ಕೃಷ್ಣಮಣಿ
ಲೋಕಸಭಾ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗಿದೆ, ಎಲ್ಲಾ ಪಕ್ಷಗಳು ಜನರ ಮನಸ್ಸು ಗೆಲ್ಲುವುದಕ್ಕೆ ಭಾರೀ ಕಸರತ್ತು ಮಾಡಿವೆ. ಈ ನಡುವೆ ಬಿಜೆಪಿ ಹಾಲಿ ಸಂಸದ ಮತಯಾಚನೆ ವೇಳೆ ಯುವತಿಯ ಕೆನ್ನೆಗೆ ಮುತ್ತು ಕೊಟ್ಟಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಪಶ್ಚಿಮ ಬಂಗಾಳದ ಮಾಲ್ಡಾ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಗೇನ್ ಮುರ್ಮು (Khagen_murmu) ಮುತ್ತು ಕೊಟ್ಟು ಎಡವಟ್ಟು ಮಾಡಿಕೊಂಡಿರುವ ಸಂಸದ. ಚಂಚಲ್ ವ್ಯಾಪ್ತಿಯ ಶ್ರಿಹಿಪುರ್ನಲ್ಲಿ ಚುನಾವಣಾ ಪ್ರಚಾರ ಮಾಡುವ ವೇಳೆ ಸ್ಥಳೀಯ ಯುವತಿಯ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಇದು ಕಾಗೇನ್ ಮುರ್ಮು ಫೇಸ್ಬುಕ್ ಪೇಜ್ನಲ್ಲಿ ಲೈವ್ ಸ್ಟ್ರೀಮ್ ಆಗಿದೆ. ಆ ಬಳಿಕ ವಿಡಿಯೋ ಡಿಲೀಟ್ ಮಾಡಲಾಗಿದೆ.
ಇದು ಸ್ತ್ರೀಯರಿಗೆ ‘ಮೋದಿ ಕಾ ಪರಿವಾರ’ದ ಗೌರವ!!
ಫೋಟೋ ಹಾಕಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ (TMC) ಪ್ರಧಾನಿ ಮೋದಿ ಬೇಟಿ ಬಚಾವೋ ಬೇಟಿ ಪಡಾವೋ ಆಂಧೋಲನ ಉಲ್ಲೇಖಿಸಿ ಟ್ವೀಟ್ ಮಾಡಿದೆ. ಬಿಜೆಪಿ ಮಹಿಳೆಯರಿಗೆ ಕೊಡುವ ಗೌರವ ಹೇಗಿದೆ ನೋಡಿ, ಮಹಿಳಾ ವಿರೋಧಿ ಎನ್ನುವುದಕ್ಕೆ ಕೊರತೆಯಿಲ್ಲ ಎಂದಿದೆ. ನೀವು ಏನನ್ನು ನೋಡುತ್ತಿದ್ದೀರಿ ಅದನ್ನು ಸತ್ಯವಾಗಲೂ ನಂಬುವುದಿಲ್ಲ, ಆದರೂ ಅವರು ಬಿಜೆಪಿ ಹಾಲಿ ಸಂಸದ ಹಾಗು ಬಿಜೆಪಿ ಅಭ್ಯರ್ಥಿ ಕಾಗೇನ್ ಮುರ್ಮು ಅವರೇ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಮೋದಿ ಕಾ ಪರಿವಾರ (Modi Ka Parivar) ನಾರಿಯರಿಗೆ ಕೊಡುವ ಗೌರವ ಇದಾಗಿದೆ ಎಂದು ವ್ಯಂಗ್ಯ ಮಾಡಿದೆ. ಆದರೆ ಕಾಗೇನ್ ಮುರ್ಮು ಮಾತ್ರ ಸಮರ್ಥನೆ ಮಾಡಿಕೊಂಡಿದ್ದು, ಮಗುವಿಗೆ ಕೊಡುವ ರೀತಿಯಲ್ಲಿ ಭಾವಿಸಿದ್ದೆ. ಇದರಲ್ಲಿ ತಪ್ಪು ತಿಳಿವುದು ಬೇಡ ಎಂದಿದ್ದಾರೆ.
‘ಬಿಜೆಪಿ ನಾಯಕರಿಂದ ನಿಮ್ಮ ಮಗಳನ್ನು ರಕ್ಷಿಸಿಕೊಳ್ಳಿ’
ರಾಜ್ಯ ಕಾಂಗ್ರೆಸ್ ಕೂಡ ಕಾಗೇನ್ ಮುರ್ಮು ಮುತ್ತು ಕೊಟ್ಟಿದ್ದನ್ನು ಟೀಕಿಸಿದ್ದು, ಮಹಾಜನಗಳೇ, ಬಿಜೆಪಿಯವರಿಂದ ನಿಮ್ಮ ನಿಮ್ಮ ಮನೆಯ “ಬೇಟಿ ಬಚಾವ್” ಮಾಡಿಕೊಳ್ಳಿ ಎಂದು ವ್ಯಂಗ್ಯ ಮಾಡಿದೆ. ಚುನಾವಣಾ ಪ್ರಚಾರದ ವೇಳೆ ಮತ ಕೇಳುವ ಬದಲು ಮುತ್ತು ನೀಡಿ ಯುವತಿಯೊಬ್ಬರಿಗೆ ಸಾರ್ವಜನಿಕವಾಗಿಯೇ ಲೈಂಗಿಕ ಕಿರುಕುಳ ನೀಡಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ನಂತಹ ಮಹಿಳಾ ಪೀಡಕನನ್ನು ಸಮರ್ಥಿಸುವ, ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು ರಕ್ಷಣೆ ಮಾಡಿ ಹೂವಿನ ಹಾರ ಹಾಕಿ ಸ್ವಾಗತ ಮಾಡುವ ಬಿಜೆಪಿಯಿಂದ ದೇಶದ ಮಹಿಳೆಯರ ಘನತೆ, ಗೌರವ ಉಳಿಯುವುದು ಸಾಧ್ಯವಿಲ್ಲ ಎಂದು ಕುಟುಕಿದೆ. ಅತಿ ಹೆಚ್ಚು ಅತ್ಯಾಚಾರ ಆರೋಪ ಹೊತ್ತಿರುವವರ ಪಕ್ಷ ಬಿಜೆಪಿ, ಅತಿ ಹೆಚ್ಚು ಮಹಿಳಾ ಪೀಡಕರಿರುವ ಪಕ್ಷ ಬಿಜೆಪಿ, ಅತಿ ಹೆಚ್ಚು ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾದವರ ಪಕ್ಷ ಬಿಜೆಪಿ. ಇಂತಹ ದುರುಳರ ಸಾಮ್ರಾಜ್ಯವಾಗಿರುವ ಬಿಜೆಪಿಯವರಿಂದ “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ” ಎಂಬ ಸಂಸ್ಕೃತಿಗೆ ಅರ್ಥ ಸಿಗಲು ಸಾಧ್ಯವೇ? ಎಂದು ಪ್ರಶ್ನಿಸಿದೆ.
ಮುತ್ತು ಕೊಟ್ಟಿದ್ದರಲ್ಲಿ ತಪ್ಪೇನಿದೆ..? ಯುವತಿಯ ಪ್ರಶ್ನೆ..
ಕಾಗೇನ್ ಮುರ್ಮು ಮುತ್ತು ಕೊಟ್ಟ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗ್ತಿದ್ದ ಹಾಗೆ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾಗಿದ್ದು, ಮಾನಹಾನಿ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಿಸುವ ಬಗ್ಗೆ ಕಾಗೇನ್ ಮುರ್ಮು ಹೇಳಿದ್ದಾರೆ. ಇನ್ನು ಮುತ್ತು ಕೊಟ್ಟ ಬಗ್ಗೆ ಯುವತಿ ಪ್ರತಿಕ್ರಿಯೆ ನೀಡಿದ್ದು, ಮುತ್ತು ನೀಡಿದ ಸಂದರ್ಭದಲ್ಲಿ ನನ್ನ ಜೊತೆಗೆ ನನ್ನ ಅಪ್ಪ ಅಮ್ಮನೂ ಇದ್ದರು. ಅವರು ನನ್ನನ್ನು ಮಗಳಂತೆ ಭಾವಿಸಿ ಮುತ್ತು ಕೊಟ್ಟಿದ್ದರಲ್ಲಿ ತಪ್ಪೇನಿದೆ..? ಎಂದು ಪ್ರಶ್ನಿಸಿದ್ದಾರೆ. ಆದರೆ ಕಾಂಗ್ರೆಸ್ (Congress) ಹಾಗು ಟಿಎಂಸಿ ನಾಯಕರ ಟೀಕಾಸ್ತ್ರಕ್ಕೆ ಆಹಾರ ಸಿಕ್ಕಂತಾಗಿದೆ. ಆದರೂ ಸಾರ್ವಜನಿಕವಾಗಿ ಮುತ್ತು ಕೊಟ್ಟಿರುವುದು ಭಾರತೀಯರು ಸಹಿಸಿಕೊಳ್ಳುವುದು ಕೊಂಚ ಕಷ್ಟವೇ ಸರಿ. ಏನಂತೀರಾ..?