ಹಾಸನ : ಸಾಕಷ್ಟು ಲೆಕ್ಕಾಚಾರಗಳ ಬಳಿಕ ಬಿಜೆಪಿ ಹೈಕಮಾಂಡ್ ಕೊನೆಗೂ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಿಲೀಸ್ ಮಾಡಲಿದೆ. ಈ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿಯ ಹಲವು ಶಾಸಕರಿಗೆ ಭಾರೀ ನಿರಾಶೆಯಾಗಿದೆ. ಈ ಬಾರಿ ಬಿಜೆಪಿಯಿಂದ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಜೆಡಿಎಸ್ ತೊರೆದಿದ್ದ ಮಾಜಿ ಶಾಸಕ ಎಟಿ ರಾಮಸ್ವಾಮಿಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದೆ.

ಎಟಿ ರಾಮಸ್ವಾಮಿಗೆ ಈ ಬಾರಿ ಬಿಜೆಪಿಯಿಂದ ಅರಕಲಗೂಡು ಕ್ಷೇತ್ರದ ಟಿಕೆಟ್ ಫಿಕ್ಸ್ ಎಂದೇ ಹೇಳಲಾಗಿತ್ತು. ಆದರೆ ಅಚ್ಚರಿಯ ನಡೆ ಎಂಬಂತೆ ಬಿಜೆಪಿ ಅರಕಲಗೂಡು ಟಿಕೆಟ್ನ್ನು ಯೋಗ ರಮೇಶ್ಗೆ ನೀಡಿದೆ. ಬಿಜೆಪಿಯಿಂದ ಟಿಕೆಟ್ ನಿರೀಕ್ಷೆಯಿಟ್ಟುಕೊಂಡು ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಟಿ ರಾಮಸ್ವಾಮಿ ಇದೀಗ ಅತಂತ್ರ ಸ್ಥಿತಿಗೆ ತಲುಪಿದ್ದಾರೆ.
ಕಳೆದ ಬಾರಿಯೂ ಬಿಜೆಪಿ ಯೋಗ ರಮೇಶ್ಗೆ ಟಿಕೆಟ್ ನೀಡಿತ್ತು.ಆದರೆ ಅವರು ಚುನಾವಣೆಯಲ್ಲಿ ಸೋತಿದ್ದರು. ಈ ಬಾರಿಯೂ ಯೋಗ ರಮೇಶ್ ಮೇಲೆಯೇ ನಂಬಿಕೆ ಇಟ್ಟಿರುವ ಬಿಜೆಪಿ ಹೈಕಮಾಂಡ್ ಎಟಿ ರಾಮಸ್ವಾಮಿಗೆ ಸರಿಯಾಗಿಯೇ ಗುನ್ನಾ ಇಟ್ಟಿದೆ.






