ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಷ್ ಈಗ ಐಟಿ ವಿಚಾರಣೆ ಎದುರಿಸಿದ್ದು, ಅದು ನಟ ಹಾಗೂ ಆರೋಪಿ ದರ್ಶನ್ ಗೂ ಸಂಕಷ್ಟ ತರುವ ಸಾಧ್ಯತೆ ಇದೆ.

ನಟ ದರ್ಶನ್ ಪ್ರಮುಖ ಆರೋಪಿ ಆಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ವೇಳೆ ದರ್ಶನ್ & ಪತ್ನಿ ವಿಜಯಲಕ್ಷ್ಮಿ ಸೇರಿದಂತೆ ಪ್ರದೋಷ್, ನಿಖಿಲ್, ಕೇಶವ್ ಮನೆಗಳಲ್ಲಿ 82 ಲಕ್ಷ ರೂಪಾಯಿ ಹಣ ಪತ್ತೆ ಆಗಿತ್ತು. ಈ ಹಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ದರ್ಶನ್ ತಮ್ಮ ಮನೆಯಲ್ಲಿ ಸಿಕ್ಕ ಹಣಕ್ಕೆ ಹೇಳಿಕೆ ನೀಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ಸಿಲುಕಿರುವ ಇನ್ನುಳಿದ ಆರೋಪಿಗಳು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದಾಗಿ ದರ್ಶನ್ ಗೆ ಸಂಕಷ್ಟ ಹೆಚ್ಚುವ ಸಾಧ್ಯತೆ ಇದೆ.

ಸದ್ಯ ಐಟಿ ಇಲಾಖೆ ಅಧಿಕಾರಿಗಳ ಮುಂದೆ ಪ್ರದೋಷ್ ತಮ್ಮ ಮನೆಯಲ್ಲಿ ಸಿಕ್ಕ 30 ಲಕ್ಷ ರೂಪಾಯಿ ಹಣಕ್ಕೆ ಉತ್ತರ ನೀಡಿದ್ದಾರೆ. ಮನೆಯಲ್ಲಿ ಸಿಕ್ಕ ಹಣ ನನ್ನದಲ್ಲ. ನನ್ನ ಕುಟುಂಬಕ್ಕೂ ಸೇರಿದಲ್ಲ. ಆ ಹಣದ ಮೂಲ ನನಗೆ ತಿಳಿದಿಲ್ಲ. 2024ರ ಜೂನ್ ನಲ್ಲಿ ಪತ್ತೆಯಾದ ಹಣದ ಮೂಲ ಇನ್ನೂ ವಿವರಿಸಲಾಗಿಲ್ಲ ಎಂದು ನಾನು ಒಪ್ಪುತ್ತೇನೆ ಮತ್ತು ಅದನ್ನು ವಶಪಡಿಸಿಕೊಳ್ಳಬಹುದು. ಅದಕ್ಕೆ ಅನುಗುಣವಾಗಿ ತೆರಿಗೆ ವಿಧಿಸಬಹುದು ಎಂದು ಪ್ರದೋಷ್ ಹೇಳಿಕೆ ನಿಡಿದ್ದಾರೆ.

ಹೀಗಾಗಿ 30 ಲಕ್ಷ ರೂಪಾಯಿ ಹಣ ಎಲ್ಲಿಂದ ಬಂತು..? ಈ ಕೊಟ್ಟವರು ಯಾರು ಎಂಬುದಕ್ಕೆ ಪ್ರದೋಷ್ ಉತ್ತರ ನೀಡಿಲ್ಲ. ಇದರಿಂದ ದರ್ಶನ್ ರನ್ನ ಐಟಿ ಅಧಿಕಾರಿಗಳು ಮತ್ತೆ ವಿಚಾರಣೆ ನಡೆಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.












