ವಿಶ್ವಗುರು ಆಗ ಹೊರಟಿರುವ ಭಾರತಕ್ಕೆ ಕೆನಡಾ ಮಾಡುತ್ತಿರುವ ಆರೋಪಗಳು, ಹದಗೆಡುತ್ತಿರುವ ದ್ವಿಪಕ್ಷೀಯ ಸಂಬಂಧಗಳು ಕಗ್ಗಂಟಾಗಿ ಪರಿಣಮಿಸಿದೆ. ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ನಿರ್ವಹಿಸಿ ವಿಶ್ವದ ಗಮನ ಸೆಳೆಯುತ್ತಿದ್ದ ಭಾರತ ಕೆಲವೇ ದಿನಗಳಲ್ಲಿ ಹೊಸ ಅಂತರಾಷ್ಟ್ರೀಯ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ. ತನ್ನ ನಾಗರಿಕ ಹರ್ದೀಪ್ ಸಿಂಗ್ ನಿಜ್ಜರ್ನನ್ನು (ಭಾರತದ ಪಾಲಿಗೆ ಖಲಿಸ್ತಾನಿ ಉಗ್ರ) ಭಾರತ ಹತ್ಯೆ ಮಾಡಿದೆ ಎಂದು ಕೆನಡಾ ಪ್ರಧಾನಿ ಆರೋಪಿಸಿದಾಗಿನಿಂದ ಈ ಬಿಕ್ಕಟ್ಟು ಉಲ್ಬಣಗೊಂಡಿದೆ.
ಈ ವರ್ಷದ ಜೂನ್ನಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ನ ಹತ್ಯೆ ಪ್ರಕರಣದಲ್ಲಿ ಭಾರತ ಭಾಗಿಯಾಗಿದೆ ಎಂದು ಆರೋಪಿಸಿದ ಕೆನಡಾ, ಇದಕ್ಕೆ ಪ್ರತೀಕಾರವಾಗಿ ಒಟ್ಟಾವದಲ್ಲಿರುವ ಭಾರತದ ರಾಜತಾಂತ್ರಿಕನನ್ನು ದೇಶದಿಂದ ಉಚ್ಛಾಟಿಸಿತ್ತು.

ಅದರ ಬೆನ್ನಲ್ಲೇ ಭಾರತವೂ ಕೆನಡಾ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಛಾಟನೆ ಮಾಡಿ, ದೇಶ ತೊರೆಯಲು ಐದು ದಿನಗಳ ಗಡುವು ನೀಡಿತ್ತು.
ಅಷ್ಟಕ್ಕಾಗುವಾಗಲೇ ಪ್ರತಿಕ್ರಿಯಿಸಿದ ಕೆನಡಾ ಪ್ರಧಾನಿ, ಭಾರತಕ್ಕೆ ಅಗತ್ಯವಿಲ್ಲದಿದ್ದರೆ ಪ್ರವಾಸ ಮಾಡಬೇಡಿ ಎಂದು ತನ್ನ ಪ್ರಜೆಗಳಿಗೆ ಕರೆ ನೀಡಿದ್ದರು. ಅಲ್ಲದೆ, ಪ್ರಸ್ತುತ ಎರಡು ದೇಶಗಳ ನಡುವಿನ ಹದಗೆಟ್ಟಿರುವ ಸಂಬಂಧದಿಂದ ನಿಮಗೆ ಅಲ್ಲಿ ಅಪಾಯವಿದೆ ಎನ್ನುವ ಸೂಚನೆಯನ್ನೂ ಅವರು ರವಾನಿಸಿದ್ದರು.
ಈ ನಡುವೆ, ಕೆನಡಾದಲ್ಲಿ ಭಾರತ ವಿರೋಧಿ ಮನಸ್ಥಿತಿ ತೀವ್ರಗೊಳ್ಲುತ್ತಿದ್ದು, ಖಲಿಸ್ತಾನಿ ಪರ ಸಿಖ್ಖರು ಕೆನಡಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಅಲ್ಲಿ ಭಾರತೀಯರಿಗೆ, ಮುಖ್ಯವಾಗಿ ಹಿಂದೂಗಳಿಗೆ ಅಪಾಯವಿದೆ, ಭಾರತ ವಿರೋಧಿ ಹಿಂಸಾಚಾರ ನಡೆಯಬಹುದು, ಭಾರತೀಯರು ಹಾಗೂ ಖಲಿಸ್ತಾನಿಯರ ನಡುವೆ ಘರ್ಷನೆಗಳು ಕೂಡಾ ನಡೆಯಬಹುದು ಎಂದು ಭಾರತೀಯ ಗುಪ್ತಚರ ಮಾಹಿತಿ ನೀಡಿದೆ.
ಇದರ ಬೆನ್ನಲ್ಲೇ ಸೆ,20 ರಂದು ಕೆನಡಾದಲ್ಲಿರುವ ಭಾರತೀಯರಿಗೆ ಭಾರತ ಸರ್ಕಾರ ಎಚ್ಚರಿಕೆ ರವಾನಿಸಿದ್ದು, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ನಿಮಗೆ ಕೆನಡಾ ಸುರಕ್ಷಿತವಲ್ಲ, ಮುಖ್ಯವಾಗಿ ಕೆನಡಾದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಜಾಗರೂಕರಾಗಿರಬೇಕು ಎಂಬ ಸಂದೇಶ ರವಾನಿಸಿದೆ.
ಪರಿಸ್ಥಿತಿ ಬಿಗಡಾಯಿಸುತ್ತಿರುವಂತೆಯೇ ಭಾರತದಲ್ಲಿ ನಿಷೇಧಕ್ಕೊಳಗಾಗಿರುವ ʼಸಿಖ್ ಫಾರ್ ಜಸ್ಟೀಸ್ʼ ಸಂಘಟನೆಯ ನಾಯಕನೊಬ್ಬ ಭಾರತೀಯ ಹಿಂದೂಗಳಿಗೆ ಬೆದರಿಕೆ ಒಡ್ಡಿದ್ದು, ಕೆನಡಾ ತೊರೆಯುವಂತೆ ಸೂಚಿಸಿದ್ದಾನೆ. ಇದರಿಂದಾಗಿ ಒಟ್ಟಾರೆ, ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ಉಭಯ ದೇಶಗಳಲ್ಲಿರುವ ಪ್ರವಾಸಿಗರು, ಅವರ ಕುಟುಂಬಸ್ಥರು ಆತಂಕದಲ್ಲಿ ದಿನದೂಡುತ್ತಿದ್ದಾರೆ.

ನಿಜ್ಜರ್ ಹತ್ಯೆಯಲ್ಲಿ ಭಾರತದ ಅಧಿಕಾರಿಗಳ ಕೈವಾಡವಿದೆಯೆಂದು ಕೆನಡಾ ಸರ್ಕಾರ ಬಲವಾಗಿ ಆರೋಪಿಸಿದ್ದು, ಈ ಬಗ್ಗೆ ತಮ್ಮಲ್ಲಿ ವಿಶ್ವಾಸಾರ್ಹ ಸಾಕ್ಷಿ ಇದೆ ಎಂದು ಪ್ರತಿಪಾದಿಸಿದೆ. ಭಾರತ ಸರ್ಕಾರ ಈ ಆರೋಪಗಳನ್ನು ತಳ್ಳಿ ಹಾಕಿದ್ದರೂ, ಕೆನಡಾ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಹೀಗಾಗಿ, ಉಭಯ ದೇಶಗಳ ಬಿಕ್ಕಟ್ಟು ತಣ್ಣಗಾಗುವ ಲಕ್ಷಣಗಳೇನೂ ಕಾಣಿಸುತ್ತಿಲ್ಲ.
ಅದಲ್ಲದೆ, ಭಾರತದ ಸಾರ್ವಭೌಮತೆಗೆ ಸವಾಲಾಗಿರುವಂತಹ ಖಲಿಸ್ತಾನಿಗಳಿಗೆ ಕೆನಡಾ ಸರ್ಕಾರ ಬೆಂಬಲ ನೀಡುತ್ತಿದೆ ಎಂಬ ಅಸಮಾಧಾನವೂ ಭಾರತಕ್ಕಿದೆ. ಆದರೆ, ಕೆನಡಾ ಖಲಿಸ್ತಾನಿ ಪ್ರತ್ಯೇಕತವಾದಿಗಳನ್ನು ತನ್ನ ನಾಗರಿಕರು ಎಂದು ಹೇಳುತ್ತಿದೆ. ಇದು ಸಮಸ್ಯೆ ಸದ್ಯಕ್ಕೆ ಇತ್ಯರ್ಥವಾಗುವ ಸಾಧ್ಯತೆಗಳನ್ನು ಇನ್ನಷ್ಟು ತಳ್ಳಿ ಹಾಕುತ್ತಿದೆ.
ಯಾರು ಈ ಹರ್ದೀಪ್ ಸಿಂಗ್ ನಿಜ್ಜರ್?
ಅಷ್ಟಕ್ಕೂ ಎರಡು ದೇಶಗಳ ನಡುವೆ ಸಮಸ್ಯೆ ಬರುವಂತೆ ಮಾಡಿರುವ ಹರ್ದೀಪ್ ಸಿಂಗ್ ನಿಜ್ಜರ್ ಭಾರತದ ಪಾಲಿಗೆ ವಾಂಟೆಡ್ ಉಗ್ರಗಾಮಿ. ಖಲಿಸ್ತಾನಿಯರ ಹೋರಾಟಕ್ಕೆ ನಾಯಕತ್ವ ನೀಡುತ್ತಿದ್ದ ಹರ್ದೀಪ್ ಸಿಂಗ್ ನಿಜ್ಜರ್ ಹಿಂದೂ ನಾಯಕರ ಹತ್ಯೆಗೆ ಯೋಜನೆ ಹಾಕಿಕೊಂಡಿದ್ದಾನೆ ಎಂದು ಭಾರತ ಆರೋಪಿಸಿತ್ತು.
ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಎಂಬ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಹರ್ದೀಪ್ ಸಿಂಗ್ ನಿಜ್ಜರ್ ಜಲಂಧರ್ನ ಭರ್ ಸಿಂಗ್ ಪುರ ಎಂಬ ಗ್ರಾಮದಲ್ಲಿ ಜನಿಸಿದ್ದ, 1997ರಲ್ಲಿ ಕೆನಡಾಕ್ಕೆ ವಲಸೆ ಹೋಗಿದ್ದ. ಅಲ್ಲಿ ಆತ ಪ್ಲಂಬಿಂಗ್ ಕೆಲಸಗಳನ್ನು ಮಾಡುತ್ತಿದ್ದ. ಮದುವೆಯಾಗಿರುವ ಆತನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಆತನನ್ನು ಉಗ್ರ ಎಂದು 2020ರಲ್ಲಿ ಭಾರತ ಘೋಷಿಸಿತ್ತು. ಕಳೆದ ಹಲವಾರು ವರ್ಷಗಳಿಂದ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ಭಾರತ ಹಲವು ಬಾರಿ ಕೆನಡಾಕ್ಕೆ ವಿವರಿಸಿತ್ತು.

2018ರಲ್ಲಿ ಪಂಜಾಬ್ನ ಆಗಿನ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ನಿಜ್ಜರ್ ಹೆಸರನ್ನು ಒಳಗೊಂಡ ‘ವಾಂಟೆಡ್’ ವ್ಯಕ್ತಿಗಳ ಪಟ್ಟಿಯನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರಿಗೆ ನೀಡಿದ್ದರು. ಪಂಜಾಬ್ನಲ್ಲಿ ಭಯೋತ್ಪಾದನೆ ಹರಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಜ್ಜರ್ ಬೇಕಾಗಿರುವುದರಿಂದ ಆತನನ್ನು ಭಾರತಕ್ಕೆ ಗಡಿಪಾರು ಮಾಡುವಂತೆ 2022ರಲ್ಲಿ ಪಂಜಾಬ್ ಪೊಲೀಸರು ಮನವಿ ಮಾಡಿದ್ದರು.
ಪಂಜಾಬ್ನ ಲೂಧಿಯಾನ ನಗರದಲ್ಲಿ 6 ಮಂದಿಯ ಸಾವು ಹಾಗೂ 42 ಜನರ ಗಾಯಕ್ಕೆ ಕಾರಣವಾಗಿದ್ದ 2007ರ ಬಾಂಬ್ ಸ್ಫೋಟ ಪ್ರಕರಣ, ಪಟಿಯಾಲಾದಲ್ಲಿ ದೇವಸ್ಥಾನವೊಂದರ ಸಮೀಪದ ಬಾಂಬ್ ಸ್ಫೋಟ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆತ ಭಾರತಕ್ಕೆ ಬೇಕಾದವನಾಗಿದ್ದ.
ಆತನನ್ನು ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿನ ಗುರುದ್ವಾರವೊಂದರ ಹೊರಗೆ ಜೂನ್ 18ರಂದು ಇಬ್ಬರು ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಈ ಹತ್ಯೆಗೆ ಭಾರತೀಯ ಅಧಿಕಾರಿಗಳ ಸಂಬಂಧವಿದೆ ಎಂದು ಕೆನಡಾ ಪ್ರತಿಪಾದಿಸುತ್ತಿರುವುದರಿಂದಲೇ ಸಮಸ್ಯೆ ಇಷ್ಟು ಬಿಗಡಾಯಿಸಿದೆ.