• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, September 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಲಾಠಿಯಿಂದ ರೈತರ ತಲೆ ಒಡೆಯಬಹುದು; ಆದರೆ, ಆಂದೋಲನವನ್ನಲ್ಲ

Shivakumar A by Shivakumar A
August 30, 2021
in ದೇಶ
0
ಲಾಠಿಯಿಂದ ರೈತರ ತಲೆ ಒಡೆಯಬಹುದು; ಆದರೆ, ಆಂದೋಲನವನ್ನಲ್ಲ
Share on WhatsAppShare on FacebookShare on Telegram

28 ಆಗಸ್ಟ್, ಶನಿವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಜಲಿಯನ್ವಾಲಾ ಬಾಘ್ ಹತ್ಯಾಕಾಂಡ ಹಾಗೂ ಅಂದು ಹುತಾತ್ಮರಾದವನ್ನು ಸ್ಮರಿಸುವ ಸಲುವಾಗಿ ಹುತಾತ್ಮರ ಸ್ಮಾರಕ ಕೇಂದ್ರವನ್ನು ಉದ್ಘಾಟಿಸಿದರು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಭಾರತೀಯರ ಮೇಲೆ ಪೊಲೀಸರಿಂದ ನಡೆದಂತಹ ದೌರ್ಜನ್ಯವನ್ನು ನೆನಪಿಸುವ ಈ ಸ್ಮಾರಕ ನಮಗೆ ಜಲಿಯನ್ವಾಲಾ ಬಾಘ್ ಹತ್ಯಾಕಾಂಡವನ್ನು ಸದಾ ನೆನಪಿಸುತ್ತದೆ, ಎಂದಿದ್ದರು. ದುರದೃಷ್ಟವಶಾತ್, ಸ್ವಾತಂತ್ರ್ಯ ನಂತರವೂ ಭಾರತೀಯರು ಪೊಲೀಸರ ದೌರ್ಜನ್ಯದಿಂದ ಮುಕ್ತವಾಗಿಲ್ಲ ಎಂಬುದು ಕೂಡಾ ಅಂದೇ ಸಾಬೀತಾಯಿತು.

ADVERTISEMENT

ಶನಿವಾರ ಸಂಜೆ ಈ ಸ್ಮಾರಕ ಉದ್ಘಾಟನೆಯಾದರೆ, ಅಂದು ಮಧ್ಯಾಹ್ನದ ವೇಳೆಗೆ ರೈತರ ಮೇಲೆ ಪೊಲೀಸರ ದೌರ್ಜನ್ಯ ಎಲ್ಲೆ ಮೀರಿತ್ತು. ರಕ್ತಸಿಕ್ತವಾದ ಕುರ್ತಾ, ತಲೆಗೆ ಕಟ್ಟಿರುವ ಪಗಡಿಯಿಂದ ಹರಿಯುತ್ತಿರುವ ರಕ್ತ, ಕುರ್ತಾದ ಮೇಲೆ ಚುಚ್ಚಲಾಗಿದ್ದ ಹುತಾತ್ಮ ಭಗತ್ ಸಿಂಗ್ ಬ್ಯಾಡ್ಜ್ ಮೇಲೆ ಬಿದ್ದಿದ್ದ ರಕ್ತದ ಕಲೆಗಳು ಹರಿಯಾಣ ಪೊಲೀಸರ ದೌರ್ಜನ್ಯದ ಕತೆಯನ್ನು ಸಾರುತ್ತಿದ್ದವು.
ಐಎಎಸ್ ಸೇವೆಯಲ್ಲಿ ಇನ್ನೂ ನಾಲ್ಕು ವರ್ಷ ತುಂಬದ ಕಿರಿಯ ಅಧಿಕಾರಿಯೊಬ್ಬರು, ತಮ್ಮ ತಾತನ ವಯಸ್ಸಿನ ರೈತರ ತಲೆ ಹೊಡೆದುಹಾಕುವಂತೆ ಆದೇಶ ನೀಡಿದ್ದರು.

ಹರಿಯಾಣ ಪೊಲೀಸ್ ನಡೆಸಿದ ದೌರ್ಜನ್ಯದ ಚಿತ್ರಗಳು, ಜಲಿಯನ್ವಾಲಾ ಬಾಘ್ ಸ್ಮಾರಕವನ್ನು ಉದ್ಘಾಟಿಸಿ ಬ್ರಿಟಿಷ್ ಪೊಲೀಸರ ದೌರ್ಜನ್ಯವನ್ನು ಖಂಡಿಸಿದ ಪ್ರಧಾನಿ ಮೋದಿಯ ಕಣ್ಣಿಗೆ ಕಾಣಲಾರದೇ ಹೋದದ್ದು ನಿಜಕ್ಕೂ ವಿಷಾದನೀಯ. ಈ ಚಿತ್ರಗಳು ಮುಂಬರುವ ದಿನಗಳಲ್ಲಿ ಮೋದಿ ಹಾಗೂ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರ ನಿದ್ದೆಗೆಡಿಸುವುದಂತೂ ಖಂಡಿತ.

ತಲೆ ಒಡೆಯಬಹುದು, ಆದರೆ ಆಂದೋಲನವನ್ನಲ್ಲ:

ನೂರಾರು ರೀತಿಯ ಕಂಟಕಗಳು ಎದುರಾದರೂ, ಕೇಂದ್ರ ಸರ್ಕಾರದ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರವಾದ ಸ್ಥಿತಿಸ್ಥಾಪಕ ಗುಣವನ್ನು ತೋರ್ಪಡಿಸಿದೆ. ಎಷ್ಟೇ ದೌರ್ಜನ್ಯಗಳ ನಡುವೆ ಸಾಗಿದರೂ, ಮತ್ತೆ ಒಗ್ಗಟ್ಟು ಎಂಬುದು ಆಂದೋಲನದಲ್ಲಿ ಕಾಣುತ್ತಿದೆ. ಪೊಲೀಸರ ದೌರ್ಜನ್ಯ, ಕರೋನಾ ಸೋಂಕಿನ ಭೀಕರತೆ, ಮರಗಟ್ಟಿಸುವ ಚಳಿ, ಭೀಕರ ಸೆಖೆ ಹಾಗೂ ನೂರಾರು ಪ್ರತಿಭಟನಾನಿರತ ರೈತರ ಬಲಿದಾನದ ನಡುವೆಯೂ ರೈತ ಆಂದೋಲನ ಮತ್ತಷ್ಟು ಸದೃಢವಾಗಿ ಸಾಗುತ್ತಿದೆ. ದಿನ ಕಳೆದಂತೆ ರೈತ ಆಂದೋಲನದ ಶಕ್ತಿ ಬೆಳೆಯುತ್ತಿದೆಯೇ ಹೊರತು ಕುಗ್ಗುತ್ತಿಲ್ಲ.

ಏಕೆಂದರೆ, ಈ ಆಂದೋಲನೆ ಅಗತ್ಯತೆಗಳನ್ನು ಪೂರೈಸುವ ಬೇಡಿಕೆಯೊಂದಿಗೆ ನಡೆಯುತ್ತಿರುವ ಆಂದೋಲನವಲ್ಲ. ರೈತರ ಜೀವ ಹಾಗೂ ಜೀವನವನ್ನೇ ಕಸಿಯುವ ಕಾರ್ಪೋರೇಟ್ ಕೇಂದ್ರಿತ ನೀತಿಗಳ ವಿರುದ್ದ ನಡೆಯುತ್ತಿರುವ ಆಂದೋಲನ. ರೈತರ ಮೂಲಭೂತ ಹಕ್ಕನ್ನು ಕಸಿಯಲು ಯತ್ನಿಸುತ್ತಿರುವ ಸರ್ಕಾರದ ವಿರುದ್ದ ನಡೆಯುತ್ತಿರುವ ಆಂದೋಲನ. ಜೀವನದೊಂದಿಗೆ ಯಾವುದೇ ಚೌಕಾಸಿಯಿಲ್ಲದೇ, ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ಹಿಂಪಡೆಯುವವರೆಗೂ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂಬ ರೈತರ ದಿಟ್ಟತನದ ಮುಂದೆ, ಹರಿಯಾಣದಲ್ಲಿ ನಡೆದ ಪೊಲೀಸರ ದೌರ್ಜನ್ಯ ಆಂದೋಲನವನ್ನು ಹಿಮ್ಮೆಟ್ಟಿಸಲು ಪ್ರಭುತ್ವ ನಡೆಸಿದ ವಿಫಲ ಹಿಂಸಾತ್ಮಕ ಯತ್ನವಷ್ಟೇ.

ಪೊಲೀಸರ ಲಾಠಿಗಿಂತಲೂ ರೈತ ಆಂದೋಲನದ ಉದ್ದೇಶಗಳು ಗಟ್ಟಿಯಾಗಿವೆ. ಪೊಲೀಸರ ಹಿಂಸೆಗಿಂತಲೂ ರೈತರ ಅಹಿಂಸಾ ನೀತಿ ಬಲಿಷ್ಟವಾಗಿದೆ. ಕಾರ್ಪೊರೇಟ್ ಕಂಪೆನಿಗಳ ಲಾಭಕ್ಕಾಗಿಯೇ ಅವರ ದಲ್ಲಾಳಿಗಳಂತೆ ವರ್ತಿಸುವ ಸರ್ಕಾರದ ದುರಾಲೋಚನೆಗಿಂತಲೂ, ತಮ್ಮ ಜೀವನಕ್ಕೇ ಕುತ್ತು ತರಲು ಕಾನೂನುಗಳಿಂದ ಬಿಡುಗಡೆ ಬೇಕು ಎಂಬ ರೈತರ ದೂರಾಲೋಚನೆ ಸದೃಢವಾಗಿ ನಿಂತಿದೆ. ಲಾಠಿಗಳು ಮುರಿಯಬಹುದೇ ಹೊರತು, ರೈತರ ಒಗ್ಗಟ್ಟಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.

ಹೊಸ ಅಧ್ಯಾಯ ಬರೆಯುವುದೇ ಕರ್ನಾಲ್ ಹಿಂಸಾಚಾರ:

ರೈತರ ಮೇಲೆ ಪೊಲೀಸರ ದೌರ್ಜನ್ಯದ ಸುದ್ದಿ ಹೊರಬೀಳುತ್ತಿದ್ದಂತೆಯೇ, ಸ್ಥಳದಲ್ಲಿ ಜಮಾಯಿಸಿದ ನೂರಾರು ರೈತರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ಕೂಡಲೇ ನಡೆದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬಂಧನಕ್ಕೆ ಒಳಪಟ್ಟ ರೈತರ ಬಿಡುಗಡೆ ಹಾಗೂ ರೈತರ ವಿರುದ್ದ ಅಮಾನುಷವಾದ ದಾಳಿ ನಡೆಸಲು ಆದೇಶ ನೀಡಿದ ಅಧಿಕಾರಿಯ ವಿರುದ್ದ ಕ್ರಮಕ್ಕೆ ರೈತರು ಒತ್ತಾಯಿಸಿದ್ದಾರೆ.

ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆಯೇ ರೈತರನ್ನು ಬಿಡುಗಡೆ ಮಾಡಲಾಗಿದೆ. ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ವಿರುದ್ದ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ. ಆದರೆ, ರಾಜ್ಯ ಸರ್ಕಾರದ ಬೆಂಬಲವಿಲ್ಲದೇ, ಒಬ್ಬ ಕಿರಿಯ ಅಧಿಕಾರಿ ಇಂತಹ ಆದೇಶ ನೀಡಲು ಸಾಧ್ಯವಿಲ್ಲ ಎಂಬುದು ರೈತರ ನಂಬಿಕೆ.

ಕರ್ನಾಲ್ ಹಿಂಸಾಚಾರ ರೈತ ಮುಖಂಡರನ್ನು ನಿಜಕ್ಕೂ ಕೆರಳಿಸಿದೆ. ರಕ್ತಸಿಕ್ತವಾದ ರೈತರ ಚಿತ್ರಗಳನ್ನು ನೋಡಿ ಆಕ್ರೋಶಗೊಂಡಿರುವ ರೈತ ಮುಖಂಡರು, ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಿದ್ದಾರೆ ಎಂಬುದಂತೂ ಸತ್ಯ. ರೈತರ ಮೇಲೆ ನಡೆದಂತಹ ದೌರ್ಜನ್ಯವು ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶದಲ್ಲಿ ಪ್ರತಿಧ್ವನಿಸಲಿದೆ. ಸೆಪ್ಟೆಂಬರ್ 5ರಂದು ಮುಜಫ್ಫರ್ ನಗರದಲ್ಲಿ ನಡೆಯಲಿರುವ ರೈತ ಮಹಾ ಪಂಚಾಯತ್ ಇದಕ್ಕೆ ಮುನ್ನುಡಿ ಬರೆಯಲಿದೆ.

ಉತ್ತರ ಪ್ರದೇಶದ ಪ್ರಮುಖ ರೈತ ನಾಯಕರಾದ ನರೇಶ್ ಟಿಕಾಯತ್ ಹಾಗೂ ರಾಕೇಶ್ ಟಿಕಾಯತ್ ಅವರು ಉತ್ತರ ಪ್ರದೇಶದಲ್ಲಿ ನಡೆಲಿರುವ ಆಂದೋಲನದ ಕೇಂದ್ರ ಬಿಂದುವಾಗಲಿದ್ದಾರೆ. ಈಗಾಗಲೇ ಇದೊಂದು ಸರ್ಕಾರಿ ತಾಲಿಬಾನ್ ಎಂದು ಕಿಡಿಕಾರಿರುವ ರಾಕೇಶ್ ಟಿಕಾಯತ್, ಮುಜಫ್ಫರ್ ನಗರದಲ್ಲಿ ನಡೆಯಲಿರುವ ರೈತ ಮಹಾ ಪಂಚಾಯತ್’ಗೆ ಆಗಮಿಸಲಿದ್ದ ರೈತರನ್ನು ತಡೆಯುವ ಸಲುವಾಗಿ ಅವರಲ್ಲಿ ಭಯ ಹುಟ್ಟಿಸುವ ಸಲುವಾಗಿ ಈ ಧಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಟಿಕಾಯತ್ ಅವರ ಈ ಆರೋಪ ಸತ್ಯವಾಗಿದ್ದರೆ, ‘ರೈತರ ತಲೆ ಒಡೆಯಿರಿ’ ಎಂಬ ಕಿರಿಯ ಅಧಿಕಾರಿಯ ಆದೇಶ ಅಧಿಕಾರದ ಅಮಲಿನಿಂದ ಬಂದಿರದೇ, ಆಡಳಿತ ವ್ಯವಸ್ಥೆಯ ‘ಉನ್ನತ ಹುದ್ದೆ’ಯಿಂದ ಬಂದಿರುವುದೆಂದು ಸಾಬಿತಾಗುತ್ತದೆ.

ರೈತರ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಡೆಸುತ್ತಿರುವ ಪ್ರತಿಯೊಂದು ದೌರ್ಜನ್ಯಗಳು ಕೂಡಾ ಆಂದೋಲನವನ್ನು ಮತ್ತಷ್ಟು ಬಲಗೊಳಿಸುತ್ತಿವೆ. ಲಾಠಿಯಿಂದ ಬಗ್ಗದಷ್ಟು ಸದೃಢವಾಗಿ ಆಂದೋಲನ ಬೆಳೆದು ನಿಂತಿದೆ. ಮಾಡು ಇಲ್ಲವೇ ಮಡಿ ಎಂಬಂತೆ ಅಚಲವಾಗಿ ನಿಂತಿರುವ ರೈತರ ಮುಂದೆ, ಪ್ರಭುತ್ವದ ಹಿಂಸಾತ್ಮಕ ಕ್ರಮಗಳು ಸರ್ಕಾರಗಳ ಮೇಲಿನ ನಂಬಿಕೆಯನ್ನು ಮತ್ತಷ್ಟು ಕುಂಟಿತಗೊಳಿಸುತ್ತವೆಯೇ ಹೊರತು, ಆಂದೋಲನದ ಮೇಲಿನ ನಂಬಿಕೆಯಲ್ಲ. ಗುಂಡಿನ ಮಳೆಗೈದು ಜಲಿಯನ್ವಾಲಾ ಬಾಘ್’ನಲ್ಲಿ ನೂರಾರು ಜನರನ್ನು ಹತ್ಯೆಗೈದಾಗಲೂ ಸ್ವಾತಂತ್ರ್ಯ ಹೋರಾಟ ನಿಂತಿರಲಿಲ್ಲ. ಅದೇ ರೀತಿ, ಪೊಲೀಸರ ಲಾಠಿ ಏಟಿಗೆ ರೈತರ ಆಂದೋಲನವೂ ಜಗ್ಗದು ಎಂಬ ಸಂದೇಶವನ್ನು ರೈತ ಒಗ್ಗಟ್ಟು ನೀಡಿದೆ.

Tags: BJPಆಂದೋಲನಕೇಂದ್ರ ಸರ್ಕಾರಜಲಿಯನ್ವಾಲಾ ಬಾಘ್ನರೇಂದ್ರ ಮೋದಿಪೊಲೀಸ್ ದೌರ್ಜನ್ಯಪ್ರಧಾನಿ ನರೇಂದ್ರ ಮೋದಿಬಿಜೆಪಿಮನೋಹರ್ ಲಾಲ್ ಖಟ್ಟರ್ರೈತಲಾಠಿಹರಿಯಾಣ
Previous Post

ಗೌರಿ ಗಣೇಶ ಹಬ್ಬಕ್ಕೆ ಅನುಮತಿ: ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ನಡೆಸಿ, ತೀರ್ಮಾನ: ಸಿಎಂ ಬೊಮ್ಮಾಯಿ

Next Post

ಟ್ರಾಫಿಕ್ ಪೊಲೀಸರಿಗೆ ಹಿಗ್ಗಾಮುಗ್ಗಾ ಜಾಡಿಸಿದ ಶಾಸಕ ರಮೇಶ್ ಕುಮಾರ್

Related Posts

ರೋಜ್‌ಗಾರ್ ಮೇಳ : ಪ್ರಧಾನಿ ಮೋದಿಯಿಂದ ಇಂದು 51,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ
Top Story

ರೋಜ್‌ಗಾರ್ ಮೇಳ : ಪ್ರಧಾನಿ ಮೋದಿಯಿಂದ ಇಂದು 51,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ

by ಪ್ರತಿಧ್ವನಿ
September 19, 2026
0

ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳಿಗೆ ಹೊಸದಾಗಿ ಆಯ್ಕೆಯಾದ 51,000ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ನಡೆಯುತ್ತಿರುವ 20ನೇ 'ರೋಜ್‌ಗಾರ್...

Read moreDetails
6 ತಿಂಗಳ ಹಸುಗೂಸಿನ ಮೇಲೆ `ಪಿಟ್ ಬುಲ್’ ನಾಯಿಯ ಭೀಕರ ದಾಳಿ : ಬೆಚ್ಚಿಬೀಳಿಸುವ ದೃಶ್ಯ ವೈರಲ್.!

6 ತಿಂಗಳ ಹಸುಗೂಸಿನ ಮೇಲೆ `ಪಿಟ್ ಬುಲ್’ ನಾಯಿಯ ಭೀಕರ ದಾಳಿ : ಬೆಚ್ಚಿಬೀಳಿಸುವ ದೃಶ್ಯ ವೈರಲ್.!

September 19, 2026
2027ರಲ್ಲಿ ಭಾರತಕ್ಕೆ ಲಭ್ಯವಾಗಲಿದೆ ಮೊದಲ ಡೆಂಗ್ಯೂ ಲಸಿಕೆ : ಏನಿದರ ವಿಶೇಷ.?

2027ರಲ್ಲಿ ಭಾರತಕ್ಕೆ ಲಭ್ಯವಾಗಲಿದೆ ಮೊದಲ ಡೆಂಗ್ಯೂ ಲಸಿಕೆ : ಏನಿದರ ವಿಶೇಷ.?

September 19, 2026
ಭ್ರಷ್ಟಾಚಾರ – ವ್ಯವಸ್ಥೆಯ ಬೇರುಗಳಲ್ಲಿರುವ ವೈರಾಣು

ಭ್ರಷ್ಟಾಚಾರ – ವ್ಯವಸ್ಥೆಯ ಬೇರುಗಳಲ್ಲಿರುವ ವೈರಾಣು

September 17, 2026
ಮಕ್ಕಳಲ್ಲಿ ವೈಜ್ಞಾನಿಕ ‌ಮನೋಭಾವನೆ ಬೆಳೆಸುವಂತೆ‌ ಶಿಕ್ಷಕರಿಗೆ‌ ಸಚಿವ‌ ಪ್ರಿಯಾಂಕ್ ಖರ್ಗೆ ಕರೆ..

ಮಕ್ಕಳಲ್ಲಿ ವೈಜ್ಞಾನಿಕ ‌ಮನೋಭಾವನೆ ಬೆಳೆಸುವಂತೆ‌ ಶಿಕ್ಷಕರಿಗೆ‌ ಸಚಿವ‌ ಪ್ರಿಯಾಂಕ್ ಖರ್ಗೆ ಕರೆ..

September 16, 2026
Next Post

ಟ್ರಾಫಿಕ್ ಪೊಲೀಸರಿಗೆ ಹಿಗ್ಗಾಮುಗ್ಗಾ ಜಾಡಿಸಿದ ಶಾಸಕ ರಮೇಶ್ ಕುಮಾರ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada