ಸುಮಾರು ಎರಡೂವರೆ ವರ್ಷದ ಹಿಂದೆ 2019ರ ಫೆಬ್ರವರಿ 14ರಂದು ದೇಶದ 44 ಯೋಧರನ್ನು ಬಲಿತೆಗೆದುಕೊಂಡ ಪುಲ್ವಾಮಾ ಭಯೋತ್ಪಾದನಾ ದಾಳಿ ನಡೆಯುತ್ತಿರುವಾಗ, ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಡಿಸ್ಕವರಿ ಚಾನೆಲ್ ಗಾಗಿ ‘ಮ್ಯಾನ್ ವರ್ಸಸ್ ವೈಲ್ಡ್’ ಸರಣಿಯ ಚಿತ್ರೀಕರಣದಲ್ಲಿದ್ದರು ಎಂಬುದು ಹಳೆಯ ಸಂಗತಿ. ಆದರೆ, ಆ ಚಿತ್ರೀಕರಣ ನಡೆದ ಪ್ರದೇಶದಲ್ಲಿ ಕೇವಲ 163 ಮರ ಕಡಿಯುವುದಾಗಿ ಪರವಾನಗಿ ಪಡೆದು, ಬರೋಬ್ಬರಿ 10000 ದಿಂದ 12000 ಮರಗಳನ್ನು ಉರುಳಿಸಲಾಗಿದೆ ಎಂಬುದು ಇದೀಗ ಬೆಳಕಿಗೆ ಬಂದಿರುವ ಹೊಸ ವಿಷಯ!
ಖ್ಯಾತ ವನ್ಯ ಸಾಹಸಿ ಬಿಯರ್ ಗ್ರಿಲ್ಸ್ ಜೊತೆ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ‘ಮ್ಯಾನ್ ವರ್ಸಸ್ ವೈಲ್ಡ್’ ಸರಣಿಗಾಗಿ ಸಾಹಸ ಚಿತ್ರೀಕರಣ ನಡೆಸುತ್ತಿರುವಾಗ, ಮೋದಿಯವರು ಆ ರಾಷ್ಟ್ರೀಯ ಉದ್ಯಾನದಲ್ಲಿ ಟೈಗರ್ ಸಫಾರಿ ನಿರ್ಮಾಣದ ಕನಸು ಕಂಡಿದ್ದರು. ಪ್ರಧಾನಮಂತ್ರಿಗಳ ಕನಸು ನನಸು ಮಾಡುವ ನಿಟ್ಟಿನಲ್ಲಿ ಉತ್ತರಾಖಂಡ ಸರ್ಕಾರ 2019ರಲ್ಲೇ ತನ್ನ ರಾಜ್ಯದ ಮೊಟ್ಟಮೊದಲ ಟೈಗರ್ ಸಫಾರಿ ನಿರ್ಮಾಣಕ್ಕಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ(MoEF) ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿತ್ತು. ಆ ಪ್ರಸ್ತಾವನೆಯಲ್ಲಿ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದ ಭಾಗವಾಗಲಿರುವ ಈ ಸಫಾರಿ ಯೋಜನೆಗಾಗಿ ಕೇವಲ 163 ಮರಗಳನ್ನು ಕಡಿಯಬೇಕಾಗಬಹುದು. ಆದರೆ, ಆ ಸಫಾರಿ ನಿರ್ಮಾಣದಿಂದಾಗಿ ದೇಶ-ವಿದೇಶದ ಪ್ರವಾಸಿಗಳನ್ನು ಆಕರ್ಷಿಸಬಹುದು. ಪ್ರತಿ ಸಫಾರಿಯಲ್ಲಿಯೂ ಪ್ರವಾಸಿಗಳಿಗೆ ಅಲ್ಲಿ ಹುಲಿ ದರ್ಶನವಾಗುವುದು ಶತಸಿದ್ಧ. ಹಾಗಾಗಿ ಇದೊಂದು ಅತ್ಯದ್ಭುತ ಯೋಜನೆ ಎಂದು ಹೇಳಲಾಗಿತ್ತು.
ಆದರೆ, ಇದೀಗ ಸುಪ್ರೀಂಕೋರ್ಟ್ ವಕೀಲ ಹಾಗೂ ಪರಿಸರ ಕಾರ್ಯಕರ್ತ ಗೌರವ್ ಬನ್ಸಾಲ್ ಅವರು ನ್ಯಾಷನಲ್ ಟೈಗರ್ ಕನ್ಸರ್ವೇಷನ್ ಅಥಾರಿಟಿ(NCTA)ಗೆ ನೀಡಿರುವ ದೂರಿನ ಪ್ರಕಾರ, ಸಫಾರಿ ನಿರ್ಮಾಣಕ್ಕಾಗಿ ಕಾರ್ಬೆಟ್ ನ್ಯಾಷನಲ್ ಪಾರ್ಕಿನ ಭಾಗವಾಗಿರುವ ಕಾರ್ಬೆಟ್ ಹುಲಿ ಧಾಮದಲ್ಲಿ(ಸಿಟಿಆರ್) ಕನಿಷ್ಟ 10 ಸಾವಿರದಿಂದ ಗರಿಷ್ಠ 12 ಸಾವಿರ ಮರಗಳನ್ನು ಕಡಿದುರುಳಿಸಲಾಗಿದೆ. ಕಳೆದ ಆಗಸ್ಟ್ ನಲ್ಲಿ ಬನ್ಸಾಲ್ ಅವರು ದಾಖಲೆ ಸಹಿತ ದೂರು ನೀಡಿದ್ದು, ಹುಲಿ ಯೋಜನೆ ವ್ಯಾಪ್ತಿಯ ಸಂರಕ್ಷಿತ ಪ್ರದೇಶದಲ್ಲಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ, ನಡೆಸಿರುವ ಈ ಅಪಾರ ಪ್ರಮಾಣದ ಮರ ಕಡಿತಲೆಯ ಕುರಿತು ಎನ್ಟಿಸಿಎ ಮತ್ತು ಸೆಂಟ್ರಲ್ ಝೂ ಅಥಾರಿಟಿ(CZA) ತನಿಖೆ ನಡೆಸಿ ವಾಸ್ತವಾಂಶಗಳನ್ನು ಬಹಿರಂಗಪಡಿಸಬೇಕು ಎಂದು ಕೋರಲಾಗಿದೆ.
ಆ ದೂರಿನ ಹಿನ್ನೆಲೆಯಲ್ಲಿ ಇದೀಗ ಸಿಝಡ್ಎ ಉಪ ಮಹಾ ನಿರ್ದೇಶಕರಾದ ಸೊನಾಲಿ ಘೋಷ್ ಅವರು ಉತ್ತರಾಖಂಡ ಚೀಫ್ ವೈಲ್ಡ್ ಪೈಫ್ ವಾರ್ಡನ್ ಆದ ಪಿಸಿಸಿಎಫ್ ರಾಜೀವ್ ಭಾರತಿ ಅವರಿಗೆ ನೋಟೀಸ್ ಜಾರಿಮಾಡಿದ್ದು, ಆ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಟೈಗರ್ ಸಫಾರಿ ಯೋಜನೆಗಾಗಿ ಕಾರ್ಬೆಟ್ ಉದ್ಯಾನದ 106 ಹೆಕ್ಟೇರ್ ಜಾಗವನ್ನು ಗುರುತಿಸಲಾಗಿದೆ. ಆ ಜಾಗದಲ್ಲಿದ್ದ ಸುಮಾರು 10 ಸಾವಿರಕ್ಕೂ ಅಧಿಕ ಮರಗಳನ್ನು ಕಡಿದುಹಾಕಲಾಗಿದೆ. ಆದರೆ, ಸರ್ಕಾರಕ್ಕೆ ಸಲ್ಲಿಸಿದ ಯೋಜನೆಯ ಪ್ರಸ್ತಾವನೆಯಲ್ಲಿ ಕೇವಲ 163 ಮರಗಳನ್ನು ಮಾತ್ರ ಕಡಿಯಲಾಗುವುದು ಎಂದು ಫಾರೆಸ್ಟ್ ಅಡ್ವೈಸರಿ ಕಮಿಟಿಗೆ ಸುಳ್ಳು ಮಾಹಿತಿ ನೀಡಲಾಗಿದೆ. ಇದು 2001ರ ಸುಪ್ರೀಂಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆ. ಸಿಟಿಆರ್ ವ್ಯಾಪ್ತಿಯಲ್ಲಿ ಸರ್ಕಾರವಾಗಲೀ ಅಥವಾ ಇನ್ನಾರೇ ಆಗಲೀ ಒಂದೇ ಒಂದು ಮರವನ್ನು ಕೂಡ ಕಡಿಯಕೂಡದು ಎಂದು ಕೋರ್ಟ್ ಆಗ ಆದೇಶಿಸಿತ್ತು. ಆದರೆ, ಇದೀಗ 163 ಮರದ ಕಡಿತಲೆಗೆ ಅನುಮತಿ ಕೋರಿ ಹತ್ತು ಸಾವಿರ ಮರ ಕಡಿಯಲಾಗಿದೆ. ಕೋರ್ಟ್ ಆದೇಶದ ಪ್ರಕಾರ ಈ 163 ಮರ ಕಡಿತಲೆಗೆ ಫಾರೆಸ್ಟ್ ಅಡ್ವೈಸರಿ ಕಮಿಟಿ ಅನುಮತಿ ನೀಡಿದ್ದು ಕೂಡ ಅಪರಾಧ ಎಂದು ವಕೀಲ ಬನ್ಸಾಲ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಟೈಗರ್ ಸಫಾರಿ ನಿರ್ಮಾಣಕ್ಕೆ ಹುಲಿ ಸಂರಕ್ಷಿತ ಧಾಮದ ವ್ಯಾಪ್ತಿಯಲ್ಲಿ ಕೇವಲ 163 ಮರವಲ್ಲ; ಬದಲಾಗಿ ಹತ್ತು ಸಾವಿರಕ್ಕೂ ಅಧಿಕ ಮರ ಕಡಿಯಬೇಕಾಗುತ್ತದೆ ಎಂಬ ವಾಸ್ತವ ಸಂಗತಿ ಅರಣ್ಯ ಇಲಾಖೆಯ ಎಲ್ಲಾ ಉನ್ನತ ಅಧಿಕಾರಿಗಳಿಗೂ ತಿಳಿದಿತ್ತು. ಆದರೆ, ಅವರೆಲ್ಲರೂ ಸರ್ಕಾರದ ಉನ್ನತ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಪ್ರಧಾನಿ ಮೋದಿ ಕನಸು ನನಸು ಮಾಡುವ ಅನಿವಾರ್ಯತೆಗೆ ಸಿಲುಕಿದರು. ಹಾಗಾಗಿ ದಾಖಲೆಯಲ್ಲಿ 163 ಮರ ಎಂದು ತೋರಿಸಿದ್ದರೂ, ವಾಸ್ತವವಾಗಿ ಹತ್ತು ಸಾವಿರಕ್ಕೂ ಅಧಿಕ ಮರ ಹನನ ಮಾಡಲಾಗಿದೆ ಎಂಬುದು ಸ್ವತಃ ಉತ್ತರಾಖಂಡ ಅರಣ್ಯ ಇಲಾಖೆಯ ಉನ್ನತ ಮೂಲಗಳು ಹೇಳುವ ಸಂಗತಿ ಎಂದು ‘ನಾರ್ತ್ ಈಸ್ಟ್ ಕ್ರೋನಿಕಲ್’ ಮಾಧ್ಯಮ ವರದಿ ಮಾಡಿದೆ.
ಕಾರ್ಬೆಟ್ ಹುಲಿ ಸಂರಕ್ಷಿತ ಧಾಮದ ನಿರ್ದೇಶಕ ರಾಹುಲ್, ಕಳೆದ ಜುಲೈ 6ರಂದು ಪಾಖ್ರೋ ಟೈಗರ್ ಸಫಾರಿ ವ್ಯಾಪ್ತಿಯ ಕಾಲಾಘರ್ನ ಎಸ್ ಡಿಒ ಅಧಿಕಾರಿಗೆ ಬರೆದಿರುವ ಪತ್ರದಲ್ಲಿ ಕೂಡ, “ಪಾಖ್ರೋ ಟೈಗರ್ ಸಫಾರಿ ಎಂಬುದು ಪ್ರಧಾನಿ ಮೋದಿಯವರ ಕನಸಿನ ಯೋಜನೆ. ಆ ಯೋಜನೆ ಅನುಷ್ಠಾನಕ್ಕೆ ಅಗತ್ಯ ಮರ ಕಡಿತಲೆ ಸೇರಿದಂತೆ ಎಲ್ಲಾ ಕೆಲಸಗಳೂ ಕಾನೂನು ಚೌಕಟ್ಟಿನಡಿಯಲ್ಲಿಯೇ ನಡೆಯಬೇಕು. ಯಾವುದೇ ವಿವಾದಕ್ಕೆ ಸಿಲುಕದಂತೆ ಎಚ್ಚರಿಕೆ ವಹಿಸಬೇಕು” ಎಂದು ಸೂಚಿಸಿದ್ದಾರೆ. ಆದರೆ, ವಾಸ್ತವವಾಗಿ ಅಲ್ಲಿ ನಡೆದಿರುವುದೇ ಬೇರೆ. ದೇಶದ ಈವರೆಗಿನ ಅರಣ್ಯ ಮತ್ತು ವನ್ಯಜೀವಿ ಸಂಬಂಧಿತ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ, ಸ್ವತಃ ಹುಲಿ ಸಂತತಿಯನ್ನೇ ಅಪಾಯಕ್ಕೆ ಒಡ್ಡುವ ಮಟ್ಟಿನ ಪರಿಸರ ನಾಶ ಮಾಡಿ, ಹುಲಿ ಸಫಾರಿ ನಿರ್ಮಾಣ ಮಾಡಲಾಗುತ್ತಿದೆ.
ಹಾಗೆ ನೋಡಿದರೆ, ಸದಾ ಪರಿಸರ ಸಂರಕ್ಷಣೆ, ಸ್ವಚ್ಛ ಮತ್ತು ಶುದ್ಧ ಪರಿಸರ, ಭಾರತೀಯರ ಪರಿಸರ ಪ್ರಜ್ಞೆಯ ಬಗ್ಗೆ ಮಾತನಾಡುವ ಮೋದಿಯವರು, ವಾಸ್ತವವಾಗಿ ಪರಿಸರದ ವಿಷಯದಲ್ಲಿ ಅನುಸರಿಸುವ ನೀತಿಗಳು ಎಷ್ಟು ತದ್ವಿರುದ್ಧ ಎಂಬುದಕ್ಕೆ ಇದೇ ಮೊದಲ ನಿದರ್ಶನವೇನಲ್ಲ.
2019ರಲ್ಲಿ ಒಡಿಶಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮೋದಿಯವರಿಗಾಗಿ ತುರ್ತು ಹೆಲಿಪ್ಯಾಡ್ ನಿರ್ಮಾಣ ಮಾಡಲು ಬಾಲಂಗಿರ್ ನಲ್ಲಿ ಬರೋಬ್ಬರಿ ಒಂದು ಸಾವಿರ ಮರಗಳನ್ನು ಕಡಿದುರುಳಿಸಲಾಗಿತ್ತು. ಖುದ್ರಾ-ಬಾಲಂಗೀರ್ ರೈಲು ಮಾರ್ಗದ ಚಾಲನೆಗಾಗಿ ಮೋದಿ ಅಲ್ಲಿಗೆ ತೆರಳಿದ್ದರು. ಆ ಹಿನ್ನೆಲೆಯಲ್ಲ ಅರಣ್ಯ ಇಲಾಖೆಯ ಯಾವುದೇ ಪರವಾನಿಗಿ ಪಡೆಯದೆ ಒಂದು ಸಾವಿರ ಮರ ಉರುಳಿಸಿ ಅರಣ್ಯ ಪ್ರದೇಶದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು.
ಅಷ್ಟೇ ಅಲ್ಲ; ಪರಿಸರ ರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಯ ಕುರಿತು ಜಾಗತಿಕ ಜಾಗೃತಿಯ ಭಾಗವಾಗಿ ಡಿಸ್ಕವರಿ ಚಾನೆಲ್ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕಿನಲ್ಲಿ ನಡೆಸಿದ ಮ್ಯಾನ್ ವರ್ಸಸ್ ವೈಲ್ಡ್ ಟೆಲಿ ಸೀರೀಸ್ ನಲ್ಲಿ ಭಾಗಿಯಾದ ಮೋದಿಯವರು, ವಾಸ್ತವವಾಗಿ ಎಷ್ಟರಮಟ್ಟಿಗೆ ದೇಶದ ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಕಾಳಜಿ ಹೊಂದಿದ್ದಾರೆ ಎಂಬುದಕ್ಕೆ ಅವರ ಸರ್ಕಾರದ ಏಳು ವರ್ಷಗಳ ಅವಧಿಯಲ್ಲಿ ದೇಶದ ಅರಣ್ಯ ಪ್ರದೇಶವನ್ನು ಗಣಿಗಾರಿಕೆ ಸೇರಿದಂತೆ ವಿವಿಧ ಅರಣ್ಯೇತರ ಚಟುವಟಿಕೆಗಳಿಗೆ ಮುಕ್ತಗೊಳಿಸಿರುವುದೇ ದೊಡ್ಡ ನಿದರ್ಶನ. ಮೋದಿಯವರ ಸರ್ಕಾರವೇ ಲೋಕಸಭೆಯಲ್ಲಿ ನೀಡಿದ ಅಧಿಕೃತ ಹೇಳಿಕೆಯ ಪ್ರಕಾರ, 2011ರಿಂದ 2021ರ ಅವಧಿಯಲ್ಲಿ ಕೇಂದ್ರ ಸರ್ಕಾರ ದೇಶದ ಒಟ್ಟು 38,846.7 ಹೆಕ್ಟೇರ್(ಸುಮಾರು ಒಂದು ಲಕ್ಷ ಎಕರೆ) ಸಂರಕ್ಷಿತ ಅರಣ್ಯ ಪ್ರದೇಶವನ್ನು ಕೇವಲ ಗಣಿಗಾರಿಕೆಯ ಚಟುವಟಿಕೆಯೊಂದಕ್ಕೇ ನೀಡಲಾಗಿದೆ!
ಅಂದರೆ, ಮೋದಿಯವರ ನೀತಿ ಮತ್ತು ನಡೆ ನಡುವಿನ ವೈರುಧ್ಯ ಎಂಬುದು ಕೇವಲ ಪಿಎಂ ಕೇರ್ಸ್, ಕರೋನಾ ಲಸಿಕೆ, ದೇಶದ ಕೃಷಿ ಕಾನೂನು, ಮುಂತಾದ ವಿಷಯಗಳಿಗೆ ಮಾತ್ರ ಸೀಮಿತವಾಗಿರದೆ, ತಲೆಮಾರುಗಳು ಜೀವ ವೈವಿಧ್ಯದ ಭವಿಷ್ಯ ಮತ್ತು ಆ ಮೂಲಕ ನೇರವಾಗಿ ಮನುಷ್ಯನ ಅಳಿವು ಉಳಿವು ನಿರ್ಧರಿಸುವ ಪರಿಸರ ಸಂರಕ್ಷಣೆಯ ವಿಷಯದಲ್ಲಿ ಕೂಡ ಮುಂದುವರಿದಿದೆ. ಒಂದು ಕಡೆ ಪರಿಸರ ರಕ್ಷಣೆ, ಪರಿಸರ ರಕ್ಷಣೆಯ ಮಹತ್ವದ ಕುರಿತು ಉದ್ದುದ್ದ ಭಾಷಣ ಮಾಡುತ್ತಲೇ ತಮ್ಮದೇ ಮಾತುಗಳಿಗೆ ತದ್ವಿರುದ್ಧ ನೀತಿಗಳನ್ನು ಜಾರಿಗೆ ತರುತ್ತಿದ್ದಾರೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿ ಇದೀಗ ಪಾಖ್ರೋ ಟೈಗರ್ ಸಫಾರಿ ಯೋಜನೆಯ ವಿವಾದ ಎದ್ದುಕೂತಿದೆ!