ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ ಮಾಡಲಾಯ್ತು. ಸಾವಿರಾರು ಜನರು ಆಗಮಿಸಿದ್ರು. ರಾಜಕೀಯ ಸಭೆಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದ್ರೂ ಸಭೆಯ ನಡುವೆ ಅಬ್ಬರದ ಭಾಷಣ ಮಾಡುವಾಗ ಸಣ್ಣದೊಂದು ಎಡವಟ್ಟು ಮಾಡಿದ್ರು. ಬಿಜೆಪಿ ನಾಯಕರು ರಾಷ್ಟ್ರಪತಿ ದ್ರೌಪತಿ ಮುರ್ಮು ಹಿಂದುಳಿದ ಸಮುದಾಯಕ್ಕೆ ಸೇರಿದವರು ಅನ್ನೋ ಕಾರಣಕ್ಕೆ ಸಂಸತ್ ಭವನ ಉದ್ಘಾಟನೆಗೆ ಕರೆಯಲಿಲ್ಲ, ಶ್ರೀರಾಮ ಮಂದಿರ ಉದ್ಘಾಟನೆಗೂ ಆಹ್ವಾನ ಮಾಡಲಿಲ್ಲ ಎಂದು ಆಕ್ರೋಶ ಭರಿತ ಮಾತುಗಳನ್ನು ಹೇಳುವಾಗ ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ಕರೆದಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಆ ಬಳಿಕ ಎಚ್ಚೆತ್ತುಕೊಂಡ ಸಿಎಂ ಸಿದ್ದರಾಮಯ್ಯ X ಪೋಸ್ಟ್ ಮೂಲಕ ಕ್ಷಮಾಪಣೆ ಕೇಳಿದ್ದಾರೆ.
![](https://pratidhvani.com/wp-content/uploads/2024/01/IMG-20240128-WA0111-1024x683.webp)
ಎಕ್ಸ್ ಪೋಸ್ಟ್ನಲ್ಲಿ ವಿಷಾದ ವ್ಯಕ್ತಪಡಿಸಿದ ಸಿಎಂ:
ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ರಾಷ್ಟ್ರಪತಿ ಆಗಿರುವ ದ್ರೌಪದಿ ಮುರ್ಮು ಅವರಿಗೆ ಸಂಸತ್ ಭವನ ಉದ್ಘಾಟನೆಗೆ ಆಹ್ವಾನ ನೀಡದೆ ಬಿಜೆಪಿ ನಾಯಕರು ಅವಮಾನಿಸಿದ್ರು. ಈ ವಿಚಾರ ನನಗೆ ತೀವ್ರ ನೋವು ಉಂಟು ಮಾಡಿತ್ತು. ಜೊತೆಗೆ ನನ್ನಲ್ಲಿ ಆಕ್ರೋಶ ಹುಟ್ಟಿಸಿತ್ತು. ಶೋಷಿತರ ಜಾಗೃತಿ ಸಮಾವೇಶದಲ್ಲಿ ಸ್ವಲ್ಪ ಭಾವುಕನಾಗಿ ಈ ಆಕ್ರೋಶವನ್ನು ಹೊರ ಹಾಕುವ ಭರದಲ್ಲಿ ಬಾಯ್ತಪ್ಪಿನಿಂದ ರಾಷ್ಟ್ರಪತಿಗಳನ್ನು ಏಕವಚನದಲ್ಲಿ ಸಂಭೋದಿಸಿದೆ. ಗ್ರಾಮೀಣ ಪ್ರದೇಶದಿಂದ ಬಂದ ನನ್ನಂತವರು ಅಪ್ಪ-ಅಮ್ಮ ಸೇರಿದಂತೆ ಹಿರಿಯರನ್ನು ಕೂಡ ಏಕವಚನದಲ್ಲಿ ಸಂಭೋದಿಸುವುದು ರೂಢಿ. ಗೌರವಾನ್ವಿತ ರಾಷ್ಟ್ರಪತಿಗಳು ನನ್ನಂತೆಯೇ ಶೋಷಿತ ಸಮಾಜದಿಂದ ಬಂದವರು. ಅವರ ಬಗ್ಗೆ ಅಪಾರ ಗೌರವವಿದೆ. ಅವರನ್ನು ಏಕವಚನದಲ್ಲಿ ಸಂಬೋಧಿಸಬಾರದಿತ್ತು. ಅಚಾತುರ್ಯದಿಂದ ಆಗಿರುವ ಈ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
![](https://pratidhvani.com/wp-content/uploads/2024/01/k_venkatesh_karnataka-sixteen_nine-jpg.webp)
ರಾಮನ ಹಾಡು ಕೇಳಿ ಸಭೆ ಬಿಟ್ಟು ಹೊರಟ್ರಂತೆ ಮಿನಿಸ್ಟರ್..!?:
ಚಾಮರಾಜನಗರದಲ್ಲಿ ರಾಮನ ಕುರಿತ ಹಾಡಿಗೆ ಸಚಿವ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಚಾಮರಾಜನಗರದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ಜನ್ಯ ಗಾಯನ ಹಮ್ಮಿಕೊಳ್ಳಲಾಗಿತ್ತು. ‘ರಾಮ ನಾಮ ಹಾಡಿರೋ ರಾಮ ಬರುವನು’ ಹಾಡು ಶುರುವಾಗುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್, ಸಂಗೀತೋತ್ಸವ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ. ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನ ಆವರಣದ ನಡೆಯುತ್ತಿದ್ದ ಸಂಗೀತೋತ್ಸವದಿಂದ ಎದ್ದು ಹೋಗಿದ್ದಾರೆ. ಈ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.
![](https://pratidhvani.com/wp-content/uploads/2024/01/Shiva.png)
ಕಮಲ ಹೂ ಪ್ರದರ್ಶನಕ್ಕೂ ಕೆಂಡ ಕಾರಿದ್ದ ಶಾಸಕ..!
ಗಣರಾಜ್ಯೋತ್ಸವ ಕಾರ್ಯಕ್ರಮದ ದಿನ ಅರಸೀಕೆರೆಯಲ್ಲಿ ಕಮಲ ಹೂ ಪ್ರದರ್ಶನ ಮಾಡಿದ್ರು ಅನ್ನೋ ಕಾರಣಕ್ಕೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಕೆಂಡ ಕಾರಿದ್ರು. ಕಮಲ ಬಿಜೆಪಿ ಪಕ್ಷದ ಚಿಹ್ನೆ ಅನ್ನೋದು ನಿಮಗೆ ಗೊತ್ತಿಲ್ಲವೇ..? ಯಾಕೆ ಬಳಸಿದ್ರಿ ಎಂದು ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ರು. ಆ ಬಳಿಕ ರಾಷ್ಟ್ರೀಯ ಹೂ ಅನ್ನೋ ಕಾರಣಕ್ಕೆ ಪ್ರದರ್ಶನ ಮಾಡಿದ್ದೇವೆ. ಬಿಜೆಪಿ ಚಿಹ್ನೆ ಅನ್ನೋ ಕಾರಣಕ್ಕೆ ಅಲ್ಲ ಎಂದು ಶಿಕ್ಷಕಿ ಕೂಡ ತಿರುಗೇಟು ಕೊಟ್ಟಿದ್ರು. ಒಟ್ಟಾರೆ ಕಾಂಗ್ರೆಸ್ ನಾಯಕರು ಸಣ್ಣ ಪುಟ್ಟ ವಿಚಾರಕ್ಕೂ ಸ್ಥಿಮಿತ ಕಳೆದುಕೊಳ್ತಿದ್ದಾರೆ ಎಂದೆನಿಸುತ್ತಿದೆ. ಲೋಕಸಭಾ ಚುನಾವಣೆ ಹತ್ತಿರ ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಸಂಯಮ ಮುಖ್ಯವಾಗುತ್ತದೆ. ಇಲ್ಲದಿದ್ದರೆ ಎಲ್ಲಾ ವಿಚಾರಗಳಲ್ಲೂ ಆಕ್ರೋಶ ಹೊರಬಿದ್ದರೆ ಮತದಾರರು ಚಿಂತಿಸಿ ಮತ ಹಾಕುವುದನ್ನು ಹಿಂಪಡೆಯುವ ಸಾಧ್ಯತೆಯಿದೆ. ಎಚ್ಚರಿಕೆ ಹೆಜ್ಜೆಯ ಅಗತ್ಯವಿದೆ ಎನ್ನಬಹುದು.
ಕೃಷ್ಣಮಣಿ