ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆಯ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಮತ್ತು ವಿರೋಧ ಪಕ್ಷವಾದ ಬಿಜೆಪಿ ನಡುವಿನ ಗದ್ದಲದ ಜಗಳವು ಕೋಮುವಾದಕ್ಕೆ ತಿರುಗಿರುವುದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ ಎನ್ನುತ್ತಿವೆ ಮಹಾರಾಷ್ಟ್ರ ರಾಜಕಾರಣವನ್ನು ಬಲ್ಲ ವಿಶ್ಲೇಷಕರ ವಿಶ್ಲೇಷಣೆಗಳು.
ಭ್ರಷ್ಟಾಚಾರ ಮತ್ತು ಕೋವಿಡ್ ದುರುಪಯೋಗವನ್ನು ಆರೋಪಿಸಿ ಉದ್ಧವ್ ಇಮೇಜ್ಗೆ ಕಳಂಕ ತರುವಲ್ಲಿ ವಿಫಲವಾದ ಬಳಿಕ, ಪೊಲೀಸರ ಕಾರ್ಯಶೈಲಿಯನ್ನು ಪ್ರಶ್ನಿಸಿಯೂ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಒಂದು ದೊಡ್ಡ ಬ್ರೇಕ್ ಸಿಗದ ಕಾರಣ ಬಿಜೆಪಿ ಈಗ ಉದ್ಧವ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ತನ್ನ ಕೊನೆಯ ಪಣತೊಟ್ಟಿದೆ. ಠಾಕ್ರೆ ಸರ್ಕಾರವನ್ನು ಬೀಳಿಸಲು ಬಿಜೆಪಿ ಹೂಡಿದ ಕೊನೆಯ ಬಾಣ ಇದಾಗಿದೆ.
ಶಿವಸೇನೆ ವಿರುದ್ಧ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಕಣಕ್ಕೆ ಇಳಿದ ನಂತರ ಕೋಮು ಉರಿ ಮತ್ತಷ್ಟು ಹೆಚ್ಚಾಗಿದೆ. ಮುಸ್ಲಿಮರು ಧ್ವನಿವರ್ಧಕಗಳನ್ನು ಆಫ್ ಮಾಡದಿದ್ದರೆ ಮಸೀದಿಗಳ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವ ಬೆದರಿಕೆಯೊಂದಿಗೆ ಅಖಾಡಕ್ಕಿಳಿದ ರಾಜ್ ಠಾಕ್ರೆ, ಸಮಾಜವನ್ನು ಒಡೆಯುವ ಭಾರೀ ತಂತ್ರಗಳೊಂದಿಗೆ ರಂಗಪ್ರವೇಶಿಸಿದ್ದಾರೆ. ಅದೇ ಸಮಯದಲ್ಲಿ, ಅವರು ಸಿಎಂ ಉದ್ಧವ್ ವಿರುದ್ಧ ಮಾತ್ರವಲ್ಲದೆ ಮಹಾರಾಷ್ಟ್ರ ಹಿರಿಯ ರಾಜಕಾರಣಿ ಶರದ್ ಪವಾರ್ ವಿರುದ್ಧವೂ ಧ್ವನಿ ಎತ್ತಿದ್ದಾರೆ.
ಬಿಜೆಪಿಯ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಅಂಬೇಡ್ಕರ್ ಜಯಂತಿಯಂದು ಸತತ 14 ಟ್ವೀಟ್ಗಳನ್ನು ಮಾಡಿದ್ದಾರೆ, ಇದರಲ್ಲಿ ಅವರು ತುಷ್ಟೀಕರಣ ಮತ್ತು ಜಾತಿವಾದದ ರಾಜಕೀಯ ಸೇರಿದಂತೆ ಎಲ್ಲದಕ್ಕೂ ಪವಾರ್ ಅವರನ್ನು ದೂಷಿಸಿದ್ದರು. ಮೇ 1, ಮಹಾರಾಷ್ಟ್ರ ದಿನದಂದು ರಾಜ್ ಠಾಕ್ರೆ ಅವರು ಎರಡು ವಾರಗಳ ಹಿಂದೆ ಫಡ್ನವಿಸ್ ಹೇಳಿದ್ದನ್ನೇ ಪುನರುಚ್ಚರಿಸಿದ್ದಾರೆ. ಬಿಜೆಪಿ ತನ್ನ ತಂದೆ ಬಾಳ್ ಠಾಕ್ರೆಗೆ ದ್ರೋಹ ಬಗೆದಿದೆ ಎಂದು ಉದ್ಧವ್ ಆರೋಪಿಸಿದ್ದಾರೆ. ಹಾಗೂ ಪವಾರ್ ಅವರು ರಾಜ್ ಠಾಕ್ರೆಯನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿದ್ದಾರೆ.
ಇದುವರೆಗೆ ಮಹಾವಿಕಾಸ್ ಅಘಡಿಯ ಬೋಟ್ ಅಲುಗಾಡಿಸುವ ಬಿಜೆಪಿಯ ಪ್ರಯತ್ನ ವಿಫಲವಾಗಿದೆ. ಸರ್ಕಾರ ತಣ್ಣನೆಯ ಮನಸ್ಸಿನಿಂದ ಮತ್ತು ದೃಢ ಹಸ್ತದಿಂದ ಪ್ರತಿಕ್ರಿಯಿಸಿದೆ, ರಾಜ್ ವಿರುದ್ಧ ಬಂಧನದ ಬೆದರಿಕೆ ಹಾಕಿದೆ.
ಈದ್ ವೇಳೆ ಯಾವುದೇ ಗಲಭೆಗೆ ಪ್ರಚೋದನೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರವು ಮುಸ್ಲಿಂ ಗುಂಪುಗಳೊಂದಿಗೆ ಕೆಲಸ ಮಾಡಿದೆ. ಇದರ ಫಲವಾಗಿ, ಹೆಚ್ಚಿನ ಮಸೀದಿಗಳು ತಮ್ಮ ಧ್ವನಿವರ್ಧಕಗಳ ಶಬ್ದವನ್ನು ಕಡಿಮೆ ಇರಿಸಿದವು, ಇದರಿಂದಾಗಿ ರಾಜ್ ಮತ್ತು ಅವರ MNS ಕಾರ್ಯಕರ್ತರು ಸಾರ್ವಜನಿಕ ಶಾಂತಿಯನ್ನು ಕದಡುವ ಬೆದರಿಕೆಯನ್ನು ಪೂರೈಸಲು ಅವಕಾಶವನ್ನು ಪಡೆಯಲಿಲ್ಲ.
ಕೈಜೋಡಿಸಿದ ಬಿಜೆಪಿ ಮತ್ತು ಎಂಎನ್ಎಸ್?
ಮಹಾರಾಷ್ಟ್ರದ ರಾಜಕೀಯ ವಲಯಗಳಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ, ಫಡ್ನವಿಸ್ ಮತ್ತು ರಾಜ್ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಮಹಾರಾಷ್ಟ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಅವರ ಪ್ರಯತ್ನಗಳನ್ನು ಬಿಜೆಪಿಯ ಉನ್ನತ ಮಟ್ಟದ ನಾಯಕರು ಇನ್ನೂ ಅಂಗೀಕರಿಸಿಲ್ಲ.
ಬಿಜೆಪಿ ಉನ್ನತ ಮಟ್ಟದ ನಿರ್ದೇಶನವಿಲ್ಲದೆ, ಫಡ್ನವೀಸ್ ಇದನ್ನು ಬಹುಪಾಲು ಸ್ವಂತವಾಗಿ ಮಾಡುತ್ತಿದ್ದಾರೆ ಮತ್ತು ಅವರನ್ನು ಬೆಂಬಲಿಸಲು ಪಕ್ಷದ ಕಾರ್ಯಕರ್ತರನ್ನು ಪ್ರೇರೇಪಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಅಂಶದಿಂದ ಇದು ಸ್ಪಷ್ಟವಾಗಿದೆ. ವಾಸ್ತವವಾಗಿ, ಫಡ್ನವೀಸ್ ಅವರ ನಿರಂತರ ದಾಳಿಯು ಮಹಾ ವಿಕಾಸ್ ಆಘಡಿ ಮೈತ್ರಿಯನ್ನು ಮತ್ತಷ್ಟು ಬಲಪಡಿಸಿದೆ ಎಂದು ರಾಜ್ಯದ ಬಿಜೆಪಿ ನಾಯಕರು ಖಾಸಗಿಯಾಗಿ ದೂರುತ್ತಾರೆ. ಇದರೊಂದಿಗೆ ಉದ್ಧವ್ ಮತ್ತು ಪವಾರ್ ನಡುವಿನ ರಾಜಕೀಯ ತಿಳುವಳಿಕೆಯೂ ಬಲಗೊಂಡಿದೆ.
ರಾಜ್ ಅವರ ಪುನರುತ್ಥಾನವು ಅನಿರೀಕ್ಷಿತವಾಗಿದ್ದು, ಇದರ ಹಿಂದೆ ಫಡ್ನವಿಸ್ ಕೈವಾಡ ಇರುವುದಾಗಿ ಊಹಿಸಲಾಗಿದೆ. ರಾಜ್ ಅವರು 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಹಳ ಸಕ್ರಿಯರಾಗಿದ್ದರು, ಆದರೆ, ಮತ್ತೊಂದೆಡೆ, ಅವರು ಮೋದಿ ಮತ್ತು ಬಿಜೆಪಿಯ ಅತ್ಯಂತ ಕಟು ಟೀಕಾಕಾರರಲ್ಲಿ ಒಬ್ಬರಾಗಿದ್ದರು. ಮತ್ತು ತಮ್ಮ ವಾಗ್ಮಿ ಕೌಶಲ್ಯದಿಂದ ಕೇಳುಗರನ್ನು ಮಂತ್ರಮುಗ್ಧಗೊಳಿಸಿದರು. ಆ ಚುನಾವಣೆಯಲ್ಲಿ ಉದ್ಧವ್ ಅವರ ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು.
ಚುನಾವಣೆಯ ನಂತರ, ರಾಜ್ ಅವರು ಹಲವಾರು ಇಡಿ ಪ್ರಕರಣಗಳನ್ನು ಎದುರಿಸಿದ್ದಾರೆ. ಬಹಿರಂಗವಾಗಿ ಮಾತನಾಡುತ್ತಿದ್ದ ಅವರು ಮೌನವಾಗಿ ರಾಜಕೀಯ ಕ್ಷೇತ್ರದಿಂದ ಕಣ್ಮರೆಯಾಗಿದ್ದರು. ಅವರು ಸರಿಸುಮಾರು ಮೂರು ವರ್ಷಗಳ ಕಾಲ ಅದೃಶ್ಯರಾಗಿದ್ದರು ಎಂದೇ ಹೇಳಬಹುದು. ಈಗ ಫಡ್ನವಿಸ್ ಅವರ ಆದೇಶದ ಮೇರೆಗೆ ಮುಂಚೂಣಿಗೆ ಬಂದಿದ್ದಾರೆ, ಅವರು ಎಂವಿಎ ಸರಕಾರವನ್ನು ಕೆಳಗಿಳಿಸಿ ಮತ್ತೆ ಮುಖ್ಯಮಂತ್ರಿಯಾಗುವ ತಮ್ಮ ಜ್ವಲಂತ ಮಹತ್ವಾಕಾಂಕ್ಷೆಗಳಲ್ಲಿ ಒಂದನ್ನು ಸಾಧಿಸಲು ತಮ್ಮ ಭಾಷಣ ಕೌಶಲ್ಯವನ್ನು ಬಳಸಲು ನಿರ್ಧರಿಸಿದ್ದಾರೆ. 2019 ರ ವಿಧಾನಸಭಾ ಚುನಾವಣೆಯ ನಂತರ ಸರ್ಕಾರ ರಚಿಸುವ ಪ್ರಯತ್ನದಲ್ಲಿ ಪವಾರ್ ಅವರನ್ನು ವಿಫಲಗೊಳಿಸಿದಾಗಿನಿಂದ ಇದು ಅವರ ಮಹತ್ವಾಕಾಂಕ್ಷೆಯಾಗಿದೆ.
ರಾಣಾ ದಂಪತಿಯ ವಿಚಿತ್ರ ಪ್ರವೇಶ
ಈ ನಡುವೆ ರಾಜ್ ಮಾತ್ರವಲ್ಲದೆ, ಕೋಮು ಉದ್ವಿಗ್ನವನ್ನು ಹೆಚ್ಚಿಸಿ ಉದ್ಧವ್ ಅವರನ್ನು ಹಿಮ್ಮೆಟ್ಟಿಸಲು ಸ್ವತಂತ್ರ ಸಂಸದೆ-ಶಾಸಕ ದಂಪತಿಗಳಾದ ನವನೀತ್ ಮತ್ತು ರವಿ ರಾಣಾ ಅಖಾಡಕ್ಕಿಳಿದರು. ಇದರ ಹಿಂದೆ ಕೂಡಾ ಫಡ್ನವೀಸ್ ಕೈವಾಡ ಇದೆಯೆಂದು ನಂಬಲಾಗಿದೆ. ಮುಖ್ಯಮಂತ್ರಿ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಓದುವಂತೆ ಬೆದರಿಕೆ ಹಾಕಿದ್ದಕ್ಕಾಗಿ ರಾಣಾ ದಂಪತಿಯನ್ನು ನಂತರ ಬಂಧಿಸಲಾಯಿತು. ಕೆಲವು ದಿನಗಳ ಜೈಲಿನಲ್ಲಿದ್ದ ನಂತರ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡರು.
ಆದರೆ, ನಡೆಯುತ್ತಿರುವ ಕೋಮು ವೈಷಮ್ಯಕ್ಕೆ ರಾಣಾ ದಂಪತಿಯ ಎಂಟ್ರಿಯಿಂದ ರಾಜಕೀಯ ವಲಯಗಳು ಬೆಚ್ಚಿಬಿದ್ದಿವೆ. ಇಬ್ಬರೂ ಪಕ್ಷೇತರರಾಗಿ ಆಯ್ಕೆಯಾಗಿದ್ದು, ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ಆದರೆ, ಫಡ್ನವೀಸ್ ರಾಣಾ ಕುಟುಂಬವನ್ನು ಬಹಳ ಹಿಂದಿನಿಂದಲೂ ತಿಳಿದಿದ್ದಾರೆ ಎಂದು ಹೇಳಲಾಗಿದೆ.
ಫಡ್ನವಿಸ್ ಅವರ ಕರುಣಾಜನಕ ಪ್ರಯತ್ನ
MVA ಸರ್ಕಾರವನ್ನು ಉರುಳಿಸಲು ಫಡ್ನವೀಸ್ರ ಪುನರಾವರ್ತಿತ ವಿಫಲ ಪ್ರಯತ್ನಗಳು ಮತ್ತು ಹಿಂದುತ್ವ ರಾಜಕೀಯದೊಂದಿಗಿನ ಅವರ ಇತ್ತೀಚಿನ ವ್ಯಾಮೋಹವು ಅವರನ್ನು ಕರುಣಾಜನಕ ವ್ಯಕ್ತಿಯಾಗಿಸಿತು. ಹಿಂದುತ್ವ ರಾಜಕಾರಣದ ಸಾಮ್ರಾಟನಾಗಿ ಅವರನ್ನೆಂದೂ ಯಾರೂ ಪರಿಗಣಿಸಿರಲಿಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತೆ ಅವರು ಎಂದಿಗೂ ‘ಹಿಂದೂ ಹೃದಯ ಸಾಮ್ರಾಟ್’ ಆಗಿರಲಿಲ್ಲ, ಆದಿತ್ಯನಾಥ್ ಅವರ ಕೇಸರಿ ಬ್ರ್ಯಾಂಡಿಂಗ್ ಅವರು ಬಿಜೆಪಿಗೆ ಸೇರುವ ಮೊದಲು ಬಹಳ ಹಿಂದಿನಿಂದಲೂ ಇದೆ. ಆದರೆ, ಫಡ್ನವೀಸ್ ತನ್ನನ್ನು ತಾನು ಪ್ರಖರ ಹಿಂದುತ್ವವಾದಿಯಾಗಿ ಗುರುತಿಸಲು ಹೆಣಗಾಡುತ್ತಿದ್ದಾರೆ.