2013ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಸಿದ್ದರಾಮಯ್ಯ ಉತ್ತಮ ಆಡಳಿತ ಕೊಟ್ಟರೂ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಬೇಕು ಎಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದರು. ಇದನ್ನೇ ರಾಮಬಾಣವನ್ನಾಗಿ ಮಾಡಿಕೊಂಡ ಭಾರತೀಯ ಜನತಾ ಪಾರ್ಟಿ ವೀರಶೈವ ಹಾಗು ಲಿಂಗಾಯತ ಧರ್ಮವನ್ನು ಇಬ್ಭಾಗ ಮಾಡಲು ಮುಂದಾಗಿದ್ದಾರೆ. ಹಿಂದೂ ಧರ್ಮವನ್ನು ಒಡೆಯುವುದಕ್ಕೆ ಮುಂದಾಗಿದ್ದಾರೆ ಎಂದು ರಾಜ್ಯದ ಜನರ ಮನಸ್ಸಿಗೆ ತಲುಪಿಸಿವಲ್ಲಿ ಯಶಸ್ವಿಯಾಗಿತ್ತು. ಇದೇ ಕಾರಣಕ್ಕೆ ಪೂರ್ಣ ಬಹುಮತ ಪಡೆಯಲು ವಿಫಲ ಕೂಡ ಆಗಿತ್ತು. ಆದರೆ ಇದೀಗ ಮತ್ತೆ ಲಿಂಗಾಯತ ಧರ್ಮ ವಿಚಾರ ಮುಖ್ಯ ವೇದಿಕೆ ಬರುವ ಮುನ್ಸೂಚನೆ ಸಿಗುತ್ತಿದೆ.
![](https://pratidhvani.com/wp-content/uploads/2023/07/1000214705-1024x768.jpg)
ಒಬಿಸಿ ಸೇರ್ಪಡೆಗೆ ಕೇಂದ್ರಕ್ಕೆ ಶಿಫಾರಸು ಮಾಡಿ!
ಕಲಬುರಗಿಯಲ್ಲಿ ಭಾನುವಾರ ನಡೆದ ವೀರಶೈವ ಲಿಂಗಾಯತ ಸಮಾಜದ ಸಭೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಸಂಪುಟ ಸಚಿವ ಈಶ್ವರ್ ಖಂಡ್ರೆ ಸೇರಿದಂತೆ ಹಲವಾರು ಮುಖಂಡರು, ಮಠಾಧೀಶರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಖೂಬಾ ಸಮಾಜದ ಹಿತ ಕಾಯಲು ಪಕ್ಷ ಬೇಧ ಮರೆಯಬೇಕಾಗುತ್ತದೆ. ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಪಂಗಡಗಳನ್ನು ಓಬಿಸಿ ಸೇರ್ಪಡೆಗೆ ರಾಜ್ಯ ಸರಕಾರ ಶಿಫಾರಸ್ಸು ಕಳುಹಿಸಲಿ, ನಂತರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡೋಣ ಎಂದು ಐವತ್ತಕ್ಕೂ ಹೆಚ್ಚು ಮಠಾಧೀಶರ ಸಮ್ಮುಖದಲ್ಲಿ ಭಗವಂತ ಖೂಬಾ ಭರವಸೆ ನೀಡಿದರು.
ಕೇಂದ್ರ ಸರ್ಕಾರದ ನೇಮಕಾತಿಯಲ್ಲಿ ಅನ್ಯಾಯ ಆಗ್ತಿದೆ..!
ಸಚಿವ ಈಶ್ವರ ಖಂಡ್ರೆ ಮಾತನಾಡಿ, ವೀರಶೈವ ಲಿಂಗಾಯತ ಸಮಾಜ ಕೇಂದ್ರದಲ್ಲಿ ಓಬಿಸಿ ಪಟ್ಟಿಗೆ ಸೇರಿಸಬೇಕು ಎನ್ನುವುದು ದಶಕಗಳ ಬೇಡಿಕೆ ಆಗಿದೆ. ಈ ಬೇಡಿಕೆ ಬಹಳ ಸೂಕ್ತವಾಗಿದೆ. ಕೇಂದ್ರದ ಓಬಿಸಿ ಪಟ್ಟಿಯಲ್ಲಿ ನಮ್ಮ ಸಮಾಜ ಸೇರಿಸದ ಕಾರಣ ಕೇಂದ್ರ ಸರಕಾರದ ನೇಮಕಾತಿಯಲ್ಲಿ ನಮ್ಮ ಯುವಕರಿಗೆ ಅನ್ಯಾಯವಾಗುತ್ತಿದೆ. ರಾಜ್ಯದ ಓಬಿಸಿ ಪಟ್ಟಿಯಲ್ಲಿ ನಮ್ಮ ಸಮಾಜ ಇದೆ. ಆದ್ರೆ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ನಮ್ಮ ಸಮಾಜ ಇಲ್ಲ. ಕೇಂದ್ರ ಸರಕಾರದ ನೌಕರಿಗಳಲ್ಲಿ ಮೀಸಲಾತಿಯಿಂದ ನಮ್ಮ ಸಮಾಜದವರು ವಂಚಿತರಾಗುತ್ತಿದ್ದಾರೆ. ವೈಯಕ್ತಿಕವಾಗಿ ನಾವು ಪ್ರಬಲರಾಗಿದ್ರೂ ಸಂಘಟನೆಯಲ್ಲಿ ದುರ್ಬಲರಾಗಿದ್ದೇವೆ. ಸಮಾಜ ಬೇರೆ ಬೇರೆ ಕಾರಣಗಳಿಂದ ಛಿದ್ರ ಛಿದ್ರವಾಗಿದೆ. ನಾವು ಒಗ್ಗಟ್ಟಾಗಿ ಪಕ್ಷ ಬೇಧ ಮರೆತು ಒಂದಾಗಿ ಹೋರಾಟ ಮಾಡಿ ಇದನ್ನು ಪಡೆಯಬೇಕಿದೆ ಎಂದಿದ್ದಾರೆ.
ವೀರಶೈವ – ಲಿಂಗಾಯತ ಒಂದಲ್ಲ, ಬೇರೆ ಬೇರೆ..!!
![](https://pratidhvani.com/wp-content/uploads/2023/07/1000214706.jpg)
ಕಲಬುರಗಿಯಲ್ಲಿ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಬಗ್ಗೆ ಚರ್ಚೆ ಆದರೆ ಇತ್ತ ಧಾರವಾಡದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಭೆ ನಡೆದಿದ್ದು, ಸಭೆ ಬಳಿಕ ಮಾತನಾಡಿರುವ ಡಾ. ಸಿದ್ದರಾಮ ಸ್ವಾಮೀಜಿ, ನಾವು ಹಿಂದೂ ವಿರೋಧಿಗಳಲ್ಲ, ಜೈನರು, ಸಿಖ್ಖರು, ಬೌದ್ಧರು ಹಿಂದೂ ವಿರೋಧಿಗಳಲ್ಲ. ಹಿಂದೂ ಎನ್ನುವುದು ಒಂದು ಧರ್ಮವೇ ಅಲ್ಲ ಎಂದಿದ್ದಾರೆ. ಗದಗದ ತೋಂಟದಾರ್ಯ ಮಠದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ ಜೀವನ ಪದ್ಧತಿಯಷ್ಟೇ. ಓರ್ವ ಸ್ಥಾಪಕ ಇದ್ದರೆ ಮಾತ್ರ ಅದೊಂದು ಧರ್ಮ ಆಗುತ್ತದೆ. ಅದರದ್ದೆಯಾದ ಸಂವಿಧಾನ ಇರಬೇಕು. ಒಂದೇ ದೇವರನ್ನು ಪೂಜಿಸುತ್ತಿರಬೇಕು. ಈ ಹಿನ್ನೆಲೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮ. ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಕರು. ವಚನ ಸಾಹಿತ್ಯ ಇದರ ಸಂವಿಧಾನ. ನಾವೆಲ್ಲರೂ ಇಷ್ಟಲಿಂಗವನ್ನು ಅರ್ಚಿಸುವಂತವರು ಎಂದಿದ್ದಾರೆ.
ಹಿಂದೂಗಳಿಗೆ ನಿರ್ದಿಷ್ಟ ದೇವರಿಲ್ಲ, ಅದು ವೈದಿಕ ಧರ್ಮ..
ಹಿಂದೂ ಧರ್ಮದಲ್ಲಿ ಓರ್ವ ಪ್ರವರ್ತಕ, ಪ್ರವಾದಿ ಇಲ್ಲ. ಯಾವುದೇ ನಿರ್ದಿಷ್ಟವಾದ ಗ್ರಂಥ ಇಲ್ಲ. ನಿರ್ದಿಷ್ಟವಾದ ದೇವರಿಲ್ಲ. 33 ಕೋಟಿ ದೇವರನ್ನು ಪೂಜಿಸುತ್ತಾರೆ. ಅದು ವೈದಿಕ ಧರ್ಮ, ಅದನ್ನೇ ಹಿಂದೂ ಧರ್ಮ ಎಂದು ಪರಿವರ್ತನೆ ಮಾಡಿಕೊಂಡಿದ್ದಾರೆ. ಭಗವದ್ಗೀತೆಯಲ್ಲಿ 18 ಅಧ್ಯಾಯಗಳಿವೆ. ಅದರಲ್ಲಿ ಯಾವ ಶ್ಲೋಕದಲ್ಲಿಯೂ ಹಿಂದೂ ಎಂಬ ಪದ ಇಲ್ಲ. ವೇದ, ಉಪನಿಷತ್ಗಳಲ್ಲಿಯೂ ಹಿಂದೂ ಪದ ಪ್ರಯೋಗ ಆಗಿಲ್ಲ. ಹೀಗಾಗಿ ನಾವು ಸ್ವತಂತ್ರ ಧರ್ಮ ಪಡೆದಲ್ಲಿ ಹಿಂದೂ ವಿರೋಧಿ ಆಗುವುದಿಲ್ಲ ಎಂದಿದ್ದಾರೆ.
ವೀರಶೈವ ಬೇರೆ.. ಲಿಂಗಾಯತ ಬೇರೆ.. ಎರಡಕ್ಕೂ ಸಂಬಂಧವಿಲ್ಲ..
![](https://pratidhvani.com/wp-content/uploads/2023/05/lingayat-one_one-1024x1024.jpg)
ಲಿಂಗಾಯತ ಸ್ವತಂತ್ರವಾಗಿರುವ ಧರ್ಮ, ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಬೇಕು ಎಂದಿರುವ ಸ್ವಾಮೀಜಿ, ಈ ಸಂಬಂಧ ರಾಜ್ಯ ಸರ್ಕಾರ ಕೇಂದ್ರಕ್ಕೆ ಪುನಃ ಪ್ರಸ್ತಾವನೆ ಸಲ್ಲಿಸಬೇಕು ಎಂದಿದ್ದಾರೆ ತೋಂಟದ ಡಾ. ಸಿದ್ದರಾಮ ಸ್ವಾಮೀಜಿ. ಲಿಂಗಾಯತ ಅವೈದಿಕ ಆಗಿರುವ ಧರ್ಮ. ಲಿಂಗಾಯತ ಧರ್ಮದ ಒಳಪಂಗಡಗಳು, ಸಾಮಾಜಿಕ, ಆರ್ಥಿಕ ಅಧ್ಯಯನ ನಡೆಯಬೇಕು. ಕೇಂದ್ರ, ರಾಜ್ಯ ಸರ್ಕಾರ ಹಿಂದುಳಿದ ಪಟ್ಟಿಗೆ ಸೇರಿಸಬೇಕು. ವೀರಶೈವ ಲಿಂಗಾಯತ ವೇದಿಕೆ ಎಂದು ಹೋರಾಟ ಮಾಡುತ್ತಿದ್ದಾರೆ. ನಾವು ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಹೋರಾಡುತ್ತಿದ್ದೇವೆ. ವೀರಶೈವ ಲಿಂಗಾಯತ ಯಾವ ದಾಖಲೆಯಲ್ಲಿಯೂ ಇಲ್ಲ. ವೀರಶೈವ ಬೇರೆ ಲಿಂಗಾಯತ ಬೇರೆ ಬೇರೆ ಶಬ್ದ. ಎರಡನ್ನೂ ಸೇರಿಸಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಹೋರಾಟ ನಡೆದಿದ್ದು ಸರಿಯಲ್ಲ. ಇರುವುದು ಲಿಂಗಾಯತ ಧರ್ಮ ಒಂದೇ. ಲಿಂಗಾಯತದ ಜೊತೆಗೆ ವೀರಶೈವ ಸೇರಿಸುವುದು ಅಪ್ರಸ್ತುತ. ರಾಜ್ಯ ಸರ್ಕಾರ ಅಧ್ಯಯನ ನಡೆಸಿ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಕೃಷ್ಣಮಣಿ