ಅಮೆರಿಕಾ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಶನಿವಾರ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನ ಭೇಟಿ ಮಾಡಿದ್ದರು. ಈ ವೇಳೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಿದ್ದಾರೆ. ಉಭಯ ದೇಶಗಳ ನಡುವಿನ ಹಲವು ಮಹತ್ವದ ವಿಚಾರಗಳ ಬಗ್ಗೆ ಸಮಾಲೋಚನೆ ಮಾಡಿದರು. ಇನ್ನು, ಇದೇ ವೇಳೆ ದೇಶದಲ್ಲಿ ಭಯೋತ್ಪಾದಕ ಗುಂಪುಗಳು ಕೆಲಸ ಮಾಡುತ್ತಿವೆ. ಇವುಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳುವಂತೆ ಇಸ್ಲಾಮಬಾದ್ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಉಭಯ ನಾಯಕರು ತಿಳಿಸಿದರು.
‘ಕಮಲಾ ಹ್ಯಾರಿಸ್ ಅವರೇ, ನೀವು ಇಡೀ ಜಗತ್ತಿಗೆ ಸ್ಫೂರ್ತಿಯಾಗಿದ್ದೀರಿ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ನಿಮ್ಮ ನಾಯಕತ್ವದಡಿ ಭಾರತ ಮತ್ತು ಯುಎಸ್ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಎತ್ತರಕ್ಕೆ ಏರುವ ಆತ್ಮವಿಶ್ವಾಸ ಇದೆ. ನಮ್ಮ ದೇಶದ ಜನ ನಿಮ್ಮ ಆಗಮನಕ್ಕಾಗಿ ಕಾಯುತ್ತಿದ್ದಾರೆ. ನಮ್ಮ ರಾಷ್ಟ್ರಕ್ಕೆ ಭೇಟಿ ಕೊಡಿ ಎಂದು ಮೋದಿ ಆಮಂತ್ರಣ ನೀಡಿದ್ದಾರೆ. ಕೊರೊನಾ ಸೋಂಕಿನ ಎರಡನೇ ಅಲೆಯ ಸಂದರ್ಭದಲ್ಲಿ ಅಮೆರಿಕ ಮಾಡಿದ ಸಹಾಯವನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದರು.
ಕಮಲಾ ಹ್ಯಾರಿಸ್ ಭೇಟಿಯಿಂದ ಸಂತೋಷ ಆಗಿದೆ. ತಮ್ಮ ಸಾಧನೆಯಿಂದ ಇಡೀ ಜಗತ್ತಿಗೇ ಸ್ಫೂರ್ತಿಯಾದವರು ಹ್ಯಾರಿಸ್. ಭಾರತ ಮತ್ತು ಅಮೆರಿಕ ಬಾಂಧವ್ಯವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ, ಹಲವು ವಿಚಾರಗಳ ಬಗ್ಗೆ ನಾವು ಮಾತುಕತೆ ನಡೆಸಿದ್ದೇವೆ ಎಂದಿದ್ದಾರೆ ಮೋದಿ.
ಅಮೇರಿಕಾ ಮತ್ತು ಭಾರತ ಭದ್ರತೆ ವಿಚಾರದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಎರಡೂ ದೇಶದ ಜನರ ಹಿತಾಸಕ್ತಿಗಾಗಿ ಪ್ರಜಾಪ್ರಭುತ್ವ ರಕ್ಷಣೆಗಾಗಿ ಕೆಲಸ ಮಾಡಲಿವೆ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ. ಈ ವೇಳೆ ಉಭಯ ನಾಯಕರ ಮಧ್ಯೆ ಜಾಗತಿಕ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಈ ಸಭೆಯೂ ಪಾಕಿಸ್ತಾನ ಮತ್ತು ಚೀನಾ ಬೆಂಬಲಿತ ಭಯೋತ್ಪಾದಕ ಕಾರ್ಯದಲ್ಲಿ ತೊಡಗಿರುವವರಿಗೆ ನಡುಕ ಸೃಷ್ಟಿಸಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.
ಉಭಯ ನಾಯಕರ ಭೇಟಿಯ ವೇಳೆ ಇತ್ತೀಚಿನ ಜಾಗತಿಕ ಬೆಳವಣಿಗೆಗಳ ಕುರಿತಾಗಿ ಪ್ರಸ್ತಾಪಿಸಲಾಗಿದೆ. ಆಫ್ಘಾನಿಸ್ತಾವನ್ನು ತಾಲಿಬಾನ್ ವಶಪಡಿಸಿಕೊಂಡ ಬಗ್ಗೆಯೂ ಚರ್ಚಿಸಲಾಗಿದೆ. ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಮುಕ್ತ, ಸ್ವತಂತ್ರ ಬದ್ಧತೆಯನ್ನು ಪುನರುಚ್ಛರಿಸಲಾಗಿದೆ.
ಕಮಲಾ ಹ್ಯಾರಿಸ್ಗೆ ಪ್ರಧಾನಿ ಮೋದಿಯವರು ಭಾರತದ ವಿಶೇಷ ಗಿಫ್ಟ್ ಒಂದು ನೀಡಿದರು. ಇದು ಕಮಲಾ ಹ್ಯಾರಿಸ್ ತಾತ ವಿ.ಪಿ. ಗೋಪಾಲನ್ ಅವರಿಗೆ ಸಂಬಂಧಿಸಿದ್ದ ಕಾಣಿಕೆಯಾಗಿತ್ತು. ವಿ.ಪಿ ಗೋಪಾಲನ್ ಕೇಂದ್ರದಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಇವರಿಗೆ ಸಂಬಂಧಿಸಿದ ಭಾರತದ ಗೆಝೆಟನಲ್ಲಿರುವ ದಾಖಲೆ ಪತ್ರದ ಪ್ರತಿಯನ್ನು ಹ್ಯಾರಿಸ್ಗೆ ಕಾಣಿಕೆಯಾಗಿ ನೀಡಲಾಯ್ತು.
ಒಟ್ಟಾರೆ ಕಮಲಾ ಹ್ಯಾರಿಸ್ ಅವರಿಗೂ ಮೋದಿ ಅವರನ್ನ ಭೇಟಿಯಾದ ಈ ದಿನ ಸ್ಮರಣೀಯವಾಗಿ ಉಳಿಯಲಿದೆ. ಹಾಗೆಯೇ ಉಭಯ ನಾಯಕರ ಭೇಟಿ ಜಾಗತಿಕ ದೃಷ್ಟಿಯಿಂದಲೂ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಯೋತ್ಪಾದನೆಯಲ್ಲಿ ತೊಡಗಿರುವವರಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಉಭಯ ದೇಶಗಳ ನಡುವಿನ ಭಾಂದವ್ಯ ಇನ್ನಷ್ಟು ಗಟ್ಟಿಗೊಳ್ಳುವ ನಿರೀಕ್ಷೆಯೂ ಹೆಚ್ಚಾಗಿದೆ ಎಂದು ಕೇಂದ್ರ ಬಿಜೆಪಿ ಸಚಿವರು ಟ್ವೀಟ್ ಮಾಡಿದ್ದಾರೆ.