ಚೆನೈ : ನೂತನವಾಗಿ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ನಟ ಜೋಸೆಫ್ ವಿಜಯ್ ತಮ್ಮ ಮಿತ್ರಪಕ್ಷಗಳ ಮನವಿಗೆ ಸ್ಪಂದಿಸಿ, ತಮ್ಮ ಓಎಸ್ಡಿಯಾಗಿದ್ದ ಜ್ಯೋತಿಷ್ಯಿಯ ನೇಮಕವನ್ನು ವಾಪಸ್ ಪಡೆದಿದ್ದಾರೆ. ವಿಜಯ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತಮ್ಮ ಆಪ್ತ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದರು.

ಇದಾದ ಬಳಿಕ ಸರ್ಕಾರಿ ವ್ಯವಸ್ಥೆಯಲ್ಲಿ ಜ್ಯೋತಿಷಿಗೆ (Astrologer) ಔಪಚಾರಿಕ ಸಲಹಾ ಹುದ್ದೆಯನ್ನು ಏಕೆ ನೀಡಲಾಗಿದೆ ಎಂದು ತಮಿಳಗ ವೆಟ್ರಿ ಕಳಗಂ (TVK) ಬೆಂಬಲಿತ ಮಿತ್ರ ಪಕ್ಷದ ನಾಯಕರು ಪ್ರಶ್ನಿಸಿದ್ದರು. ಅಲ್ಲದೇ ಈ ನೇಮಕಾತಿ ಒಪ್ಪುವಂತದ್ದಲ್ಲ ಎಂದು ಬೇಸರ ಹೊರಹಾಕಿದ್ದವು.
ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್, ಈ ನೇಮಕವನ್ನು ವಿರೋಧಿಸಿದ್ದರು. ಪ್ರಮುಖ ಹುದ್ದೆಗಳಲ್ಲಿ ಇವರಿಗೆ ಅಗ್ರಸ್ಥಾನ ಏಕೆ ನೀಡಬೇಕು? ಜೋತಿಷಿಗೆ OSD ಸ್ಥಾನ ಏಕೆ ಕೊಡಬೇಕು? ಈಗ ನನ್ನನ್ನ ಸೋಲಿಸುತ್ತೇನೆ ಎಂದು ಯಾರಾದ್ರೂ ಹೇಳಬಹುದು. ಹೀಗೆಂದ ಮಾತ್ರಕ್ಕೆ ಸರ್ಕಾರಿ ಹುದ್ದೆ ನೀಡಬಹುದೇ? ಎಂದು ವಿಜಯ್ ನಿರ್ಧಾರವನ್ನು ಖಂಡಿಸಿದ್ದರು.
ಇದನ್ನೂ ಓದಿ : ಮಿತ್ರ ಪಕ್ಷಗಳ ಟೀಕೆಗೆ ಮಣಿದ ಸಿಎಂ ವಿಜಯ್ : ವಿಶೇಷಾಧಿಕಾರಿ ನೇಮಕ ವಾಪಸ್
ಈ ನೇಮಕಾತಿ ಜಾತ್ಯತೀತ ಸರ್ಕಾರದಲ್ಲಿ ತರವಲ್ಲ. ಗೌರವಾನ್ವಿತ ಮುಖ್ಯಮಂತ್ರಿಗಳು ಇದನ್ನು ಮರುಪರಿಶೀಲಿಸಬೇಕು. ವೈಜ್ಞಾನಿಕ ದೃಷ್ಟಿಕೋನ ಬೆಳೆಸುವುದು ಸರ್ಕಾರದ ಕರ್ತವ್ಯ, ಹೊರತು ಜ್ಯೋತಿಷ್ಯವನ್ನಲ್ಲ ಎಂದು ತಮಿಳುನಾಡು ವಿಸಿಕೆ ಘಟಕದ ಪ್ರಧಾನ ಕಾರ್ಯದರ್ಶಿ ಡಿ. ರವಿಕುಮಾರ್ ಕಿಡಿಕಾರಿದ್ದರು.
ಇನ್ನೂ ಇಂದು ವಿಶ್ವಾಸಮತಕ್ಕೂ ಮುನ್ನ ಮಿತ್ರಪಕ್ಷಗಳು ವೆಟ್ರಿವೇಲ್ ನೇಮಕವನ್ನು ಟೀಕಿಸಿದ್ದವು. ಹೀಗಾಗಿ ಅಂತಿಮವಾಗಿ ವಿಪಕ್ಷಗಳು ಹಾಗೂ ಮಿತ್ರಪಕ್ಷಗಳ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ವಿಜಯ್ ಅವರು ಆ ನೇಮಕವನ್ನು ವಾಪಸ್ ಪಡೆದಿದ್ದಾರೆ.





