ಉತ್ತರ ಪ್ರದೇಶ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ, ಬಿಜೆಪಿಯ ಸೈದ್ಧಾಂತಿಕ ಗುರುವಾದ ಆರ್ಎಸ್ಎಸ್ ಪರೋಕ್ಷ ಪ್ರಚಾರಕ್ಕೆ ಕೈ ಹಾಕಿದೆ. ಈ ಕಾರಣಕ್ಕಾಗಿ ರಾಷ್ಟ್ರೀಯತೆ ಹಾಗೂ ದೇಶಭಕ್ತಿಯ ಹೆಸರಿನಲ್ಲಿ ಉತ್ತರ ಪ್ರದೇಶದೆಲ್ಲೆಡೆ ಬೃಹತ್ ಅಭಿಯಾನವನ್ನು RSS ಆರಂಭಿಸಲಿದೆ. ಇದರ ಮೂಲಕ ಚುನಾವಣೆ ಘೋಷಣೆಗೂ ಮುನ್ನವೇ ಮತದಾರರಲ್ಲಿ ಧರ್ಮ, ರಾಷ್ಟ್ರೀಯತೆಯ ಕುರಿತು ‘ಜಾಗೃತಿ’ ಮೂಡಿಸಿ ಅವರನ್ನು ಸಂಘಟಿಸುವ ಉದ್ದೇಶವನ್ನು ಸಂಘವು ಹೊಂದಿದೆ.
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಈ ವರ್ಷವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ತಿರಂಗ ಯಾತ್ರೆ, ವಂದೇ ಮಾತರಂ ನಿರೂಪಣೆ, ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮತ್ತು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ನೂರಾರು ವಿಚಾರಗೋಷ್ಠಿಗಳನ್ನು ಏರ್ಪಡಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಮಾತ್ರವಲ್ಲದೇ, ಶಾಲಾ ಕಾಲೇಜುಗಳಲ್ಲಿ ಬೃಹತ್ ಮೆರವಣಿಗೆಗಳನ್ನು ಆಯೋಜಿಸಿ ಯುವ ಸಮೂಹವನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುವ ಯೋಜನೆ ಆರ್ಎಸ್ಎಸ್ ಹಾಕಿಕೊಂಡಿದೆ.
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ 193ನೇ ಜಯಂತಿ ಆಚರಿಸುವ ದಿನದಂದು ಅಂದರೆ, ನವೆಂಬರ್ 19ರಂದು ಈ ಅಭಿಯಾನ ಆರಂಭವಾಗಲಿದೆ. ಇದೇ ದಿನ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಬುಂದೇಲಖಂಡ್’ಗೆ ಭೇಟಿ ನೀಡಲಿದ್ದಾರೆ.
1971ರ ಬಾಂಗ್ಲಾ ವಿಮೋಚನಾ ಯುದ್ದದ ಬಳಿಕ ಪಾಕಿಸ್ತಾನ ಭಾರತಕ್ಕೆ ಶರಣಾದ ದಿನವಾದ ಡಿಸೆಂಬರ್ 16ರಂದು ಈ ಅಭಿಯಾನ ಸಮಾರೋಪಗೊಳ್ಳಲಿದೆ. ಕೇವಲ ವಾರಣಾಸಿಯಲ್ಲಿ ಮಾತ್ರ 155 ಬ್ಲಾಕ್ ಮಟ್ಟದ 105 ನಗರ ಮಟ್ಟದ ಕಾರ್ಯಕ್ರಮಗಳನ್ನು ಆರ್ಎಸ್ಎಸ್ ಆಯೋಜಿಸಲಿದೆ. ಪ್ರತಿ ಕಾರ್ಯಕ್ರಮಗಳಲ್ಲಿ 1,000-2,000 ಜನರ ಭಾಗವಹಿಸುವಿಕೆಯನ್ನು ಅಂದಾಜಿಸಲಾಗಿದೆ.
“ಸಂಸ್ಕಾರ ಭಾರತಿ ಬೀದಿ ನಾಟಕಗಳನ್ನು ಹಮ್ಮಿಕೊಳ್ಳಲಿದೆ. ಎಬಿವಿಪಿ ತಿರಂಗ ಯಾತ್ರೆಯನ್ನು ಆಯೋಜಿಸಲಿದೆ. ಕೇವಲ ಈ ಎರಡು ಕಾರ್ಯಕ್ರಮಗಳು ಕಾಶಿ ಪ್ರಾಂತ್ಯದ 22,000 ಹಳ್ಳಿಗಳನ್ನು ಸಂಪರ್ಕಿಸಲಿವೆ. ಈ ಅಭಿಯಾನದಲ್ಲಿ ಆರ್ಎಸ್ಎಸ್’ನ ಎಲ್ಲಾ ಅಂಗಸಂಸ್ಥೆಗಳು ಕೈಜೋಡಿಸಲಿವೆ,” ಎಂದು ಕಾಶಿ ಪ್ರಾಂತ್ಯದ ಪ್ರಚಾರಕ್ ಆಗಿರುವ ರಣವೀರ್ ಸಿಂಗ್ ಹೇಳಿದ್ದಾರೆ.
“ಭಾರತ ಮಾತೆಯ ಪೂಜೆ, ಶೋಭಾ ಯಾತ್ರೆಯ ಮೂಲಕ ಹಳ್ಳಿ ಹಳ್ಳಿಗಳಲ್ಲಿ ರಾಷ್ಟ್ರೀಯತೆ ಹಾಗೂ ದೇಶಭಕ್ತಿಯ ಭಾವನೆಯನ್ನು ಹುಟ್ಟುಹಾಕುವುದು ನಮ್ಮ ಉದ್ದೇಶ,” ಎಂದು ಅವಧ್ ಪ್ರಾಂತ್ಯದ ಪ್ರಚಾರಕ್ ಕೌಶಲ್ ಕುಮಾರ್ ಹೇಳಿದ್ದಾರೆ.
ಅವಧ್ ಪ್ರಾಂತ್ಯದಲ್ಲಿ 177 ಬ್ಲಾಕ್ ಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 19,000 ಹಳ್ಳಿಗಳನ್ನು ಸಂಪರ್ಕಿಸುವ ಗುರಿಯಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಅಭಿಯಾನದಿಂದ ಜನರಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸುವುದು ಮಾತ್ರ ಆರ್ಎಸ್ಎಸ್ ಉದ್ದೇಶವಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ, ರಾಮ ಮಂದಿರ ನಿರ್ಮಾಣ ವಿಚಾರ, ಸಂವಿಧಾನದ 370ನೇ ವಿಧಿಯ ರದ್ಧತಿ ಸೇರಿದಂತೆ ಇನ್ನೂ ಹಲವು ಕೇಂದ್ರದ ಯೋಜನೆಗಳ ಕುರಿತಾಗಿಯೂ ಜನರಲ್ಲಿ ಪ್ರಚಾರ ನಡೆಸಲಾಗುವುದು. ಈ ರೀತಿ ದೇಶಭಕ್ತಿಯ ಸೋಗಿನಲ್ಲಿ ಜನರಿಗೆ ಸರ್ಕಾರದ ಯೋಜನೆಗಳ ಪ್ರಚಾರ ನೀಡಲು ಆರ್ಎಸ್ಎಸ್ ಹೊರಟಿದ್ದು, ಉತ್ತರ ಪ್ರದೇಶದ ಪ್ರತಿ ಹಳ್ಳಿಯನ್ನು ಕೂಡಾ ಸಂಪರ್ಕಿಸುವ ಉದ್ದೇಶ ಹೊಂದಿದೆ.
ಬುಂದೇಲಖಂಡ್ ಮತ್ತು ಪೂರ್ವಾಂಚಲದ ಮೇಲೆ ಕಣ್ಣು:
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬುಂದೇಲಖಂಡ್ ಮತ್ತು ಪೂರ್ವಾಂಚಲ ಪ್ರಾಂತ್ಯವು ಬಿಜೆಪಿಯ ಕೈಹಿಡಿದಿತ್ತು. 2017ರ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ ಬರುವ 164 ಸ್ಥಾನಗಳಲ್ಲಿ ಬಿಜೆಪಿಯು 115 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಒಟ್ಟು 403 ಸ್ಥಾನಗಳಿರುವ ಉತ್ತರ ಪ್ರದೇಶ ವಿಧಾನಸಭೆಯ ಸುಮಾರು ಶೇ. 40ರಷ್ಟು ಸ್ಥಾನಗಳನ್ನು ಈ ಎರಡು ಪ್ರಾಂತ್ಯಗಳು ಹೊಂದಿವೆ.
ಈ ಪ್ರದೇಶದಲ್ಲಿ ಮತ್ತೆ ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ ಪಡುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಹಿಂದುಳಿದ ಪ್ರದೇಶವೆಂದು ಗುರುತಿಸಲ್ಪಡುವ ಈ ಎರಡು ಪ್ರಾಂತ್ಯಗಳಲ್ಲಿ ಬಿಜೆಪಿ ತನ್ನ ಹಿಡಿತವನ್ನು ಮುಂದುವರೆಸಲು ನೋಡುತ್ತಿದೆ. ಕಳೆದ ಚುನಾವಣೆಯಲ್ಲಿ ಬುಂದೇಲಖಂಡ-ಕಾನ್ಪುರದ 52 ಸ್ಥಾನಗಳಲ್ಲಿ ಬಿಜೆಪಿ 47 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಇಲ್ಲಿ ತನ್ನ ಹಿಡಿತವನ್ನು ಬಿಜೆಪಿ ಮುಂದುವರೆಸಿದರೆ, ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರುವುದು ಬಿಜೆಪಿಗೆ ಸುಲಭವಾಗುತ್ತದೆ. ಈ ಕಾರಣಕ್ಕಾಗಿ ಗೃಹ ಮಂತ್ರಿ ಅಮಿತ್ ಶಾ ಭೇಟಿ, ಪೂರ್ವಾಂಚಲ ಎಕ್ಸ್ಪ್ರೆಸ್ ವೇ ಯೋಜನೆ ಜಾರಿ, ಒಂಬತ್ತರಲ್ಲಿ ಐದು ಮೆಡಿಕಲ್ ಕಾಲೇಜುಗಳನ್ನು ಕೇವಲ ಪುರ್ವಾಂಚಲದಲ್ಲಿ ಸ್ಥಾಪಿಸುವ ನಿರ್ಧಾರಗಳನ್ನು ಬಿಜೆಪಿ ಕೈಗೊಂಡಿದೆ.
ಈಗ ಆ ಪ್ರದೇಶಗಳ ಚುನಾವಣಾ ಲೆಕ್ಕಾಚಾರ ಬುಡಮೇಲು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಆರ್ಎಸ್ಎಸ್ ಹೊತ್ತುಕೊಂಡಿದೆ. ಬುಂದೇಲಖಂಡ್ ಹಾಗು ಪೂರ್ವಾಂಚಲದಲ್ಲಿ ಹೆಚ್ಚಿನ ಪ್ರಭಾವ ಬೀರಲು ಸಂಘ ನಿರ್ಧರಿಸಿದೆ.