
—-ನಾ ದಿವಾಕರ—-
ಭಾಷಾ ಸಂವಹನ ಪ್ರಕ್ರಿಯೆಯನ್ನು ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ನಿರ್ವಚಿಸಬೇಕಿದೆ
(ಕೃಪೆ : ಸಮಾಜಮುಖಿ ಮಾಸಪತ್ರಿಕೆ ಡಿಸೆಂಬರ್ 2024)
ಭಾಷೆ ಎನ್ನುವುದು ಮಾನವ ಸಮಾಜವನ್ನು ಒಂದುಗೂಡಿಸುವ ಒಂದು ಪ್ರಬಲ ಸಂವಹನ ಸಾಧನ ಅಥವಾ ಸೇತುವೆ ಎನ್ನಬಹುದು. ಭಾಷಾ ಶಾಸ್ತ್ರದ ಚರಿತ್ರೆಯನ್ನು ಗಮನಿಸಿದಾಗ, ಸಮಾಜದ ವಿವಿಧ ಸ್ತರಗಳಲ್ಲಿನ ಜನರನ್ನು ಪರಸ್ಪರ ಸಂಪರ್ಕಿಸುವಂತೆ ಮಾಡುವ ಈ ಸಂವಹನ ಸಾಧನವು ಆಯಾ ಭೂಪ್ರದೇಶದ ವಿಶಿಷ್ಟ ಸಾಂಸ್ಕೃತಿಕ ಲಕ್ಷಣಗಳಿಗನುಗುಣವಾಗಿ ತನ್ನದೇ ಆದ ರೂಪ, ವಿನ್ಯಾಸ, ವಿಸ್ತಾರ ಹಾಗೂ ಶೈಲಿಯನ್ನು ಪಡೆದುಕೊಂಡಿರುವುದನ್ನು ಕಾಣಬಹುದು. 21ನೆಯ ಶತಮಾನದ ಡಿಜಿಟಲ್ ಯುಗದಲ್ಲಿ ನಿಂತು ಈ ಭಾಷೆ ಎಂಬ ಸಾಧನವನ್ನು ನೋಡುವುದಾದರೆ, ಇಂದು ಜಗತ್ತು ಭೌತಿಕವಾಗಿ ಒಂದು ಪುಟ್ಟ ಹಳ್ಳಿಯ ಹಾಗೆ ಕಾಣುತ್ತಿದ್ದರೆ ಅದಕ್ಕೆ ಕಾರಣ ವಿಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನ ರೂಪಿಸಿರುವ ಒಂದು ಅಮೂರ್ತ ಸಂವಹನ. ಜನಸಾಮಾನ್ಯರ ನಿತ್ಯ ಜೀವನವನ್ನು ಎಲ್ಲ ಸ್ತರಗಳಲ್ಲೂ ನಿಯಂತ್ರಿಸುತ್ತಿರುವ ತಂತ್ರಜ್ಞಾನ ಮತ್ತದರ ಸಾಧನಗಳು ಎಲ್ಲ ಹಂತಗಳಲ್ಲೂ ಜನಬಳಕೆಗೆ ಬಂದಿದ್ದು, ಯಾವುದೇ ನಿರ್ದಿಷ್ಟ ಭಾಷೆಯ ಜ್ಞಾನ ಇಲ್ಲದಿದ್ದರೂ, ಕೇವಲ ಅಲ್ಪಸ್ವಲ್ಪ ಭಾ಼ಷಾ ಕೌಶಲದೊಂದಿಗೆ ಇದನ್ನು ನಿರ್ವಹಿಸಬಹುದಾದ ಸಾಧ್ಯತೆಗಳನ್ನು ನಾವು ಕಾಣುತ್ತಿದ್ದೇವೆ.
ಈ ಬೆಳವಣಿಗೆಗಳ ನಡುವೆಯೇ ಸಾಮಾಜಿಕ ಪ್ರಗತಿ, ಸಾಂಸ್ಕೃತಿಕ ಅಭ್ಯುದಯ ಮತ್ತು ಜನಾಂಗೀಯ ಬೆಳವಣಿಗೆಯ ದೃಷ್ಟಿಯಿಂದ ಭಾಷೆ ಎನ್ನುವುದು ಒಂದು ಅಸ್ಮಿತೆಯ ಪ್ರಶ್ನೆಯಾಗಿ ಮತ್ತೊಂದೆಡೆ ಬದುಕಿನ ಪ್ರಶ್ನೆಯಾಗಿ ಸಮಾಜಗಳನ್ನು ಕಾಡುತ್ತಾ ಬಂದಿದೆ. ತನ್ನ ಭೌಗೋಳಿಕ ವೈಶಿಷ್ಟ್ಯ, ಸಾಂಸ್ಕೃತಿಕ ಹಿನ್ನೆಲೆ ಮತ್ತು ಪ್ರಾದೇಶಿಕ ವೈವಿಧ್ಯತೆಗಳ ನೆಲೆಯಲ್ಲಿ ಪ್ರತಿಯೊಂದು ಭೂ ಪ್ರದೇಶವೂ ರೂಢಿಸಿಕೊಂಡು ಬರುವ ಸಂವಹನ ಸಾಧನಗಳಲ್ಲಿ ಭಾಷೆ ಬಹಳ ಮುಖ್ಯವಾಗುತ್ತದೆ. ಏಕೆಂದರೆ ಇದು ನಿತ್ಯಬದುಕಿಗೆ ಹೊಂದಿಕೊಂಡಂತೆ ಬೆಳೆಯುತ್ತದೆ. ಮಾತು ಕಲಿಯುವ ಮಗು ಭೌತಿಕ ಬೆಳವಣಿಗೆಯೊಂದಿಗೇ ಕಂಡುಕೊಳ್ಳುವ ಒಂದು ವಾಸ್ತವ ಎಂದರೆ ತನ್ನ ಸುತ್ತಲಿನ ಸಮಾಜದೊಡನೆ ನಿರಂತರ ಸಂವಹನ ಸಾಧಿಸಬೇಕಾದ ಅನಿವಾರ್ಯತೆ. ಈ ಬೆಳವಣಿಗೆಯುದ್ದಕ್ಕೂ ವಿಸ್ತರಿಸುವ ಬೌದ್ಧಿಕ ವಿಕಾಸದಲ್ಲಿ ಆ ಮಗುವಿನ ಮಾತೃಭಾಷೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಏಕೆಂದರೆ ಕಲಿಯುವ ಹಂತದಲ್ಲಿ ಮಗುವಿನ ಕಿವಿಗೆ ಬೀಳುವ ಭಾಷೆಗೂ, ಕಲಿಕೆಯ ಹಂತದಲ್ಲಿ ಅದೇ ಮಗು ಅವಲಂಬಿಸಬೇಕಾದ ಭಾಷೆಗೂ ನಿಕಟ ನಂಟು ಇದ್ದೇ ಇರುತ್ತದೆ.
ಮಾತೃಭಾಷೆ-ತಾಯ್ನುಡಿ ಮತ್ತು ಶಿಕ್ಷಣ
ಪ್ರಾಥಮಿಕ ಶಿಕ್ಷಣ ಎನ್ನುವುದು ಇಲ್ಲಿ ಪ್ರಾಧಾನ್ಯತೆ ಪಡೆದುಕೊಳ್ಳುತ್ತದೆ. ಶಿಕ್ಷಣ ಮಾಧ್ಯಮ ಎಂದರೆ ಕೇವಲ ಪಠ್ಯಕ್ರಮವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಕಲ್ಪಿಸುವ ಒಂದು ಶೈಕ್ಷಣಿಕ ಕಸರತ್ತು ಎಂದು ಭಾವಿಸಲಾಗುವುದಿಲ್ಲ. ಅಥವಾ ಮಕ್ಕಳ ಜ್ಞಾನಾರ್ಜನೆಯ ಹಾದಿಯನ್ನ ಸುಗಮಗೊಳಿಸುವ ಭಾಷಾ ಸಾಧನ ಎಂದೂ ಭಾವಿಸಲಾಗುವುದಿಲ್ಲ. ತಮ್ಮ ದೈನಂದಿನ ಜೀವನದಲ್ಲಿ ಮಕ್ಕಳು ಕುಟುಂಬದ ಒಳಗೆ ಹಾಗೂ ಬಾಹ್ಯ ಸಮಾಜದಲ್ಲಿ ಎದುರುಗೊಳ್ಳುವ ಸಂವಹನದ ಭಾಷೆಯಲ್ಲೇ ಅವರ ಆರಂಭಿಕ ಕಲಿಕೆಯೂ ಇದ್ದಲ್ಲಿ, ಗ್ರಹಿಕೆ ಸುಲಭವಾಗುತ್ತದೆ ಎನ್ನುವುದು ವಿಶ್ವಮಾನ್ಯ ವಾಸ್ತವ. ಲ್ಯಾಟಿನ್ ಅಮೆರಿಕಾದ ದೇಶಗಳಲ್ಲಿ ಅತಿ ಹೆಚ್ಚು ಜನರು ಮಾತನಾಡುವ ಸ್ಪಾನಿಷ್ ಭಾಷೆಯನ್ನೇ ಶಿಕ್ಷಣ ಮಾಧ್ಯಮವಾಗಿಯೂ ಬಳಸುತ್ತಿರುವುದನ್ನು ಗಮನಿಸಬಹುದು. ಬ್ರೆಜಿಲ್ ಮಾತ್ರ ಪೂರ್ಚುಗೀಸ್ ಭಾಷೆಯನ್ನು ಅಳವಡಿಸಿಕೊಂಡಿದೆ. ಜಪಾನ್ನಲ್ಲೂ ಸಹ ಜಪಾನೀ ಭಾಷೆಯನ್ನೇ ಮಾಧ್ಯಮ ಭಾಷೆಯನ್ನಾಗಿ ಅನುಸರಿಸಲಾಗುತ್ತದೆ.

ಆದರೆ ಈ ದೇಶಗಳಿಗೂ ಭಾರತಕ್ಕೂ ಇರುವ ಒಂದು ವ್ಯತ್ಯಾಸ ಎಂದರೆ ಭಾಷಾ ವೈವಿಧ್ಯತೆ ಮತ್ತು ತಾಯ್ನುಡಿಗಳ ಅಸ್ಮಿತೆಗಳು. ಸಾಮಾನ್ಯ ಪರಿಭಾಷೆಯಲ್ಲಿ ಭಾಷಾವಾರು ರಾಜ್ಯಗಳ ವಿಂಗಡನೆಯಾದ ನಂತರದಲ್ಲಿ ಆಯಾ ರಾಜ್ಯಗಳ ಪ್ರಧಾನ ಭಾಷೆಯನ್ನೇ ಮಾತೃಭಾಷೆ ಎಂದು ಪರಿಭಾವಿಸುವ ಹಾಗೂ ಬಳಕೆ ಮಾಡಲು ಅಪೇಕ್ಷಿಸುವ ಒಂದು ಪರಿಪಾಠ ಬೆಳೆದುಬಂದಿದೆ. ಅಂದರೆ ಇಡೀ ರಾಜ್ಯದ ಜನತೆ ಒಪ್ಪಿಕೊಳ್ಳುವಂತಹ, ಲಿಖಿತ ಸಾಹಿತ್ಯದಲ್ಲಿ ಸ್ವೀಕೃತವಾದಂತಹ, ಭೌಗೋಳಿಕ ಅಖಂಡತೆಗೆ ನೆರವಾಗುವಂತಹ ಒಂದು ಭಾಷೆಯನ್ನು ಆ ನಾಡಿನ ಸಮಸ್ತ ಜನತೆಯ ಮಾತೃಭಾಷೆ ಎಂದು ಪರಿಭಾವಿಸಲಾಗುತ್ತದೆ. ಆದರೆ ತಾಯ್ನುಡಿ ಇದರಿಂದ ಭಿನ್ನವಾದದ್ದು. ಕನ್ನಡ ಭಾಷಿಕ ಪ್ರದೇಶಗಳನ್ನೇ ತೆಗೆದುಕೊಂಡರೂ ತುಳು, ಕೊಂಕಣಿ, ಹವ್ಯಕ, ಅರೆಭಾಷೆಗಳು, ಕೊಡವ ಹೀಗೆ ವಿಭಿನ್ನ ಭಾಷೆಗಳು ಅಸಂಖ್ಯಾತ ಜನಸಮುದಾಯಗಳ ತಾಯ್ನುಡಿಗಳಾಗಿವೆ. ಕರ್ನಾಟಕದ ದಕ್ಷಿಣ, ಉತ್ತರ, ಪೂರ್ವ ಕರಾವಳಿಯ ತಾಯ್ನುಡಿಗಳೂ ಭಿನ್ನ ಶೈಲಿ ಮತ್ತು ಸಂಸ್ಕೃತಿಗಳನ್ನು ಹೊಂದಿವೆ.

ಈ ವೈವಿಧ್ಯಮಯ ಭಾಷೆಗಳ ಸಮನ್ವಯದ ನೆಲೆಯಲ್ಲಿ ಕರ್ನಾಟಕದಲ್ಲಿ ಅಥವಾ ಭಾರತದಲ್ಲೇ ಮಾತೃಭಾಷೆ ಎನ್ನುವುದನ್ನು ಆಂಗ್ಲ ಭಾಷೆಯ Mothe Tounge ಪದಕ್ಕೆ ಸಂವಾದಿಯಾಗಿ ಬಳಸಲಾಗುತ್ತಿದೆ. ಸಹಜವಾಗಿಯೇ ರಾಜ್ಯದ ಭೌಗೋಳಿಕ ಅಖಂಡತೆ ಮತ್ತು ಸಾಂಸ್ಕೃತಿಕ ಅಸ್ಮಿತೆಯ ನೆಲೆಯಲ್ಲಿ ಈ ʼ ಮಾತೃಭಾಷೆ ʼ ಸ್ಥಾನ ಪಡೆದಿರುವ ಕನ್ನಡ ಭಾಷೆಯನ್ನು ರಾಜ್ಯದ ಶೈಕ್ಷಣಿಕ, ಆಡಳಿತಾತ್ಮಕ ಹಾಗೂ ಅಧಿಕೃತ ಭಾಷೆಯಾಗಿ ಬಳಸುವುದು ಕಂಡುಬರುತ್ತದೆ. ಸಾಮಾನ್ಯವಾಗಿ ತಾಯ್ನುಡಿಯ ಬಳಕೆಯಲ್ಲಿ ಕಾಣದ ʼ ಭಾಷಾ ಕೀಳರಿಮೆ ʼ ಕಂಡುಬರುವುದು ಈ ಸ್ವೀಕೃತ ಮಾತೃಭಾಷೆಯ ಸಂವಹನದ ಸಂದರ್ಭದಲ್ಲಿ. ಇದಕ್ಕೆ ಕಾರಣ ಎಂದರೆ ಹೊರ ಸಮಾಜದ ಮಾರುಕಟ್ಟೆಯಲ್ಲಿ, ಔದ್ಯೋಗಿಕ ವಲಯದಲ್ಲಿ, ಔದ್ಯಮಿಕ ವಾತಾವರಣದಲ್ಲಿ ಹಾಗೂ ಇತ್ತೀಚಿನ ಡಿಜಿಟಲ್ ಪರಿಸರದಲ್ಲಿ ಬಳಕೆಯಾಗುವ ಸಂವಹನ ಭಾಷೆಗೆ ಇದು ಅಪಥ್ಯವಾಗಿರಬಹುದು ಅಥವಾ ಅನಪೇಕ್ಷಿತವಾಗಿರಲೂಬಹುದು.

ಸಾಮಾಜಿಕ-ಆರ್ಥಿಕ ನೆಲೆಯಲ್ಲಿ ಭಾಷೆ
ಈ ಕೀಳರಿಮೆಗೆ ಕೇವಲ ಆರ್ಥಿಕತೆಯೊಂದೇ ಕಾರಣವಾಗಿರಲಾರದು. ಭಾರತದಂತಹ ಶ್ರೇಣೀಕೃತ ಸಮಾಜದಲ್ಲಿ ಜಾತಿ-ವರ್ಗದ ಸ್ತರದಲ್ಲೂ ಸಹ ಇದು ಸಂಭವಿಸುತ್ತದೆ. ಕಲಿತ ಸಮಾಜವೊಂದು ಸಾಮಾಜಿಕ ಅಂತಸ್ತಿನ ಅಥವಾ ಶೈಕ್ಷಣಿಕ ಉನ್ನತಿಯ ಕಾರಣಕ್ಕಾಗಿ ತಾನು ಅನುಸರಿಸುವ ಸಂವಹನ ಭಾಷೆಯನ್ನೇ ಇಡೀ ಸಮಾಜ ಅನುಕರಿಸಬೇಕು ಎಂದು ಭಾವಿಸುವುದು ಈ ಜಾತಿ ವ್ಯವಸ್ಥೆಯ ಒಂದು ಲಕ್ಷಣ. ಇಲ್ಲಿ ಸಹಜವಾಗಿಯೇ ಔದ್ಯೋಗಿಕ-ಔದ್ಯಮಿಕ ಭಾಷೆಯಾಗಿ ಇಂಗ್ಲಿಷ್ ಪ್ರಾಧಾನ್ಯತೆ ಗಳಿಸುತ್ತದೆ. ಸರಕು ಮಾರುಕಟ್ಟೆಯ ವಾತಾವರಣೆಯಲ್ಲಿ ಔದ್ಯಮಿಕ ಭಾಷೆಯಾಗಿ ಕೆಲವೊಮ್ಮೆ ಹಿಂದಿ ಸಹ ಪ್ರಧಾನವಾಗಿಬಿಡುತ್ತದೆ. ಜಾಗತೀಕರಣ ಮತ್ತು ಮುಕ್ತ ಮಾರುಕಟ್ಟೆಯ ಪ್ರಭಾವದಿಂದ ಔದ್ಯಮಿಕ ಜಗತ್ತಿನ ವಿಸ್ತರಣೆಗೆ ಭಾಷೆ ಒಂದು ಅಡ್ಡಿಯಾಗಲು ಸಾಧ್ಯವಾಗುವುದಿಲ್ಲ ಹಾಗಾಗಿ ಅಲ್ಲಿ ಬಳಕೆಯಾಗುವ ಭಾಷೆಯೂ ಮಾರುಕಟ್ಟೆಗೆ ಸ್ವೀಕೃತವಾಗಿಬಿಡುತ್ತದೆ. ಈ ಮಾರುಕಟ್ಟೆ ಆವರಣದಲ್ಲಿ ಕೆಳಸ್ತರ ಸಮಾಜದ ʼ ಮಾತೃಭಾಷೆ ʼಯ ಬಳಕೆಯೇ ಕೀಳರಿಮೆಗೆ ಕಾರಣವಾಗುವ ಸಾಧ್ಯತೆಗಳಿರುತ್ತವೆ. ಕಚೇರಿಗಳಲ್ಲಿ, ಷಾಪಿಂಗ್ ಮಾಲ್ಗಳಲ್ಲಿ, ಸಾಧಾರಣ ಮಾರುಕಟ್ಟೆ ಜಗುಲಿಯಲ್ಲೂ ಇದರ ನೇರ ಪರಿಣಾಮವನ್ನು ಗುರುತಿಸಬಹುದು.

21ನೆಯ ಶತಮಾನದ ಡಿಜಿಟಲ್ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಮತ್ತು ವೈದ್ಯಕೀಯ ಜಗತ್ತಿನಲ್ಲಿ ನಿರ್ವಚಿಸುವುದೆಲ್ಲವೂ ಇಂಗ್ಲಿಷ್ ಭಾಷೆಯಲ್ಲೇ ಆಗಿರುವುದು ನಿರ್ವಿವಾದ ವಾಸ್ತವ. ಇದಕ್ಕೆ ಪರ್ಯಾಯ ಇಲ್ಲವೇ ಎಂದು ಯೋಚಿಸಿದಾಗ ಇಲ್ಲ ಎಂದೇ ಉತ್ತರಿಸಬೇಕಾಗುತ್ತದೆ. ಏಕೆಂದರೆ ಭಾರತೀಯ ಭಾಷೆಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಬೆಳೆದಿಲ್ಲ. ಇಂದಿನ ಮಾರುಕಟ್ಟೆಗೆ ಮುಂದಿನ ತಲೆಮಾರಿನ ಬದುಕಿಗೆ ಇದು ಬಹಳ ಮುಖ್ಯವಾಗುತ್ತದೆ. ಚೀನಾ ಸಹ ಮೂರು ದಶಕಗಳ ಹಿಂದೆ ಇಂಗ್ಲಿಷ್ ಬೋಧನೆಯನ್ನು ಪ್ರಾಥಮಿಕ ಹಂತದಿಂದ ಅಳವಡಿಕೊಂಡಿದ್ದರಿಂದಲೇ ಇಂದು ತಂತ್ರಜ್ಞಾನ ಕ್ರಾಂತಿಯ ಮುಂಚೂಣಿಯಲ್ಲಿದೆ. ಜರ್ಮನಿ ಮತ್ತು ಜಪಾನ್ ದೇಶಗಳನ್ನು ನಾವು ಭಿನ್ನ ನೆಲೆಯಲ್ಲಿ ನೋಡಬೇಕಾಗುತ್ತದೆ. ಅವೆರಡೂ ಸಹ ವಸಾಹತೀಕರಣಕ್ಕೆ ಮುನ್ನವೇ ಅಭಿವೃದ್ಧಿಹೊಂದಿದ ದೇಶಗಳಾಗಿದ್ದವು. ಜಪಾನ್ ಹೊರಗಿನ ತಂತ್ರಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆಗಳನ್ನು ಅಧರಿಸಿದ್ದರೆ, ಜರ್ಮನಿ ಸ್ವತಃ ವಿಜ್ಞಾನ-ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ಶತಮಾನಗಳ ಚರಿತ್ರೆಯನ್ನು ಹೊಂದಿತ್ತು.
ಜಪಾನ್ ತನ್ನ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಬೌದ್ಧಿಕವಾಗಿ ಭಾರತದಂತಹ ದೇಶಗಳನ್ನು ಅವಲಂಬಿಸುವುದರಿಂದ, ಅಲ್ಲೂ ಸಹ ಇತ್ತೀಚೆಗೆ ಇಂಗ್ಲಿಷ್ ಬೋಧನೆಯನ್ನು ಅಧಿಕೃತವಾಗಿ ಉತ್ತೇಜಿಸಲಾಗುತ್ತಿದೆ. ಇದರ ಮತ್ತೊಂದು ಬದಿಯಲ್ಲಿ ಥಾಯ್ಲೆಂಡ್, ವಿಯೆಟ್ನಾಂ ಮೊದಲಾದ ದೇಶಗಳು ಇಂದಿಗೂ ಇಂಗ್ಲಿಷ್ ಬಳಕೆಯನ್ನು ನಿರ್ಲಕ್ಷಿಸಿ ತಮ್ಮ ಸ್ಥಳೀಯ ಭಾಷೆಗಳನ್ನೇ ಉತ್ತೇಜಿಸುತ್ತಿರುವುದನ್ನು ಗಮನಿಸಿದರೆ, ಈ ದೇಶಗಳು ವಿಜ್ಞಾನ-ತಂತ್ರಜ್ಞಾನ-ಸಂಶೋಧನೆಯಲ್ಲಿ ಹಿಂದುಳಿದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಲ್ಯಾಟಿನ್ ಅಮೆರಿಕದ ದೇಶಗಳೂ ಸಹ ವಿಮೋಚನೆಯ ಶತಮಾನದ ನಂತರವೂ ವಿಶ್ವ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ. ಈ ದೇಶಗಳ ಮಾತೃಭಾಷಾ ಪ್ರೇಮವೊಂದೇ ಇದಕ್ಕೆ ಕಾರಣವಿರಲಾರದು ಆದಾಗ್ಯೂ, 21ನೆಯ ಶತಮಾನದಲ್ಲಿ ವಿಶ್ವಮಾರುಕಟ್ಟೆಯಲ್ಲಿ ಸ್ಥಾನಗಿಟ್ಟಿಸಲು ಅವಶ್ಯಕವಾದ ವೈಜ್ಞಾನಿಕ ಬೆಳವಣಿಗೆ ಈ ದೇಶಗಳಲ್ಲಿ ಸಾಧ್ಯವಾಗಿಲ್ಲ.
ಬದುಕು-ಭಾಷೆಯ ನಿಕಟ ಸಂಬಂಧಗಳು
ಈ ವಿರೋಧಾಭಾಸವನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಭಾರತದ ಸಂದರ್ಭದಲ್ಲಿ ಯಾವುದೇ ಭಾರತೀಯ ಭಾಷೆಯೂ ಸಹ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಭಾಷೆಯಾಗಿ ರೂಪುಗೊಳ್ಳುವುದು ಸಾಧ್ಯವಾಗಿಲ್ಲ. ಕನ್ನಡವೂ ಇದರಲ್ಲೊಂದು. ಹೀಗಿರುವಾಗ ಭಾರತದ ಯುವ ಸಮೂಹಕ್ಕೆ ತನ್ನ ಭವಿಷ್ಯವನ್ನು ಕಟ್ಟಿಕೊಳ್ಳಲು ಅಗತ್ಯವಾದ ಸಂವಹನ ಭಾಷೆ ಯಾವುದು ? ಇಂದಿಗೂ ಶೇಕಡಾ 60ರಷ್ಟು ಹಳ್ಳಿಗಳಿಂದ ಕೂಡಿರುವ ಭಾರತದಲ್ಲಿ ಯುವ ಸಮೂಹವೂ ಅಲ್ಲಿಂದಲೇ ಬೌದ್ಧಿಕವಾಗಿ-ಭೌತಿಕವಾಗಿ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ. ಇವರಲ್ಲಿ ಬಹುಸಂಖ್ಯಾತರು ತಳಸಮುದಾಯಗಳಿಂದಲೇ , ಅಂದರೆ ದಲಿತರು, ಅಲ್ಪಸಂಖ್ಯಾತರು, ಅತ್ಯಂತ ಹಿಂದುಳಿದ ವರ್ಗಗಳಿಂದ ಬಂದವರಾಗಿರುತ್ತಾರೆ. ಈ ಎಳೆಯರು ಜಾಗತಿಕ ಮಾರುಕಟ್ಟೆಗೆ ತೆರೆದುಕೊಳ್ಳದೆಯೇ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲಾಗುವುದಿಲ್ಲ. ಇಂಗ್ಲಿಷ್ ಸಂವಹನ ಸಾಮರ್ಥ್ಯ ಮತ್ತು ನಿರರ್ಗಳತೆ ಅವರ ಉದ್ಯೋಗ, ವ್ಯಾಪಾರ ಮತ್ತು ಸಾಮಾಜಿಕ-ಆರ್ಥಿಕ ಮೇಲ್ ಚಲನೆಯಲ್ಲಿ ನಿರ್ಣಾಯಕವಾಗಿಬಿಡುತ್ತದೆ. ಇಂತಿಪ್ಪ ಸನ್ನಿವೇಶದಲ್ಲಿ ಮಾತೃಭಾಷಾ ಮಾಧ್ಯಮದ ಮೂಲಕ ವಿಶ್ವವಿದ್ಯಾಲಯಗಳಿಂದ ಹೊರಬೀಳುವ ಯುವಸಂಕುಲಕ್ಕೆ ಮುಂದಿನ ದಾರಿ ಯಾವುದು ?

ಈ ಗಹನವಾದ ಪ್ರಶ್ನೆಗೆ ನಾವು ಉತ್ತರ ಶೋಧಿಸಬೇಕಿದೆ. ಇಂಗ್ಲಿಷ್ ಭಾಷೆಯನ್ನು ವಸಾಹತೀಕರಣದ ಮನಸ್ಥಿತಿಯಿಂದಲೇ ನೋಡುವ ಬದಲು, ಆಧುನಿಕ ಜಗತ್ತಿನ ಅಗತ್ಯತೆಗಳ ದೃಷ್ಟಿಯಿಂದ ನೋಡುವುದು ಮುಖ್ಯವಾಗುತ್ತದೆ. ಭಾವನಾತ್ಮಕವಾಗಿ ಮಾತೃಭಾ಼ಷೆಗೆ ಅಂಟಿಕೊಳ್ಳುವುದು ಸಮರ್ಥನೀಯ ಎನಿಸುವುದಿಲ್ಲ. ಇಂದಿಗೂ ಸಹ ಬೌದ್ಧಿಕವಾಗಿ ಅತ್ಯುನ್ನತ ಹಂತ ತಲುಪಿದವರೂ ಸಹ ಇಂಗ್ಲಿಷ್ ಸಂವಹನದ ಕೊರತೆಯಿಂದಲೇ ಹಿಂದೆ ಸರಿಯುವುದನ್ನು ಹಲವು ಸನ್ನಿವೇಶಗಳಲ್ಲಿ ಕಾಣುತ್ತಿದ್ದೇವೆ. ಇದನ್ನು ಇಂಗ್ಲಿಷ್ ಭಾಷೆಯ ಹಿರಿಮೆ ಎಂದೆಣಿಸುವುದರ ಬದಲು, ಭಾರತದ ಅಥವಾ ಮತ್ತಾವುದೇ ದೇಶದ ಸ್ಥಳೀಯ ಭಾಷೆಗಳು ವಿಜ್ಞಾನ-ತಂತ್ರಜ್ಞಾನ-ಸಂಶೋಧನೆಗಳಿಗೆ ಅತ್ಯವಶ್ಯವಾದ ಪರಿಭಾಷೆಯನ್ನು ಏಕೆ ಬೆಳೆಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಕನ್ನಡದ ಮಟ್ಟಿಗೆ ಇದು ಕಣ್ಣಿಗೆ ರಾಚುವ ವಾಸ್ತವ ಅಲ್ಲವೇ ?
ಈ ವಿಭಿನ್ನ ಆಯಾಮಗಳಿಂದ ನೋಡಿದಾಗ, ಮಾತೃಭಾಷೆ ಅಥವಾ ತಾಯ್ನುಡಿಯನ್ನು ಮಕ್ಕಳ ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯವಾಗಿ ಬಳಸುತ್ತಲೇ, ಇದಕ್ಕೆ ಸಮಾನಾಂತರವಾಗಿ ಕಲಿಕೆಯ ಭಾಷೆಯಾಗಿ ಇಂಗ್ಲಿಷ್ ಭಾಷೆಯನ್ನೂ ಬೋಧಿಸುವ ಅವಶ್ಯಕತೆ ಎದ್ದುಕಾಣುತ್ತದೆ. ಇಲ್ಲಿ ಕೊರತೆ ಇರುವುದು ಇಂಗ್ಲಿಷ್ ಬೋಧಕರಲ್ಲಿ. ಮಕ್ಕಳಿಗೆ ತಮ್ಮ ನಿತ್ಯಬದುಕಿನ ಸಾಮಾಜಿಕ-ಕೌಟುಂಬಿಕ ನೆಲೆಯಲ್ಲಿ ಅವರವರ ಮಾತೃಭಾಷೆ/ತಾಯ್ನುಡಿಯನ್ನೇ ಬಳಸುವ ಒಂದು ಪರಂಪರೆಯನ್ನು ಪೋಷಿಸುತ್ತಲೇ, ಹೊರಜಗತ್ತಿಗೆ ತೆರೆದುಕೊಳ್ಳುವ ವಿಕಸನದ ಹಾದಿಯಲ್ಲಿ ಇಂಗ್ಲಿಷ್ ಭಾ಼ಷಾ ಸಂವಹನ ಕೌಶಲವನ್ನು ಬೆಳೆಸುವುದೂ ಮುಖ್ಯವಾಗುತ್ತದೆ. ಆಗ ಶಾಲಾ ಕಾಲೇಜುಗಳಿಂದ ಹೊರಬರುವ ಮಕ್ಕಳು ತಮ್ಮ ಸಂವಹನದ ಕೊರತೆಯಿಂದಾಗಿಯೇ ಮೇಲ್ ಚಲನೆಯಿಂದ ವಂಚಿತರಾಗುವುದು ತಪ್ಪುತ್ತದೆ. ಹೀಗೆ ವಂಚಿತರಾಗುವವರ ಪೈಕಿ ಬೃಹತ್ ಸಂಖ್ಯೆಯಲ್ಲಿ ಕಾಣುವುದು ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ತಳಸಮುದಾಯಗಳು ಮತ್ತು ಅಂಚಿನಲ್ಲಿರುವ ಸಮುದಾಯಗಳೇ ಅಲ್ಲವೇ ?

ಭವಿಷ್ಯದ ಮುಂಗಾಣ್ಕೆ
ವರ್ತಮಾನದ ಜಗತ್ತಿನಲ್ಲಿ ನಿಂತು ಸಮಕಾಲೀನ ಯುವ ಜಗತ್ತಿನ ಭವಿಷ್ಯದ ಬಗ್ಗೆ ಯೋಚಿಸುವಾಗ ನಮ್ಮ ಕಣ್ಣೋಟ ಮತ್ತು ಮುನ್ನೋಟ ಈ ಅವಕಾಶವಂಚಿತರ ಮೇಲಿರಬೇಕಲ್ಲವೇ ? ಭಾವನಾತ್ಮಕ ನೆಲೆಯಲ್ಲಿ ನಿಂತು ಅಥವಾ ಸಮಾಜದ ಮೇಲ್ಪದರವನ್ನು ಗಮನಿಸುತ್ತಾ, ಭೂತದತ್ತ ನೋಡುತ್ತಾ ಹೋದರೆ ಬೌದ್ಧಿಕವಾಗಿ ಸಮಾಜವೇ ಜಡಗಟ್ಟಿಬಿಡುತ್ತದೆ. ಭಾಷೆಯ ಅಳಿವು ಉಳಿವು ಜನಜೀವನದ ನಿತ್ಯ ಚಟುವಟಿಕೆಗಳನ್ನಷ್ಟೇ ಅವಲಂಬಿಸುವುದಿಲ್ಲ, ಅಧ್ಯಯನ, ಸಂಶೋಧನೆ ಮತ್ತು ಬೌದ್ಧಿಕ ವಿಸ್ತರಣೆಯನ್ನೂ ಅವಲಂಬಿಸುತ್ತದೆ. ಕನ್ನಡದ ಈವರೆಗಿನ ಬೆಳವಣಿಗೆಯನ್ನು ಸಮ್ಮಾನಿಸುತ್ತಲೇ ಹೇಳುವುದಾದರೆ ಈ ದಿಕ್ಕಿನಲ್ಲಿ ನಾವು ಕ್ರಮಿಸಬೇಕಾದ ಹಾದಿ ಬಹಳ ದೂರ ಇದೆ. ಆದರೆ ಈ ಕಾರಣಕ್ಕೆ ವರ್ತಮಾನದ ಮಕ್ಕಳ ಹಿತಾಸಕ್ತಿಯನ್ನು ಕಡೆಗಣಿಸಲಾಗುವುದಿಲ್ಲ. ಎಲ್ಲವನ್ನೂ ಮೀರಿ ಮನುಷ್ಯ ಸಮಾಜಕ್ಕೆ ಬೇಕಿರುವುದು ಸಾಮಾಜಿಕ ಅಸ್ತಿತ್ವ, ಬೌದ್ಧಿಕ ಮುಂಗಾಣ್ಕೆ ಮತ್ತು ಆರ್ಥಿಕ ಮುಂಚಲನೆ.

ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಯೋಚಿಸಿದಾಗ, ಬೌದ್ಧಿಕ ನೆಲೆಯಲ್ಲಿ ಸಮಗ್ರ ಭಾಷಾ ನೀತಿಯನ್ನು ಕರ್ನಾಟಕ ಅಳವಡಿಸಿಕೊಳ್ಳಬೇಕಿದೆ. ಇಲ್ಲಿ ಗುಲಾಮೀ ಭಾಷೆ ಎಂದು ಪರಿಭಾವಿಸಿ ಅಥವಾ ವಸಾಹತು ಭಾಷೆ ಎಂಬ ಕಾರಣಕ್ಕೆ ಇಂಗ್ಲಿಷ್ ಭಾಷೆಯನ್ನು ಹೊರಗಿಡುವುದು ಆತ್ಮಘಾತುಕವಾಗಿಬಿಡುತ್ತದೆ. ಇಂಗ್ಲಿಷ್ ಭಾಷೆಯನ್ನು ಕನ್ನಡೀಕರಿಸುವ, ಪಾರಿಭಾಷಿಕ ಪದಗಳನ್ನು ಮತ್ತಷ್ಟು ಸರಳೀಕರಿಸುವ ಪ್ರಯತ್ನಗಳೊಂದಿಗೇ, ಸಾಮಾನ್ಯ ಸಂವಹನದಲ್ಲಿ ಈ ಭಾಷೆಯನ್ನೂ ಒಳಗೊಳ್ಳುವ ಮೂಲಕ, ಯುವ ಸಂಕುಲಕ್ಕೆ ನಾವು ಸ್ಪಂದಿಸಬೇಕಿದೆ. ಇದರಿಂದ ಕನ್ನಡದ ಅಸ್ಮಿತೆಗಾಗಲೀ, ಭವಿಷ್ಯಕ್ಕಾಗಲೀ ಧಕ್ಕೆ ಉಂಟಾಗುತ್ತದೆ ಎನ್ನುವುದು ಮೆಲ್ನೋಟಕ್ಕೆ ಸರಿ ಎನಿಸಿದರೂ, ಗಂಭೀರವಾಗಿ ಯೋಚಿಸಿದಾಗ ಅದು ಭಾವನಾತ್ಮಕ ಎನಿಸುತ್ತದೆ. ವಾಸ್ತವಿಕ ಆಲೋಚನೆಗಳೊಂದಿಗೆ ತೆರೆದ ಮನಸ್ಸಿನಿಂದ ಭಾಷಾ ನೀತಿ-ಶಿಕ್ಷಣ ಮಾಧ್ಯಮ-ಭಾಷಾ ಬಳಕೆ ಮತ್ತು ಬೆಳವಣಿಗೆಯ ಸುತ್ತ ಒಂದು ಸಮಗ್ರ ಚಿಂತನೆಯನ್ನು ರೂಪಿಸುವುದು ಈ ಹೊತ್ತಿನ ತುರ್ತು.
-೦-೦-೦-