ಬಹುಭಾಷಿಕ ದೇಶದಲ್ಲಿ ಭಾಷಾ ಸ್ವಾಯತ್ತತೆಯೊಂದೇ ಸಮನ್ವಯ ಸಾಧಿಸಬಲ್ಲದು

ಭಾಗ 2
ಶಾಲಾ ಕಲಿಕೆಯಲ್ಲಿ ಭಾಷಾ ಅಸ್ಮಿತೆ
ಶಾಲಾ ಪಠ್ಯಕ್ರಮದಲ್ಲಿ ಭಾಷಾ ಅಳವಡಿಕೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸನ್ನಿವೇಶವು ಕುತೂಹಲಕರವಾಗಿ ಕಾಣುತ್ತದೆ. ಯೋಗಿ ಆದಿತ್ಯನಾಥ್ ಸರ್ಕಾರವು ವಿಧಾನಸಭಾ ಕಲಾಪಗಳ ಚರ್ಚೆಗಳನ್ನು ಅನುವಾದಿಸಲು ಅವಧಿ, ಭೋಜಪುರಿ, ಬ್ರಜ್ ಮತ್ತು ಬುಂದೇಲಿ ಭಾಷೆಗಳನ್ನೂ ಪರಿಗಣಿಸುವ ನೀತಿ ಜಾರಿಗೊಳಿಸಿದಾಗ, ಉರ್ದು ಭಾಷೆಯನ್ನು ತೆಗೆದುಹಾಕಿ, ಆಂಗ್ಲ ಭಾಷೆಯನ್ನೂ ಸೇರಿಸಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್. ಇದರ ಚಾರಿತ್ರಿಕ ಹಿನ್ನೆಲೆಯನ್ನು 1960-70ರ ದಶಕದ ʼಆಂಗ್ರೇಜಿ ಹಠಾವೋ ಆಂದೋಲನʼದಲ್ಲಿ ಗುರುತಿಸಬಹುದು. ಇಂಗ್ಲಿಷ್ ಭಾಷೆಯನ್ನು ವಸಾಹತು ಗುಲಾಮಿ ಭಾಷೆಯೆಂದು ಪರಿಗಣಿಸಿದ ಶಾಲಾ ಪಠ್ಯಕ್ರಮದಿಂದ ಹೊರತುಪಡಿಸಲು ನಡೆದಂತಹ ಈ ಜನಾಂದೋಲನದ ನಾಯಕತ್ವ ವಹಿಸಿದ್ದವರು ರಾಮಮನೋಹರ್ ಲೋಹಿಯಾ ಮತ್ತು ಅಟಲ್ ಬಿಹಾರಿ ವಾಜಪೇಯಿ.

ಸಮಾಜವಾದಿ ಪಕ್ಷದ ವಿರೋಧಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ “ ಪಕ್ಷದ ನಾಯಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಶಾಲೆಗಳಿಗೆ ಕಳಿಸುತ್ತಾರೆ ಆದರೆ ಇತರರು ಉರ್ದು ಕಲಿಯಲು ಅಪೇಕ್ಷಿಸುತ್ತಾರೆ,,,,,” ಎಂದು ಲೇವಡಿ ಮಾಡಿದ್ದೂ ಉಂಟು. ಇದರ ಚಾರಿತ್ರಿಕ ವಾಸ್ತವ ಎಂದರೆ ʼಅಂಗ್ರೇಜಿ ಹಠಾವೋ ಆಂದೋಲನʼದ ಪ್ರಭಾವದಿಂದ ಉತ್ತರಪ್ರದೇಶದ ಎರಡು ಪೀಳಿಗೆಯ ವಿದ್ಯಾರ್ಥಿಗಳು ಇಂಗ್ಲಿಷ್ ಶಿಕ್ಷಣದಿಂದ ವಂಚಿತರಾಗಿದ್ದರು. ಇದೇ ನೀತಿಯನ್ನು ಹಿಂದಿ ಬೆಲ್ಟ್ ಎಂದು ಹೇಳಲಾಗುವ ಬಿಹಾರ-ಮಧ್ಯಪ್ರದೇಶ-ರಾಜಸ್ಥಾನ (ಬಿಮಾರು) ಮತ್ತು ಈಗಿನ ಜಾರ್ಖಂಡ್, ಛತ್ತಿಸ್ಘಡ್ ಮತ್ತು ಉತ್ತರ ಖಂಡ ರಾಜ್ಯಗಳಲ್ಲೂ ಅನುಸರಿಸಲಾಗಿತ್ತು. ಅದರ ಫಲ ಇಂದು ಕರ್ನಾಟಕ ಮತ್ತು ದಕ್ಷಿಣ ಭಾರತದ ಬಹುಪಾಲು ಅಸಂಘಟಿತ-ಅನೌಪಚಾರಿಕ ವಲಸೆ ಕಾರ್ಮಿಕರನ್ನು ಆ ರಾಜ್ಯಗಳಿಂದ ಕಾಣಬಹುದು.

ಈಗ ತಮಿಳುನಾಡು ಸರ್ಕಾರ ಮತ್ತು ಇತರ ದಕ್ಷಿಣ ರಾಜ್ಯಗಳು ಹೊಸ ಶಿಕ್ಷಣ ನೀತಿಯನ್ನು (ಎನ್ಇಪಿ) ವಿರೋಧಿಸಲು ಸಕಾರಣಗಳಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. 2020ರ ಎನ್ಇಪಿ 1968ರ ತ್ರಿಭಾಷಾ ಶಿಕ್ಷಣ ನೀತಿಯನ್ನೇ ಉಳಿಸಿಕೊಂಡಿದೆ. ಆದರೆ ಆ ನೀತಿಯಲ್ಲೂ ಸಹ ಹಿಂದಿಯನ್ನು ದೇಶಾದ್ಯಂತ ಕಡ್ಡಾಯವಾಗಿ ಅಳವಡಿಸಲು ಸೂಚಿಸಲಾಗಿತ್ತು. . ಹಿಂದಿ ಭಾಷಿಕ ರಾಜ್ಯಗಳು ಹಿಂದಿ, ಇಂಗ್ಲಿಷ್ ಮತ್ತು ದಕ್ಷಿಣ ಭಾರತದ ಭಾಷೆಗಳಿಗೆ ಆದ್ಯತೆ ನೀಡಿ, ಆಧುನಿಕ ಭಾರತೀಯ ಭಾಷೆಯೊಂದನ್ನು ಶಾಲೆಗಳಲ್ಲಿ ಬೋಧಿಸತಕ್ಕದ್ದು ಹಾಗೂ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಸ್ಥಳೀಯ ರಾಷ್ಟ್ರೀಯ ಭಾಷೆಯನ್ನು ಬೋಧಿಸಬೇಕು ಎಂದು ಹೇಳಲಾಗಿತ್ತು. ಇದಕ್ಕೆ ತದ್ವಿರುದ್ಧವಾಗಿ ಎನ್ಇಪಿ 2020ರಲ್ಲಿ ಇನ್ನೂ ಹೆಚ್ಚಿನ ನಮ್ಯತೆಯನ್ನು (Flexibility) ಒದಗಿಸಲಾಗಿದ್ದು ಯಾವುದೇ ರಾಜ್ಯದ ಮೇಲೆ ನಿರ್ದಿಷ್ಟ ಭಾಷೆಯನ್ನು ತಾಂತ್ರಿಕವಾಗಿ ಹೇರುವುದಿಲ್ಲ ಎಂದು ಹೇಳಲಾಗಿದೆ.

ಆದರೆ ಆದರೆ ಎನ್ಇಪಿ 2020ರಲ್ಲಿ “ ಮಕ್ಕಳು ಕಲಿಯುವ ಮೂರು ಭಾಷೆಗಳು ರಾಜ್ಯಗಳ, ಪ್ರದೇಶಗಳ ಮತ್ತು ನಿರ್ದಿಷ್ಟವಾಗಿ ಶಿಕ್ಷಣಾರ್ಥಿಗಳ ಆಯ್ಕೆಯ ಪ್ರಶ್ನೆಯಾಗಿರುತ್ತದೆ, ಆದರೆ ಕನಿಷ್ಠ ಮೂರರಲ್ಲಿ ಎರಡು ಭಾಷೆಗಳನ್ನು ಕಡ್ಡಾಯವಾಗಿ ಕಲಿಯಬೇಕಾಗುತ್ತದೆ ” ಎಂದು ಹೇಳಲಾಗಿದೆ. ಇದು ಏನನ್ನು ಸೂಚಿಸುತ್ತದೆ ಎಂದರೆ, ರಾಜ್ಯದ ಭಾಷೆಯೊಡನೆ ಹೆಚ್ಚುವರಿಯಾಗಿ, ಮಕ್ಕಳು ಎರಡರಲ್ಲಿ ಒಂದು ಭಾರತೀಯ ಭಾಷೆಯನ್ನು ಕಲಿಯಬೇಕಾಗುತ್ತದೆ, ಇದು ಹಿಂದಿ ಭಾಷೆಯೇ ಆಗಬೇಕಿಲ್ಲ. ಈ ನೀತಿಯು ದ್ವಿಭಾಷಾ ಬೋಧನೆಗೆ ಹೆಚ್ಚು ಒತ್ತು ನೀಡುವುದಲ್ಲದೆ, ಮನೆಯ ಭಾಷೆ ಅಥವಾ ಮಾತೃಭಾಷೆ ಮತ್ತು ಇಂಗ್ಲಿಷ್ ಭಾಷೆಯನ್ನು ಬೋಧಿಸುವಂತೆ ಸೂಚಿಸುತ್ತದೆ. ಇಲ್ಲಿ ಎದ್ದು ಕಾಣುವ ಒಂದು ಅಂಶ ಎಂದರೆ, ಸಂಸ್ಕೃತ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, ತ್ರಿ ಭಾಷಾ ಸೂತ್ರದಡಿಯಲ್ಲಿ ಆಯ್ಕೆಯ ಭಾಷೆಯಾಗಲು ಅವಕಾಶ ಕಲ್ಪಿಸಲಾಗಿದೆ.
ಆದರೆ ಈ ಮೂರನೆ ಭಾಷೆಯ ಆಯ್ಕೆಯಲ್ಲಿ ದಕ್ಷಿಣ ಭಾರತದ ಶಾಲಾ ಮಕ್ಕಳಿಗೆ ಹಿಂದಿ ಮತ್ತು ಸಂಸ್ಕೃತ, ಈ ಎರಡು ಭಾಷೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಉತ್ತರದ ರಾಜ್ಯಗಳಲ್ಲಿ ಯಾವುದೇ ರಾಜ್ಯದಲ್ಲೂ ದಕ್ಷಿಣದ ಭಾ಼ಷೆಗಳನ್ನು ಪಠ್ಯಕ್ರಮದ ಭಾಗವಾಗಿ ಕಾಣಲಾಗುವುದಿಲ್ಲ. ಆದರೆ ದಕ್ಷಿಣದಲ್ಲಿ ಹಿಂದಿ ಭಾಷೆ ಸಹಜ ಆಯ್ಕೆಯಾಗುವ ಸಾಧ್ಯತೆಗಳಿರುತ್ತವೆ. ತಮಿಳುನಾಡು ಸರ್ಕಾರದ, ದ್ರಾವಿಡ ಪಕ್ಷಗಳ ಆತಂಕ ಇರುವುದು ಇಲ್ಲಿ. ಮತ್ತೊಂದೆಡೆ ಮೂರನೆ ಭಾಷೆಯಾಗಿ ʼ ಭಾರತೀಯ ಭಾಷೆ ʼ ಆಯ್ಕೆ ಮಾಡಬೇಕಾದಾಗ, ಸ್ಥಳೀಯ ಭಾಷೆಗಳು ಪರಿಗಣನೆಗೆ ಬರುವುದಿಲ್ಲ. ಏಕೆಂದರೆ ಕರ್ನಾಟಕದ ಮಟ್ಟಿಗೇ ನೋಡುವುದಾದರೆ ಕೊಂಕಣಿ, ತುಳು, ಕೊಡವ ಇತ್ಯಾದಿ ಭಾಷೆಗಳು ಇಲ್ಲಿ ಹೊರಗುಳಿಯುತ್ತವೆ. ಸಂಸ್ಕೃತ ಮತ್ತು ಹಿಂದಿ ಪ್ರಧಾನ ಆಯ್ಕೆಗಳಾಗಿಬಿಡುತ್ತವೆ.

ಹೊಸ ಜಗತ್ತಿನಲ್ಲಿ ಇಂಗ್ಲಿಷ್ ಕಲಿಕೆ
ಡಿಜಿಟಲ್ ಯುಗದಲ್ಲಿ ಮುನ್ನಡೆಯುತ್ತಿರುವ ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಇಂಗ್ಲಿಷ್ ಭಾಷೆಯ ಬೋಧನೆಯ ಪ್ರಾಮುಖ್ಯತೆಯನ್ನು ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕಿದೆ. ಅಷ್ಟೇ ಅಲ್ಲದೆ ದಕ್ಷಿಣದ ರಾಜ್ಯಗಳು ದೆಹಲಿಯಿಂದ ಯಾರು ಆಳ್ವಿಕೆ ನಡೆಸುತ್ತಾರೆ ಎಂದು ನಿರ್ಧರಿಸಲು ಅಥವಾ ಒಕ್ಕೂಟದ ನಿರ್ಣಯಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲದಿರುವುದರಿಂದ, ಭಾಷೆಯ ವಿಚಾರದಲ್ಲಿ ಈ ಪ್ರದೇಶದ ಜನರ ಭಾವನೆ ಮತ್ತು ಕಾಳಜಿಗಳಿಗೆ ಮನ್ನಣೆ ನೀಡುವುದು ಅತ್ಯವಶ್ಯ. ಹಿಂದಿ ಒಂದು ಸರಳ ಮತ್ತು ಸುಂದರ ಭಾಷೆಯಾಗಿದ್ದು ಒಕ್ಕೂಟದ ಅಧಿಕೃತ ಭಾಷೆಯಾಗಿ ಸೂಕ್ತ ಸ್ಥಾನವನ್ನು ಪಡೆದುಕೊಂಡಿದೆ. ಹೀಗೆ ನಿರ್ಧರಿಸುವಾಗ ಸಂವಿಧಾನ ರೂಪಿಸಿದವರು ಹಿಂದಿಯೊಡನೆ ಆಂಗ್ಲ ಭಾಷೆಯೂ ಅಧಿಕೃತ ಭಾಷೆಯಾಗಿ ಮುಂದುವರೆಯುವಂತೆ ಕಾಳಜಿ ವಹಿಸಿದ್ದಾರೆ. ಆಂಗ್ಲ ಭಾಷೆಯ ಭವಿಷ್ಯವನ್ನು ನಿಷ್ಕರ್ಷೆ ಮಾಡುವ ಅಧಿಕಾರವನ್ನು ಸಂಸತ್ತಿಗೆ ನೀಡಲಾಗಿದ್ದು, ಸಂಸತ್ತು ಸಹ ಶಾಸನದ ಮೂಲಕ ಅನಿರ್ದಿಷ್ಟ ಕಾಲ ಅಂಗ್ಲ ಭಾಷೆಯನ್ನು ಬಳಸಲು ಅನುಮೋದನೆ ನೀಡಿದೆ.
ಸ್ವಾತಂತ್ರ್ಯ ಸಂಗ್ರಾಮ, ಅಲ್ಲಿ ಸೃಷ್ಟಿಯಾಗಿದ್ದ ರಾಷ್ಟ್ರೀಯತೆಯ ಭಾವನೆಗಳು ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ದೇಶಕ್ಕೆ ಒಂದು ರಾಷ್ಟ್ರಭಾಷೆಯ ಅಗತ್ಯತೆಯ ಬಗ್ಗೆ ಗಾಂಧೀಜಿಯ ಬಲವಾದ ಪ್ರತಿಪಾದನೆಯು ಸಂವಿಧಾನ ರಚಕ ಮಂಡಲಿಯ ಮನಸ್ಥಿತಿಯನ್ನು ಮೂಲತಃ ಪ್ರಭಾವಿಸಿತ್ತು. ಭಾರತ ವಿಶ್ವದ ಇತರ ರಾಷ್ಟ್ರಗಳೊಡನೆ ಒಡನಾಟದಲ್ಲಿ ತೊಡಗಿದಂತೆಲ್ಲಾ ಈ ಮನಸ್ಥಿತಿಯು ಕಾಲಕ್ರಮೇಣ ಬದಲಾಗತೊಡಗಿತ್ತು. ಹಾಗಾಗಿ 1960ರ ಸಮಯಕ್ಕೆ ವಿಜ್ಞಾನ, ತಂತ್ರಜ್ಞಾನ ಮತ್ತು ಇತರ ಮಾನವ ಚಟುವಟಿಕೆಗಳಲ್ಲಿ ಜ್ಞಾನಾರ್ಜನೆಗೆ ಆಂಗ್ಲ ಭಾಷೆಯ ನಿರ್ಣಾಯಕ ಅವಶ್ಯಕತೆಯನ್ನು ರಾಜಕೀಯ ವರ್ಗವೂ ಗ್ರಹಿಸಿತ್ತು. ಆದ್ದರಿಂದಲೇ ಸಂಸತ್ತು ಆಂಗ್ಲ ಭಾಷೆಯನ್ನು ಮುಂದುವರೆಸಲು ನಿರ್ಧರಿಸಿತ್ತು. ದಕ್ಷಿಣ ಭಾರತದಲ್ಲಿ ಪ್ರಬಲವಾದ ಸಾರ್ವಜನಿಕ ಅಭಿಪ್ರಾಯವು ಆಂಗ್ಲ ಭಾಷೆಯು ಅಧಿಕೃತ ಭಾಷೆಗಳಲ್ಲಿ ಒಂದಾಗಿ ಮುಂದುವರೆಯಬೇಕು ಎಂದೇ ಆಗಿದೆ.

ಹಾಗಾಗಿಯೇ ಇಂದು ಒಕ್ಕೂಟವು ಹಿಂದಿ ಮತ್ತು ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಹೊಂದಿದೆ. ಕೆನಡಾದಲ್ಲೂ ಸಹ ಆಂಗ್ಲ ಮತ್ತು ಫ್ರೆಂಚ್ ಭಾಷೆಗಳು ಅಧಿಕೃತ ಭಾಷೆಗಳಾಗಿವೆ. ಈ ಸನ್ನಿವೇಶದಲ್ಲಿ, ಆಡಳಿತ ನೀತಿ ನಿರೂಪಕರು ಹಿಂದಿ ಮತ್ತು ಆಂಗ್ಲ ಭಾಷೆಗಳನ್ನು ಒಕ್ಕೂಟದ ಅಧಿಕೃತ ಭಾಷೆಗಳನ್ನಾಗಿ ಮುಂದುವರೆಸುವ ಸಾಂವಿಧಾನಿಕ ನಿಯಮ ರೂಪಿಸುವ ಬಗ್ಗೆ ಯೋಚಿಸಬೇಕಿದೆ. ನಾವು ಹಿಂದಿ ಮತ್ತು ಇತರ ಎಲ್ಲ ಭಾರತೀಯ ಭಾಷೆಗಳನ್ನೂ ಪ್ರೀತಿಸಿ, ಗೌರವಿಸುತ್ತೇವೆ. ಆದ್ದರಿಂದ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಅವಶ್ಯಕತೆಗಳಿಗೆ ಅನುಗುಣವಾಗಿ ಈ ಭಾಷೆಗಳ ಸ್ವಾಭಾವಿಕ ಬೆಳವಣಿಗೆಗಾಗಿ ಪ್ರಯತ್ನಗಳನ್ನು ಮಾಡಬೇಕಿದೆ. ಇದೇ ವೇಳೆ, ವಿಜ್ಞಾನ ಮತ್ತು ಜಗತ್ತಿನ ಆಗುಹೋಗುಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲು ನಮಗೆ ಆಂಗ್ಲ ಭಾಷೆ ಅತ್ಯವಶ್ಯವಾಗಿದೆ.
ಇಂಗ್ಲಿಷ್ ಭಾಷೆಯ ಮೂಲಭೂತ ಅರಿವೂ ಇಲ್ಲದ ಒಂದು ಬೃಹತ್ ಯುವ ಪೀಳಿಗೆ ತಮ್ಮ ಜೀವನೋಪಾಯದ ಮಾರ್ಗಗಳನ್ನು ರೂಪಿಸಿಕೊಳ್ಳುವ ಸಂದರ್ಭದಲ್ಲಿ ಜಾಗತೀಕರಣಕ್ಕೊಳಗಾದ ನವ ಉದಾರವಾದಿ ಮಾರುಕಟ್ಟೆ ಸೃಷ್ಟಿಸುವ ತೊಡಕುಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಯುವ ಸಮೂಹವು ಪದವಿಯ ನಂತರವೂ ಇಂಗ್ಲಿಷ್ ಭಾಷೆಯ ಅರಿವಿಲ್ಲದೆ ಉದ್ಯೋಗ ಮಾರುಕಟ್ಟೆಯ ಪೈಪೋಟಿಯಲ್ಲಿ ಹಿಂದುಳಿಯುತ್ತಾರೆ. ತತ್ಪರಿಣಾಮವಾಗಿ ಇಲ್ಲಿನ ಅವಕಾಶಗಳನ್ನು ಮೇಲ್ಜಾತಿ, ಮೇಲ್ವರ್ಗಗಳು, ತಳಸಮುದಾಯಗಳಲ್ಲಿ ನಗರೀಕರಣಕ್ಕೊಳಗಾದ ಜನರು ಬಳಸಿಕೊಳ್ಳುತ್ತಾರೆ. ಇಲ್ಲಿ ಅವಕಾಶವಂಚಿತರಾಗುವ ತಳಸಮಾಜದ ವಿದ್ಯಾರ್ಥಿ-ಯುವಜನತೆ ಇಂಗ್ಲಿಷ್ ಸಂವಹನದ ಕೊರತೆಯಿಂದಾಗಿಯೇ ಹಿಂದುಳಿಯಬೇಕಾಗುತ್ತದೆ. ವಿಜ್ಞಾನ-ತಂತ್ರಜ್ಞಾನ-ಮೇನೆಜ್ಮೆಂಟ್ ಮತ್ತು ಸಾಫ್ಟ್ವೇರ್ ಜಗತ್ತಿನ ಉದ್ಯೋಗ ಮಾರುಕಟ್ಟೆ ಈ ಸಮುದಾಯಗಳ ಪಾಲಿಗೆ ಗಗನ ಕುಸುಮಗಳಾಗುತ್ತವೆ. ಉದ್ಯೋಗ ಮಾರುಕಟ್ಟೆಯಷ್ಟೇ ಅಲ್ಲದೆ, ಜ್ಞಾನಾರ್ಜನೆಯ ಮಾರ್ಗಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಗಳಲ್ಲೂ ಸಹ ಇದು ತಳಸಮುದಾಯವನ್ನು ವಂಚಿಸುವ ಒಂದು ವಿಧಾನವಾಗುತ್ತದೆ.

ತ್ರಿ ಭಾಷಾ ಸೂತ್ರದ ಭಿನ್ನ ಆಯಾಮ
ಅಧಿಕೃತವಾಗಿ ಭಾವಿಸಲಾಗುವಂತಹ ರಾಜ್ಯಗಳ ʼ ಮಾತೃಭಾಷೆ ʼಗೂ, ಸಮಾಜದ ವಿವಿಧ ಸ್ತರಗಳಲ್ಲಿ ಕಾಣಬಹುದಾದ ನಿತ್ಯಬಳಕೆಯ ʼ ತಾಯಿನುಡಿ ʼಗೂ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಇಲ್ಲಿ ಗುರುತಿಸಲೇಬೇಕಿದೆ. ವಿಶಾಲಾರ್ಥದಲ್ಲಿ ಕನ್ನಡಿಗರು ಎಂದು ಪರಿಭಾವಿಸಲ್ಪಡುವ ಕರ್ನಾಟಕದ ಜನತೆಯ ʼ ಮಾತೃಭಾಷೆ ʼ ಕನ್ನಡ ಎಂದು ಘೋಷಿಸುವ ಮುನ್ನ, ಕರಾವಳಿಯ ತುಳು, ದಕ್ಷಿಣ ಕನ್ನಡದ ಕೊಂಕಣಿ, ಕೊಡಗಿನ ಕೊಡವ ಮೊದಲಾದ ತಾಯ್ನುಡಿಗಳ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಈ ಮೂರು ಪ್ರಧಾನ ಪ್ರಾದೇಶಿಕವಾಗಿ ಹವ್ಯಕ ಭಾಷೆಯೂ ಇದೆ. ಚಾಮರಾಜನಗರ-ಕೊಳ್ಳೇಗಾಲ ಮತ್ತು ಸುತ್ತಮುತ್ತಲಿನ ಭಾಷೆ ಕನ್ನಡದ್ದೇ ಮತ್ತೊಂದು ರೂಪವಾಗದೆ. ಉರ್ದು ಸಹ ಕರ್ನಾಟಕದ ಪ್ರಮುಖ ಜನಭಾ಼ಷೆಗಳಲ್ಲೊಂದಾಗಿರುವುದನ್ನು ಇಲ್ಲಿ ನಿರ್ಲಕ್ಷಿಸಲಾಗುವುದಿಲ್ಲ. ಈ ಎಲ್ಲ ಭಾಷೆಗಳನ್ನೂ ಶಾಲಾ ಪಠ್ಯಗಳಲ್ಲಿ ಅಳವಡಿಸಲು ಅಪೇಕ್ಷಿಸುವುದು ಅಸಾಧು ಎನಿಸಬಹುದು.
ಆದರೆ ಪ್ರಧಾನ ಪ್ರಾದೇಶಿಕ ಭಾಷೆಗಳಾದ ಕೊಂಕಣಿ, ತುಳು, ಕೊಡವ ಭಾಷೆಗಳಿಗೆ ಶಾಲಾ ಪಠ್ಯಕ್ರಮದಲ್ಲಿ ಒಂದು ಸ್ಥಾನ ಕೊಡುವ ಬಗ್ಗೆ ಭಾಷಾ-ಶಿಕ್ಷಣ ತಜ್ಞರು ಆಲೋಚನೆ ಮಾಡಬೇಕಿದೆ. ಕರ್ನಾಟಕದಲ್ಲಿ ಕನ್ನಡವನ್ನು ಮಾಧ್ಯಮಮ ಭಾಷೆಯನ್ನಾಗಿ ಅಳವಡಿಸಲು ಇರುವ ನ್ಯಾಯಾಂಗದ ತೊಡಕು ಮತ್ತು ರಾಜ್ಯದ ರಾಜಕೀಯ ಪಕ್ಷಗಳ ಅಲಕ್ಷ್ಯವನ್ನು ಸಹ ಇಲ್ಲಿ ನಿಷ್ಕರ್ಷೆ ಮಾಡಬೇಕಾಗುತ್ತದೆ. ಸರ್ಕಾರಿ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸುವ ಸರ್ಕಾರದ ನೀತಿ, ಮಕ್ಕಳ ಬುದ್ಧಿ ವಿಕಾಸಕ್ಕೆ ತೊಡಕಾಗುವಷ್ಟೇ ಪ್ರಮಾಣದಲ್ಲಿ, ಅಥವಾ ಇನ್ನೂ ಹೆಚ್ಚಾಗಿ ಕನ್ನಡದ ಬೆಳವಣಿಗೆಗೆ ತೊಡಕಾಗಿ ಪರಿಣಮಿಸುತ್ತದೆ. ಆಂಗ್ಲ ಭಾಷಾ ಕಲಿಕೆ ಅತ್ಯವಶ್ಯವಾದರೂ ಒಂದು ಪಠ್ಯಭಾಷೆಯಾಗಿ ಪ್ರಾಥಮಿಕ ಶಿಕ್ಷಣದಲ್ಲಿ ಅಳವಡಿಸುವುದು ವಿವೇಕಯುತ ನೀತಿ ಎನಿಸಿಕೊಳ್ಳುತ್ತದೆ. ಐದನೆ ತರಗತಿಯಿಂದ ಆಂಗ್ಲ ಮಾಧ್ಯಮವನ್ನು ಉತ್ತೇಜಿಸುವುದರೊಂದಿಗೇ, ಹಿಂದಿ ಭಾಷೆಯನ್ನೂ ಐಚ್ಚಿಕ ಪಠ್ಯವಾಗಿ ರೂಪಿಸಬಹುದು.

ಈ ನಡುವೆ ಪ್ರಾಥಮಿಕ ಹಂತದಿಂದಲೇ ಕರ್ನಾಟಕದ ನಿರ್ಲಕ್ಷಿತ ಪ್ರಾದೇಶಿಕ ಭಾಷೆಗಳಾದ ಕೊಂಕಣಿ, ತುಳು ಮತ್ತು ಕೊಡವ ಭಾಷೆಗಳನ್ನು ಕಲಿಕೆಯ ಪಠ್ಯವಾಗಿ ಅಳವಡಿಸುವುದು, ಈ ಭಾಷಿಕ ಸಮುದಾಯಗಳ ಏಳಿಗೆ ಮತ್ತು ಜ್ಞಾನಾರ್ಜನೆಯ ದೃಷ್ಟಿಯಿಂದ ಹೆಚ್ಚು ಉಪಯುಕ್ತ ಎನಿಸುತ್ತದೆ. ಇಲ್ಲವಾದಲ್ಲಿ ನವ ಉದಾರವಾದಿ ಮಾರುಕಟ್ಟೆಯ ವಾತಾವರಣದಲ್ಲಿ ಈ ಭಾಷೆಗಳು, ಇತರ ಅರೆ ಭಾಷೆಗಳಂತೆ, ಪ್ರಾದೇಶಿಕ ಆಡು ಭಾಷೆಗಳಂತೆ ಅವಸಾನ ಹೊಂದುತ್ತವೆ ಎಂಬ ಎಚ್ಚರ ನಮ್ಮಲ್ಲಿರಬೇಕು. ರಾಷ್ಟ್ರೀಯ ಅಧಿಕೃತ ಭಾಷೆಯಾಗಿ ಹಿಂದಿ ಕಲಿಕೆಯಷ್ಟೇ ಪ್ರಾಮುಖ್ಯತೆಯನ್ನು ಈ ಭಾಷೆಗಳಿಗೂ ನೀಡದೆ ಹೋದರೆ, ಸ್ಥಳೀಯ ಸಂಸ್ಕೃತಿಗಳು ಚರಿತ್ರೆಯ ಒಂದು ಭಾಗವಾಗಿಹೋಗುತ್ತವೆ. ಈ ದೃಷ್ಟಿಯಿಂದ ನೋಡಿದಾಗ ಕರ್ನಾಟಕ ಸರ್ಕಾರ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಲೇ, ದ್ವಿಭಾಷಾ ನೀತಿಯನ್ನು ಅಳವಡಿಸುವ ದಾರಿಯಲ್ಲಿ, ಈ ಭಾಷೆಗಳನ್ನೂ ಅಳವಡಿಸಿಕೊಂಡು ತ್ರಿಭಾಷಾ ಸೂತ್ರವನ್ನು ಪ್ರಾಥಮಿಕ ಹಂತದಿಂದಲೇ ಜಾರಿಗೊಳಿಸಬೇಕಿದೆ.
ಅಂತಿಮವಾಗಿ

ಮಾರುಕಟ್ಟೆಯ ಭಾಷೆಯಾಗಿ ಇಂಗ್ಲಿಷ್, ಸ್ವೀಕೃತ ರಾಜ್ಯ ಮಾತೃಭಾಷೆಯಾಗಿ ಕನ್ನಡ, ರಾಷ್ಟ್ರೀಯ ಅಖಂಡತೆಯ ಭಾಷೆಯಾಗಿ ಹಿಂದಿ, ಈ ಭಾಷೆಗಳಷ್ಟೇ ಮುಖ್ಯವಾದುದು ಮಕ್ಕಳು ʼ ಅಮ್ಮ ʼ ಎನ್ನುವ ಕ್ಷಣದಿಂದಲೇ ಮಾತು ಕಲಿಯುವ ʼ ತಾಯ್ನುಡಿಗಳು ʼ . ಶೈಕ್ಷಣಿಕ ಪಠ್ಯಕ್ರಮ, ಶಾಲಾ ಕಲಿಕೆ ಮತ್ತು ಬೋಧನೆ, ಕಲಿಕಾ ಮಾಧ್ಯಮ ಮತ್ತು ಭಾಷಾ ಶಿಕ್ಷಣದ ಸಾರ್ವಜನಿಕ ಸಂಕಥನದಲ್ಲಿ, ಬೌದ್ಧಿಕ ಸಂವಾದಗಳಲ್ಲಿ (Academic debates) ಹಾಗೂ ಸಾಂಘಿಕ ಚರ್ಚೆಗಳಲ್ಲಿ ಈ ʼ ತಾಯ್ನುಡಿಗಳ ʼ ಭವಿಷ್ಯವೂ ಪ್ರಧಾನ ಸ್ಥಾನ ಪಡೆಯಬೇಕಿದೆ. ಭಾಷೆ ಎನ್ನುವುದು ಮೂಲತಃ ಸಂವಹನ ಸಾಧನವಾದರೂ, ಮಗು ಕಲಿಯುವ ಪ್ರಥಮ ಅಕ್ಷರೋಚ್ಛಾರದಿಂದಲೇ ಆರಂಭವಾಗುವ ʼ ತಾಯ್ನುಡಿ ʼ ಬದುಕು ಕಟ್ಟುವ, ಸಮಾಜದೊಡನೆ ಬೆರೆಯುವ, ಸಾಮುದಾಯಿಕ ಪ್ರಜ್ಞೆ ಮೂಡಿಸುವ ಹಾಗೂ ಸಾಂಸ್ಕೃತಿಕ ಅರಿವು ಉಂಟುಮಾಡುವ ಭಾಷೆಯಾಗಿ ಮುಖ್ಯವಾಗುತ್ತದೆ.

ಈ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಹಾಗೂ ಶೈಕ್ಷಣಿಕ ವಲಯದ ಬೌದ್ಧಿಕ ಚಿಂತನಾಧಾರೆಗಳು , ಪ್ರಾಥಮಿಕ ಹಂತದಿಂದಲೇ ಕನ್ನಡವನ್ನು ಮಾಧ್ಯಮ ಭಾಷೆಯನ್ನಾಗಿ, ಇಂಗ್ಲಿಷ್ನ್ನು ಕಲಿಕಾ ಭಾಷೆಯಾಗಿ, ಹಿಂದಿಯನ್ನು ಅನುಷಂಗಿಕವಾಗಿ ಮಕ್ಕಳಿಗೆ ಕಲಿಸುವ ಒಂದು ಹೊಸ ವಿಧಾನವನ್ನು ಗುರುತಿಸಬೇಕಿದೆ. ಈ ದಾರಿಯಲ್ಲೇ ಅಳಿಯುತ್ತಿರುವ ಪ್ರಧಾನ ಪ್ರಾದೇಶಿಕ ಭಾಷೆಗಳನ್ನುಪ್ರಾಥಮಿಕ ಹಂತದ ಪಠ್ಯಕ್ರಮದಲ್ಲಿ ಅಳವಡಿಸುವ ಸಾಧ್ಯತೆಗಳನ್ನೂ ಗಂಭೀರವಾಗಿ ನಿಷ್ಕರ್ಷೆ ಮಾಡಬೇಕಿದೆ. ಸ್ವತಂತ್ರ ಭಾರತದ ಏಳು ದಶಕಗಳ ಚರಿತ್ರೆಯಲ್ಲಿ ಅತ್ಯಂತ ನಿರ್ಲಕ್ಷಿತ ಕ್ಷೇತ್ರ ಎನಿಸಿಕೊಂಡಿರುವ ʼ ಶಿಕ್ಷಣ ʼ ಮತ್ತು ʼ ಶಾಲಾ ಶಿಕ್ಷಣ ʼ ಒಂದು ಕ್ರಾಂತಿಕಾರಕ ಮನ್ವಂತರದತ್ತ ಸಾಗಬೇಕಾದರೆ ಈ ಹೊಸ ಆಲೋಚನೆಗಳೂ ಸಹ ಪರಾಮರ್ಶೆಗೊಳಗಾಗಬೇಕು. ಇದು ಭಾವನೆಗಳಿಗೆ ಸಂಬಂಧಿಸಿದ್ದಲ್ಲ, ತಳಸ್ತರದಿಂದ ಮೇಲ್ಪದರದವರೆಗೂ ವಿಸ್ತರಿಸುವ ಬದುಕು-ಸಂಸ್ಕೃತಿ ಮತ್ತು ಅರಿವಿನ ಪ್ರಶ್ನೆ.

ಭಾ಼ಷಾವಾರು ರಾಜ್ಯವಾಗಿ ಕರ್ನಾಟಕದ ಸ್ಥಾಪನೆಯಾಗಿ ಏಳು ದಶಕಗಳು ಕಳೆಯುತ್ತಿದ್ದರೂ, ಈವರೆಗಿನ ಸರ್ಕಾರಗಳು ಒಂದು ಸಮಗ್ರ ಭಾಷಾ ನೀತಿಯನ್ನು ಜಾರಿಗೊಳಿಸಲು ಮುಂದಾಗದಿರುವುದು ಇತಿಹಾಸದ ದುರಂತ. ಶಿಕ್ಷಣ ಎನ್ನುವುದು ಉದ್ಯೋಗ ಮಾರುಕಟ್ಟೆಯನ್ನು ತಲುಪಿಸಲು ನೆರವಾಗುವ ಒಂದು ಜ್ಞಾನ ಸಾಧನ ಮಾತ್ರವಲ್ಲ. ಅದು ವ್ಯಕ್ತಿ ವಿಕಸನ, ಜ್ಞಾನ ವಿಕಾಸ, ಸಾಮಾಜಿಕ ಅರಿವು, ಸಾಂಸ್ಕೃತಿಕ ಪರಿವೆ ಮತ್ತು ವಿಶಾಲಾರ್ಥದಲ್ಲಿ ಜನಸಂಸ್ಕೃತಿಯ ನೆಲೆಗಳನ್ನು ಆಳಕ್ಕೆ ಇಳಿಸುವ ಮತ್ತು ಭವಿಷ್ಯಕ್ಕೆ ಕೊಂಡೊಯ್ಯುವ ಒಂದು ಬೌದ್ಧಿಕ ಸಾಧನ ಎಂದು ಈಗಲಾದರೂ ಪರಿಗಣಿಸಬೇಕಿದೆ. ಈ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಪ್ರಾದೇಶಿಕ-ಸ್ಥಳೀಯ ಭಾಷೆಗಳನ್ನೂ ಗೌರವಿಸಿ, ಬೆಳೆಸುವ ನಿಟ್ಟಿನಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸುವ ನಿಟ್ಟಿನಲ್ಲಿ ಯೋಚಿಸುವುದು ವರ್ತಮಾನದ ತುರ್ತು ಹಾಗೂ ಚಾರಿತ್ರಿಕ ಜವಾಬ್ದಾರಿಯೂ ಹೌದು. ಕರ್ನಾಟಕದ ಸಮನ್ವಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಕುವೆಂಪು ಕನಸಿದ “ ಸರ್ವ ಜನಾಂಗದ ಶಾಂತಿಯ ತೋಟ”ವನ್ನು ಕಟ್ಟುವುದೇ ಆದರೆ, ರಾಜ್ಯದ ಭಾಷಾ ನೀತಿ ವಿಶಾಲ ನೆಲೆಯಲ್ಲಿ ಮರುಪರಿಷ್ಕರಣೆಗೊಳಗಾಗಬೇಕು.
-೦-೦-೦-