“ಒಂದು ದಿನ ನನ್ನ ನಾಲ್ಕು ಪುಟ್ಟ ಮಕ್ಕಳು, ಚರ್ಮದ ಬಣ್ಣಕ್ಕೆ ಬದಲಾಗಿ ವ್ಯಕ್ತಿತ್ವದ ಮೇಲೆ ಚಾರಿತ್ರ್ಯ ಅಳೆಯುವಂತಹ ರಾಷ್ಟ್ರದಲ್ಲಿ ಬದುಕುತ್ತಾರೆ ಎಂಬ ಕನಸಿದೆ. ಜಾರ್ಜಿಯಾದ ಕೆಂಪು ಪರ್ವತಗಳ ಮೇಲೆ, ಗುಲಾಮರ ಹಾಗೂ ಮಾಲೀಕರ ಮಕ್ಕಳ ಸಹೋದರತೆಯ ಮೇಜಿನ ಮೇಲೆ ಒಟ್ಟೊಟ್ಟಿಗೆ ಕುಳಿತು ಮಾತನಾಡುತ್ತಾರೆ ಎಂಬ ಕನಸು ನನ್ನಲ್ಲಿದೆ.”
ಈ ಮೇಲಿನ ದೂರದೃಷ್ಟಿ ಚಿಂತನೆಯ ಮಾತುಗಳನ್ನು ಹೇಳಿದವರು ಮತ್ತಾರು ಅಲ್ಲ ವರ್ಣಭೇದ ನೀತಿ ವಿರುದ್ಧ ಧ್ವನಿಯೆತ್ತಿದ ಮಾರ್ಟಿನ್ ಲೂಥರ್ ಕಿಂಗ್.
ಇಂದು ಮಾರ್ಟಿನ್ ಲೂಥರ್ ಕಿಂಗ್ ಅವರ ಜನ್ಮದಿನ. ಜನವರಿ 15, 1929 ರಲ್ಲಿ ಜನಿಸಿದ ಕಿಂಗ್ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಅಮೆರಿಕದ ಕರಿಯರ ಪಾಲಿಗೆ ಭರವಸೆಯ ನಾಯಕನಾಗಿ, ಕ್ರಾಂತಿಯ ಚೇತನವಾಗಿ ಆಗಮಿಸಿದ ಕಿಂಗ್ ವರ್ಣಭೇದ ನೀತಿ ವಿರುದ್ಧ ಧ್ವನಿಯೆತ್ತಿ ಯಶಸ್ವಿಯಾದರು.
ಬಿಳಿಯರ ಕಿರುಕುಳಕ್ಕೆ, ಅಸ್ಪ್ರಶ್ಯತೆಗೆ ಒಳಗಾಗಿರುವ ಕರಿಯರನ್ನು ಅಪ್ಪಿಕೊಂಡು ಕರಿಯ ಜನಾಂಗದವರ ಪರ ಹೋರಾಟಕ್ಕೆ ಸಜ್ಜಾಗಿ ಕರಿಯರ ನಾಯಕನಾಗಿ ಕಿಂಗ್ ಹೊರಹೊಮ್ಮಿದ. ಬಿಳಿಯರು ಹಿಂಸಾತ್ಮಕ ಚಟುವಟಿಕೆಗಳು ನಡೆಸಿ ಎಷ್ಟೇ ಕಿರುಕುಳ ನೀಡಿದರೂ ಲೂಥರ್ ಕಿಂಗ್ ಹಿಂಸಾತ್ಮಕ ಮಾರ್ಗ ಹಿಡಿಯಲಿಲ್ಲ. ಅದಕ್ಕೆ ಬಲವಾದ ಕಾರಣ ಒಂದಿತ್ತು. ಅದೇನೆಂದರೆ ಭಾರತದ ಅಹಿಂಸಾತ್ಮಕ ಹೋರಾಟಗಾರ ಮಹಾತ್ಮ ಗಾಂಧೀಜಿಯವರು ಮಾರ್ಟಿನ್ ಲೂಥರ್ ಕಿಂಗ್ ಗೆ ಪ್ರೇರಣೆ. ಗಾಂಧೀಜಿಯವರ ತತ್ವವನ್ನೇ ಜೀವನದುದ್ದಕ್ಕೂ ಕಿಂಗ್ ಅನುಕರಣೆ ಮಾಡಿದರು.
ಅಮೆರಿಕಾದಿಂದ ಭಾರತಕ್ಕೂ ಆಗಮಿಸಿದ ಕಿಂಗ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ್ದರು. ಎಲ್ಲಾ ಕ್ಷೇತ್ರಗಳಲ್ಲೂ ಬಿಳಿಯರಿಗೆ ಮಾತ್ರ ಅವಕಾಶಗಳಿದ್ದವು, ಆದರೆ ಕರಿಯರು ಮಾತ್ರ ಯಾವುದೇ ಸೌಲಭ್ಯ, ಹಕ್ಕುಗಳು ದಕ್ಕಿಸಿಕೊಳ್ಳಲು ಸಾಧ್ಯವಾಗದೇ ವಂಚಿತರಾಗಿ ಬದುಕುತ್ತಿದ್ದರು. ಕರಿಯರಿಗೆ ಮತ್ತು ಬಿಳಿಯರಿಗೆ ಪ್ರತ್ಯೇಕತೆ ಮಾಡುವ ಮೂಲಕ ಅಸಮಾನ ವ್ಯವಸ್ಥೆ ಜಾರಿಯಲ್ಲಿತ್ತು. ಇಂತಹ ಅನೇಕ ಸಂಕಷ್ಟ, ಅವಮಾನಗಳನ್ನು ಎದುರಿಸಿದ ಲೂಥರ್ ಕಿಂಗ್ ಮುಂದೆ ದೊಡ್ಡ ಮಟ್ಟದಲ್ಲಿ ಅಹಿಂಸಾತ್ಮಕ ಪ್ರತಿಭಟನೆಗೆ ಸಜ್ಜಾದರು. ಲಕ್ಷ – ಲಕ್ಷ ಕರಿಯ ಜನಾಂಗದವರನ್ನು ಒಂದೆಡೆ ಸೇರಿಸಿದ ಕಿಂಗ್ ವೇದಿಕೆ ಮೇಲೆ ಆಗಮಿಸಿ ತನ್ನ ಭಾವುಕತೆಯಿಂದ ಹೇಳಿದ “ನನಗೆ ಒಂದು ಇಂದು ಕನಸಿದೆ’ ಎನ್ನುವ ಪ್ರಸಿದ್ಧ ಭಾಷಣವು ಜನಾಂಗೀಯ ಕೇಂದ್ರಿತ ನಿಂದನೆ, ಕರಿಯರ ಕಿರುಕುಳ ಮತ್ತು ಶೋಷಣೆಯ ಸಾಮಾಜಿಕ ಅನುಭವಗಳನ್ನು ಪ್ರತಿಬಿಂಬಿಸುತ್ತದೆ.

ಕೊನೆಗೂ ಕಿಂಗ್ ಹೋರಾಟದ ಫಲವಾಗಿ 1964 ರಲ್ಲಿ ಅಮೆರಿಕ ಅಧ್ಯಕ್ಷ ನಾಗರೀಕ ಹಕ್ಕುಗಳ ಕಾಯಿದೆ ಜಾರಿಗೊಂಡು, ಒಪ್ಪಂದಕ್ಕೆ ಸಹಿ ಹಾಕಿದರು. ನೂರಾರು ವರ್ಷಗಳ ಕಾಲ ಬಿಳಿಯರ ಅಟ್ಟಹಾಸ, ಹಿಂಸೆ, ದೌರ್ಜನ್ಯಕ್ಕೆ ಒಳಗಾಗಿದ್ದ ಲಕ್ಷಾಂತರ ಕರಿಯರು ಮಾರ್ಟಿನ್ ಲೂಥರ್ ಕಿಂಗ್ ಎಂಬ ಚೈತನ್ಯ ಶಕ್ತಿಯಿಂದ ನಿಟ್ಟುಸಿರು ಬಿಡುವಂತಾಗಿತ್ತು.
ಸಾಮಾಜಿಕ ಕ್ರಾಂತಿಗೆ ಹೆಸರಾದ ಮಾರ್ಟಿನ್ ಲೂಥರ್ ಕಿಂಗ್ ಗೆ ‘ನೊಬೆಲ್ ಶಾಂತಿ’ ಪ್ರಶಸ್ತಿ ಕೂಡ ಒಲಿದಿತ್ತು. ‘ಅಮೆರಿಕದ ಗಾಂಧಿ’ ಎಂದೇ ಪ್ರಖ್ಯಾತಿ ಪಡೆದಿರುವ ಕಿಂಗ್ ಅಹಿಂಸಾತ್ಮಕ ತತ್ವಗಳಿಂದಲೇ ಗೆಲುವು ಸಾಧಿಸಿದ ಜನಮನ ನೇತಾರ. ಆದರೆ ಕೊನೆಗೆ ಎಪ್ರಿಲ್ 4, 1968 ರಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿ ಅಂದು ಅಮೆರಿಕಾ ಚರಿತ್ರೆಯಲ್ಲಿ ದುರಂತದ ಸಾವಿಗೆ ಶರಣಾದರು.
ಮಾರ್ಟಿನ್ ಕಿಂಗ್ ದೈಹಿಕವಾಗಿ ಮರೆಯಾದರೂ ಲಕ್ಷಾಂತರ ಹೃದಯಗಳಲ್ಲಿ ಇಂದಿಗೂ ನೆಲೆಸಿದ್ದಾರೆ. ಮಾರ್ಟಿನ್ ಒಬ್ಬ ಛಲಗಾರ, ಹೋರಾಟಗಾರ ಅಷ್ಟೇ ಅಲ್ಲದೇ ಸಾಮಾಜಿಕ ಸುಧಾರಣೆಗಾಗಿ ಪ್ರಾಣತ್ಯಾಗ ಮಾಡಿದ ಅದಮ್ಯ ಚೇತನ ಕೂಡ ಹೌದು. ಇಂಥ ಕ್ರಾಂತಿಕಾರಿ ನಾಯಕರ ಆದರ್ಶಗಳು ನಮ್ಮಂತಹ ಲಕ್ಷಾಂತರ ಮನಸ್ಸುಗಳಿಗೆ ಸ್ಫೂರ್ತಿದಾಯಕವಾಗಬೇಕಾಗಿದೆ.
ಅಸಮಾನತೆ, ಅಸ್ಪೃಶ್ಯತೆ, ಅಶಾಂತಿ, ಹಿಂಸಾಚಾರ ತಾಂಡವವಾಡುತ್ತಿರುವ ದುರಿತ ಕಾಲದಲ್ಲಿ ‘ಮಾರ್ಟಿನ್ ಲೂಥರ್ ಕಿಂಗ್’ ಎನ್ನುವ ಕ್ರಾಂತಿಯ ಚಿಲುಮೆಗಳು ಮತ್ತೆ ಮತ್ತೆ ಹುಟ್ಟು ಪಡೆದು ಪುಟಿದೇಳಬೇಕು ಎಂದೆನಿಸುತ್ತದೆ.