ಮೈಸೂರಿನ ರಂಗಾಯಣದ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕರ್ನಾಟಕದ ಸಾಂಸ್ಕೃತಿಕ ಲೋಕದ ಹೆಮ್ಮೆಯ ಕೂಸು ರಂಗಾಯಣ. 32 ವರ್ಷಗಳ ಹಿಂದೆ ಬಿ ವಿ ಕಾರಂತರು ಸೃಷ್ಟಿಸಿದ ಈ ಕಲಾಕೃತಿ ಅನೇಕ ತಿರುವುಗಳನ್ನು ಪಡೆದುಕೊಂಡು, ಹಲವಾರು ಸವಾಲುಗಳನ್ನೆದುರಿಸಿ, ಹತ್ತಾರು ಕಲಾರಾಧಕರ ಸಾರಥ್ಯದಲ್ಲಿ ನಡೆದು ಬಂದಿದೆ. ಭಾರತದ ಬಹುತ್ವ ಸಂಸ್ಕೃತಿಯನ್ನು ಬಿಂಬಿಸುವುದಷ್ಟೇ ಅಲ್ಲದೆ, ಕ್ರಮೇಣ ಶಿಥಿಲವಾಗುತ್ತಿರುವಂತೆ ಕಾಣುತ್ತಿರುವ ಬಹುಸಂಸ್ಕೃತಿಯ ನೆಲೆಗಳನ್ನು ಸಂರಕ್ಷಿಸುವ ಸಾಂಸ್ಕೃತಿಕ ಮಾರ್ಗಗಳನ್ನು ಶೋಧಿಸುತ್ತಲೇ ಇದೆ. ರಂಗಭೂಮಿಯ ಮೇಲಿನ ನವನವೀನ ಪ್ರಯೋಗಗಳ ಮೂಲಕ ಸಮಾಜದ ಅಂತರಂಗದ ಹುಳುಕುಗಳಿಗೆ, ಬಾಹ್ಯ ಜಗತ್ತಿನ ಕೊರತೆಗಳಿಗೆ ಮುಖಾಮುಖಿಯಾಗುತ್ತಾ, ಭೂತ ವಾಸ್ತವದೊಡನೆ ಅನುಸಂಧಾನ ನಡೆಸುತ್ತಾ ಸಮಾಜದ ಓರೆಕೋರೆಗಳನ್ನು ತಿದ್ದುವ ನಿಟ್ಟಿನಲ್ಲಿ ರಂಗಾಯಣ ಬಹುದೂರ ಸಾಗಿದೆ.
ಈ ಹಾದಿಯಲ್ಲಿನ ಹೆಜ್ಜೆ ಗುರುತುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಜಾತಿ, ಮತ, ಧರ್ಮ, ಭಾಷೆ, ಸಮುದಾಯ ಮತ್ತು ಜನಾಂಗೀಯ ಅಸ್ಮಿತೆಗಳನ್ನು ದಾಟಿ ರಂಗಭೂಮಿಯ ಕಲಾಭಿವ್ಯಕ್ತಿಯ ಮೂಲಕ ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶ ರವಾನಿಸುವುದನ್ನೂ ಗುರುತಿಸಬಹುದು. ಸಾಹಿತ್ಯದಿಂದಾಗಲೀ, ರಂಗಭೂಮಿಯಿಂದಾಗಲೇ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ ಎಂದು ವಾದಿಸುವವರು ಇತಿಹಾಸಕ್ಕೆ ವಿಮುಖರಾಗಿಯೇ ಮಾತನಾಡುತ್ತಾರೆ. ಆಧುನಿಕ ಮಾನವ ಸಮಾಜದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಲು ರಂಗಭೂಮಿ ಮತ್ತು ಸಾಹಿತ್ಯಾಭಿವ್ಯಕ್ತಿಯ ಕೊಡುಗೆ ಹೇರಳವಾಗಿರುವುದು ಚಾರಿತ್ರಿಕ ಸತ್ಯ. ಏಕೆಂದರೆ ಈ ಎರಡೂ ಅಭಿವ್ಯಕ್ತಿ ಸಾಧನಗಳು ಜನರ ನಡುವಿನಿಂದಲೇ ಹುಟ್ಟಿಕೊಳ್ಳುತ್ತವೆ , ಜನಸಾಮಾನ್ಯರ ಬದುಕಿನೊಂದಿಗೇ ಬೆಸೆದುಕೊಂಡು, ವ್ಯಕ್ತಿ ಮತ್ತು ಸಮಾಜದ ಹೆಜ್ಜೆಗಳನ್ನು ನಿಷ್ಕರ್ಷೆಗೊಳಪಡಿಸುತ್ತವೆ.
ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿ ರಂಗಾಯಣ ಆರಂಭದಿಂದಲೂ ತನ್ನ ಸ್ವಂತಿಕೆ ಮತ್ತು ಜಾತ್ಯತೀತ ಅಸ್ತಿತ್ವವನ್ನು ಕಾಪಾಡಿಕೊಂಡೇ ಬಂದಿದೆ. ಈ ಬಾರಿಯ ಬಹುರೂಪಿ ನಾಟಕೋತ್ಸವದ ಸಮಾರೋಪಕ್ಕೆ ರಂಗಭೂಮಿ, ಸಾಹಿತ್ಯ ಮತ್ತು ಭಾರತದ ಬಹುತ್ವ ಸಂಸ್ಕೃತಿಯ ಪರಿವೆಯೇ ಇಲ್ಲದ ಚಕ್ರವರ್ತಿ ಸೂಲಿಬೆಲೆ ಅವರನ್ನು ಆಹ್ವಾನಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಬಹುರೂಪಿ ನಾಟಕೋತ್ಸವ ಮೂಲತಃ ರಂಗಭೂಮಿಯ ನೂತನ ಪ್ರಯೋಗಗಳ ವೈವಿಧ್ಯತೆಯನ್ನು ಬಿಂಬಿಸುವ ಒಂದು ರಾಷ್ಟ್ರೀಯ ಹಬ್ಬ. ಈ ನಾಟಕೋತ್ಸವದಲ್ಲಿ ಪಾಲ್ಗೊಳ್ಳುವ ಸಾಂಸ್ಕೃತಿಕ ತಂಡಗಳು, ನಾಟಕಗಳು ಮತ್ತು ಉಪನ್ಯಾಸಕರು ಭಾರತದ ಬಹುತ್ವದ ನೆಲೆಗಳನ್ನು ಶೋಧಿಸಿ ವಿಭಿನ್ನ ಭಾಷಿಕ, ಮತೀಯ, ಧಾರ್ಮಿಕ, ಪ್ರಾದೇಶಿಕ ಮತ್ತು ಪ್ರಾಂತೀಯ ಸಾಂಸ್ಕೃತಿಕ ಸೌಂದರ್ಯವನ್ನು ಬಿಂಬಿಸಲು ಪ್ರಯತ್ನಿಸುವುದು ಈವರೆಗೂ ನಡೆದುಬಂದಿರುವ ಚರಿತ್ರೆ.
ಪಂಥ ರಾಜಕಾರಣದ ನಡುವೆ
ಯಾವುದೇ ಒಂದು ಕೋಮು, ಪಂಥ, ಜಾತಿ ಮತ್ತು ಮತಗಳ ಸ್ಪರ್ಶ ಇಲ್ಲದೆಯೇ ಇಷ್ಟು ವರ್ಷಗಳ ಕಾಲ ನಡೆದುಬಂದಿರುವ ಬಹುರೂಪಿ ಮತ್ತು ರಂಗಾಯಣದ ಹೆಜ್ಜೆಗಳ ನಡುವೆ ಎಡ-ಬಲ-ನಡು ಪಂಥೀಯ ಭಾವನೆಗಳನ್ನು ಉತ್ಖನನ ಮಾಡುವ ಪ್ರಯತ್ನಗಳನ್ನು ಈಗ ಮಾಡಲಾಗುತ್ತಿದೆ. ರಂಗಾಯಣದ ಮಾಜಿ ನಿರ್ದೇಶಕರಾದ ಬಿ ವಿ ರಾಜಾರಾಂ ಅವರೂ ಸಹ ತಮ್ಮ ಪ್ರಜಾವಾಣಿಯ ಲೇಖನವೊಂದರಲ್ಲಿ ಎಡಪಂಥೀಯ-ಬಲಪಂಥೀಯ ಹೆಜ್ಜೆ ಗುರುತುಗಳನ್ನು ಶೋಧಿಸಲು ಯತ್ನಿಸಿದ್ದಾರೆ. ಇದೊಂದು ಬಾಲಿಶ ಪ್ರಯತ್ನವಷ್ಟೇ ಅಲ್ಲ , ಅಪ್ರಬುದ್ಧ ವ್ಯಾಖ್ಯಾನವೂ ಹೌದು. ಏಕೆಂದರೆ ರಂಗಭೂಮಿ ಮತ್ತು ಯಾವುದೇ ಕಲಾಭಿವ್ಯಕ್ತಿಯ ಸಾಧನಗಳಲ್ಲಿ ಪಂಥೀಯ ಧೋರಣೆಗಳನ್ನು ಹೆಕ್ಕಿ ತೆಗೆಯಲಾಗುವುದಿಲ್ಲ. ವ್ಯಕ್ತಿಗತವಾಗಿ ರೂಢಿಸಿಕೊಂಡು ಬಂದಿರುವ ನಂಬಿಕೆ, ವಿಶ್ವಾಸ ಮತ್ತು ಧೋರಣೆಗಳನ್ನು ಮೀರಿ ಪಾತ್ರಗಳಲ್ಲಿ ಲೀನವಾಗುವ ಕಲಾವಿದರಷ್ಟೇ ರಂಗಭೂಮಿಯನ್ನು ಪ್ರತಿನಿಧಿಸಲು ಸಾಧ್ಯ ಎನ್ನುವ ಸರಳ ಸತ್ಯ ಈ ಮಹನೀಯರಿಗೆ ಇರಬೇಕಿತ್ತಲ್ಲವೇ ?
“ರಂಗಭೂಮಿಯ ಕರ್ತವ್ಯ ಕೇವಲ ಸಮಾಜವನ್ನು ಬಿಂಬಿಸುವುದಷ್ಟೇ ಅಲ್ಲ, ಪರಿವರ್ತಿಸುವುದೂ ಹೌದು ” ಎಂದು ಖ್ಯಾತ ನಾಟಕಕಾರ ಬ್ರೆಕ್ಟ್ ಹೇಳುತ್ತಾರೆ. ಕಲಾಭಿವ್ಯಕ್ತಿಯ ಯಾವುದೇ ಮಾಧ್ಯಮಗಳಿಗೆ ಇದು ಅನ್ವಯಿಸುವಂತಹುದು. ನಮ್ಮ ಸುತ್ತಲಿನ ಸಮಾಜದಲ್ಲಿ ಬೇರೂರಿರಬಹುದಾದ ಅನಿಷ್ಠಗಳನ್ನು, ಹುಳುಕುಗಳನ್ನು, ಅಪಸವ್ಯಗಳನ್ನು ಮತ್ತು ಮಾನವ ವಿರೋಧಿ ಧೋರಣೆಗಳನ್ನು ಹೊರೆಗೆಳೆಯುತ್ತಲೇ ಇದರೊಟ್ಟಿಗೇ ಜೀವಂತಿಕೆಯೊಂದಿಗೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿರಬಹುದಾದ ಮಾನವೀಯ ಮೌಲ್ಯಗಳನ್ನೂ ಪ್ರೇಕ್ಷಕರ ಮುಂದಿಡುವ ಮೂಲಕ ರಂಗಭೂಮಿ ಸತ್ಯಾಸತ್ಯತೆಯ ನಿಷ್ಕರ್ಷೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಿಲ್ಲ. ಬದಲಾಗಿ ಒಂದು ನಾಟಕವನ್ನು ನೋಡುವ ಪ್ರೇಕ್ಷಕರಿಗೆ ನಿಷ್ಕರ್ಷೆಯ ಸ್ವಾತಂತ್ರ್ಯವನ್ನು ನೀಡುತ್ತದೆ. ಇದಮಿತ್ತಂ ಎನ್ನುವ ರೀತಿಯ ಯಾವುದೇ ಸೈದ್ಧಾಂತಿಕ ನೆಲೆಗಳ ಅಭಿವ್ಯಕ್ತಿಯೂ ಸಹ ಬಾಹ್ಯ ಸಮಾಜದ ನಿಷ್ಕರ್ಷೆಗೊಳಗಾಗುತ್ತದೆ.
ಹಾಗಾಗಿಯೇ ರಂಗಭೂಮಿಯ ವಿನೂತನ ಪ್ರಯೋಗಗಳಲ್ಲಿ ಇತಿಹಾಸದೊಡನೆ ಅನುಸಂಧಾನ ಕಾಣುವಷ್ಟೇ ಪರಿಣಾಮಕಾರಿಯಾಗಿ, ಚರಿತ್ರೆಯ ವಿಭಿನ್ನ ಹೆಜ್ಜೆಗಳ ಮುಖಾಮುಖಿಯಾಗುವುದನ್ನೂ ಕಾಣುತ್ತೇವೆ. ಒಂದೆರಡು ಗಂಟೆಗಳ ಕಾಲ ರಂಗಮಂಚದ ಮೇಲೆ ಪಾತ್ರಧಾರಿಗಳು ವ್ಯಕ್ತಪಡಿಸುವ ಬೌದ್ಧಿಕ ಚಿಂತನೆಗಳು ಮತ್ತು ಸಾಂಸ್ಕೃತಿಕ ಆಲೋಚನೆಗಳು ಯಾವುದೇ ಸೈದ್ಧಾಂತಿಕ ಹೊದಿಕೆ ಹೊಂದಿರಲು ಸಾಧ್ಯವಿಲ್ಲ. ಆದರೆ ಸೈದ್ಧಾಂತಿಕ ಚಿಂತನೆಗಳ ಅನುಸಂಧಾನದೊಡನೆ, ಸಮಾಜದಲ್ಲಿ ಎದುರಾಗುವ ಸವಾಲುಗಳಿಗೆ ಮುಖಾಮುಖಿಯಾಗುವ ರೀತಿಯಲ್ಲಿ ನಾಟಕಗಳು ರೂಪುಗೊಳ್ಳುತ್ತವೆ. ನಾಟಕದ ಕರ್ತೃವಾಗಲೀ, ನಿರ್ದೇಶಕರಾಗಲೀ ಅಥವಾ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವ ನಟರಾಗಲೀ ತಮ್ಮ ವ್ಯಕ್ತಿಗತ ಆಲೋಚನಾ ನೆಲೆಗಳನ್ನು ಬದಿಗಿಟ್ಟು ತಮ್ಮ ಕಲಾಭಿವ್ಯಕ್ತಿಯನ್ನು ಜನರ ಮುಂದಿಡುತ್ತಾರೆ.
ಮುಂದುವರೆಯಲಿದೆ…..