ಮೈಸೂರಿನ ಜೆಎಸ್ಎಸ್ ಕಾಲೇಜು ಮುಂಭಾಗ ಕೃಷ್ಣರಾಜ ಕ್ಷೇತ್ರದಲ್ಲಿ ನಿರ್ಮಾಣ ಆಗಿದ್ದ ಬಸ್ ನಿಲ್ದಾಣ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಮೈಸೂರು – ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಇದು ಮಸಲ್ಮಾನ್ ಮಾದರಿ, ಈ ಕಟ್ಟಡ ನಿರ್ಮಾಣ ಆಗಿರುವುದು ಅಕ್ರಮವಾಗಿದೆ. ಇದನ್ನು ಒಡೆದು ಹಾಕಬೇಕು. ಅಧಿಕಾರಿಗಳು ಒಡೆದು ಹಾಕದಿದ್ದರೆ ನಾನೇ ಜೆಸಿಬಿ ತಂದು ಈ ಬಸ್ ನಿಲ್ದಾಣವನ್ನು ತೆರವು ಮಾಡುವ ಕೆಲಸ ಮಾಡುತ್ತೇನೆ ಎಂದು ಗುಡುಗಿದ್ದರು. ಅದು ಮೈಸೂರು ಅರಮನೆಯ ಮೇಲಿರುವ ಇಂಡೋ ಸಾರ್ಸನಿಕ್ ಶೈಲಿಯ ಗುಮ್ಮಟ ಎಂದು ಹಲವಾರು ಜನರು ಪ್ರತ್ಯುತ್ತರ ನೀಡಿದ್ದರೂ ಕೇಳದ ಸಂಸದರು ನಾಲ್ಕು ದಿನಗಳ ಗುಡುವು ನೀಡಿದ್ದರು. ಆ ಬಳಿಕ ಸ್ವಲ್ಪ ತಡವಾಗಿ ಆದರೂ ಪರವಾಗಿಲ್ಲ, ಬಸ್ ನಿಲ್ದಾಣ ಒಡೆದು ಹಾಕುತ್ತೇನೆ. ಇದು ಸತ್ಯ ಎಂದು ಗುಡುಗಿದ್ದರು. ಸಂಸದ ಪ್ರತಾಪ್ ಸಿಂಹ ಆಕ್ರೋಶದ ಬಳಿಕ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಕಣ್ಣೀರು ಹಾಕಿದ್ದರು. ಯಾವುದೇ ಅಕ್ರಮ ಮಾಡಿಲ್ಲ. ಇಂಡೋ ಸಾರ್ಸನಿಕ್ ಶೈಲಿಯಲ್ಲಿ ಅಧಿಕಾರಿಗಳ ಅನುಮತಿ ಬಳಿಕ ನಿರ್ಮಾಣ ಮಾಡಲಾಗಿದೆ ಎಂದು ಅವಲತ್ತುಕೊಂಡಿದ್ದರು.
ಗುಂಬಜ್ ಮಾದರಿ ಮೇಲೆ ಕಳಸ ನಿರ್ಮಾಣದ ಬಗ್ಗೆಯೂ ಕೊಂಕು ಮಾತನಾಡಿದ್ದ ಸಂಸದರಿಗೆ ಶಾಸಕ ರಾಮದಾಸ್ ತಿರುಗೇಟು ನೀಡಿದ್ದರು. ಸಂಸದರು ಒಡೆಯುತ್ತೇನೆ ಎಂದ ಮೇಲೆ ಕಳಸ ನಿರ್ಮಾಣ ಮಾಡಿದ್ದಲ್ಲ, ಮೊದಲೇ ನಿರ್ಮಾಣ ಆಗಿತ್ತು ಎಂದು ಗೂಗಲ್ ಫೋಟೋ ರಿಲೀಸ್ ಮಾಡಿದ್ದರು. ಶಾಸಕರ ನಡೆಗೆ ನೇರವಾಗಿ ದಾಳಿ ಮಾಡಿದ್ದ ಸಂಸದ ಪ್ರತಾಪ್ ಸಿಂಹ, ಅಧಿಕಾರಿಗಳು ನೀಡಿರುವ ಅನುಮತಿಯಲ್ಲಿ ಗುಂಬಜ್ ಮಾದರಿಯೇ ಇಲ್ಲ. ಆ ಬಳಿಕ ಶಾಸಕರ ಪಿಎ ಗುಂಬಜ್ ಮಾದರಿಯನ್ನು ನೀಡಿದ್ದಾರೆ. ಆದರೆ ಅದರಲ್ಲಿ ಸೀಲು ಸಹಿ ಇಲ್ಲ ಎಂದು ಕಿಚಾಯಿಸಿದ್ದರು. ಇಷ್ಟೆಲ್ಲಾ ಆದ ಬಳಿಕ 10 ಲಕ್ಷ ವೆಚ್ಚದ ಬಸ್ ನಿಲ್ದಾಣ ಡೆಮಾಲಿಷ್ ಮಾಡಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಒಂದು ವಾರದ ಗಡುವು ನೀಡಿದ್ದರು. ಆದರೆ ಯಾವುದೂ ಆದಂತೆ ಕಾಣಿಸುತ್ತಿಲ್ಲ. ಸಂಸದ ಪ್ರತಾಪ್ ಸಿಂಹ ಕೂಡ ಜೆಸಿಬಿ ತರಲಿಲ್ಲ. ಅದರ ಬದಲಿಗೆ ರಾಮದಾಸ್ ಕಾಲಿಗೆ ಬಿದ್ದಿದ್ದರು.
ರಾಮದಾಸ್ ನೀಡುವ ಸ್ಪಷ್ಟೀಕರಣಕ್ಕೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡುತ್ತಲೇ ಇದ್ದರು. ಅಂತಿಮವಾಗಿ ಸಂಸದರು ನನ್ನನ್ನು ಪಕ್ಷ ಬಿಡಿಸಲು ಈ ರೀತಿ ಕಿರುಕುಳ ಕೊಡುತ್ತಿದ್ದಾರೆ ಎಂದಿದ್ದರು ಶಾಸಕ ರಾಮದಾಸ್. ಅದಕ್ಕೆ ಮತ್ತೆ ತಿರುಗೇಟು ನೀಡಿದ್ದ ಸಂಸದ ಪ್ರತಾಪ್ ಸಿಂಹ, ನಾನು ಶಾಸಕರಿಗೆ ತಿರುಗೇಟು ನೀಡುವಷ್ಟು ಮಟ್ಟಕ್ಕೆ ಬೆಳೆದಿಲ್ಲ. ಶಾಸಕ ರಾಮದಾಸ್ ಅವರ ಬಳಿ ಇರುವ ಹಣದಿಂದ ನನ್ನನ್ನು ಸುಟ್ಟು ಹಾಕಬಹುದು. ಸ್ವತಃ ನರೇಂದ್ರ ಮೋದಿ ಕೂಡ ಮೈಸೂರಿಗೆ ಬಂದಿದ್ದಾಗ ಅವರ ಬೆನ್ನು ತಟ್ಟಿದ್ದರು ಎನ್ನುವ ಮೂಲಕ ರಾಮದಾಸ್ ಭ್ರಷ್ಟಾಚಾರ ಮಾಡಿ ಹಣ ಸಂಪಾದನೆ ಮಾಡಿದ್ದಾರೆ ಅನ್ನೋದ್ರ ಜೊತೆಗೆ ಪ್ರಧಾನಿಯನ್ನು ಎಳೆದು ತಂದಿದ್ದರು. ಇದಕ್ಕೆ ಮೌನದ ಉತ್ತರ ನೀಡಿದ್ದ ಶಾಸಕ ರಾಮದಾಸ್, ಸುದ್ದಿಯನ್ನು ಎಲ್ಲಿಗೆ ಮುಟ್ಟಿಸಬೇಕೋ ಅಲ್ಲಿಗೆ ನೇರವಾಗಿ ಮುಟ್ಟಿಸಿದ್ದರು. ಇದೀಗ ಎಲ್ಲವೂ ಗಪ್ಚುಪ್. ಯಾವ ಮುಸ್ಲಿಂ ಇಲ್ಲ, ಯಾವ ಗುಂಬಜ್ ಇಲ್ಲ.
ಸಂಸದ ಪ್ರತಾಪ್ ಸಿಂಹ ಬಸ್ ನಿಲ್ದಾಣ ಕೆಡವಲೇ ಬೇಕು ಎಂದಾಗ ವಾಗ್ದಾಳಿ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಯಾವನ್ ರೀ ಅವನು, ಜನಪ್ರತಿನಿಧಿ ಆದವನಿಗೆ ಜವಾಬ್ದಾರಿ ಇಲ್ವಾ..? ನಿರ್ಮಾಣ ಮಾಡಿರುವ ಬಸ್ ನಿಲ್ದಾಣ ಒಡೆಯುವ ಹೇಳಿಕೆ ಕೊಟ್ಟಿದ್ದಾನೆ ಎಂದಿದ್ದರು. ಎಸ್.ಎ ರಾಮದಾಸ್ ಸಂಸದ ಪ್ರತಾಪ್ ಸಿಂಹ ಅವರ ಎಲ್ಲಾ ಕಿತಾಪತಿಯನ್ನು ಆರ್ಎಸ್ಎಸ್ ಮುಖಂಡರ ಬಳಿಗೆ ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ಆ ಬಳಿಕ ಆರ್ಎಸ್ಎಸ್ ಮುಖಂಡರು ಸಂಸದ ಪ್ರತಾಪ್ ಸಿಂಹ ಅವರನ್ನು ಕರೆದು ವಾರ್ನ್ ಮಾಡಿದ್ದಾರೆ ಎನ್ನಲಾಗಿದೆ. ಶಾಸಕ ರಾಮದಾಸ್ ಅವರ ಬಳಿ ಕ್ಷಮೆ ಕೋರುವಂತೆಯೂ ಸೂಚನೆ ಹೋಗಿದ್ಯಂತೆ. ಇದೇ ಕಾರಣದಿಂದ ಮೈಸೂರಿನ ಗನ್ ಹೌಸ್ ಬಳಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಏಕಾಂಗಿಯಾಗಿ ಬಂದಿದ್ದ ಸಂಸದ ಪ್ರತಾಪ್ ಸಿಎಂ ಶಾಸಕ ರಾಮದಾಸ್ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದರು. ಆದರೆ ರಾಮದಾಸ್ ಮಾತ್ರ ಕಿಂಚಿತ್ತು ರಿಯಾಕ್ಷನ್ ಕೊಡಲಿಲ್ಲ. ಇದೀಗ ಶಂಖದಿಂದ ಬಂದ ತೀರ್ಥ ಎನ್ನುವ ಹಾಗೆ ಸಿಂಹ ಸುಮ್ಮನಾಗಿದ್ದಾರೆ.