ಕೇರಳ ಮತ್ತು ಕರ್ನಾಟಕದ ಗಡಿ ಭಾಗವಾಗ ಸುಲ್ತಾನ್ ಬತೇರಿ ಪ್ರದೇಶದಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ಬಿ ಜಿ ಕೃಷ್ಣಮೂರ್ತಿ ಮತ್ತು ಕಬಿನಿ ದಳ ಕಮ್ಯಾಂಡರ್ ಸಾವಿತ್ರಿ ಅವರನ್ನು ಮಂಗಳವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.
ಮಾವೋವಾದಿ ನಕ್ಸಲ್ ಸಂಘಟನೆಯ ಕರ್ನಾಟಕದ ಸಂಘಟನೆಯ ನಾಯಕತ್ವ ವಹಿಸಿದ್ದ ಬಿ ಜಿ ಕೃಷ್ಣಮೂರ್ತಿ ಮತ್ತು ಕೇರಳ ಮತ್ತು ಕರ್ನಾಟಕದ ಗಡಿಯ ಭಾಗದ ಕಾರ್ಯಾಚರಣೆಯ ಹೊಣೆ ಹೊತ್ತಿದ್ದ ಕಬಿನಿ ದಳದ ಮುಖ್ಯಸ್ಥೆ ಸಾವಿತ್ರಿ ಕುರಿತು ಮಹತ್ವದ ಸುಳಿವಿನ ಮೇಲೆ ಕೇರಳ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಬಳಿಕ ಎನ್ ಐಎ ಗೆ ಮಾಹಿತಿ ನೀಡಿ, ಅವರ ಬಂಧನವನ್ನು ಎನ್ ಐಎ ಅಡಿಯಲ್ಲಿ ಅಧಿಕೃತಗೊಳಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಕೇರಳದಲ್ಲಿ ಬಿ ಜಿ ಕೃಷ್ಣಮೂರ್ತಿ ವಿರುದ್ಧ ಮೂರು ಪ್ರಕರಣಗಳು ಮತ್ತು ಸಾವಿತ್ರಿ ವಿರುದ್ಧ ಹದಿನೆಂಟು ಪ್ರಕರಣಗಳು ದಾಖಲಾಗಿದ್ದು, ಯುಎಪಿಎ ಕಾಯ್ದೆಯಡಿ ಅವರನ್ನು ಬಂಧಿಸಲಾಗಿದೆ. 2000ನೇ ಸಾಲಿನಿಂದಲೇ ನಕ್ಸಲ್ ಚಳವಳಿಯ ಪ್ರಮುಖ ನಾಯಕನಾಗಿ ಭೂಗತನಾಗಿದ್ದ 48 ವರ್ಷದ ಕೃಷ್ಣಮೂರ್ತಿ, ಕುಪ್ಪು ದೇವರಾಜ್ ಸೇರಿದಂತೆ ಎಂಟು ಮಂದಿ ನಕ್ಸಲ್ ನಾಯಕರ ಹತ್ಯೆಯ ಬಳಿಕ ಪಶ್ಚಿಮಘಟ್ಟ ವಿಭಾಗೀಯ ಮಾವೋವಾದಿ ಸಂಘಟನೆಯ ಸಂಪೂರ್ಣ ನಾಯಕತ್ವ ವಹಿಸಿದ್ದ. ಅಲ್ಲದೆ ಮಾವೋವಾದಿ ನಕ್ಸಲ್ ಸಂಘಟನೆಯ ಕೇಂದ್ರ ಸಮಿತಿಯ ಸದಸ್ಯನೂ ಆಗಿದ್ದ ಕೃಷ್ಣಮೂರ್ತಿ ಮೇಲೆ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಟ್ಟು 53 ಪ್ರಕರಣಗಳು ದಾಖಲಾಗಿದ್ದು, ಸಾವಿತ್ರಿ ಮೇಲೆ 22 ಕೇಸುಗಳು ದಾಖಲಾಗಿವೆ ಎನ್ನಲಾಗಿದೆ.
ಶೃಂಗೇರಿ ಸಮೀಪದ ಬುಕಡಿಬೈಲು ಮೂಲದವನಾದ ಕೃಷ್ಣಮೂರ್ತಿ ಸುಳಿವು ನೀಡಿದವರಿಗೆ ಐದು ಲಕ್ಷ ರೂ. ಬಹುಮಾನವನ್ನು ಕರ್ನಾಟಕ ಸರ್ಕಾರ ಘೋಷಿಸಿದ್ದರೆ, ಕಳಸ ಸಮೀಪದ ಜರಿಮನೆಯ ಸಾವಿತ್ರಿ ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.

ಮಲೆನಾಡು ಪ್ರಾಂತ್ಯದಲ್ಲಿ ಬಿಜಿಕೆ ಎಂದೇ ಹೆಸರಾಗಿದ್ದ ಬಿ ಜಿ ಕೃಷ್ಣಮೂರ್ತಿ, ಸಂಘಟನೆಯ ವಿಜಯ್ ಎಂಬ ಹೆಸರಿನಿಂದ ಕಾರ್ಯಾಚರಣೆ ನಡೆಸುತ್ತಿದ್ದ. 1998ರಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಬಿಜಿಕೆ, ತುಂಗಾ ಮೂಲ ಉಳಿಸಿ ಸೇರಿದಂತೆ ವಿವಿಧ ಜನಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ. ಬಳಿಕ ಸಾಕೇತ್ ರಾಜನ್ ಪಶ್ಚಿಮಘಟ್ಟದ ಮಲೆನಾಡು ಪ್ರಾಂತದಲ್ಲಿ ಮಾವೋವಾದಿ ಸಂಘಟನೆಯನ್ನು ಕಟ್ಟಲು ಆರಂಭಿಸಿದಾಗ, ಸಾಕೇತ್ ಜೊತೆ ಕೈಜೋಡಿಸಿ 2003ರಿಂದಲೇ ಭೂಗತನಾಗಿದ್ದ.
2005ರಲ್ಲಿ ಶೃಂಗೇರಿ ಸಮೀಪದ ಮೆಣಸಿನಹಾಡ್ಯದಲ್ಲಿ ನಡೆದ ಎನ್ ಕೌಂಟರಿನಲ್ಲಿ ಸಾಕೇತ್ ರಾಜನ್ ಹತ್ಯೆಯಾದ ಬಳಿಕ ಕರ್ನಾಟಕದ ಮಾವೋವಾದಿ ಚಳವಳಿಯ ನಾಯಕತ್ವವನ್ನು ವಹಿಸಿಕೊಂಡಿದ್ದ ಕೃಷ್ಣಮೂರ್ತಿ, ಬಳಿಕ 2015ರವರೆಗೆ ಸುಮಾರು ಒಂದು ದಶಕದ ಕಾಲ ಮಲೆನಾಡಿನಲ್ಲಿ ನಕ್ಸಲ್ ಚಳವಳಿಯ ನೇತೃತ್ವವಹಿಸಿದ್ದ. ಆದರೆ ಆ ಒಂದು ದಶಕದ ಅವಧಿಯಲ್ಲಿ ಹಲವು ನಕ್ಸಲ್ ನಾಯಕರು ಪೊಲೀಸ್ ಕಾರ್ಯಾಚರಣೆಯಲ್ಲಿ ಹತರಾದರು ಮತ್ತು ಮತ್ತೊಂದು ಕಡೆ ನಕ್ಸಲ್ ಪ್ರದೇಶಾಭಿವೃದ್ಧಿ ಪ್ಯಾಕೇಜ್ ಹಾಗೂ ಬಿಗಿ ಕೂಂಬಿಂಗ್ ಕಾರ್ಯಾಚರಣೆಗಳ ಪರಿಣಾಮವಾಗಿ ಮಲೆನಾಡಿನಲ್ಲಿ ಸಂಘಟನೆಯ ಬಲ ಕುಸಿಯಿತು. ಜೊತೆಗೆ ಆರಂಭದಲ್ಲಿ ನಕ್ಸಲೀಯರ ಪರ ಸಹಾನುಭೂತಿ ಹೊಂದಿದ್ದ ಮಲೆನಾಡಿನ ಹಳ್ಳಿಗಾಡಿನ ಜನ, ಒಡೆಯರ ಮಠ ಎನ್ ಕೌಂಟರ್ ನಲ್ಲಿ ಸ್ಥಳೀಯ ಅಮಾಯಕರ ಹತರಾದ ಬಳಿಕ ನಕ್ಸಲರ ವಿಷಯದಲ್ಲಿ ಅಸಹಕಾರ ತೋರತೊಡಗಿದ್ದರು. ಆ ಎಲ್ಲಾ ಹಿನ್ನೆಲೆಯಲ್ಲಿ ಮಲೆನಾಡಿನಿಂದ ಸಂಘಟನೆಯ ಕಾರ್ಯಚಟುವಟಿಕೆಯನ್ನು ಕರ್ನಾಟಕ, ಕೇರಳ ಮತ್ತು ತಮಿಳುನಾಡು ಗಡಿಯ ಮದುಮಲೈ ಬೆಟ್ಟಶ್ರೇಣಿಗೆ ಮಾವೋವಾದಿ ಚಟುವಟಿಕೆಯನ್ನು ಸ್ಥಳಾಂತರಿಸುವಲ್ಲಿ ಬಿಜಿಕೆ ಪ್ರಮುಖ ಪಾತ್ರ ವಹಿಸಿದ್ದ.
ಈ ನಡುವೆ, 2018ರಲ್ಲಿ ಸ್ವತಃ ತನ್ನ ತಂದೆ ಗೋಪಾಲ್ ರಾವ್ ತೀರಿಕೊಂಡಾಗ ಕೂಡ ಅವರ ಅಂತ್ಯಕ್ರಿಯೆಯೂ ಬಿಜಿಕೆ ಬಂದಿರಲಿಲ್ಲ. ಜೊತೆಗೆ ಅಲರ್ಜಿ ಮುಂತಾದ ಅನಾರೋಗ್ಯದಿಂದ ಬಳಲುತ್ತಿದ್ದ ಬಿಜಿಕೆ, ಸಂಘಟನೆಯ ಹಲವು ಪ್ರಮುಖರು ಸಂಘಟನೆಯನ್ನು ತೊರೆದು ಮುಖ್ಯವಾಹಿನಿಗೆ ಬಂದ ಹಿನ್ನೆಲೆಯಲ್ಲಿ ತಾನೂ ಮುಖ್ಯವಾಹಿನಿಗೆ ಬರುವ ಮನಸ್ಸು ಮಾಡಿದ್ದ. ಆ ಕುರಿತು ಗೌರಿ ಲಂಕೇಶ್ ಸೇರಿದಂತೆ ಕೆಲವರು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ಆತನ ಶರಣಾಗತಿಗೆ ಪ್ರಯತ್ನ ನಡೆಸಿದ್ದರು. ಬಿಜಿಕೆಯನ್ನು ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಪೇಜಾವಶ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಕೂಡ ಪ್ರಯತ್ನ ಮಾಡಿದ್ದರು. ನಕ್ಸಲರನ್ನು ಮರಳಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸ್ವಾಮೀಜಿ ನಡೆಸಿದ್ದ ಅಭಿಯಾನದ ಅಂಗವಾಗಿ ಅವರು ಬಿಜಿಕೆಯ ಮನೆಗೂ ಭೇಟಿ ನೀಡಿ, ಮನೆಯವರ ಮೂಲಕ ಆತನ ಮನವೊಲಿಸುವ ಯತ್ನ ಮಾಡಿದ್ದರು.

ತೀರ್ಥಹಳ್ಳಿ ತಾಲೂಕಿನ ಹೊಸಗದ್ದೆಯ ಪ್ರಭಾ ಎಂಬ ನಕ್ಸಲ್ ನಾಯಕಿಯನ್ನು ಭೂಗತರಾಗಿದ್ದುಕೊಂಡೇ ವಿವಾಹವಾಗಿದ್ದ ಬಿಜಿಕೆ, ಆಕೆಯ ನಿಧನದ ನಂತರ(ಪೊಲೀಸರು ನಿಧನಳಾಗಿದ್ದಾಳೆ ಎನ್ನುತ್ತಿದ್ದರೂ, ಸ್ಥಳೀಯರು ಆಕೆ ಬದುಕಿದ್ದಾಳೆ ಎನ್ನುತ್ತಾರೆ!) ಕೇರಳದ ಕಡೆ ಹೆಚ್ಚು ಸಕ್ರಿಯನಾಗಿದ್ದ. ಅಪಾರ ಓದು ಮತ್ತು ಸಂಘಟನೆಯ ಅನುಭವ ಹೊಂದಿರುವ ಬಿಜಿಕೆ, ಸ್ವತಃ ಒಳ್ಳೆಯ ಕವಿ ಕೂಡ ಆಗಿದ್ದು, ಭೂಗತನಾಗುವ ಮುನ್ನ ಮಲೆನಾಡು ಭಾಗದ ನಾಗರಿಕ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ.
ಒಂದೂವರೆ ದಶಕದ ನಕ್ಸಲ್ ಚಟುವಟಿಕೆ ಬಿರುಸುಗೊಂಡಿದ್ದ ಹೊತ್ತಿನಲ್ಲೇ ಸಂಘಟನೆಯ ಮಾಸ್ಟರ್ ಮೈಂಡ್ ಆಗಿದ್ದ ಸಾಕೇತ್ ರಾಜನ್ ಹತ್ಯೆಯ ಮೂಲಕ ಮಲೆನಾಡಿನ ಮಾವೋವಾದಿ ಬಲಕ್ಕೆ ಮರ್ಮಾಘಾತದ ಏಟು ಬಿದ್ದಿತ್ತು. ಇದೀಗ ಅಳಿದುಳಿದ ಬಲದ ಮೇಲೆ ಕೇರಳ-ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಅಸ್ತಿತ್ವದ ಹೆಣಗಾಟದಲ್ಲಿದ್ದ ಸಂಘಟನೆಗೆ, ಬಿಜಿಕೆ ಬಂಧನದ ಮೂಲಕ ಮತ್ತೊಂದು ಭಾರೀ ಹೊಡೆತ ಬಿದ್ದಿದೆ. ನಕ್ಸಲ್ ಚಳವಳಿಯನ್ನು ದಕ್ಷಿಣ ಭಾರತದಲ್ಲಿ ಸಂಪೂರ್ಣ ಬುಡಮೇಲು ಮಾಡುವ ನಿಟ್ಟಿನಲ್ಲಿ ಬಿಜಿಕೆ ಬಂಧನ ಬಹಳ ನಿರ್ಣಾಯಕ ಪೆಟ್ಟು ಎಂದೇ ಹೇಳಲಾಗುತ್ತಿದೆ.






