ಲೋಕಾಯುಕ್ತರು ದಾಳಿ ಮಾಡಿದ್ದು ಆಯ್ತು. ಐವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದೂ ಆಯ್ತು. ಆದರೆ A1 ಆರೋಪಿ ಎಂದು ಗುರುತಿಸಿದ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇನ್ನೂ ನಾಪತ್ತೆ, ಬಹಿರಂಗವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಬಹಿರಂಗ ಹೇಳಿಕೆಯನ್ನೂ ನೀಡಿಲ್ಲ. ತಮ್ಮ ಮಗನ ಮೇಲೆ ನಡೆದಿರುವ ಲೋಕಾಯುಕ್ತ ದಾಳಿ ನಡೆದಿರುವ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಕರ್ನಾಟಕ ಸೋಪು ಮತ್ತು ಮಾರ್ಜಕ ನಿಗಮ ನಿಯಮಿತ ಅಧ್ಯಕ್ಷ ಸ್ಥಾನಕ್ಕೆ ಅಜ್ಞಾತ ಸ್ಥಳದಿಂದ ರಾಜೀನಾಮೆ ನೀಡಿದ, ಸುಳಿವೇ ಇಲ್ಲ. ಲೋಕಾಯುಕ್ತ ದಾಳಿ ನಡೆದು 5 ದಿನಗಳು ಆಗುತ್ತಿವೆ. ಆದರೆ ಲೋಕಾಯುಕ್ತ ಪೊಲೀಸರು ಸಹ,ವಿಚಾರಣೆಗೆ ಹಾಜರಾಗುವಂತೆ ಮಾಡಾಳು ವಿರೂಪಾಕ್ಷಪ್ಪಗೆ ನೋಟೀಸ್ ನೀಡಿಲ್ಲ ಎನ್ನುವುದೇ ಅಚ್ಚರಿಯ ವಿಚಾರ.
ಬಂಧನ ಬೇಡ, ವಿಚಾರಣೆ ಮಾಡಿಲ್ಲ ಯಾಕೆ..?
ಮಾರ್ಚ್ 2ರಂದು ಸಂಜೆ ಲೋಕಾಯುಕ್ತ ಅಧಿಕಾರಿಗಳ ತಂಡ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಕಚೇರಿ ಹಾಗು ಮನೆ ಮೇಲೆ ದಾಳಿ ಮಾಡಿದ್ದರು. ಒಟ್ಟು 8 ಕೋಟಿಗೂ ಅಧಿಕ ಹಣವನ್ನೂ ಸೀಜ್ ಮಾಡಿದ್ರು. ಪ್ರಶಾಂತ್ ಮಾಡಾಳ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೆ 5 FIR ದಾಖಲಾಗಿ 5 ದಿನಗಳು ಕಳೆದರು ಪ್ರಮುಖ ಆರೋಪಿ ಎಂದು FIRನಲ್ಲಿ ದಾಖಲು ಮಾಡಿಕೊಂಡಿರುವ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ನೋಟಿಸ್ ಯಾಕೆ ನೀಡಿಲ್ಲ. ಬಂಧನ ಮಾಡದಿದ್ದರೂ ಕನಿಷ್ಟ ಪಕ್ಷ ವಿಚಾರಣೆಗಾದರೂ ಕರೆಸಬೇಕಿತ್ತು ಎನ್ನುವುದು ಕಾನೂನು ಪಂಡಿತರ ಮಾತು. ಆದರೆ ಲೋಕಾಯುಕ್ತ ಪೊಲೀಸ್ರು ಇನ್ನು ವಿಚಾರಣೆಗೆ ಹಾಜರಾಗಲು ನೋಟಿಸ್ ಕೂಡ ನೀಡಿಲ್ಲ.

ಇಂದು ನಿರೀಕ್ಷಣಾ ಜಾಮೀನುಗೆ ಅರ್ಜಿ ಸಾಧ್ಯತೆ..!
ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.. ಎಲ್ಲಿದ್ದಾರೆ..? ಯಾರು ಗುಟ್ಟಾಗಿ ಇಟ್ಟಿದ್ದಾರೆ ಅನ್ನೋದು ನಿಗೂಢವಾಗಿದೆ. ಆದರೆ BJP ಶಾಸಕ ಮಾಡಾಳು ವಿರೂಪಾಕ್ಷಪ್ಪ ಈಗಾಗಲೇ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್’ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆ ಅರ್ಜಿ ವಿಚಾರಣೆ ಇಂದು ಕೋರ್ಟ್ ನಲ್ಲಿ ನಡೆಯಲಿದೆ. ಅದರ ಜೊತೆಗೆ ಮಾಡಾಳು ವಿರೂಪಾಕ್ಷಪ್ಪ ಇಂದು ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಎನ್ನುವ ಕಾರಣಕ್ಕೆ ನಿರೀಕ್ಷಣಾ ಜಾಮೀನು ಪಡೆದುಕೊಳ್ಳಲು ಅವಕಾಶ ಮಾಡಿಕೊಡ್ತಿದ್ದಾರಾ..? ಅನ್ನೋ ಅನುಮಾನ ಸಾರ್ವಜನಿಕರನ್ನು ಬಲವಾಗಿ ಕಾಡುತ್ತಿದೆ.
ಬಂಧನ ಮಾಡದಂತೆ ಸರ್ಕಾರದಿಂದ ಒತ್ತಡ..!!?
ಶಾಸಕ ಮಾಡಾಳು ವಿರೂಪಾಕ್ಷಪ್ಪ ವಿಚಾರಣೆಗಾಗಿ ಇಲ್ಲೀವರೆಗೂ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿಲ್ಲ ಅನ್ನೋದು ಅನುಮಾನಕ್ಕೆ ಎಡೆ ಮಾಡಿಕೊಡ್ತಿದೆ.. ಪ್ರಕರಣದಲ್ಲಿ ಎ1 ಆರೋಪಿ ಆಗಿದ್ದರೂ ವಿಚಾರಣೆಗೂ ಕರೆಯದೆ ಲೋಕಾಯುಕ್ತರು ಕಾಲಹರಣ ಮಾಡ್ತಿರೋದಾದ್ರು ಯಾಕೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ ಚುನಾವಣಾ ಸಮಯದಲ್ಲಿ ಬಿಜೆಪಿ ಶಾಸಕರು ಒಬ್ಬರು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನ ಆಗಿ ಜೈಲಿಗೆ ಹೋದರೆ ಮಾನ ಹರಾಜು ಆಗುತ್ತದೆ ಎನ್ನುವ ಕಾರಣಕ್ಕೆ ಸರ್ಕಾರವೇ ಒತ್ತಡ ಹೇರಿದ್ಯಾ..? ಲೋಕಾಯುಕ್ತ ಪೊಲೀಸರ ಮೇಲೆ ಅಧಿಕಾರದ ಪ್ರಭಾವ ಬಳಕೆ ಮಾಡಿದ್ಯಾ..? ಅನ್ನೋ ಗುಸುಗುಸು ಕೇಳಿ ಬರುತ್ತಿದೆ.
ಶಾಸಕ ಮಾಡಾಳುಗೆ ನಿರೀಕ್ಷಣಾ ಜಾಮೀನು ಸಿಗುತ್ತಾ..?
ಇಂದು ಮಾಡಾಳು ವಿರೂಪಾಕ್ಷಪ್ಪ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕ್ತಾರೆ ಎನ್ನಲಾಗಿದೆ. ಒಂದು ವೇಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದರೆ ಕೋರ್ಟ್ ಮಾನ್ಯ ಮಾಡುವ ಸಾಧ್ಯತೆಗಳಿವೆ. ಮಾಡಾಳು ವಿರೂಪಾಕ್ಷಪ್ಪಗೆ ಈಗಾಗಲೇ ಭರ್ತಿ 75 ವರ್ಷಗಳು ತುಂಬಿವೆ. ಇನ್ನು ಈಗಾಗಲೇ ಹೃದಯ ಸಂಬಂಧಿ ಕಾಯಿಲೆಯಿಂದ ಒಮ್ಮೆ ಸ್ಟಂಟ್ ಹಾಕಿಸಕೊಂಡಿದ್ದಾರೆ. ಇನ್ನು ಮಾಡಾಳು ವಿರೂಪಾಕ್ಷಪ್ಪ ಮಗ ಪ್ರಶಾಂತ್ ಮಾಡಾಳು ಮನೆ ಹಾಗು ಕಚೇರಿಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆಯೇ ಹೊರತು ಮಾಡಾಳು ವಿರೂಪಾಕ್ಷಪ್ಪ ಮನೆಯಲ್ಲಿ ಹಣ ಸಿಕ್ಕಿರುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗ ಆಗಿಲ್ಲ. ವಯೋಸಹಜ ಆರೋಗ್ಯದ ಸಮಸ್ಯೆ ಇರುವ ಕಾರಣಕ್ಕೆ ನಿರೀಕ್ಷಣಾ ಜಾಮೀನು ಮಂಜೂರು ಆಗುವ ಸಾಧ್ಯತೆಗಳು ದಟ್ಟವಾಗಿದೆ.