ದಾವಣಗೆರೆ ಜಿಲ್ಲೆ ಚನ್ನಗಿರಿ ಪೊಲೀಸರ ಕಸ್ಟಡಿಯಲ್ಲಿ ಯುವಕ ಆದಿಲ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿಲ್ ತಂದೆ ಕಲೀಂವುಲ್ಲಾ ಉಲ್ಟಾ ಹೊಡೆದಿದ್ದಾರೆ. ನನ್ನ ಪುತ್ರನ ಸಾವಿನ ಬಗ್ಗೆ ನನಗೆ ಅನುಮಾನ ಇದೆ ಎಂದು ಹೇಳಿಕೆ ನೀಡಿದ್ದಾರೆ. ನನಗೆ ಬಿಪಿ ಲೋ ಅಂತ ಪದೇ ಪದೇ ಹೇಳಿ, ನನಗೆ ಬಿಪಿ ಜಾಸ್ತಿ ಆಗಿತ್ತು. ರಾತ್ರಿಪೂರ್ತಿ ನಿದ್ರೆ ಇಲ್ಲದೆ ಬಿಪಿ ಜಾಸ್ತಿಯಾಗಿ ನಾನು ಏನೇನೂ ಮಾತನಾಡಿದೆ ಎಂದಿದ್ದಾರೆ
.
ಆದಿಲ್ಗೆ ಲೋ ಬಿಪಿ ಆಗಿಲ್ಲ, ಆತನ ಸಾವಿನ ಬಗ್ಗೆ ನನಗೆ ಅನುಮಾನ ಇದೆ. ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದಿರುವ ಆದಿಲ್ ತಂದೆ ಕಲೀಂವುಲ್ಲಾ, ಇದಕ್ಕೂ ಮೊದಲು ಲೋ ಬಿಪಿಯಿಂದ ಡೆತ್ ಆಗಿದೆ ಎಂದು ಹೇಳಿಕೆ ನೀಡಿದ್ದರು. ಇದೀಗ ನಮಗೆ ಪೊಲೀಸರ ಮೇಲೆ ಅನುಮಾನ ಇದೆ ತನಿಖೆ ಮಾಡಿ ನ್ಯಾಯ ಒದಗಿಸಿಕೊಡಿ ಎನ್ನುವ ಮೂಲಕ ಯೂ ಟರ್ನ್ ತೆಗೆದುಕೊಂಡಿದ್ದಾರೆ.
ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಇದೆ ಎಂಬುದು ಅನುಮಾನ ಇದೆ. ಚನ್ನಗಿರಿ ಪ್ರಕರಣ ನೋಡಿದಾಗ ಬಿಹಾರ ರಾಜ್ಯ ನೆನಪಾಗುತ್ತದೆ. ಜನ ಪೊಲೀಸ್ ಠಾಣೆಗೆ ನುಗ್ಗಿರುವುದೇ ಇದಕ್ಕೆ ಸಾಕ್ಷಿ. ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ
ಅಲ್ಪಸಂಖ್ಯಾತ ಸಮುದಾಯದ ತುಷ್ಠಿಕರಣ ರಾಜಕೀಯ ನೀತಿ ನೆನಪಾಗುತ್ತದೆ. ಸಾವಿರಾರು ಮಂದಿ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಪರವಾದ ನೀತಿ ಅನುಸರಿಸುತ್ತಿದ್ದಾರೆ. ಸರ್ಕಾರ ರಾಜ್ಯದಲ್ಲಿ ಇದ್ಯಾ..? ಗೃಹ ಸಚಿವರು ಏನ್ಮಾಡ್ತಿದ್ದಾರೆ..? ಅನ್ನೋ ಅನುಮಾನ ಕೂಡ ಕಾಡ್ತಿದೆ ಎಂದು ಟೀಕಿಸಿದ್ದಾರೆ.
ಇದೆಲ್ಲವನ್ನೂ ಈ ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕೇಳಿದ್ರೆ ಅವರೆಲ್ಲರೂ ಅಮಾಯಕರು ಎನ್ನುತ್ತಾರೆ. ಇದರ ಪರಿಣಾಮ ರಾಜ್ಯದ ವ್ಯವಸ್ಥೆ ಕುಸಿದು ಬಿದ್ದಿದೆ. ರಾಜ್ಯ ಸರ್ಕಾರ ಯಾವಾಗ ಎಚ್ಚೆತ್ತುಕೊಳ್ಳುತ್ತದೆಯೋ ಆ ಭಗವಂತನೇ ಕಾಪಾಡಬೇಕು ಎಂದು ಬೇಸರ ಹೊರಹಾಕಿದ್ದಾರೆ.