ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟ ರಚನೆ ಬೆನ್ನಲ್ಲೇ ಖಾತೆ ಹಂಚಿಕೆ ಬಗ್ಗೆ ಬೇಸರ ಹೊರಹಾಕಿದ್ದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅಸಮಾಧಾನ ತಾತ್ಕಾಲಿಕವಾಗಿ ತಣಿದಂತಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂಧಾನದಿಂದ ಸುಮ್ಮನಾಗಿರುವ ಆನಂದ್ ಸಿಂಗ್, ಖಾತೆ ಬದಲಾವಣೆ ಪ್ರಯತ್ನ ಮಾತ್ರ ಕೈಬಿಟ್ಟಿಲ್ಲ ಎನ್ನಲಾಗಿದೆ. ತಮಗೆ ಪ್ರವಾಸೋದ್ಯಮ ಇಲಾಖೆಯೆ ಬೇಡ ಎಂದಿದ್ದ ಆನಂದ್ ಸಿಂಗ್ ಈಗ ಅದೇ ಇಲಾಖೆಯಲ್ಲಿ ಮಹತ್ವದ ಸಾಧನೆ ಮಾಡಿ ತೋರಿಸಲು ಮುಂದಾಗಿದ್ದಾರೆ. ಈ ಮೂಲಕ ಬಿಜೆಪಿ ನಾಯಕರಿಗೆ ಮಹತ್ವದ ಸಂದೇಶ ಸಾರಲು ಹೊರಟಿದ್ದಾರೆ. ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಹಲವು ಯೋಜನೆಯನ್ನು ಈಗ ಮತ್ತೆ ಜಾರಿಗೆ ತಲರು ಆನಂದ್ ಸಿಂಗ್ ಮುಂದಾಗಿದ್ದಾರೆ.
ಖಾತೆ ಬದಲಾವಣೆ ಕುರಿತು ಬಿಜೆಪಿ ಹೈಕಮಾಂಡ್ ಅನ್ನು ಆನಂದ್ ಸಿಂಗ್ ಹಲವು ಬಾರಿ ಭೇಟಿಯಾಗಿದ್ದರು. ಭೇಟಿ ವೇಳೆ ಹೈಕಮಾಂಡ್ ಖಡಕ್ ಎಚ್ಚರಿಕೆ ಬಳಿಕ, ಕೊಟ್ಟಿರುವ ಇಲಾಖೆಯಲ್ಲಿಯೇ ಸಾಧನೆ ಮಾಡಲು ಆನಂದ್ ಸಿಂಗ್ ಪಣತೊಟ್ಟಿದ್ದಾರೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಮಹತ್ವದ ಸಾಧನೆಗಳನ್ನು ಮಾಡುವ ಮೂಲಕ ಖಾತೆ ಬದಲಾವಣೆ ಪ್ರಯತ್ನ ಮುಂದುವರೆಸಲು ಆನಂದ್ ಸಿಂಗ್ ಪ್ಲಾನ್ ಮಾಡಿದ್ದಾರೆ. ಹೀಗೊಂದು ಸುದ್ದಿ ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ.
ಈಗ ಖಾತೆ ಬದಲಾವಣೆ ಮಾಡೋದು ಸರಿಯಲ್ಲ. ನಿನಗೆ ಕೊಟ್ಟ ಪ್ರವಾಸೋದ್ಯಮ ಇಲಾಖೆ ಖಾತೆಯನ್ನು ಸರಿಯಾಗಿ ನಿಭಾಯಿಸು. ನಿನ್ನ ಖಾತೆಯನ್ನು ಮಹತ್ತರ ಸಾಧನೆ ಮಾಡಿ ರಿಪೋರ್ಟ್ ಮಾಡು. ನಾನೇ ಖುದ್ದಿ ಹೈಕಮಾಂಡ್ ಜತೆ ಮಾತಾಡಿದ ಖಾತೆ ಬದಲಾವಣೆಗೆ ಮನವರಿಕೆ ಮಾಡುತ್ತೇನೆ. ನೀವು ಬಯಸಿದಂತೆ ನಿನಗೆ ಪ್ರಬಲ ಖಾತೆ ನಾನು ಕೊಡಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರಂತೆ. ಅಲ್ಲದೇ ಇದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಸರಿ ಎಂದಿದ್ದಾರೆ. ಹಾಗಾಗಿ ಆನಂದ್ ಸಿಂಗ್ ತನ್ನ ಪ್ರವಾಸೋದ್ಯಮ ಇಲಾಖೆ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.
ಈ ಮಧ್ಯೆಯೇ ಸುದ್ದಿಗಾರರೊಂದಿಗೆ ಮಾತಾಡಿರುವ ಆನಂದ್ ಸಿಂಗ್, ನನಗೆ ನೀಡಿರುವ ಖಾತೆಗಳು ಅತ್ಯುತ್ತಮವಾದವು. ಕೆಲವು ವಿಚಾರಗಳನ್ನು ಬಹಿರಂಗವಾಗಿ ಹೇಳೊಕೆ ಆಗಲ್ಲ. ನನಗೆ ಅಸಮಾಧಾನ ಇದೆ ಎಂದು ಎಲ್ಲಿಯಾದರೂ ಹೇಳಿದಿನಾ? ಕೆಲವೊಂದಿಷ್ಟು ಮನವಿ ಮಾಡಿದ್ದೀನಿ ಅಷ್ಟೇ ಎಂದಿದ್ದಾರೆ.
ಎಲ್ಲವೂ ಬಹಿರಂಗವಾಗಿ ಹೇಳೋಕೆ ಆಗಲ್ಲ. ಮನವಿಯನ್ನ ಬಗೆಹರಿಸೋದು ಹೈಕಮಾಂಡ್ಗೆ ಬಿಟ್ಟಿದ್ದು. ಕೊಟ್ಟಿರುವ ಖಾತೆ ಉತ್ತಮವಾಗಿದೆ. ಖಾತೆ ಬದಲಾವಣೆಗೆ ಈಗ ಸೂಕ್ತ ಸಮಯವಲ್ಲ ಎಂದು ಹೈಕಮಾಂಡ್ ತಿಳಿಸಿದೆ. ಅವರ ಸಲಹೆಗೆ ತಲೆ ಬಾಗುತ್ತೇನೆ. ನಂಬಿಕೆ, ವಿಶ್ವಾಸದ ಮೇಲೆ ನಡೆಯುವ ನಾನು, ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಇಲಾಖೆ ಜವಾಬ್ದಾರಿ ವಹಿಸಿಕೊಂಡಿರಲಿಲ್ಲ. ಈಗ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಬುಧವಾರ ನಾನು ಪರಿಸರ ಇಲಾಖೆಯ ಸಭೆ ನಡೆಸಿದ್ದೇನೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಗ್ರಾಮೀಣ ಭಾಗಗಳಿಗೆ ಹೋಗಲು ಹೆದರುತ್ತಿದ್ದರು. ದೂರು ಬಂದಾಗ ಕ್ರಮ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದರು. ಈಗ ಅವರಿಗೆ ಎಲ್ಲವನ್ನೂ ವಿವರಿಸಿ ಇಲಾಖೆ ಕಾರ್ಯ ಚುರುಕುಗೊಳಿಸಿದ್ದೇವೆ ಎಂದು ಹೇಳಿದರು.
ಖಾತೆ ವಿಚಾರಕ್ಕೆ ಮುನಿಸಿಕೊಂಡಿದ್ದ ಸಚಿವ ಆನಂದ್ ಸಿಂಗ್ ಇತ್ತೀಚೆಗೆ ದೆಹಲಿಗೆ ತೆರಳಿ ಪ್ರಬಲ ಖಾತೆಗೆ ಲಾಭಿ ನಡೆಸಿದ್ದರು. ಆದರೆ, ಇದು ಸಾಧ್ಯವಾಗದಿದ್ದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ಕೇಳಿ ಬಂದವು. ಆದರೆ, ಯಡಿಯೂರಪ್ಪ ಈ ಮುನಿಸು ಸದ್ಯಕ್ಕೆ ಶಮನ ಮಾಡಿದ್ದಾರೆ. ಹಾಗಾಗಿ ಆನಂದ್ ಸಿಂಗ್ ಕೊನೆಗೂ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎನ್ನಲಾಗಿದೆ.
ಈ ನಡುವೆ ಬೊಮ್ಮಾಯಿಯವರು ದೆಹಲಿ ಭೇಟಿ ನೀಡಿ ಆನಂದ್ ಸಿಂಗ್ ಬಗ್ಗೆ ಮಾತುಕಡೆ ನಡೆಸಿದ್ದಾರೆ. ಇದರ ಬಗ್ಗೆ ತಿಳಿದುಕೊಳ್ಳಲು ಆನಂದ್ ಸಿಂಗ್ ಬೊಮ್ಮಾಯಿ ಹಿಂದೆಯೇ ಓಡಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದವು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆನಂದ್ ಸಿಂಗ್, ದೆಹಲಿ ಭೇಟಿ ಬಳಿಕ ಏನಾಯಿತು ಎಂಬುದನ್ನು ತಿಳಿಯುವ ಸಲುವಾಗಿ ಸಿಎಂ ಹಿಂದೆ ಹಿಂದೆ ಓಡಾಡುವ ವ್ಯಕ್ತಿ ನಾನಲ್ಲ. ಇದು ನನ್ನ ವ್ಯಕ್ತಿತ್ವವಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.