~ಡಾ. ಜೆ ಎಸ್ ಪಾಟೀಲ ಅವರ ಬರಹ:-
೭೦೦ ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತ್ರೀವೇಣಿಯಲ್ಲಿ ಇಸ್ಲಾಮಿಕ್ ಆಕ್ರಮಣಕಾರರು ಪ್ರಮುಖ ಹಿಂದೂ ತೀರ್ಥಯಾತ್ರೆಯಾಗಿರುವ ಕುಂಭ ಮೇಳವನ್ನು ನಿಲ್ಲಿಸಿದ್ದರು ಎಂದು ಕೆನಡಾದ ಸಂಶೋಧಕ ಅಲನ್ ಮೊರಿನಿಸ್ ಅವರ ೧೯೭೯ ರ ಪಿಎಚ್ಡಿ ಪ್ರಬಂಧದ ಒಂದು ಭಾಗವನ್ನು ತಿರುಚಲಾಗಿದೆ ಎಂಬ ಆರೋಪದ ಅನೇಕ ವಿವರಗಳನ್ನು ಹಾಗು ಆತನ ಸಂದರ್ಶನವನ್ನು ಅಂಕಣಕಾರ ಅಜೋಯ್ ಆಶೀರ್ವಾದ್ ಮಹಾಪ್ರಶಾಸ್ತಾ ಅವರು ಇದೇ ಮೇ ೨೨, ೨೦೨೩ ರ ‘ದಿ ವೈರ್’ ವೆಬ್ ಜರ್ನಲ್ಲಿನಲ್ಲಿ ವಿವರವಾಗಿ ಬರೆದಿದ್ದಾರೆ. ಅವರ ಲೇಖನ ಹಾಗು ಸಂದರ್ಶನದ ಸಾರಾಂಶವನ್ನು ನಾನು ಇಲ್ಲಿ ವಿಮರ್ಶಿಸಿದ್ದೇನೆ. ಮೇ ೧೮, ೨೦೨೩ ರಂದು, ಭಾರತೀಯ ದೈನಿಕ ‘ದಿ ಟೆಲಿಗ್ರಾಫ್ˌ ಕೆನಡಾದ ಮಾನವಶಾಸ್ತ್ರಜ್ಞ ಅಲನ್ ಮೊರಿನಿಸ್ ಅವರ ಸಂಪಾದಕೀಯವನ್ನು ಪ್ರಕಟಿಸಿತು. ಅದರಲ್ಲಿ ಅವರು ಪ್ರಮುಖ ಹಿಂದೂ ತೀರ್ಥಯಾತ್ರೆ ಕುಂಭ ಮೇಳವನ್ನು ಮುಸ್ಲಿಮ್ ಆಕ್ರಮಣಕಾರರು ೭೦೦ ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತ್ರೀವೇಣಿಯಲ್ಲಿ ನಿಲ್ಲಿಸಿದ್ದರು ಎಂದು ಹಿಂದುತ್ವವಾದಿಗಳು ತಮ್ಮ ೧೯೭೯ ರ ಪಿಎಚ್ಡಿ ಪ್ರಬಂಧದ ಭಾಗವನ್ನು ತಿರುಚಿದ್ದಾರೆ ಎಂದು ಆರೋಪಿಸಿದ್ದಾರಂತೆ.
ತ್ರೀವೇಣಿಯಲ್ಲಿ ಪ್ರಮುಖ ಹಿಂದೂ ತೀರ್ಥಯಾತ್ರೆಯ ಕುರಿತು ವ್ಯಾಪಕ ಪ್ರಚಾರಾರ್ಥವಾಗಿ ಹಿಂದುತ್ವವಾದಿಗಳು ತನ್ನ ಸಂಶೋಧನಾ ಪ್ರಬಂಧದ ಭಾಗವನ್ನು ತಮಗೆ ಬೇಕಾದಂತೆ ತಿರುಚಿದ್ದರ ಹಿಂದೆ ಸಮಾಜದಲ್ಲಿ ಮುಸ್ಲಿಮ್ ದ್ವೇಷವನ್ನು ಹುಟ್ಟುಹಾಕುವ ಉದ್ದೇಶವಿತ್ತು ಎಂದು ಮೊರಿನಿಸ್ ಹೇಳಿದ್ದಾರಂತೆ. ಗುಪ್ತ ಅಜೆಂಡಾವನ್ನು ಹೊಂದಿರುವ ಹಿಂದುತ್ವವಾದಿಗಳು ನನ್ನ ಪ್ರಬಂಧದ ಒಂದು ಭಾಗವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿದ್ದಾರೆ ಎಂದು ಮೊರಿನಿಸ್ ತಮ್ಮ ಲೇಖನದಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಫೆಬ್ರವರಿ ತಿಂಗಳಲ್ಲಿ, ಪ್ರಧಾನಿ ಮೋದಿ ತಮ್ಮ ೯೮ ನೇ ಮನ್ ಕಿ ಬಾತ್ ರೇಡಿಯೊ ಭಾಷಣದಲ್ಲಿ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತ್ರಿವೇಣಿ ಪ್ರದೇಶದಲ್ಲಿ ಕುಂಭಮೇಳ ಯಾತ್ರೆಯ ಪುನರುಜ್ಜೀವನದ ಬಗ್ಗೆ ಅತೀವ ಸಂತೋಷವನ್ನು ವ್ಯಕ್ತಪಡಿಸಿದ್ದರು. ಈ ಕುಂಭಮೇಳದ ವಿಶೇಷತೆ ಎಂದರೆ ೭೦೦ ವರ್ಷಗಳ ನಂತರ ಇದು ಪುನಃ ಆರಂಭಗೊಂಡಿರುವುದು. ಎರಡು ವರ್ಷಗಳ ಹಿಂದೆ, ಸ್ಥಳೀಯರು ‘ತ್ರೀವೇಣಿ ಕುಂಭೋ ಪೊರಿಚಲೋನಾ ಶೋಮಿತಿ’ ಸ್ಥಾಪಿಸುವ ಮೂಲಕ ಉತ್ಸವವನ್ನು ಮತ್ತೆ ಪ್ರಾರಂಭಿಸಿದ್ದಾರೆ. ಅದಕ್ಕಾಗಿ ಮೋದಿಯವರು ಸ್ಥಳಿಯರೆಲ್ಲರನ್ನು ಅಭಿನಂದಿಸಿದ್ದರು ಎನ್ನುತ್ತಾರೆ ಲೇಖಕರು.
ಸ್ಥಳೀಯರು ನಮ್ಮ ಹಿಂದೂ ಸಂಪ್ರದಾಯವನ್ನು ಜೀವಂತವಾಗಿರಿಸಿಕೊಂಡುˌ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಿದ್ದಾರೆ ಎಂದು ಮೋದಿಯವರು ರೇಡಿಯೊ ಭಾಷಣದಲ್ಲಿ ಪ್ರಶಂಸಿಸಿದ್ದರ ಕುರಿತು ಲೇಖಕರು ಇಲ್ಲಿ ಸ್ಮರಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ತ್ರಿವೇಣಿಯು ಪುರಾತನ ಕಾಲದಿಂದಲೂ ಹಿಂದೂ ಧಾರ್ಮಿಕ ಕಾರ್ಯಗಳು ನೆರವೇರಿಸುವ ಒಂದು ಪ್ರಮುಖ ಸ್ಥಳವಾಗಿದೆ. ಕುಂಭಮೇಳವನ್ನು ನೆಪವಾಗಿಟ್ಟುಕೊಂಡು ಹಿಂದುತ್ವದ ಅತಿರೇಕಿಗಳು ತಮ್ಮ ರಾಜಕೀಯ ಗುರಿ ಸಾಧನೆಗಾಗಿ ನನ್ನ ಸಂಶೋಧನಾ ಪ್ರಬಂಧದಲ್ಲಿನ ಒಂದಷ್ಟು ಭಾಗವನ್ನು ಉದ್ದೇಶಪೂರ್ವಕವಾಗಿ ತಿರುಚುತ್ತಿದ್ದಾರೆ. ಐತಿಹಾಸಿಕ ಸತ್ಯವೆಂದರೆ ತ್ರೀವೇಣಿಯಲ್ಲಿ ಯಾವತ್ತೂ ಕುಂಭಮೇಳ ನಡೆದಿರಲಿಲ್ಲ, ಮತ್ತು ಈಗ ಅದು ಕುಂಭಮೇಳದ ‘ಪುನರುಜ್ಜೀವನ’ ಎಂದು ಹಿಂದುತ್ವವಾದಿಗಳು ಸುಳ್ಳನ್ನು ಹರಡಿದ್ದಾರೆ. ನನ್ನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಬೋಡ್ಲಿಯನ್ ಲೈಬ್ರರಿಯಲ್ಲಿರುವ ಡಾಕ್ಟರೇಟ್ ಪ್ರಬಂಧವನ್ನು ಯಾರೊ ತಿರುಚಿದ್ದಾರೆ. ನನ್ನ ಪ್ರಬಂಧದಲ್ಲಿರುವ ಮೂಲ ಹಾಳೆಯನ್ನು ಬದಲಾಯಿಸಿ ತಮಗೆ ಬೇಕಾದದ್ದನ್ನು ಅಲ್ಲಿ ಅವರು ನಾಜೂಕಾಗಿ ಸೇರಿಸಿದ್ದಾರೆ ಎಂದು ಮೋರಿನಿಸ್ ಅವರು ಆರೋಪಿಸಿದ ಕುರಿತು ವರದಿಯಾಗಿದೆ.
ತ್ರೀವೇಣಿಯಲ್ಲಿನ ಸಂಕ್ರಾಂತಿಯ ಹಿಂದೂ ಧಾರ್ಮಿಕ ಸ್ನಾನದ ಬಗೆಗಿನ ದಾಖಲೆಯ ಮೂಲ ಭಾಗವನ್ನು ತೆಗೆದುಹಾಕಿ ಅದರ ಬದಲಿಗೆ “ಕುಂಭ-ಮೇಳ” ನಡೆಯುತ್ತಿದ್ದ ಸ್ಥಳ ಎಂದು ಸೇರಿಸಲಾಗಿದೆ ಎಂದು ಮೋರಿನಿಸ್ ಆರೋಪ ಮಾಡಿರುವ ಬಗ್ಗೆ ಬರೆಯಲಾಗಿದೆ. ತ್ರಿವೇಣಿಯು ೧೪ ನೇ ಶತಮಾನದ ನಾಯಕ ಗಾಜಿ ಜಾಫರ್ ಖಾನ್ ಅವರ ಸಮಾಧಿ ಸ್ಥಳವಾಗಿದೆ ಎಂದಿರುವ ಮೊರಿನಿಸ್ ಅದು ಈಗ ದರ್ಗಾವಾಗಿ ಮಾರ್ಪಟ್ಟಿದೆಯಂತೆ. ಈಗ ಆ ದರ್ಗಾದಲ್ಲಿ ಹಿಂದೂ ಪ್ರತಿಮಾಶಾಸ್ತ್ರದೊಂದಿಗೆ ಹೋಲಿಕೆಯಾಗುವ ಕಟ್ಟಡ ಸಾಮಗ್ರಿಗಳು ದೊರೆತಿರುವುದರಿಂದ ಈ ಮೊದಲು ಅದು ಹಿಂದೂ ದೇವಾಲಯವಾಗಿತ್ತು ಎಂದು ಕೆಲವರು ಹಕ್ಕು ಸಾಧಿಸುತ್ತಿದ್ದಾರೆ. ಆದರೆ ಆ ದರ್ಗಾದಲ್ಲಿ ಕೆಲವು ಬೌದ್ಧ ಮತ್ತು ಜೈನ ಧರ್ಮಕ್ಕೆ ಸಂಬಂಧಿಸಿದ ಚಿತ್ರಗಳು ಕೂಡ ದೊರೆತಿರುವದರ ಬಗ್ಗೆ ಹಿಂದುತ್ವವಾದಿಗಳು ಮೌನ ತಾಳುತ್ತಾರೆ ಎನ್ನುತ್ತಾರೆ ಮೋರಿನಿಸ್. ಈ ಸುಳ್ಳುಕೋರರದ್ದು ಕೇವಲ ಕುಂಭಮೇಳವನ್ನು ‘ಪುನರುಜ್ಜೀವನಗೊಳಿಸುವ ಅಜೆಂಡಾ ಅಷ್ಟೆ ಅಲ್ಲದೆ, ಅಲ್ಲಿನ ದರ್ಗಾವನ್ನು ನಾಶಗೊಳಿಸಿ ಆ ಸ್ಥಳದಲ್ಲಿ ಕುಂಭಮೇಳ ಮರುಹಟ್ಟು ಪಡೆಯಿತೆಂದು ಸುಳ್ಳು ಪ್ರಚಾರ ಮಾಡುವ ಕಾರ್ಯಸೂಚಿ ಹಿಂದುತ್ವವಾದಿಗಳು ಹೊಂದಿದ್ದಾರೆ’ ಎಂದು ಮೊರಿನಿಸ್ ಬರೆದಿದ್ದಾರಂತೆ.
ಮೊರಿನಿಸ್ ರನ್ನು ‘ದಿ ವೈರ್’ ಪತ್ರಿಕೆಯ ವರದಿಗಾರರು ಸಂದರ್ಶಿಸಿದಾಗ ಅವರು ತಮ್ಮ ಪ್ರಬಂಧದ ಕುರಿತು ವಿವರವಾಗಿ ಚರ್ಚಿಸಿದ್ದಾರೆ ಮತ್ತು ರಾಜಕೀಯ ಲಾಭಕ್ಕಾಗಿ ಭಾರತದಲ್ಲಿ ಹಿಂದುತ್ವವಾದಿಗಳು ತನ್ನ ಪ್ರಬಂಧದ ಒಂದು ಭಾಗವನ್ನು ಮಾರ್ಫಿಂಗ್ ಮಾಡಿದ್ದಾರೆ ಎಂದಿರುವ ಕುರಿತು ಅಂಕಣದಲ್ಲಿ ಉಲ್ಲೇಖಿಸಲಾಗಿದೆ. ನಿಮ್ಮ ಪ್ರಬಂಧವನ್ನು ತಿರುಚಿರುವ ಕುರಿತು ನಿಮಗೆ ಹೇಗೆ ತಿಳಿಯಿತು ಎಂದಾಗ “ಮೇ ೧೨ ರಂದು, (ಹಿರಿಯ ಪತ್ರಕರ್ತ) ನಿಲಂಜನ್ ಮುಖೋಪಾಧ್ಯಾಯ ಅವರಿಂದ ನನಗೆ ಇಮೇಲ್ ಬಂದಿತು, ಆ ದಿನ ಆನ್ಲೈನ್ ಜರ್ನಲ್ನಲ್ಲಿ ಸ್ನಿಗ್ಧೇಂದು ಭಟ್ಟಾಚಾರ್ಯ ಬರೆದ ಆರ್ಟಿಕಲ್ ೧೪ ರಲ್ಲಿ ಪ್ರಕಟವಾದ ತುಣುಕು ನನ್ನ ಪ್ರಬಂಧದ ನಕಲಿ ಭಾಗವನ್ನು ಉಲ್ಲೇಖಿಸುತ್ತಿತ್ತು. ಮರುದಿನ ನಾನು ಶ್ರೀ ಭಟ್ಟಾಚಾರ್ಯರನ್ನು ಸಂಪರ್ಕಿಸಿದೆ ಮತ್ತು ಅವರು ಮಾರ್ಪಡಿಸಿದ ನನ್ನ ಪ್ರಬಂಧದ ಪಿಡಿಎಫ್ ಅನ್ನು ನನಗೆ ರವಾನಿಸಿದರು. ನಾನು ಆ ಆವೃತ್ತಿಯನ್ನು ನನ್ನ ಪ್ರಬಂಧದ ಹಾರ್ಡ್ ಕಾಪಿಗೆ ಹೋಲಿಸಿ ನೋಡಿದಾಗ ನನ್ನ ಪ್ರಬಂಧ ತಿರುಚಿದ್ದು ದೃಢಪಟ್ಟಿತು ಎನ್ನುತ್ತಾರೆ ಮೋರಿನಿಸ್. ನನ್ನ ಸಂಶೋಧನಾ ಪ್ರಬಂಧವು ನಾನು ೧೯೭೯ ರಲ್ಲಿ ಪೂರ್ಣಗೊಳಿಸಿದೆ. ಪಶ್ಚಿಮ ಬಂಗಾಳದ ೩ ಪ್ರಮುಖ ಯಾತ್ರಾ ಸ್ಥಳಗಳನ್ನು ಹೋಲಿಸುವುದು ನನ್ನ ಸಂಶೋಧನೆಯ ಉದ್ದೇಶವಾಗಿತ್ತು ಎನ್ನುವ ಮೋರಿನಿಸ್ ಹೇಳಿಕೆಯನ್ನು ಲೇಖಕರು ಉಲ್ಲೇಖಿಸಿದ್ದಾರೆ.
ನನ್ನ ಪ್ರಬಂಧದಲ್ಲಿ ತಾರಕೇಶ್ವರ, ನವದ್ವೀಪ ಮತ್ತು ತಾರಾಪೀಠ ಈ ಮೂರು ಪ್ರಮಖ ಸ್ಥಳಗಳು ಯಾವಯಾವ ಸಾಮಾನ್ಯ ಸಂಪ್ರದಾಯಗಳನ್ನು ಹೊಂದಿವೆ ಮತ್ತು ಅವುಗಳ ಆರಾಧನಾ ವಿಧಾನಗಳಿಗೆ ಅನುಗುಣವಾಗಿ ಯಾವ ಯಾವ ವ್ಯತ್ಯಾಸಗಳಿವೆ ಎಂಬುದನ್ನು ನಾನು ವಿಮರ್ಶೆ ಮಾಡಿದ್ದೇನೆ ಎಂದಿದ್ದಾರೆ ಮೋರಿನಿಸ್. ಹೂಗ್ಲಿ ನದಿಯ ತ್ರೀವೇಣಿ ಸಂಗಮದಲ್ಲಿ ಕುಂಭಮೇಳವನ್ನು ಎಂದಿಗೂ ಆಚರಿಸಲಾಗಿಲ್ಲ ಆದರೆ ಮಾಸಿಕ ಸೌರ ಸಂಕ್ರಮಣಗಳ ಆಚರಣೆಗಳ ಕುರಿತು ತನ್ನ ಪ್ರಬಂಧದಲ್ಲಿ ಅತ್ಯಂತ ವಿರಳ ಪ್ರಾಶಸ್ತ್ಯ ನೀಡಿರುದಾಗಿಯುˌ ಆ ಸ್ಥಳದ ಕುರಿತು ಇಡೀ ಪ್ರಬಂಧದಲ್ಲಿ ೪೭೦ ಪುಟಗಳಲ್ಲಿ ಕೇವಲ ಒಂದು ಪುಟದಲ್ಲಿ ಮಾತ್ರ ವಿವಿರಿದ್ದಾಗಿ ಮೋರಿನಿಸ್ ಹೇಳಿದ್ದಾರೆ. ಆದರೆ ಅದು ಹೈಲೈಟ್ ಆಗಿರುವ ಏಕೈಕ ಕಾರಣವೆಂದರೆ ಸಂಕ್ರಾಂತಿಯಂದು ತ್ರೀವೇಣಿಯಲ್ಲಿ ಸ್ನಾನ ಮಾಡುವ ಸಂಪ್ರದಾಯದ ಬಗ್ಗೆ ತಾನು ಬರೆದದ್ದನ್ನು ಹಿಂದುತ್ವವಾದಿಗಳು ತಿರುಚಿ ಅಲ್ಲಿ ಕುಂಭಮೇಳದ ಆಚರಣೆಯನ್ನು ಸೇರಿಸಿದ್ದಾರೆ ಎಂದು ಮೋರಿನಿಸ್ ಹೇಳಿದ್ದಾರೆ. ತಮ್ಮ ಸಂಶೋಧನೆಯಲ್ಲಿ ಘಾಜಿ ಜಾಫರ್ ಖಾನ್ ಅವರ ದರ್ಗಾದಲ್ಲಿ ವಿಭಿನ್ನ ಧಾರ್ಮಿಕ ಪ್ರತಿಮಾಶಾಸ್ತ್ರದ ಪಳೇಯುಳಿಕೆಗಳು ಪತ್ತೆಯಾದ ಬಗ್ಗೆ ಹೇಳುತ್ತಾ ಸಿಂಕ್ರೆಟಿಕ್ ಸಂಸ್ಕೃತಿಯಿಂದ ವಿಭಿನ್ನ ಸಂಪ್ರದಾಯಗಳ ನಡುವಿನ ಮಿಶ್ರಣದ ಮಟ್ಟವನ್ನು ಅರ್ಥೈಸಿದರೆ, ಅಲ್ಲಿ ದೃಢವಾಗಿ ವಿಭಿನ್ನ ಸಂಸ್ಕೃತಿಗಳು ಇದ್ದವು ಎನ್ನುತ್ತಾರೆ.
ಅದಕ್ಕೆ ಉದಾಹರಣೆ ಎಂದರೆ ಕೆಲವು ಹಿಂದೂಗಳು ಮುಸ್ಲಿಂ ದೇವಾಲಯಗಳಲ್ಲಿ ಮತ್ತು ಕೆಲವು ಮುಸ್ಲಿಮರು ಹಿಂದೂ ದೇವಾಲಯಗಳಲ್ಲಿ ಪ್ರಾರ್ಥನೆ ಮಾಡುತ್ತಾರೆ ಎನ್ನುತ್ತಾರೆ ಮೋರಿನಿಸ್. ಒಟ್ಟಾರೆ ಈ ಲೇಖನದಲ್ಲಿ ವ್ಯಕ್ತವಾಗಿರುವ ಅಂಶವೆಂದರೆ ಭಾರತದಲ್ಲಿ ಅಧಿಕಾರಕ್ಕಾಗಿ ಹಿಂದುತ್ವವಾದಿಗಳು ಮುಸ್ಲಿಮ್ ದ್ವೇಷವನ್ನು ಒಂದು ಅಸ್ತ್ರವಾಗಿಸಿಕೊಂಡಿದ್ದು ಅದಕ್ಕಾಗಿ ಅವರು ಇತಿಹಾಸˌ ವರ್ತಮಾನಗಳನ್ನು ತಿರುಚಿ ಜನರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಸಂಗತಿ. ಇತಿಹಾಸದುದ್ದಕ್ಕೂ ಈ ಹಿಂದುತ್ವವಾದಿಗಳ ಪೂರ್ವಜರು ಅದೇ ಮುಸ್ಲಿಮ್ ಆಳರಸರ ದಿವಾನಗಿರಿ ಮಾಡಿ ಬದುಕಿದ್ದರು. ಇಂದಿನ ಅವರ ಪೀಳಿಗೆ ಅದೇ ಶ್ರೀಮಂತ ಮುಸ್ಲಿಮರೊಂದಿಗೆ ವೈವಾಹಿಕ ಸಂಬಂಧಗಳನ್ನು ಬೆಳೆಸುತ್ತ ಬಹಿರಂಗದಲ್ಲಿ ಮುಸ್ಲಿಮ್ ದ್ವೇಷವನ್ನು ಅಧಿಕಾರದ ದಾಳವಾಗಿಸಿಕೊಂಡಿರುವುದಂತೂ ಸತ್ಯ.
~ಡಾ. ಜೆ ಎಸ್ ಪಾಟೀಲ.