ಬೆಂಗಳೂರು: ಬೆಂಗಳೂರಿನ ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್(MLA Suresh Kumar), ಯುವಕರೂ ನಾಚುವಂಥ ಸಾಧನೆ ಮಾಡಿದ್ದಾರೆ. Age is A just a number ಎನ್ನುವುದನ್ನು ಶಾಸಕ ಸುರೇಶ್ ಕುಮಾರ್ ಮತ್ತೆ ಸಾಬೀತು ಮಾಡಿದ್ದಾರೆ.

ಸುರೇಶ್ ಕುಮಾರ್ ತಮ್ಮ 70ನೇ ವಯಸ್ಸಿನಲ್ಲಿ ಸೈಕಲ್ ತುಳಿದು ಬೆಂಗಳೂರಿನಿಂದ(Bengaluru )ಕನ್ಯಾಕುಮಾರಿಗೆ( Kanya Kumari) ಹೋಗಿದ್ದಾರೆ. ಬೆಂಗಳೂರಿನಿಂದ ಸುಮಾರು 702 ಕಿಲೋ ಮೀಟರ್ ದೂರವನ್ನು ಸುಮಾರು 37 ಸೈಕ್ಲಿಂಗ್ ಗಂಟೆಗಳಲ್ಲಿ ಪೂರೈಸುವು ಮೂಲಕ ಯುವ ಜನತೆಯ ಹುಬ್ಬೇರಿಸುವಂತೆ ಮಾಡಿದ್ದಾರೆ. ಬೆಂಗಳೂರಿನಿಂದ ಕನ್ಯಾಕುಮಾರಿ ವರೆಗೆ ತಮ್ಮ ಸೈಕಲಿಂಗ್ ಜರ್ನಿ ಹೇಗಿತ್ತು ಎನ್ನುವುದರ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಒಂದು ಅತ್ಯಂತ ಸಂಭ್ರಮದ ಮಾಹಿತಿಯನ್ನು ಭಾರತದ ದಕ್ಷಿಣ ತುದಿಯ ಕನ್ಯಾಕುಮಾರಿಯ ಸಮುದ್ರದ ತಟದಿಂದ ಹಂಚಿಕೊಳ್ಳಲು ಇಚ್ಚಿಸುತ್ತೇನೆ. 1974, ಡಿಸೆಂಬರ್ 25 ರಂದು ನಾನು ನಮ್ಮಿಬ್ಬರು ಗೆಳೆಯರ ಜೊತೆಗೆ ( ಹಿರಿಯೂರಿನ ಆದಿವಾಲದ ಶ್ರೀ ವೆಂಕಟೇಶ್ ತನ್ಯಾಸಿ ಗೌಂಡರ್ ಮತ್ತು ರಾಜಾಜಿನಗರದ ಶ್ರೀ ಸೋಮನಾಥ ) ಕನ್ಯಾಕುಮಾರಿಯನ್ನು ಸೈಕಲ್ ಪ್ರವಾಸದ ಮೂಲಕ ತಲುಪಿದ್ದೆ.

ಸ್ವಾಮಿ ವಿವೇಕಾನಂದ ಶಿಲಾಸ್ಮಾರಕ ನಿರ್ಮಾಣದ ಸಮಯದಲ್ಲಿ ಒಬ್ಬ ಕಾರ್ಯಕರ್ತನಾಗಿ ಮನೆ ಮನೆಗೆ ಕೂಪನ್ ಮಾರುವ ಕಾರ್ಯದಲ್ಲಿ ತೊಡಗಿದ್ದಾಗ ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕವನ್ನು ನೋಡಲು ಸೈಕಲ್ ಮೇಲೆಯೇ ಹೋಗಬೇಕೆಂದು ನಿರ್ಧರಿಸಿದ್ದೆ. ಅದೇ ಪ್ರಕಾರ ನಾವು ಮೂವರು 1974, ಡಿಸೆಂಬರ್ 25 ರಿಂದ ನಾಲ್ಕು ದಿನಗಳ ಸೈಕ್ಲಿಂಗ್ ಮೂಲಕ ಕನ್ಯಾಕುಮಾರಿಯನ್ನು ಮುಟ್ಟಿ ಸ್ವಾಮಿ ವಿವೇಕಾನಂದ ಸ್ಮಾರಕ ದರ್ಶನ ಪಡೆದು ಸಂಭ್ರಮಿಸಿದ್ದೆವು.

ಕಳೆದ ವರ್ಷ ನನ್ನ ಕನ್ಯಾಕುಮಾರಿ ಸೈಕಲ್ ಪ್ರವಾಸದ 50ನೇ ವಾರ್ಷಿಕೋತ್ಸವವನ್ನು ಮತ್ತೊಮ್ಮೆ ಸೈಕಲ್ ಯಾತ್ರೆ ಮೂಲಕವೇ ಆಚರಿಸಬೇಕೆಂಬ ಬಲವಾದ ಇಚ್ಛೆ ನನ್ನಲ್ಲಿತ್ತು. ಆದರೆ 2024 ರ ಆಗಸ್ಟ್ 16 ರಂದು ನನ್ನ ಆರೋಗ್ಯದ ಮೇಲೆ ಬಂದಪ್ಪಳಿಸಿದ ತೀವ್ರ ಆಘಾತ ನನ್ನ ಇಚ್ಛೆ ಈಡೇರಿಸಲು ಅಡ್ಡ ಹಾಕಿತು. ಆದರೆ ಈ ವರ್ಷ ಡಿಸೆಂಬರ್ 23 ರಂದು ನನ್ನ ಸುಮಾರು 15 ಗೆಳೆಯರೊಂದಿಗೆ ಸೇರಿಕೊಂಡು ಬೆಂಗಳೂರಿಂದ ಹೊರಟು ಸೈಕಲ್ ಯಾತ್ರೆಯ ಮೂಲಕ ಇಂದು, 27.12.2025 ರಂದು ಕನ್ಯಾಕುಮಾರಿ ತಲುಪಿದೆ. ನನ್ನ ಇಚ್ಛೆ ಪೂರ್ಣಗೊಂಡಿತು. ಸುಮಾರು 702 ಕಿಲೋಮೀಟರ್ ದೂರವನ್ನು ಸುಮಾರು 37 ಸೈಕ್ಲಿಂಗ್ ಗಂಟೆಗಳಲ್ಲಿ ಪೂರೈಸಿದೆವು. ಕಳೆದ ವರ್ಷ ಇದೇ ದಿನಗಳಲ್ಲಿ ನಾನಿದ್ದ ಆರೋಗ್ಯ ಪರಿಸ್ಥಿತಿಯನ್ನು ಒಮ್ಮೆ ನೆನಪಿಸಿಕೊಂಡಾಗ ಇಂದಿನ ಗೆಳೆಯರೊಂದಿಗಿನ ಈ ಸಾಧನೆ ನಿಜಕ್ಕೂ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಶಾಸಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.







