ಉಪ ಚುನಾವಣೆಯ ಕಾವು ಇನ್ನೂ ಹಾಗೆಯೇ ಇದೆ. ಆದರೀಗ ಮತ್ತೆ ಚುನಾವಣೆಯ ಖದರು ಶುರುವಾಗಿದೆ. ಇದಕ್ಕಾಗಿ ಮೂರೂ ಪಕ್ಷಗಳು ಡಿಸೆಂಬರ್ ನಲ್ಲಿ ಖಾಲಿಯಾಗಲಿರುವ 25 ವಿಧಾನ ಪರಿಷತ್ (MLC) ಸ್ಥಾನಗಳ ಮೇಲೆ ಕಣ್ಣು ಹಾಕಿವೆ.
ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಯಾಗಿದ್ದು , ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಂತ್ರ ಹೆಣೆಯುತ್ತಿದ್ದಾರೆ. ಪ್ರತಿ 6 ವರ್ಷಕ್ಕೊಮ್ಮೆ 25 ವಿಧಾನ ಪರಿಷತ್ ಸ್ಥಾನ ಖಾಲಿಯಾಗುತ್ತವೆ. ಡಿಸೆಂಬರ್ನಲ್ಲಿ 25 ಎಂಎಲ್ಸಿಗಳ ಅವಧಿ ಮುಗಿಯಲಿದೆ.
ಗ್ರಾಪಂ ಸದಸ್ಯರಿಗೆ ಡಿಮ್ಯಾಂಡು
ನಿವೃತ್ತಿಯಾಗಲಿರುವ 25 ಎಂಎಲ್ಸಿಗಳು ಸ್ಥಳೀಯ ಸಂಸ್ಥೆಗಳ ಸದಸ್ಯರಿಂದ ಚುನಾಹಿತರಾದವರು. ಅಂದರೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿ ಸದಸ್ಯರು ಈ ಚುನಾವಣೆಯಲ್ಲಿ ಮತದಾರರು. ಆದರೆ ಈ ಸಲ ಜಿಪಂ, ತಾಪಂಗಳಿಗೆ ಇನ್ನೂ ಚುನಾವಣೆ ನಡೆದಿಲ್ಲ. ಹಲವಾರು ನಗರಸಭೆ ಗಳಿಗೂ ಚುನಾವಣೆ ತಡೆ ಹಿಡಿಯಲಾಗಿದೆ.
ಹೀಗಾಗಿ ಗ್ರಾಮ ಪಂಚಾಯತಿ ಸದಸ್ಯರೇ ಈ ಸಲದ ಚುನಾವಣೆಯಲ್ಲಿ ನಿರ್ಣಾಯಕ. ಅಧಿಕೃತವಾಗಿ ಗ್ರಾಪಂ ಸದಸ್ಯರು ಯಾವುದೇ ಪಕ್ಷದ ಚಿಹ್ನೆಯಿಂದ ಗೆದ್ದವರಲ್ಲ. ಹೀಗಾಗಿ ಇವರಿಗೆ ಡಿಮ್ಯಾಂಡು ಬಂದಿದೆ. ದೊಡ್ಡ ದೊಡ್ಡ ನಾಯಕರು ಈಗ ಗ್ರಾಪಂ ಸದಸ್ಯರ ಓಲೈಕೆಯಲ್ಲಿ ತೊಡಗಲಿದ್ದಾರೆ.
ಈಗಿರುವ ಮ್ಯಾಟ್ರಿಕ್ಸ್
ವಿಧಾನ ಪರಿಷತ್ ಸದಸ್ಯರ ಒಟ್ಟು ಸಂಖ್ಯೆ 75 ಇದರಲ್ಲಿ ಬಿಜೆಪಿಯ 32 ಸದಸ್ಯರಿದ್ದರೂ, ಸಂಪೂರ್ಣ ಬಹುಮತವಿಲ್ಲ. ಆದರೂ ಅದು ಜೆಡಿಎಸ್ ನೆರವಿನಿಂದ ಹಲವಾರು ಮಸೂದೆಗಳನ್ನು ಪಾಸು ಮಾಡಿಸಿಕೊಂಡಿದೆ. ಕಾಂಗ್ರೆಸ್ನ 29 ಮತ್ತು ಜೆಡಿಎಸ್ನ 12 ಸದಸ್ಯರಿದ್ದಾರೆ. ಸಭಾಪತಿಯಲ್ಲದೇ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.
ಬಿಜೆಪಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಬಹುಮತ ಪಡೆಯಲು ಭಾರಿ ಯತ್ನ ನಡೆಸಿದೆ.
ನಿವೃತ್ತಿ ಆಗಲಿರುವ 25 ಎಂಎಲ್ಸಿಗಳ ಪೈಕಿ ಈಗ ಹಾನಗಲ್ನಿಂದ ಎಂಎಲ್ಎ ಗೆದ್ದಿರುವ ಕಾಂಗ್ರೆಸ್ನ ಶ್ರೀನಿವಾಸ ಮಾನೆ ಕೂಡ ಒಬ್ಬರು. ಶುರುವಾಯಿತು ತಂತ್ರಗಾರಿಕೆ ನಿನ್ನೆ ಭಾನುವಾರ ಕಾಂಗ್ರೆಸ್ ನಾಯಕರು ಇದೇ ವಿಷಯಕ್ಕೆ ತೀವ್ರ ಚರ್ಚೆ ನಡೆಸಿದ್ದಾರೆ. ಈಗ ನಿವೃತ್ತಿ ಆಗಲಿರುವ ಸದಸ್ಯರ ಸ್ಥಾನಗಳನ್ನು ಉಳಿಸಿಕೊಳ್ಳಲು ಮತ್ತು ಬಿಜೆಪಿಗೆ ಪರಿಷತ್ನಲ್ಲಿ ಬಹುಮತ ಸಿಗದಂತೆ ಮಾಡಲು ತೀವ್ರ ಕಸರತ್ತು ನಡೆಸಿದ್ದಾರೆ.
ಬಿಜೆಪಿಯ ರಾಜ್ಯಯಾತ್ರೆ
ಬಿಜೆಪಿ ನಾಲ್ಕು ತಂಡಗಳನ್ನು ರಚಿಸಿದ್ದು ಯಡಿಯೂರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ಜಗದೀಶ್ ಶೆಟ್ಟರ್ ಮತ್ತು ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಈ ತಂಡಗಳ ಮುಂದಾಳುಗಳು. ನವೆಂಬರ್ 19ರಿಂದ ನಡೆಯುವ ಈ ಯಾತ್ರೆಗೆ ʼಜನ ಸ್ವರಾಜ್ಯʼ ಎಂದು ಕರೆಯಲಾಗಿದೆ.
ಜೆಡಿಎಸ್ನಿಂದ ಮೂವರು ಔಟ್?
ಜೆಡಿಎಸ್ನಿಂದ ಗೆದ್ದಿರುವ ಮೂವರು ಎಂಎಲ್ಸಿಗಳು ಈಗಾಗಲೇ ಒಂದು ಕಾಲು ಹೊರಗೆ ಇಟ್ಟಿದ್ದಾರೆ. ಸಂದೇಶ್ ನಾಗರಾಜ್, ಕಾಂತರಾಜು (ಬೆಮೆಲ್) ಮತ್ತು ಸಿ.ಆರ್. ಮನೋಹರ್ ಜೆಡಿಎಸ್ ತೊರೆಯುವ ಸಾಧ್ಯತೆ ಇದೆ. ಸಂದೇಶ್ ನಾಗರಾಜ್ ಮತ್ತು ಮನೋಹರ್ ಬಿಜೆಪಿ ಸೇರುವ ಯತ್ನ ನಡೆಸಿದ್ದಾರೆ.
ಒಟ್ಟಿನಲ್ಲಿ, ಬೈ ಎಲೆಕ್ಷನ್ ಬಿಸಿ ಇನ್ನೂ ಆರಿಲ್ಲ. ಈಗ ಎಂಎಲ್ಸಿ ಚುನಾವಣೆ ಕಾವು ಏರತೊಡಗಿದೆ ಈ ಚುನಾವಣೆಯಲ್ಲಿ ಪ್ರ,ಮುಖ ಮತದಾರರಾದ ಗ್ರಾಪಂ ಸದಸ್ಯರಿಗೆ ಭರ್ಜರಿ ಬೇಡಿಕೆ ಬಂದಿದೆ.