• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಪ್ರಣಾಳಿಕೆ ಎಂಬ ರಾಜಕೀಯ ಫಲ ಜೋತಿಷ್ಯ..ಸಾಮಾನ್ಯ ಪರಿಭಾಷೆಯಲ್ಲಿ ಈಡೇರಿಸಲಾಗದ ಭರವಸೆಗಳನ್ನು ಪ್ರಣಾಳಿಕೆ ಎನ್ನಲಾಗುತ್ತಿದೆ

ನಾ ದಿವಾಕರ by ನಾ ದಿವಾಕರ
May 3, 2023
in ಅಂಕಣ
0
ಪ್ರಣಾಳಿಕೆ ಎಂಬ ರಾಜಕೀಯ ಫಲ ಜೋತಿಷ್ಯ..ಸಾಮಾನ್ಯ ಪರಿಭಾಷೆಯಲ್ಲಿ ಈಡೇರಿಸಲಾಗದ ಭರವಸೆಗಳನ್ನು ಪ್ರಣಾಳಿಕೆ ಎನ್ನಲಾಗುತ್ತಿದೆ
Share on WhatsAppShare on FacebookShare on Telegram

ನಾ ದಿವಾಕರ

ADVERTISEMENT

ಅಂಗೈನಲ್ಲಿ ಆಕಾಶ ತೋರಿಸುವುದು ಎಂದರೇನು ?

ಐದಾರು ದಶಕಗಳ ಹಿಂದೆ ಯಾವುದಾದರೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಮುಂದೆ ಈ ಪ್ರಶ್ನೆ ಇಟ್ಟು ಪ್ರಬಂಧ ಬರೆಯಲು ಹೇಳಿದ್ದರೆ ಬಹುಶಃ ತಮ್ಮ ಬದುಕಿನ ಸುತ್ತ ನಡೆದಿರಬಹುದಾದ ಎಲ್ಲ ಘಟನೆಗಳನ್ನೂ, ಪ್ರಸಂಗಗಳನ್ನೂ ನೆನೆಯುತ್ತಾ ತಾವು ಕಟ್ಟಿದ ಕನಸಿನ ಕೋಟೆಗಳು ಭಗ್ನವಾದ ಅನುಭವಗಳನ್ನೆಲ್ಲಾ ದಾಖಲಿಸಿ ತಾವು ನಂಬಿರುವ ಪೋಷಕರು ಹೇಗೆ ತಮ್ಮ ಆಕಾಂಕ್ಷೆಗಳನ್ನು ಪೂರೈಸಲು ವಿಫಲವಾಗಿದ್ದಾರೆ ಎನ್ನುವುದನ್ನು ಸ್ವಾರಸ್ಯಕರವಾಗಿ ಬರೆಯುತ್ತಿದ್ದರು. ಹಾಗೆಯೇ ತಮ್ಮ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಪೋಷಕರು ಏಕೆ ಸಫಲರಾಗಿಲ್ಲ ಎಂದು ಪ್ರಶ್ನಿಸುತ್ತಲೇ ಭ್ರಮನಿರಸನವಾದ ಪ್ರಸಂಗಗಳನ್ನೂ ಬರೆಯುತ್ತಿದ್ದರು.

ಅದರೆ ಇಂದು ಇಷ್ಟೆಲ್ಲಾ ಸಾಹಸ ಮಾಡುವ ಅಗತ್ಯವೇ ಇಲ್ಲ. ಒಂದೇ ಸಾಲಿನಲ್ಲಿ “ ರಾಜಕೀಯ ಪ್ರಣಾಳಿಕೆ ” ಎಂದು ಬರೆದರೆ ಸಾಕು.

ಪ್ರಣಾಳಿಕೆಯ ಲಕ್ಷಣಗಳು

ಅಷ್ಟರ ಮಟ್ಟಿಗೆ ಅರ್ಥಹೀನವಾಗಿರುವ ಚುನಾವಣಾ ಸಂದರ್ಭದ ಆಶ್ವಾಸನೆಗಳ ಬುಟ್ಟಿ ಈ ಪ್ರಣಾಳಿಕೆಗಳು. ಮೂಲತಃ ಚುನಾವಣೆಗಳಿಗೂ ಮುನ್ನ ರಾಜಕೀಯ ಪಕ್ಷಗಳು ಜನತೆಯ ಮುಂದಿಡುವ ಪ್ರಣಾಳಿಕೆಗೆ ಒಂದು ಮೌಲ್ಯಯುತ ಸ್ಥಾನಮಾನವನ್ನು ಪ್ರಜಾತಂತ್ರ ವ್ಯವಸ್ಥೆ ನೀಡಿದೆ. ಮತದಾರರು ಮುಂದಿನ ಐದು ವರ್ಷಗಳ ಅವಧಿಗೆ ಚುನಾಯಿಸುವ ಸರ್ಕಾರವು ಈ ಐದು ವರ್ಷಗಳಲ್ಲಿ ಇಡೀ ಸಮಾಜಕ್ಕೆ ಅನ್ವಯಿಸುವಂತಹ ಯಾವ ಜನೋಪಯೋಗಿ ಯೋಜನೆಗಳನ್ನು ಹಮ್ಮಿಕೊಳ್ಳಲಿದೆ, ಅವಕಾಶವಂಚಿತ ಜನಸಮುದಾಯಗಳಿಗೆ ಯಾವ ಶಾಶ್ವತ ಅವಕಾಶಗಳನ್ನು ಕಲ್ಪಿಸಲಿದೆ, ಬಡತನ ನಿರುದ್ಯೋಗ ಹಸಿವು ಅಪೌಷ್ಟಿಕತೆ ಮುಂತಾದ ಸಾಮಾಜಿಕ ಪಿಡುಗುಗಳನ್ನು ಅಂತ್ಯಗೊಳಿಸಲು ಯಾವ ಆಡಳಿತ ನೀತಿಗಳನ್ನು ಅನುಸರಿಸಲಾಗುತ್ತದೆ, ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸಮಾಜದ ಕಾನೂನು ಸುವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಏನು ಮಾಡುತ್ತದೆ, ವರ್ತಮಾನದ ಸನ್ನಿವೇಶದಲ್ಲಿರುವ ಅಸಮಾನತೆ, ತಾರತಮ್ಯ, ದೌರ್ಜನ್ಯ ಮತ್ತು ಅನ್ಯಾಯಗಳನ್ನು ಸರಿಪಡಿಸುವ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ – ಈ ಎಲ್ಲಾ ಆಶಯಗಳ ಬಗ್ಗೆ ಮತದಾರರಲ್ಲಿ ನಂಬಿಕೆ ಮೂಡಿಸುವಂತೆ ಒಂದು ನೀಲನಕ್ಷೆಯಾಗಿ ಚುನಾವಣಾ ಪ್ರಣಾಳಿಕೆ ಇರಬೇಕಾಗುತ್ತದೆ.

ಚುನಾವಣಾ ಪ್ರಣಾಳಿಕೆಗೆ ಕೆಲವು ಮೂಲ ಲಕ್ಞಣಗಳಿರಬೇಕಾಗುತ್ತದೆ. ತಕ್ಷಣದಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ತಾತ್ಕಾಲಿಕವಾಗಿ ಅನುಸರಿಸಬೇಕಾದ ಪರಿಹಾರೋಪಾಯಗಳು, ಶಾಶ್ವತವಾಗಿ ರೂಪಿಸಬೇಕಾದ ಕಾಯ್ದೆ ಕಾನೂನುಗಳು ಹಾಗೂ ಜನಸಾಮಾನ್ಯರ ಜೀವನ, ಜೀವನೋಪಾಯ ಮತ್ತು ಜೀವನಾಂಶಗಳನ್ನು ಉತ್ತಮಗೊಳಿಸಬಹುದಾದ ದೀರ್ಘಾವಧಿಯ ಆಡಳಿತ ನೀತಿಗಳ ಒಂದು ಛಾಯೆ ಚುನಾವಣಾ ಪ್ರಣಾಳಿಕೆಗಳಲ್ಲಿ ಇರಬೇಕಾಗುತ್ತದೆ. ಈ ಅಮೂಲ್ಯ ದಸ್ತಾವೇಜು ಕೇವಲ ಕೆಲವು ಪುಟಗಳ ಹೊತ್ತಿಗೆಯಲ್ಲ ಅಥವಾ ಮತದಾರರ ಮನೆಗಳ ಮುಂದೆ ಎಸೆದು ಹೋಗುವಂತಹ ಕರಪತ್ರಗಳೂ ಅಲ್ಲ. ಪ್ರಣಾಳಿಕೆಯ ಹಿಂದೆ ಸಂವಿಧಾನ ಬಯಸುವಂತಹ ಒಂದು ಆರೋಗ್ಯಕರ ಸಮಾಜದ ಆಶಯಗಳಿರಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಅಡಿಯಲ್ಲೇ ನಡೆಯುವ ಚುನಾವಣೆಗಳ ಸಂದರ್ಭದಲ್ಲಿ ಸಂಭಾವ್ಯ ಆಡಳಿತ ಪಕ್ಷಗಳು ಸಿದ್ಧಪಡಿಸುವ ಚುನಾವಣಾ ಪ್ರಣಾಳಿಕೆಗೆ ಸಾಂವಿಧಾನಿಕ ಮೌಲ್ಯ ಮತ್ತು ಮಹತ್ವ ಇರುವಂತೆಯೇ ವಿಶ್ವಾಸಾರ್ಹತೆಯೂ, ಉತ್ತರದಾಯಿತ್ವವೂ ಇರಬೇಕಾಗುತ್ತದೆ. ಅಧಿಕಾರಕ್ಕೆ ಬರಲು ಬಯಸುವ ಒಂದು ರಾಜಕೀಯ ಪಕ್ಷ ತನ್ನ ಸಂಭಾವ್ಯ ಅಧಿಕಾರಾವಧಿಯ ಐದು ವರ್ಷಗಳ ಕಾಲವೂ ಈ ದಸ್ತಾವೇಜನ್ನು ಗಮನಿಸುತ್ತಲೇ ತನ್ನ ಆಡಳಿತ ನೀತಿಗಳನ್ನು, ಕಾರ್ಯನೀತಿಗಳನ್ನು ಸಿದ್ಧಪಡಿಸುವುದರ ಮೂಲಕ ಮತದಾರರ ಹಾಗೂ ಇಡೀ ಸಮಾಜದ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾಗುತ್ತದೆ.

ಪ್ರಣಾಳಿಕೆಗಳ ಪ್ರಸ್ತುತ ರೂಪ

ಆದರೆ ಇತ್ತೀಚಿನ ಕೆಲವು ದಶಕಗಳಿಂದೀಚೆಗೆ ಚುನಾವಣಾ ಪ್ರಣಾಳಿಕೆಗಳು ತಮ್ಮ ಮೂಲ ಅರ್ಥವನ್ನೇ ಕಳೆದುಕೊಂಡು ಕೇವಲ ಮತದಾರರನ್ನು ಆಕರ್ಷಿಸುವ ಭರವಸೆಗಳ ಹೊತ್ತಿಗೆಗಳಾಗಿವೆ. ಸಾಮಾನ್ಯ ಮತದಾರರೂ ಸಹ ಪ್ರಣಾಳಿಕೆಗಳನ್ನು ಗಂಭೀರವಾಗಿ ಪರಿಗಣಿಸದೆ, ರಾಜಕೀಯ ನಾಯಕರು ತಮ್ಮ ಪ್ರಚಾರ ಭಾಷಣಗಳಲ್ಲಿ ನೀಡುವ ಆಶ್ವಾಸನೆಗಳನ್ನೇ ನಂಬಿ ಮತಗಟ್ಟೆಗೆ ಹೋಗುತ್ತಾರೆ. ಚುನಾವಣೆಗಳು ಘೋಷಣೆಯಾದ ಕೂಡಲೇ ಜನತೆಯ ಮುಂದಿರಬೇಕಾದ ಪ್ರಣಾಳಿಕೆಗಳು ಪ್ರಚಾರದ ಸಮಯ ಮುಗಿಯುವ ವೇಳೆಗೆ ಪ್ರಕಟವಾಗುವುದೇ ರಾಜಕೀಯ ಪಕ್ಷಗಳ ನಿರ್ಲಕ್ಷ್ಯ ಮತ್ತು ಪ್ರಣಾಳಿಕೆಗಳ ಬಗ್ಗೆ ಇರುವ ವಿಶ್ವಾಸಾರ್ಹತೆಯ ಕೊರತೆಯ ಕುರುಹಾಗಿ ಕಾಣುತ್ತದೆ. ಅಧಿಕಾರದಲ್ಲಿರುವ ಸರ್ಕಾರವೊಂದು ಮತ್ತೊಂದು ಅವಕಾಶಕ್ಕಾಗಿ ಮತದಾರ ಬಳಿ ಹೋಗುವಾಗ ಅಂತಹ ಪ್ರಣಾಳಿಕೆಗಳಲ್ಲಿ ಆತ್ಮಾವಲೋಕನದ ಛಾಯೆಯಾದರೂ ಇರಬೇಕಲ್ಲವೇ ? ಹಿಂದಿನ ಚುನಾವಣೆಗಳಲ್ಲಿ ತಾವು ನೀಡಿದ್ದ ಭರವಸೆಯನ್ನು ಎಷ್ಟರ ಮಟ್ಟಿಗೆ ಈಡೇರಿಸಿದ್ದೇವೆ ಎಂಬ ರಿಪೋರ್ಟ್‌ ಕಾರ್ಡ್‌ ಮತದಾರರ ಮುಂದಿರಿಸಿ, ಮತ್ತೆ ಹೊಸ ಭರವಸೆಗಳನ್ನು ನೀಡುವುದು ನ್ಯಾಯಯುತ ಅಲ್ಲವೇ ?

ಮೇ 10ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಮೂರೂ ಪ್ರಧಾನ ಪಕ್ಷಗಳು ತಮ್ಮ ಪ್ರಣಾಳಿಕೆಗಳನ್ನು ಪ್ರಕಟಿಸಿವೆ. ಮೂರೂ ಪ್ರಣಾಳಿಕೆಗಳಲ್ಲಿ ಪ್ರಧಾನವಾಗಿ ಕಾಣುವ ಅಂಶಗಳೆಂದರೆ ಜನಸಾಮಾನ್ಯರಿಗೆ ನೀಡಲಾಗುವ ʼ ಉಚಿತ ʼಗಳ ಭರವಸೆ. ಪ್ರಧಾನಿ ನರೇಂದ್ರ ಮೋದಿ ಈ ಉಚಿತಗಳನ್ನು ನೀಡುವುದರ ವಿರುದ್ಧ ಸತತವಾಗಿ ದನಿ ಎತ್ತುತ್ತಲೇ ಇದ್ದಾರೆ. ಸಹಜವಾಗಿಯೇ ಕಾರ್ಪೋರೇಟ್‌ ಮಾರುಕಟ್ಟೆ ವ್ಯವಸ್ಥೆಯು ತಳಮಟ್ಟದ ಜನತೆಯ ಜೀವನಾಂಶ ಮತ್ತು ಜೀವನೋಪಾಯದ ಮಾರ್ಗಗಳತ್ತ ಗಮನಹರಿಸುವುದಿಲ್ಲ. ಕೇಂದ್ರ ಸರ್ಕಾರವೂ ಸಹ ಇದೇ ಮಾರುಕಟ್ಟೆಯ ಅವಶ್ಯಕತೆಗಳಿಗೆ ಅನುಸಾರವಾಗಿ ಆಡಳಿತ ನೀತಿಗಳನ್ನು ರೂಪಿಸುತ್ತಿರುವುದರಿಂದ, ಉಚಿತಗಳಿಗೆ ಪ್ರತಿರೋಧ ಕಂಡುಬರುತ್ತದೆ. ಆದರೂ ಪ್ರಧಾನಿ ಮೋದಿ ರಾಜ್ಯದಲ್ಲಿ ಪ್ರಚಾರ ಮಾಡುತ್ತಿರುವಾಗಲೇ ಬಿಜೆಪಿ ಉಚಿತಗಳ ಮಹಾಪೂರವನ್ನೇ ಹರಿಸಿದೆ. ರಾಜಕೀಯ ಅನಿವಾರ್ಯತೆಗಳನ್ನು ಬದಿಗಿಟ್ಟು ನೋಡಿದಾಗ, ಆಳುವ ವರ್ಗಗಳ ಮಟ್ಟಿಗೆ ಈ ಉಚಿತಗಳು ದೀರ್ಘಾವಧಿ ಆಡಳಿತ ವೈಫಲ್ಯಗಳನ್ನು ಮರೆಮಾಚುವ ಮಂಜಿನ ಪರದೆಗಳಾಗಿರುತ್ತವೆ.

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಬಿಪಿಎಲ್‌ ಕುಟುಂಬಗಳಿಗೆ ತಿಂಗಳಿಗೆ ಐದು ಕಿಲೋ ಅಕ್ಕಿ, ಐದು ಕಿಲೋ ಸಿರಿಧಾನ್ಯ, ಪ್ರತಿದಿನ ಅರ್ಧ ಲೀಟರ್‌ ಹಾಲು, ವರ್ಷದಲ್ಲಿ ಮೂರು ಹಬ್ಬಕ್ಕೆ ಉಚಿತ ಅನಿಲ ಸಿಲಿಂಡರ್‌, 10 ಲಕ್ಷ ವಸತಿ ನಿವೇಶನ ಮುಂತಾದ ಭರವಸೆಗಳನ್ನು ನೀಡಿದೆ.  ಮತ್ತೊಂದೆಡೆ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಮಾಸಿಕ 200 ಯೂನಿಟ್‌ ಉಚಿತ ವಿದ್ಯುತ್‌, ಪ್ರತಿ ವ್ಯಕ್ತಿಗೆ 10 ಕಿಲೋ ಉಚಿತ ಅಕ್ಕಿ, ಮನೆಯ ಒಡತಿಗೆ 2 ಸಾವಿರ ರೂ, ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರೂ, ಡಿಪ್ಲೊಮೋ ಪದವೀಧರರಿಗೆ 1500 ರೂ ಮತ್ತು ಮಹಿಳೆಯರಿಗೆ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಇನ್ನೂ ಹಲವಾರು ಭರವಸೆಗಳನ್ನು ನೀಡಿದೆ. ಖಂಡಿತವಾಗಿಯೂ ಈ ಭರವಸೆಗಳು ಮತದಾರರನ್ನು ಆಕರ್ಷಿಸುತ್ತವೆ. ರಾಜ್ಯದ ಹಾಗೂ ದೇಶದ ಆರ್ಥಿಕ ಪ್ರಗತಿ ಮುನ್ನಡೆ ಸಾಧಿಸುತ್ತಿದ್ದರೂ, ನಿತ್ಯ ಬದುಕಿಗೆ ಅವಶ್ಯವಾದ ಆದಾಯ,, ಜೀವನಾಂಶ ಇಲ್ಲದೆ ಸೊರಗುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಈ ಉಚಿತಗಳು ಆಶಾದಾಯಕವಾಗಿ ಕಾಣುತ್ತದೆ.

 ಆದರೆ ರಾಜ್ಯದಲ್ಲಿ ಎಷ್ಟು ಬಿಪಿಎಲ್‌ ಕುಟುಂಬಗಳಿವೆ, ಎಷ್ಟು ಬಿಪಿಎಲ್‌ ಕುಟುಂಬಗಳಲ್ಲಿ ಅಡುಗೆ ಅನಿಲದ ಒಲೆ ಇದೆ ಅಥವಾ ಇಲ್ಲ, ಇನ್ನು ಐದು ವರ್ಷಗಳಲ್ಲಿ ಎಷ್ಟು ಪದವೀಧರರು/ಡಿಪ್ಲೊಮೋ ಹೊಂದಿರುವವರು ವ್ಯಾಸಂಗದಿಂದ ಹೊರಬರುತ್ತಾರೆ ಮತ್ತು ಸಂಭವನೀಯ ನಿರುದ್ಯೋಗಿಗಳಾಗುತ್ತಾರೆ, ರಾಜ್ಯದಲ್ಲಿ ಎಷ್ಟು ವಸತಿ/ನಿವೇಶನ ರಹಿತ ಜನರಿದ್ದಾರೆ, ಎಷ್ಟು ಮನೆಗಳು ವಿದ್ಯುತ್‌ ಸೌಕರ್ಯದಿಂದ ವಂಚಿತವಾಗಿವೆ, ಎಷ್ಟು ಮಂದಿ ಮನೆಯೊಡತಿಯರು 2 ಸಾವಿರ ರೂಗಳಿಗೆ ಅರ್ಹರಾಗಿರುತ್ತಾರೆ, ಉದ್ಯೋಗಿಗಳಿಗೂ ಇದು ಲಭ್ಯವಾಗುವುದೇ , ಸರಾಸರಿ ಎಷ್ಟು ಮಂದಿ ಮಹಿಳೆಯರು ಸಾರಿಗೆ ಬಸ್ಸುಗಳಲ್ಲಿ ನಿತ್ಯ ಪ್ರಯಾಣಿಸುತ್ತಾರೆ – ಈ ಎಲ್ಲ ಅಂಕಿ ಅಂಶಗಳು ಯಾವುದಾದರೂ ಪಕ್ಷಗಳ ಬಳಿ, ಕನಿಷ್ಠ ಸರ್ಕಾರದ ಬಳಿಯಾದರೂ ಇದೆಯೇ ? ಇದೆ ಎಂದಾದಲ್ಲಿ ಐದು ವರ್ಷಗಳ ಕಾಲ ಈ ಉಚಿತಗಳನ್ನು ನೀಡಲು ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆಯಾಗುತ್ತದೆ ? ಇದಕ್ಕೆ ಬೇಕಾದ ಹೆಚ್ಚುವರಿ ಆದಾಯವನ್ನು ಸರ್ಕಾರ ಹೇಗೆ ಪಡೆಯುತ್ತದೆ ? ಈ ಅಂಶಗಳನ್ನೂ ಜನತೆಯ-ಮತದಾರರ ಮುಂದಿಡುವುದು ರಾಜಕೀಯ ಪಕ್ಷಗಳ ನೈತಿಕ ಜವಾಬ್ದಾರಿ ಅಲ್ಲವೇ ?

ಪೆಪ್ಪರಮಿಂಟಿನಿಂದ ಚಿನ್ನದೊಡವೆಯವರೆಗೆ ಕಡುಬಡವರೂ ಸೇರಿದಂತೆ, ಜನಸಾಮಾನ್ಯರು ಪ್ರತಿಯೊಂದು ವಸ್ತುವಿನ ಮೇಲೂ ಪಾವತಿಸುವ ಜಿಎಸ್‌ಟಿ ಸಂಗ್ರಹವನ್ನೇ ಬಳಸಿ ಉಚಿತಗಳನ್ನು ನೀಡುವುದಾದರೆ, ʼ ಕೆರೆಯ ನೀರನು ಕೆರೆಗೆ ಚೆಲ್ಲಿದಂತೆ  ʼ ಎಂಬ ಗಾದೆಯನ್ನು ಸಾಕಾರಗೊಳಿಸಿದಂತೆಯೇ ಸರಿ. ಈ ಯಾವುದೇ ಉಚಿತಗಳೂ ಸಹ ಸಾಮಾನ್ಯ ಜನತೆಯ ಆಗ್ರಹಗಳಲ್ಲ. ಹಕ್ಕೊತ್ತಾಯಗಳೂ ಅಲ್ಲ. ಕರ್ನಾಟಕದ ಮಹಿಳೆಯರು ಆಗ್ರಹಿಸುತ್ತಿರುವುದು ತಮ್ಮ ಹೆಣ್ತನದ ಘನತೆ ಗೌರವದ ರಕ್ಷಣೆಯನ್ನು. ಕಡುಬಡವರು  ಕೇಳುತ್ತಿರುವುದು ಶಾಶ್ವತ ಸೂರು, ಆರೋಗ್ಯ, ಶಿಕ್ಷಣ ಮತ್ತು ಮೂಲ ಸೌಕರ್ಯಗಳನ್ನು. ನಿರುದ್ಯೋಗಿ ಪದವೀಧರರು ಕೇಳುತ್ತಿರುವುದು ಖಾಯಂ ನೌಕರಿ, ಸುಭದ್ರ ಬದುಕನ್ನು, ಪ್ರತಿಯೊಂದು ಬಿಪಿಎಲ್‌ ಕುಟುಂಬವೂ ತಾನು ಬಡತನ ರೇಖೆಯಿಂದ ಮೇಲೆ ಬಂದು ಎಪಿಎಲ್‌ ಆಗಲು ಬಯಸುತ್ತಿರುತ್ತದೆ. ಪ್ರತಿಯೊಂದು ಬಡಕುಟುಂಬವೂ ಸಾಲಸೋಲ ಮಾಡದೆ ಹಬ್ಬಗಳನ್ನು ಆಚರಿಸಲು ಹಪಹಪಿಸುತ್ತದೆ. ಪ್ರತಿಯೊಬ್ಬ ಬಡ ಪೋಷಕರೂ ಮಕ್ಕಳಿಗೆ ಪೌಷ್ಟಿಕ ಆಹಾರ, ಉಚಿತ ಶಿಕ್ಷಣ, ಉಚಿತ ಮೂಲ/ಪ್ರಾಥಮಿಕ ಆರೋಗ್ಯ ಸೌಕರ್ಯ ಮತ್ತು ನಿರಾತಂಕ ಜೀವನಕ್ಕಾಗಿ ಹಂಬಲಿಸುತ್ತಿರುತ್ತಾರೆ.

ಎಲ್ಲಕ್ಕಿಂತಲೂ ಹೆಚ್ಚಾಗಿ ಕರ್ನಾಟಕದಲ್ಲಷ್ಟೇ ಅಲ್ಲ ಇಡೀ ಭಾರತದಲ್ಲಿ ಪ್ರತಿಯೊಂದು ಬಡ ಹಾಗೂ ಕೆಳ ಮಧ್ಯಮ ವರ್ಗದ ಕುಟುಂಬವೂ ಜಾತಿದ್ವೇಷ, ಮತದ್ವೇಷ, ಕೋಮುಹಿಂಸೆ, ದೌರ್ಜನ್ಯ-ಅತ್ಯಾಚಾರ-ಕಿರುಕುಳ, ತಾರತಮ್ಯ ಹಾಗೂ ಜಾತಿಮತ ಭೇದಗಳಿಲ್ಲದ ಜೀವನ ಬಯಸುತ್ತವೆ. ಈ ಜನಸಮೂಹಗಳ ಜೀವನ ಮತ್ತು ಜೀವನೋಪಾಯ ಮಾರ್ಗಗಳನ್ನು ಸುಗಮಗೊಳಿಸುವುದು, ಜೀವನಾಂಶವನ್ನು ಹೆಚ್ಚಿಸಿ ಸುಸ್ಥಿರಗೊಳಿಸುವುದು, ಸ್ವಾಯತ್ತತೆಯೊಂದಿಗೆ ಸ್ವಂತ ದುಡಿಮೆಯನ್ನು ಅವಲಂಬಿಸಿ ಬದುಕುವ ಅವಕಾಶಗಳನ್ನು ಕಲ್ಪಿಸುವುದು ಹಾಗೂ ಮುಂದಿನ ತಲೆಮಾರಿಗೆ ಸುಭದ್ರವಾದ ಆರ್ಥಿಕತೆ-ಆರೋಗ್ಯಕರ ಸಮಾಜವನ್ನು ನಿರ್ಮಿಸುವುದು ಪ್ರಜಾಪ್ರಭುತ್ವವನ್ನು ಪ್ರತಿನಿಧಿಸುವ ಯಾವುದೇ ರಾಜಕೀಯ ಪಕ್ಷದ ಆದ್ಯತೆಯಾಗಬೇಕಲ್ಲವೇ ? ಚುನಾಯಿಕ ಸರ್ಕಾರದ ಆಡಳಿತದ ಐದು ವರ್ಷಗಳ ಕಾಲವೂ ಉಚಿತಗಳನ್ನೇ ನಂಬಿ ಬದುಕುವುದಾದರೆ, ಜನಸಾಮಾನ್ಯರು ಅಭಿವೃದ್ಧಿಯನ್ನು ಕಾಣುವುದಾದರೂ ಎಂದು ? ಸಾಮಾಜಿಕ ಮೇಲ್‌ ಚಲನೆ, ಆರ್ಥಿಕ ಮುಂಚಲನೆ ಕಾಣುವುದು ಯಾವಾಗ ? ತಮ್ಮ ಐದು ವರ್ಷಗಳ ಆಳ್ವಿಕೆಯಲ್ಲಿ ಯಾವ ಪಕ್ಷಕ್ಕೂ ಈ ಕನಸುಗಳೇ ಇಲ್ಲವೇ ?

ಮತದಾರರ ಮುಂದಿನ ಪ್ರಶ್ನೆಗಳು

ಚುನಾವಣಾ ಪ್ರಣಾಳಿಕೆಗಳು ಹೇಗೆ ಜನಸಾಮಾನ್ಯರನ್ನು ಭ್ರಮಾಧೀನರನ್ನಾಗಿ ಮಾಡುತ್ತದೆ ಎನ್ನುವುದನ್ನು ಪ್ರತಿಯೊಂದು ಲೋಕಸಭೆ/ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲೂ ನೋಡುತ್ತಲೇ ಬಂದಿದ್ದೇವೆ. ಮೂಲತಃ ಪಕ್ಷಗಳು ಕೆಂದ್ರೀಕರಿಸಬೇಕಾದ ವಿಚಾರಗಳೆಂದರೆ ಸಮಸ್ತ ಜನಕೋಟಿಯ ಸುಸ್ಥಿರ ಬದುಕು ಮತ್ತು ಸುಭದ್ರ ಭವಿಷ್ಯ. ಈ ನಿಟ್ಟಿನಲ್ಲಿ ಯಾವ ಪ್ರಣಾಳಿಕೆಯಲ್ಲಾದರೂ ಸಹ :-

“ ಇಂತಿಷ್ಟು ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ತೆರೆಯುತ್ತೇವೆ, ಸರ್ಕಾರಿ ಉಚಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುತ್ತೇವೆ, ಶಾಲಾ ಶಿಕ್ಷಣದಿಂದ ಹೊರಗುಳಿದಿರುವ ಅಸಂಖ್ಯಾತ ಮಕ್ಕಳಿಗೆ (ಅಂಕಿಅಂಶಗಳಿದ್ದರೆ) ಉಚಿತ ಶಿಕ್ಷಣ ನೀಡುತ್ತೇವೆ, ಮಾರುಕಟ್ಟೆ ಆರ್ಥಿಕತೆಯ ಅಭಿವೃದ್ಧಿ ಮಾರ್ಗದಲ್ಲಿ ಅನಿವಾರ್ಯವಾಗಿ ನಗರಗಳಿಗೆ ವಲಸೆ ಬರುವ ಶ್ರಮಿಕರಿಗೆ ( ಅಂಕಿ ಅಂಶಗಳಿದ್ದರೆ) ಉಚಿತ ಆರೋಗ್ಯ, ಶಿಕ್ಷಣ ಮತ್ತು ವಸತಿ ಸೌಕರ್ಯ ಒದಗಿಸುತ್ತೇವೆ, ಅಪೌಷ್ಟಿಕತೆ ಮತ್ತು ಕುಂಠಿತ ಬೆಳವಣಿಗೆಯಿಂದ ಬಳಲುತ್ತಿರುವ ಜನತೆಗೆ (ಇದರ ಅಂಕಿಅಂಶ ಲಭ್ಯವಿದೆ) ಪೌಷ್ಟಿಕಾಂಶ ಮತ್ತು ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸುತ್ತೇವೆ, ನಿರಂತರ ದೌರ್ಜನ್ಯ-ಅತ್ಯಾಚಾರಕ್ಕೊಳಗಾಗುತ್ತಿರುವ  ಮಹಿಳೆಯರಿಗೆ ಮತ್ತು ಅಸ್ಪೃಶ್ಯತೆಯಂತ ಅಮಾನುಷತೆಗೆ ಬಲಿಯಾಗುತ್ತಿರುವ ತಳಸಮುದಾಯಗಳಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸುತ್ತೇವೆ  ” ಈ ವಿಚಾರಗಳ ಪ್ರಸ್ತಾಪ ಇದೆಯೇ ?

ಬಹುಕೋಟಿ ಜನತೆ ತಮ್ಮ ನಿತ್ಯ ಜೀವನದಲ್ಲಿ ಎದುರಿಸುತ್ತಿರುವ ಈ ಜ್ವಲಂತ ಸಮಸ್ಯೆಗಳನ್ನು ನಿವಾರಿಸುವ ಇಚ್ಚಾಶಕ್ತಿ ಮತ್ತು ಸಂವಿಧಾನ ಪ್ರಜ್ಞೆ ಇರುವ ಯಾವುದೇ ಪಕ್ಷ ತನ್ನ ಐದು ವರ್ಷಗಳ ಸಂಭಾವ್ಯ ಅಧಿಕಾರಾವಧಿಯಲ್ಲಿ ಈ ಸಮಸ್ಯೆಗಳನ್ನು ನಿವಾರಿಸುವ ಆಡಳಿತಾತ್ಮಕ ಕ್ರಮಗಳನ್ನು ಜರುಗಿಸುವ ನೀಲನಕ್ಷೆಯನ್ನು ಹೊಂದಿರಬೇಕು. ಈ ನೀಲನಕ್ಷೆಯನ್ನೇ ಅಕ್ಷರ ರೂಪದಲ್ಲಿ ಜನತೆಯ ಮುಂದೆ-ಮತದಾರರ ಮುಂದೆ ಇರಿಸಬೇಕು. ಇದು ಪ್ರಣಾಳಿಕೆ ಎನಿಸಿಕೊಳ್ಳುತ್ತದೆ. ಐದು ವರ್ಷಗಳುದ್ದಕ್ಕೂ ಉಚಿತಗಳನ್ನೇ ನೀಡುವುದೇ ಆದರೆ ಸರ್ಕಾರಗಳು ಪ್ರತಿವರ್ಷ ಘೋಷಿಸುವ                                   ʼಅಭಿವೃದ್ಧಿ-ಪ್ರಗತಿ-ಸಾಧನೆʼಗಳನ್ನು ಹೇಗೆ ಅರ್ಥೈಸಲು ಸಾಧ್ಯ. ಅತಿ ಹೆಚ್ಚಿನ ಸಂಖ್ಯೆಯ  ಜನತೆ ಉಚಿತಗಳಿಗಾಗಿ ಕೈಚಾಚದೆ ಸ್ವಾವಲಂಬನೆಯಿಂದ ಬದುಕುವಂತೆ ಮಾಡುವ ಕೈಂಕರ್ಯ ತೊಟ್ಟ ಪಕ್ಷವನ್ನು ಈ ಪ್ರಣಾಳಿಕೆಗಳ ಮೂಲಕ ಗುರುತಿಸಲು ಸಾಧ್ಯವೇ  ? ಉಚಿತಗಳನ್ನು ಲೇವಡಿ ಮಾಡುವ ಮುನ್ನ ಅಥವಾ ಅಪಹಾಸ್ಯ ಮಾಡುವ ಮುನ್ನ ಬಂಡವಾಳಶಾಹಿ ಆರ್ಥಿಕತೆಯ ಆಡಳಿತ ನೀತಿಗಳು ಈ ದಿಕ್ಕಿನಲ್ಲಿ ಆಡಳಿತ ನಡೆಸಲು ಸಾಧ್ಯವೇ ಎಂದೂ ಯೋಚಿಸಬೇಕಾಗುತ್ತದೆ.

ಆಗಬೇಕಾಗಿರುವುದೇನು ?

ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆ ತಡೆಗೆ ವಿಶೇಷ ಪಡೆ ರಚಿಸುವ ಬಿಜೆಪಿಯ ಆಶ್ವಾಸನೆಯಾಗಲೀ, ಧರ್ಮ ಹಾಗೂ ಜಾತಿ ಹೆಸರಿನಲ್ಲಿ ದ್ವೇಷ ಬಿತ್ತಿ ವಿಭಜನೆಗೆ ಕಾರಣವಾಗುವ ವ್ಯಕ್ತಿ/ಸಂಘಟನೆಗಳ ವಿರುದ್ಧ ಕಠಿಣ/ನಿರ್ಣಾಯಕ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದು, ಕೆಲವು ಸಂಘಟನೆಗಳನ್ನು ನಿಷೇಧಿಸುವುದು ಇವೆಲ್ಲವೂ ಆಡಳಿತ ವಹಿಸಿಕೊಂಡ ಸರ್ಕಾರ ತನ್ನ ಕರ್ತವ್ಯ ನಿರ್ವಹಣೆಯ ಭಾಗವಾಗಿ ಕೈಗೊಳ್ಳಬೇಕಾದ ಕಾನೂನು ಸುವ್ಯವಸ್ಥೆ ಕ್ರಮಗಳು. ಪ್ರಣಾಳಿಕೆಗಳಲ್ಲಿ ಇಂತಹ ಆಡಳಿತಾತ್ಮಕ ಅಂಶಗಳು ಪ್ರಸ್ತಾಪವಾಗಬೇಕಿಲ್ಲ. ಆದರೆ ಸಂವಿಧಾನದ ಆಶಯದಂತೆ ಸೌಹಾರ್ದತೆ, ಸೋದರತ್ವ, ಸಮನ್ವಯ, ಸಹಬಾಳ್ವೆ , ಸಾಂಸ್ಕೃತಿಕ ಬಹುತ್ವ ಹಾಗೂ ಸಾಮಾಜಿಕ-ಆರ್ಥಿಕ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಂತಹ ವಾತಾವರಣವನ್ನು ನಿರ್ಮಿಸುವುದು ಪ್ರಣಾಳಿಕೆಯ ಭರವಸೆಗಳಲ್ಲೊಂದಾಗಬೇಕು. ಇದಕ್ಕೆ  ಪೂರಕವಾಗಿ ನಾಗರಿಕ ಸಮಾಜದ ಸಂಘ ಸಂಸ್ಥೆಗಳ ಸಹಕಾರ ಮತ್ತು ಸಹಯೋಗದ ಬಗ್ಗೆ ಪಕ್ಷಗಳು ತಮ್ಮ ಧೋರಣೆಯನ್ನು ಪ್ರಣಾಳಿಕೆಯಲ್ಲಿ ಸ್ಪಷ್ಟಪಡಿಸಬೇಕು. ಆಗಲೇ ರಾಜಕೀಯ ಚುನಾವಣಾ ಪ್ರಣಾಳಿಕೆ ತನ್ನ ಸಾಂವಿಧಾನಿಕ ಮೌಲ್ಯವನ್ನು ಉಳಿಸಿಕೊಳ್ಳಲು ಸಾಧ್ಯ.

ಈ ಸಾಂವಿಧಾನಿಕ ಗುರಿ ಸಾಧಿಸಬೇಕಾದರೆ ಜಾತಿ-ಮತ‍-ಧರ್ಮ-ಭಾಷೆಯ ತರತಮಗಳಿಲ್ಲದೆ ಸಮಸ್ತ ಜನಕೋಟಿಗೂ ವಾಕ್‌ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಆಚರಣಾ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ಸ್ವಾತಂತ್ರ್ಯ ಇರಬೇಕಾಗುತ್ತದೆ. ಹಾಗೆಯೇ ಆಡಳಿತಾರೂಢ ಸರ್ಕಾರಗಳು ಸಮಸ್ತ ಜನತೆಯ ಬದುಕುವ ಹಕ್ಕು, ಆಹಾರದ ಹಕ್ಕು, ಉದ್ಯೋಗದ ಹಕ್ಕು, ಶಿಕ್ಷಣ ಮತ್ತು ಆರೋಗ್ಯದ ಹಕ್ಕು ಹಾಗೂ ಸಾಮಾಜಿಕ ಸಹಜೀವನದ ಹಕ್ಕುಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ. ಪ್ರಜಾಪ್ರಭುತ್ವದ ಮೂಲ ಬೇರುಗಳಾದ ಈ ಹಕ್ಕು-ಸ್ವಾತಂತ್ರ್ಯಗಳನ್ನು ಖಾತರಿಪಡಿಸುವ ಒಂದೇ ಒಂದು ಸಾಲು ಜನಸಾಮಾನ್ಯರಲ್ಲಿ ಭರವಸೆಯ ಬೆಳಕನ್ನು ಮೂಡಿಸುತ್ತದೆ. ಈ ಒಂದು ಸಾಲೇ ಯಾವುದೇ ಪಕ್ಷದ ಚುನಾವಣಾ ಪ್ರಣಾಳಿಕೆಯ ವಿಶ್ವಾಸಾರ್ಹತೆಯನ್ನೂ ಹೆಚ್ಚಿಸುತ್ತದೆ. ಇಲ್ಲವಾದರೆ ಪ್ರಣಾಳಿಕೆಗಳು ಉತ್ತರದಾಯಿತ್ವವಿಲ್ಲದ ಫಲಜೋತಿಷ್ಯದಂತೆ ಮಾತ್ರ ಕಾಣಲು ಸಾಧ್ಯ.

-೦-೦-೦-

Tags: amithshahBJPCongress PartyDKShivakumarhddevegowdaHdKumaraswamyJDSmanifestoModiPMModisiddaramaiahಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಬಿಜೆಪಿ ರಾಷ್ಟ್ರ ನಾಯಕರ ಅಬ್ಬರಕ್ಕೆ ಬೆಚ್ಚಿದ ರಾಜ್ಯ ನಾಯಕರು..!

Next Post

ಪ್ರಧಾನಿ ಮೋದಿ ತಮ್ಮ ಹಳೆಯ ಚಾರ್ಮ್ ಕಳೆದುಕೊಂಡಿದ್ದಾರೆ : ಹೆಚ್​ಡಿಕೆ

Related Posts

Top Story

ಬಹು ನಿರೀಕ್ಷಿತ “45” ಚಿತ್ರದ ಹಾಡಿಗೆ ಉಗಾಂಡದಿಂದ ಬಂದ ನೃತ್ಯಗಾರರು..

by ಪ್ರತಿಧ್ವನಿ
June 13, 2025
0

ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ....

Read moreDetails

ಕರ್ನಾಟಕದ AI-ಸಿದ್ಧ ಭವಿಷ್ಯವನ್ನು ಎತ್ತಿ ತೋರಿಸಿದ ಪ್ರಿಯಾಂಕ್ ಖರ್ಗೆ

June 13, 2025

“ಬಾಲ ಕಾರ್ಮಿಕ ಪದ್ಧತಿ ಬಗೆಗಿನ ಅರಿವು ಮನೆಗಳಿಂದಲೇ ಮೂಡಲಿʼ: ಸಚಿವ ಸಂತೋಷ್‌ ಲಾಡ್‌

June 12, 2025

Bangalore Stampede: ಬಿಜೆಪಿಗರು ಐಸಿಸಿ ಅಧ್ಯಕ್ಷ ಜಯ್ ಶಾ ವಿರುದ್ಧ ಹೋರಾಟ ಮಾಡಲಿ : ಬಿ.ಕೆ.ಹರಿಪ್ರಸಾದ್..!!

June 11, 2025
ಹಿಂದೂ ವಿರೋಧಿಯಾಗಿದ್ದ ಸಿದ್ದರಾಮಯ್ಯ ಈಗ ಪೊಲೀಸ್‌ ಇಲಾಖೆ ವಿರೋಧಿಯಾಗಿದ್ದಾರೆ.: ಪ್ರತಾಪ್‌ ಸಿಂಹ..

ಹಿಂದೂ ವಿರೋಧಿಯಾಗಿದ್ದ ಸಿದ್ದರಾಮಯ್ಯ ಈಗ ಪೊಲೀಸ್‌ ಇಲಾಖೆ ವಿರೋಧಿಯಾಗಿದ್ದಾರೆ.: ಪ್ರತಾಪ್‌ ಸಿಂಹ..

June 9, 2025
Next Post
ಪ್ರಧಾನಿ ಮೋದಿ ತಮ್ಮ ಹಳೆಯ ಚಾರ್ಮ್ ಕಳೆದುಕೊಂಡಿದ್ದಾರೆ : ಹೆಚ್​ಡಿಕೆ

ಪ್ರಧಾನಿ ಮೋದಿ ತಮ್ಮ ಹಳೆಯ ಚಾರ್ಮ್ ಕಳೆದುಕೊಂಡಿದ್ದಾರೆ : ಹೆಚ್​ಡಿಕೆ

Please login to join discussion

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

by ಪ್ರತಿಧ್ವನಿ
June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ
Top Story

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

by ಪ್ರತಿಧ್ವನಿ
June 19, 2025
ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ
Top Story

ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

by ಪ್ರತಿಧ್ವನಿ
June 19, 2025
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

June 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada