ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ರೂಪುಗೊಂಡ ಚಂಡಮಾರುತದ ಸಂಗಮವು ಕಳೆದ ಕೆಲವು ದಿನಗಳಿಂದ ದೇಶದ ವಿವಿಧ ಕಡೆಗಳಲ್ಲಿ ಮಳೆ ಸುರಿಸುತ್ತಿದೆ. ಉತ್ತರಾಖಂಡ ಮತ್ತು ಕೇರಳದಲ್ಲಿ ಸುರಿಯುತ್ತಿರುವ ಮಳೆಗೆ ಜನಜೀವನ ತೀರಾ ಅಸ್ತವ್ಯಸ್ತಗೊಂಡಿದೆ.
ವಾಡಿಕೆಯಂತೆ ಕೇರಳದಲ್ಲಿ ಅಕ್ಟೋಬರಿನಲ್ಲಿ 192.7 ಮೀಮೀ ಮಳೆಯಾಗಬೇಕಿತ್ತು. ಆದರೆ ಅಕ್ಟೋಬರ್ 19ರ ವರೆಗೇ 453.5 ಮಿಮೀ ಆಗಿದೆ. ಇದು ವಾಡಿಕೆಗಿಂತ 135% ಅಧಿಕ. ಅಕ್ಟೋಬರ್ 20 ರ ನಂತರ ಕೇರಳದಲ್ಲಿ ಮತ್ತೊಂದು ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಈಗಾಗಲೇ ಎಚ್ಚರಿಸಿದೆ.
ಅಕ್ಟೋಬರ್ ತಿಂಗಳಲ್ಲಿ ಮಳೆ ಸುರಿಯುವುದು ಅಸಾಮಾನ್ಯ ಘಟನೆಯಲ್ಲ. ಆದರೆ ಈ ಸಮಯದಲ್ಲಿ ಸಾಮಾನ್ಯವಾಗಿ ಮುಂಗಾರು ಹಿಂದಡಿ ಇಟ್ಟು ಹಿಂಗಾರು ಸುರಿಯಬೇಕು. ಸಾಮಾನ್ಯವಾಗಿ ಮುಂಗಾರು ಸೆಪ್ಟೆಂಬರ್ 1 ರ ವೇಳೆಗೆ ಹಿಂತೆಗೆದುಕೊಳ್ಳಲು ಆರಂಭಿಸುತ್ತದೆ ಮತ್ತು ಅಕ್ಟೋಬರ್ ವೇಳೆಗೆ ಸಂಪೂರ್ಣವಾಗಿ ಹೋಗಬೇಕು. ಆದರೆ 2019 ಮತ್ತು 2020 ರಲ್ಲಿ ಮುಂಗಾರು ಅಕ್ಟೋಬರ್ನಲ್ಲಿ ತನ್ನ ಹಿಂತೆಗೆತವನ್ನು ಆರಂಭಿಸಿತ್ತು ಮತ್ತು ಈ ವರ್ಷವೂ ಅದೇ ನಿರೀಕ್ಷೆಯಿದೆ ಎಂದು ಐಎಂಡಿ ಈ ಮೊದಲೇ ವರದಿ ಮಾಡಿತ್ತು.
ಆದರೆ ಕಳೆದ ಆರು ದಿನಗಳಲ್ಲಿ ಸುರಿಯುತ್ತಿರುವ ವಿಪರೀತ ಮಳೆಗೆ ಅರಬ್ಬೀ ಸಮುದ್ರದಲ್ಲಿ ರೂಪುಗೊಂಡ ಕಡಿಮೆ ಒತ್ತಡವೇ ಕಾರಣ ಎಂದು ಐಎಂಡಿ ಹೇಳಿದೆ. ಉಕ್ಕಿ ಹರಿಯುತ್ತಿರುವ ನದಿಗಳು, ಪ್ರವಾಹಕ್ಕೆ ಸಿಲುಕಿರುವ ವಾಹನಗಳು, ಭೂಕುಸಿತದಿಂದ ಜರ್ಜರಿತವಾದ ಮನೆಗಳು ದೇವರ ರಾಜ್ಯವನ್ನ ಕಂಗಾಲು ಮಾಡಿದೆ.
ಅಕ್ಟೋಬರ್ 19ರ ವರೆಗೆ ಕನಿಷ್ಠ 27 ಮಂದಿ ಸಾವನ್ನಪ್ಪಿದದ್ದಾರೆ ಎಂದು ಸರ್ಕಾರದ ಅಧಿಕೃತ ಅಂಕಿ ಅಂಶಗಳು ಮಾಹಿತಿ ನೀಡಿದೆ. ಕೊಟ್ಟಾಯಂ ಜಿಲ್ಲೆಯೊಂದರಲ್ಲೇ ಭೂಕುಸಿತದಿಂದ 13 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಾರೆ ಅಧಿಕಾರಿಗಳು. ಇಡುಕ್ಕಿ ಜಿಲ್ಲೆಯಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದ ಸ್ಥಳದಿಂದ ಒಂಬತ್ತು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇಬ್ಬರು ವ್ಯಕ್ತಿಗಳು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಲಪ್ಪುರಂ ಜಿಲ್ಲೆಯ ಮೂವರು ಮೀನುಗಾರರು ಕೂಡ ನಾಪತ್ತೆಯಾಗಿದ್ದಾರೆ. ಕೇವಲ ಪ್ರವಾಹ ಅಥವಾ ಭೂಕುಸಿದಿಂದ ಮಾತ್ರವಲ್ಲದೆ ಇತರ ಕಾರಣಗಳಿಂದಲೂ ಜನತೆ ಸಾವೀಗೀಡಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿರುವ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ.ಕೌಶಿಕನ್ “ವಾಹನದ ಕೆಳಗೆ ಸಿಲುಕಿದ್ದರಿಂದ ಇಬ್ಬರು ಮತ್ತು ಗೋಡೆ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ” ಎಂದಿದ್ದಾರೆ. ಪ್ರವಾಹದಲ್ಲಿ ಸಿಲುಕಿದರವರನ್ನು ರಕ್ಷಿಸಿದ ಬಳಿಕವಷ್ಟೇ ಒಟ್ಟು ಕಾಣೆಯಾದವರ ಸಂಖ್ಯೆಯನ್ನು ನಿರ್ಧರಿಸಲು ಸಾಧ್ಯ ಎಂದು ಕೌಶಿಕನ್ ಹೇಳಿದ್ದಾರೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ರಾಜ್ಯಾದ್ಯಂತ 150 ಕ್ಕೂ ಹೆಚ್ಚು ಪರಿಹಾರ ಶಿಬಿರಗಳಿಗೆ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.
ಆಗಸ್ಟ್ 2018 ರಲ್ಲೂ ಇದೇ ರೀತಿಯ ಘಟನೆ ಸಂಭವಿಸಿದ್ದು ಕೇರಳದಲ್ಲಿ ಸುರಿದ ಧಾರಾಕಾರ ಮಳೆಗೆ ಕನಿಷ್ಠ 324 ಜನರು ಸಾವನ್ನಪ್ಪಿದ್ದರು ಮತ್ತು 300,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು. ಅದು ಆ ರಾಜ್ಯವು ಸುಮಾರು ಒಂದು ಶತಮಾನದಲ್ಲಿ ಕಂಡ ಭೀಕರ ಪ್ರವಾಹವಾಗಿತ್ತು. ಕೇರಳದ 14 ಜಿಲ್ಲೆಗಳಲ್ಲಿ 13 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿತ್ತು.
ಕೇರಳದಲ್ಲಿ ಧಾರಾಕಾರ ಮಳೆ ಸುರಿಯುವುದು ಹೊಸದಲ್ಲವಾದರೂ ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಪ್ರವಾಹ ಮತ್ತು ಭೂಕುಸಿತಗಳು ತೀವ್ರವಾಗುತ್ತಿವೆ. ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಕಡಿಮೆ ಒತ್ತಡ ಇದಕ್ಕೆ ಎಷ್ಟು ಕಾರಣವೋ ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಿರುವ ಅಕ್ರಮ ಕಲ್ಲು ಗಣಿಗಾರಿಕೆ, ಕಾಡು ಮತ್ತು ಹುಲ್ಲುಗಾವಲುಗಳ ನಾಶ, ನೀರಿನ ಹರಿವಿನ ಬದಲಾವಣೆ ಮತ್ತು ನದಿ ತೀರದಲ್ಲಿ ಮರಳು ಗಣಿಗಾರಿಕೆ ಇತ್ಯಾದಿ ಮಾನವ ಹಸ್ತಕ್ಷೇಪಗಳು ಹೆಚ್ಚಾಗಿರುವುದೂ ಇಂತಹ ಅನಾಹುತಗಳಿಗೆ ಕಾರಣ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಮಣ್ಣಿನ ಇಂಗುವಿಕೆಯ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಮಳೆ ಸುರಿದಾಗ ಸಹಜವಾಗಿಯೇ ನೀರು ಸಿಕ್ಕ ಸಿಕ್ಕ ದಿಕ್ಕಿನಲ್ಲಿ ಹರಿಯತೊಡಗುತ್ತದೆ. ಹಾಗಾಗಿ ನಗರೀಕರಣ ಹೆಚ್ಚಾದಂತೆ ಪ್ರವಾಹವೂ ಹೆಚ್ಚುತ್ತಿದೆ, ಪ್ರತಿ ವರ್ಷ ಸಂಭವಿಸುವ ಜೀವ, ಆಸ್ತಪಾಸ್ತಿ ಹಾನಿಯೂ ಹೆಚ್ಚುತ್ತಿದೆ.