
ವಿಜಯನಗರ: ಹೊಸಪೇಟೆಯಲ್ಲಿ ವೀರಶೈವ ಲಿಂಗಾಯತ ಸಭೆ ಬಳಿಕ ಮಾಜಿ ಸಚಿವ ರೇಣುಕಾಚಾರ್ಯ ವಿಜಯೇಂದ್ರ ಹಾಗೂ ಬಿ.ಎಸ್ ಯಡಿಯೂರಪ್ಪ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ವೀರಶೈವ ಲಿಂಗಾಯತ ಮಹಾ ಸಂಗಮ ಕಳೆದ ತಿಂಗಳ 27 ರಿಂದ ಸಭೆ ಆರಂಭಿಸಿದ್ದೇವೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಭೆ ಮಾಡಿದ್ದೇವೆ. ಇಂದು ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಸಮಾಜದ ಪ್ರಮುಖ ಮುಖಂಡರ ಸಭೆ ಮಾಡಿ, ನಿರ್ಣಯ ಮಾಡಿದ್ದೇವೆ. ನಮ್ಮ ಅಜೆಂಡಾ ವೀರಶೈವ ಲಿಂಗಾಯತ ಒಳ ಪಂಗಡಗಳನ್ನ ಒಂದು ಮಾಡುವ ಉದ್ದೇಶ ಎಂದಿದ್ದಾರೆ.
ಮಹಾ ಸಂಗಮದ ಹೆಸರಿನಲ್ಲಿ ಸಭೆ ಮಾಡ್ತಿದ್ದೇವೆ. ಕೆಲ ದುಷ್ಟ ಶಕ್ತಿಗಳು ನಮ್ಮನ್ನು ಒಡೆಯುವ ಕೆಲಸ ಮಾಡ್ತಿದ್ದಾರೆ. ನಮ್ಮ ಸಮುದಾಯದ 9 ಮುಖ್ಯಮಂತ್ರಿಗಳನ್ನ ಪೂರ್ಣ ಅಧಿಕಾರ ಮಾಡಲು ಬಿಡಲಿಲ್ಲ. ನಮ್ಮನ್ನು ಒಡೆಯುವ ಕೆಲಸ ಮಾಡಿದ್ರು, ಇದೀಗ ನಾವು ಜಾಗೃತರಾಗಿದ್ದೇವೆ. ಏನೇ ವ್ಯತ್ಯಾಸ ಇದ್ರೂ ಒಂದಾಗ್ತೇವೆ ಎಂದಿದ್ದಾರೆ. ಈ ಸರ್ಕಾರ ಜಾತಿ ಜನಗಣತಿ ಮಾಡುವಾಗ ಯಾರ ಮನೆ ಬಾಗಿಲಿಗೂ ಹೋಗಿಲ್ಲ. ನಾವು ಒಂದೂವರೆಯಿಂದ ಎರಡು ಕೋಟಿ ಜನರು ಇದ್ದೇವೆ. ಜಾತಿ ಜನಗಣತಿಯಲ್ಲಿ 66 ಲಕ್ಷ ಅಂತಾ ಹೇಳಿದ್ದಾರೆ. ಜನಗಣತಿ ಸರಿಯಾಗಿ ಆಗಿಲ್ಲ ಎಂದು ದೂರಿದ್ದಾರೆ.

ನಮಗೆ 2A ಮೀಸಲಾತಿ ಕೊಡಬೇಕು. ಸರ್ಕಾರಿ ಉದ್ದೇಶಕ್ಕಾಗಿ 2A ಕೊಡಬೇಕು, ಇದು ನಮ್ಮ ಹಕ್ಕು ಎಂದಿದ್ದಾರೆ. ನಮ್ಮ ಸಮುದಾಯದಿಂದ ದಾವಣಗೆರೆಯಲ್ಲಿ ದೊಡ್ಡ ಸಮಾವೇಶ ಮಾಡ್ತೇವೆ. ಮೇ 15ರೊಳಗೆ ಸಮಾವೇಶ ಮಾಡ್ತೇವೆ. ಜಾತಿ ಜನಗಣತಿಯಲ್ಲಿ ಜಾತಿ ಕಲಂನಲ್ಲಿ ವೀರಶೈವ ಲಿಂಗಾಯತ ಅಂತಾ ಬರೆಸಬೇಕು. ಅದು ನಿರ್ಣಯ ಆಗಿದೆ. ಯಡಿಯೂರಪ್ಪನವರು ವೀರಶೈವ ನಿಗಮ ಮಾಡಿದ್ರು. ಆದ್ರೆ ಈ ಸರ್ಕಾರ ನಮ್ಮ ಅಭಿವೃದ್ಧಿ ನಿಗಮ ಹಾಗೂ ಮಠ ಮಾನ್ಯಗಳಿಗೆ ಅನುದಾನ ಕೊಟ್ಟಿಲ್ಲ. ನಮ್ಮ ಯುವ ನಾಯಕರಾದ ವಿಜಯೇಂದ್ರ ನಾಯಕತ್ವದಲ್ಲಿ ನಿರ್ಣಯ ಮಾಡ್ತೇವೆ. ಇದೀಗ ವಿಜಯೇಂದ್ರ ಅವರಿಗೆ ಕೆಲವರು ತೊಂದ್ರೆ ಕೊಡ್ತಿದ್ದಾರೆ. ಅವರ ಕಾಲೆಳೆಯುತ್ತಿದ್ದಾರೆ ಎಂದಿದ್ದಾರೆ.

ಯಡಿಯೂರಪ್ಪ ಅವರಿಗೆ ತೊಂದ್ರೆ ಕೊಟ್ಟಂತೆ ವಿಜಯೇಂದ್ರ ಅವರಿಗೂ ತೊಂದ್ರೆ ಕೊಡ್ತಿದ್ದಾರೆ. ವಿಜಯೇಂದ್ರ ಅವರ ನಾಯಕತ್ವವನ್ನೂ ಬೆಂಬಲಿಸಬೇಕು ಎಂದು ತೀರ್ಮಾನ ಆಗಿದೆ. ನಮ್ಮವರೇ ವಿಜಯೇಂದ್ರ ಅವರಿಗೆ ತೊಂದ್ರೆ ಕೊಟ್ರು. ಈ ಎಲ್ಲಾ ತೀರ್ಮಾನಗಳ ಬಗ್ಗೆ 16ನೇ ತಾರೀಕು ಹೊಸಪೇಟೆಯಲ್ಲಿ ಮತ್ತೊಮ್ಮೆ ಮೂರೂ ಜಿಲ್ಲೆಗಳ ಸಭೆ ಮಾಡ್ತೇವೆ. ಈ ಬಗ್ಗೆ ಮುಖಂಡರ ಸಭೆಯಲ್ಲಿ ನಿರ್ಣಯ ಮಾಡ್ತೇವೆ. ಕೆಲವು ದುಷ್ಟ ಶಕ್ತಿಗಳು ಆಟ ಆಡ್ತಿವೆ, ಕುತಂತ್ರ ಮಾಡ್ತಿವೆ. ದಾವಣಗೆರೆ ಸಭೆ ಮಾಡಿದ್ಮೇಲೆ ಗೊತ್ತಾಗುತ್ತದೆ. ಯಾರು ಲಿಂಗಾಯತರು, ಯಾರು ಅಲ್ಲ ಅನ್ನೋದು ಎಂದಿದ್ದಾರೆ.
