆಗಿರುವ ದೇವೇಂದ್ರ ಫಡ್ನಾವಿಸ್ ಬಹಿರಂಗವಾಗಿ ಹೇಳಿದ್ದಾರೆ. ಜೊತೆಗೆ ಡಿಸಿಎಂ ಸ್ಥಾನದಿಂದ ಹೊರಬರುವುದಕ್ಕೆ ಹೈಕಮಾಂಡ್ ಅನುಮತಿಯನ್ನೂ ಕೇಳಿದ್ದಾರೆ. ಇದು ನೈತಿಕತೆ ಇರುವ ನಾಯಕ ಮಾಡಬೇಕಿರುವ ಕೆಲಸ. ಹೈಕಮಾಂಡ್ ಒಪ್ಪುವುದು ಬಿಡುವುದು ಬೇರೆ ವಿಚಾರ. ಆದರೆ ಸೋಲಿನ ಹೊಣೆಯನ್ನು ಹೊರುವ ಕೆಲಸ ಮಾಡಿದ್ದಾರೆ.
ಓರ್ವ ರಾಜ್ಯ ನಾಯಕನಿ9ಗೆ ಇರುವ ಸೂಕ್ಷ್ಮತೆ ರಾಷ್ಟ್ರೀಯ ನಾಯಕರಿಗೆ ಇಲ್ಲದಂತಾಗಿದೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿ ಕಳೆದ ಬಾರಿ 282 ಸ್ಥಾನಗಳನ್ನು ಗೆದ್ದು ಅಧಿಕಾರ ನಡೆಸಿತ್ತು. ಆದರೆ ಈ ಬಾರಿ ಸರಳ ಬಹುಮತದ ಗೆರೆಯನ್ನು ದಾಟುವುದಕ್ಕೆ ಸಾಧ್ಯವಾಗಿಲ್ಲ. ಅಂದ ಮೇಲೆ ದೇಶದ ಜನರು ಬಿಜೆಪಿಯನ್ನು ತಿರಸ್ಕಾರ ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಸೋಲಿನ ಹೊಣೆಯನ್ನು ಹೊರಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಎನ್ಡಿಎ ಮೈತ್ರಿಕೂಟದ ಸರ್ಕಾರದಲ್ಲಿ ಪ್ರಧಾನಿ ಆಗುವುದಕ್ಕೆ ಪೇಟ ಕಟ್ಟಿಕೊಂಡು ಸಜ್ಜಾಗಿದ್ದಾರೆ. ಅಂದರೆ ನೈತಿಕತೆ ವಿಚಾರ ಬರುವುದಿಲ್ಲ ಎನ್ನುವುದನ್ನು ಸಾಬೀತು ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲೇ ಪ್ರಧಾನಿ ಆಗಬೇಕು ಎಂದರೆ ಬೇರೆಯವರಿಗೆ ಅವಕಾಶ ಕೊಡಬಹುದು ಅಲ್ಲವೇ..?
ಯುದ್ಧಕ್ಕೆ ಹೋದ ರಾಜನ ಮೇಲೆ ಜನರು ಅಥವಾ ಸೇನೆ ದಂಗೆ ಎದ್ದರೆ ರಾಜನ ವಿರುದ್ಧ ಜನಾಭಿಪ್ರಾಯವಿದೆ ಎಂದು ಅರ್ಥ. ಆದರೆ ನಾನು ಮತ್ತೆ ಬೇರೊಬ್ಬರ ಸಪೋರ್ಟ್ನಿಂದ ರಾಜನೇ ಆಗ್ತೀನಿ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಲ್ಲ ಎನ್ನಬಹುದು. ತಿರಸ್ಕೃತಗೊಂಡ ನಾಯಕ ಬೇರೊಂದು ಮಾರ್ಗದಲ್ಲಿ ಅಧಿಕಾರ ಹಿಡಿದರೆ ಮುಂದಿನ ದಿನಗಳಲ್ಲಿ ಯಾವ ಮಾರ್ಗವೂ ಇಲ್ಲದಂತೆ ಸಂಪೂರ್ಣವಾಗಿ ಮುಚ್ಚಿಬಿಡುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಎನ್ಡಿಎ ಮೈತ್ರಿಕೂಟ ಎಲ್ಲರೂ ಸೇರಿದರೂ ಅಧಿಕಾರ ಸಿಗಬಾರದು ಆ ರೀತಿಯ ನಿರ್ಧಾರವನ್ನು ದೇಶದ ಜನರೇ ತೆಗೆದುಕೊಂಡರೆ ಅಚ್ಚರಿಯಿಲ್ಲ. ಹೀಗಾಗಿ NDA ಮೈತ್ರಿಕೂಟಕ್ಕೆ ಬಹುಮತವಿದೆ. ಆದರೆ ಬಿಜೆಪಿಗೆ ಬಹುಮತ ಹೋಗಿದೆ. ಎನ್ಡಿಎ ಮೈತ್ರಿಕೂಟದ ನಾಯಕನಾಗಿ ಬೇರೊಬ್ಬರ ಆಯ್ಕೆ ಮಾಡಬಹುದಿತ್ತು. ಮೋದಿಯೇ ಸ್ವತಃ ನೈತಿಕತೆ ಆಧಾರದಲ್ಲಿ ಬೇರೊಬ್ಬರನ್ನು ಆಯ್ಕೆ ಮಾಡಲು ಸೂಚಿಸಬೇಕಿತ್ತು. ದೇಶದ ಜನರು ತಿರಸ್ಕಾರ ಮಡಿದ್ದಾರೆ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕು ಅಲ್ಲವೇ..?
ಕೃಷ್ಣಮಣಿ