ಮೈಸೂರು: ರಾಜ್ಯದಲ್ಲಿ ಬಿಜೆಪಿ ಪಕ್ಷ 150 ಸ್ಥಾನ ಗೆಲ್ಲಬೇಕಾದರೆ ಸಚಿವ ವಿ.ಸೋಮಣ್ಣ ಅವರನ್ನು ಬಿಜೆಪಿಯಲ್ಲಿಯೇ ಉಳಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಅವಕಾಶವನ್ನು ವರಿಷ್ಠರು ಕೊಡಬಾರದು ಎಂದು ಮೈಸೂರು– ಚಾಮರಾಜನಗರ ಜಿಲ್ಲೆಗಳ ವಿ.ಸೋಮಣ್ಣ ಬೆಂಬಲಿಗರು ಹಾಗೂ ಬಿಜೆಪಿ ಮುಖಂಡರು ಒತ್ತಾಯಿಸಿದರು.
ಪಕ್ಷ ತೊರೆಯುವ ವದಂತಿ ಹಿನ್ನೆಲೆಯಲ್ಲಿ ಗುರುವಾರ ವಿದ್ಯಾರಣ್ಯಪುರಂನಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ‘ವಿ.ಸೋಮಣ್ಣ ಅವರೊಂದಿಗೆ ನಾವಿದ್ದೇವೆ’ ಪ್ಲೇಕಾರ್ಡ್ ಪ್ರದರ್ಶಿಸಿ ಘೋಷಣೆಗಳನ್ನು ಅಭಿಮಾನಿಗಳು ಕೂಗಿದರು.
ಮುಖಂಡ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಸೋಮಣ್ಣ ಅವರ ಬೆನ್ನೆಲುಬಾಗಿ ಅವರೊಂದಿಗೆ ಹೆಜ್ಜೆಹಾಕುವ ಲಕ್ಷ ಲಕ್ಷ ಕಾರ್ಯಕರ್ತರು, ಅಭಿಮಾನಿಗಳು ಇದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಕ್ರಿಯಾಶೀಲ ವ್ಯಕ್ತಿತ್ವವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉದ್ಯಮಿ ಎಸ್.ಎಂ.ಶಿವಪ್ರಕಾಶ್ ಮಾತನಾಡಿ, ರಾಜ್ಯ ಬಜೆಟ್ನಲ್ಲಿ ₹ 1,200 ಕೋಟಿ ವೆಚ್ಚದ ಯೋಜನೆಗಳಿಗೆ ಅನುದಾನ ನೀಡದಿರುವುದು ಸೋಮಣ್ಣ ಅವರಿಗೆ ಬೇಸರ ತಂದಿದೆ. ಪಕ್ಷ ಕೊಟ್ಟಿರುವ ಎಲ್ಲ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿರುವ ಅವರನ್ನು ನಿರ್ಲಕ್ಷ್ಯ ಮಾಡಬಾರದು ಎಂದರು.
45 ವರ್ಷದಲ್ಲಿ ಹಲವು ಪಕ್ಷಗಳಿಂದ ಗೆಲುವು ಸಾಧಿಸಿದ್ದಾರೆ. ದಣಿವರಿಯದೇ ಕೆಲಸವನ್ನು ಮಾಡಿದ್ದಾರೆ. ಬಿಜೆಪಿ ನಾಯಕರು ನೀವು ಇಷ್ಟರಲ್ಲೇ ಇರಬೇಕು ಎಂಬ ಗೆರೆ ಹಾಕುತ್ತಿದ್ದಾರೆ. ಗೆರೆಗಳನ್ನು ಹಾಕಿದರೆ ಅದು ಬಿಜೆಪಿಗೆ ನಷ್ಟವಾಗಲಿದೆ ಎಂದು ಎಚ್ಚರಿಸಿದರು.
ರೈತ ಮುಖಂಡ ಮಲ್ಲೇಶ್ ಸಮಾವೇಶದ ನಿರ್ಣಯ ಮಂಡಿಸಿದರು.
ಹನೂರು ಕ್ಷೇತ್ರದ ಬಿಜೆಪಿ ಮುಖಂಡ ನಿಶಾಂತ್, ಮುಖಂಡರಾದ ಪುಟ್ಟಬುದ್ದಿ, ಬಾಲರಾಜ್, ಜೋಗಿ ಮಂಜು, ಉಪ್ಪಾರ ಪೀಠದ ಮಂಜುನಾಥ ಸ್ವಾಮೀಜಿ, ಚಾಮುಲ್ ನಿರ್ದೇಶಕ ಬಸವರಾಜ್, ಬಿಜೆಪಿ ಮುಖಂಡರಾದ ದೊಡ್ಡಹುಂಡಿ ಜಗದೀಶ್, ಉದ್ಯಮಿ ಯು.ಎಸ್.ಶೇಖರ್, ಚಾಮರಾಜನಗರ ಎಪಿಎಂಸಿ ಅಧ್ಯಕ್ಷ ರವಿ ಕಮ್ಮರಹಳ್ಳಿ, ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಕೆ.ಆರ್.ಲೋಕೇಶ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸುಂದರಪ್ಪ ಇದ್ದರು.