ಬೆಳಗಾವಿಯಲ್ಲಿ ರಾಯಣ್ಣನ ಮೂರ್ತಿ ಭಗ್ನ ಹಾಗೂ ನಂತರದ ರಾಜಕೀಯ ಪ್ರೇರಿತ ಹೇಳಿಕೆಗಳ ಕುರಿತು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಕಿಡಿಕಾರಿದ್ದು, ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಏನು ದೇವರಲ್, ಕಾಂಗ್ರೆಸ್ನವರು ಈಗ ಉತ್ತರ ಕೊಡಬೇಕು. ಶಿವಸೇನೆ ಹಾಗೂ ಕಾಂಗ್ರೆಸಿನ ಜಂಟಿ ಸರ್ಕಾರ ಮಹಾರಾಷ್ಟ್ರದಲ್ಲಿದೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ರಾಯಣ್ಣನ ಮೂರ್ತಿ ಭಗ್ನ ಹಾಗೂ ನಂತರದ ರಾಜಕೀಯ ಪ್ರೇರಿತ ಹೇಳಿಕೆಗಳ ಕುರಿತು ಶಿವಮೊಗ್ಗದಲ್ಲಿಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಮಾತನಾಡಿ, ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಏನು ದೇವರಲ್, ಕಾಂಗ್ರೆಸ್ನವರು ಈಗ ಉತ್ತರ ಕೊಡಬೇಕು. ಶಿವಸೇನೆ ಹಾಗೂ ಕಾಂಗ್ರೆಸಿನ ಜಂಟಿ ಸರ್ಕಾರ ಮಹಾರಾಷ್ಟ್ರದಲ್ಲಿದೆ. ಇಂಥಹ ಗೂಂಡಾಗಿರಿಯನ್ನ ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ತಡೆದುಕೊಳ್ಳುವುದಿಲ್ಲ. ನಾವು ಇನ್ನೊಬ್ಬರ ಸುದ್ದಿಗೆ ಹೋಗೋದಿಲ್ಲ, ನಮ್ಮ ಸುದ್ದಿಗೆ ಬಂದರೆ ಬಿಡೋದಿಲ್ಲ. ಕರ್ನಾಟಕದ ನೆಲ, ಜಲ ಭಾಷೆ ವಿಚಾರಕ್ಕೆ ಎಲ್ಲಾ ಕ್ಷಣಗಳಲೂ ನಾವು ಒಂದಾಗೇ ಇದ್ದೀವಿ. ಆದರೆ ಗೂಂಡಾಗಿರಿ ಮಾಡಿದವರು, ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟಿರೋದು ಕೂಡ ಅವರೇ, ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನ ಮಾಡಿದವರೂ ಸಹ ಅವರೇ, ಇಂಥವರ ಮೇಲೆ ನಾವು ಕ್ರಮ ಕೈಗೊಳ್ತೀವಿ ಬಿಡೋದಿಲ್ಲ. ಮಹಾರಾಷ್ಟ್ರದಲ್ಲಿ ಧ್ವಜ ಸುಟ್ಟ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬಳಿ ಮಾತಾಡಿ, ಆ ಕಿಡಿಗೇಡಿಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡುತ್ತೇವೆ ಎಂದಿದ್ದಾರೆ.
ಸಂಗೊಳ್ಳಿ ರಾಯಣ್ಣನ ಪ್ರತಿಮೆ ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಷಾನೇಂದ್ರ ಈಗಾಗಲೇ ೨೭ ಜನ ಆರೋಪಿಗಳನ್ನ ಅರೆಸ್ಟ್ ಮಾಡಿಸಿದ್ದಾರೆ. ಜ್ಞಾನೇಂದ್ರ ತೆಗೆದುಕೊಂಡ ದಿಟ್ಟ ನಿಲುವಿಗೆ ನಾನು ನಿಜವಾಗಿಯೂ ಅಭಿನಂದನೆ ಸಲ್ಲಿಸುತ್ತೇನೆ. ಯಾರ್ಯಾರ ಮೇಲೆ ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನ ಖಂಡಿತಾ ನಾವು ತೆಗೆದುಕೊಳ್ಳುತ್ತೇವೆ. ಕರ್ನಾಟಕ ಹಾಗೂ ಬೆಳಗಾವಿ ಗಡಿ ವಿವಾದದ ಪ್ರಶ್ನೆಯೇ ಉದ್ಭವವಾಗೋದಿಲ್ಲ. ಈಗಾಗಲೇ ಮಹಾಜನ್ ವರದಿ ಕೈ ಸೇರಿದೆ. ಮಹಾಜನ್ ವರದಿಯನ್ನ ಇಡೀ ದೇಶವೇ ಒಪ್ಪಿದೆ. ಮಹಾರಾಷ್ಟ್ರದವರು ಪ್ರಶ್ನೆ ಮಾಡೋದಕ್ಕೆ ಏನೂ ಉಳಿದಿಲ್ಲ. ಈ ಕುರಿತಂತೆ ಯಾವುದೇ ಉಸ್ತುವಾರಿ ನೇಮಕವೂ ನಮ್ಮ ಮುಂದೆ ಇಲ್ಲ ಎಂದು ಈಶ್ವರಪ್ಪ ಹೇಳಿದರು.
ಬೆಳಗಾವಿ ಘಟನೆಗಳನ್ನ ರಾಜಕಾರಣಕ್ಕೆ ಎಳೆತಂದು ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮಧ್ಯ ವಾಗ್ಝುದ್ಧ ಆರಂಭವಾಗಿದೆ. ಡಿಕೆ ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಸಿಟಿ ರವಿ ಲೂಟಿ ರವಿ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಸಿಟಿ ರವಿ ಚಿಕ್ಕಮಗಳೂರಿನಲ್ಲಿ ಮಾತನಾಡಿ, ಡಿಕೆ ಶಿವಕುಮಾರ್ ಮಾಜಿ ರೌಡಿ ಕೊತ್ವಾಲ್ನ ಶಿಷ್ಯ ಎಂದು ಹೇಳಿದ್ದರು. ಈ ಕುರಿತು ಸಚಿವ ಈಶ್ವರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಬಗ್ಗೆ ಏನು ಹೇಳಬೇಕೋ ನನಗೆ ಗೊತ್ತಾಗ್ತಿಲ್ಲ. ಡಿಕೆ ಶಿವಕುಮಾರ್ ಸಾಚ ಅಲ್ಲ. ಸಿಟಿ ರವಿ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯದರ್ಶಿ. ಅವರ ಮೇಲೆ ಒಂದೇ ಒಂದು ಪ್ರಕರಣ ಇಲ್ಲ. ಅವರೇನು ಡಿಕೆ ಶಿವಕುಮಾರ್ ರಂತೆ ತಿಹಾರ್ ಜೈಲಿಗೆ ಹೋಗಿ ಬಂದವರಲ್ಲ. ಅಂಥವರ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡುವ ನೈತಿಕತೆ ಇಲ್ಲ. ಸಿಟಿ ರವಿ ಲೂಟಿ ರವಿ ಎಂದು ಹೇಗೆ ಹೇಳಿಕೆ ನೀಡುತ್ತಾರೆ. ತಿಹಾರ್ ಜೈಲಿಗೆ ಹೋಗಿ ಬಂದವರೂ ಡಿಕೆ ಶಿವಕುಮಾರ್. ನಿಮ್ಮ ಮನೆಯಲ್ಲಿ ಕಂತೆ ಕಂತೆ ಹಣ ಇಟ್ಟಿದ್ದು ಕರ್ನಾಟಕದ ಜನ ಟಿವಿಯಲ್ಲಿ ನೋಡಿದ್ದಾರೆ. ಪ್ರಕರಣ ಇನ್ನೂ ನಡೀತಾ ಇದೆ. ಡಿಕೆ ಶಿವಕುಮಾರ್ ಇನ್ನೂ ಜಾಮೀನಿನ ಮೇಲೆ ಇದ್ದಾರೆ. ಇಂಥಹ ಆರೋಪಗಳನ್ನ ಹೊತ್ತುಕೊಂಡ ಡಿಕೆ ಶಿವಕುಮಾರ್ ಸಿಟಿ ರವಿ ಅವರ ಬಗ್ಗೆ ಮಾತಾಡಿದ್ದು ಅಕ್ಷಮ್ಯ. ಡಿಕೆ ಶಿವಕುಮಾರ್ಗೆ ಏನಾದರೂ ಮಾನ ಮರ್ಯಾದೆ ಇದ್ದರೆ ಸಿಟಿ ರವಿ ಹಾಗೂ ರಾಜ್ಯದ ಜನರ ಕ್ಷಮೆಯಾಚಿಸಬೇಕು.