ಬೆಂಗಳೂರು : ದೇಶದಲ್ಲಿ ಸದ್ಯ ಧಾರ್ಮಿಕ ಭಾವನೆಯುಳ್ಳ ಭಕ್ತರು ಆತಂಕಕ್ಕೀಡಾಗಿದ್ದಾರೆ. ಹಿಂದುಗಳ ಶ್ರದ್ಧಾಕ್ರೇಂದ್ರ ಎಂದು ಕರೆಯುವ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ಕಾಣಿಕೆ ಹುಂಡಿಯಲ್ಲಿನ ಕೋಟ್ಯಂತರ ರೂಪಾಯಿ ದೇಣಿಗೆ ಹಣದ ದುರುಪಯೋಗವಾಗಿರುವ ವಿಚಾರ ಸಾಕಷ್ಟು ಜನಾಕ್ರೋಶಕ್ಕೆ ಕಾರಣವಾಗಿದೆ.

ಈಗಾಗಲೇ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಈ ಹಣದ ಲೂಟಿಯ ಕುರಿತು ಸಂಪೂರ್ಣ ತನಿಖೆಗಾಗಿ ವಿಶೇಷ ತನಿಖಾ ದಳವನ್ನು ನೇಮಿಸಿದ್ದು, ಎಸ್ಐಟಿ ತಂಡ ಲೂಟಿಕೋರರ ಜನ್ಮ ಜಾಲಾಡುತ್ತಿದೆ. ಪ್ರಮುಖವಾಗಿ ಈ ವಿಚಾರದ ಬಗ್ಗೆ ಭಕ್ತರಲ್ಲೂ ಆಕ್ರೋಶ ವ್ಯಾಪಕವಾಗಿದೆ, ರಾಮನ ಹೆಸರಿನಲ್ಲಿ ಹಣ ದರೋಡೆ ಮಾಡಿದವರನ್ನು ಸುಮ್ಮನೇ ಬಿಡಬಾರದು ಕಠಿಣ ಶಿಕ್ಷೆಗೆ ಗುರಿಯಾಗಿಸಬೇಕೆಂಬ ಕೋಪ, ತಾಪ, ಸಿಟ್ಟು ಎಲ್ಲವೂ ಹೆಚ್ಚಾಗಿದೆ.
ರಾಮನಿಗೆ ನಾಮ, ಕರ್ನಾಟಕದ ನಂಟು..?
ಆದರೆ ಈ ತನಿಖೆಯ ಬಗ್ಗೆ ಆರಂಭದಲ್ಲೇ ಅನುಮಾನಗಳು ಮೂಡುತ್ತಿರುವುದು ಒಂದೆಡೆಯಾದರೆ, ತನಿಖೆಯಲ್ಲಿ ಬಗೆದಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಈ ನಡುವೆ ವಿಪಕ್ಷಗಳು ನೇರವಾಗಿ ಅಲ್ಲಿನ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರದ ಮೇಲೆ ಮುಗಿಬಿದ್ದಿವೆ. ಅಲ್ಲದೆ ಈ ದೇಣಿಗೆ ಹಣದ ಲೂಟಿಯ ನಂಟು ಕರ್ನಾಟಕಕ್ಕೂ ವ್ಯಾಪಿಸಿದೆ ಎಂಬ ಆಘಾತಕಾರಿ ಸಂಗತಿ ಹೊರಬಿದ್ದಿದ್ದು, ಈ ಕುರಿತು ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ನೇರವಾಗಿ ಆರೋಪಿಸಿದ್ದಾರೆ.
ಇದನ್ನೂ ಓದಿ : ಪ್ರಶ್ನೆ ಕೇಳಿದ್ರೆ ಸಿಡಿದ ಸದಾನಂದ ಗೌಡ: ಮೋದಿ ನೋಡಿ ಹೊಸ ಚಾಳಿ ಬೆಳೆಸಿಕೊಂಡ್ರಾ ಬಿಜೆಪಿ ನಾಯಕರು..?
ಈ ಇಡೀ ಹಗರಣದ ಬಗ್ಗೆ ಮೊದಲು ಧ್ವನಿ ಎತ್ತಿದ್ದ ಅಖಿಲೇಶ್ ಮತ್ತೊಮ್ಮೆ ಆರೋಪಗಳ ಸುರಿಮಳೆ ಸುರಿಸಿ ಬಿಜೆಪಿ ಹಾಗೂ ಯೋಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಅಲ್ಲದೆ ಈ ದೇಣಿಗೆ ಕಳ್ಳತನದ ನಂಟು ಕರ್ನಾಟಕದ ‘ಭೂಗತ’ ವ್ಯಕ್ತಿಗಳಿಗೂ ವಿಸ್ತರಿಸಿದೆ ಎಂದು ಹೊಸ ಬಾಂಬ್ ಸಿಡಿಸಿದ್ದು ಎಲ್ಲೆಡೆ ಕಂಪನಕ್ಕೆ ಕಾರಣವಾಗಿದೆ.
ಅಯೋಧ್ಯೆಯ ಜನರು ಕಳ್ಳತನದ ನಂಟು ಕರ್ನಾಟಕಕ್ಕೂ ವಿಸ್ತರಿಸಿದೆ ಎಂದು ಹೇಳುತ್ತಿದ್ದಾರೆ. ಕರ್ನಾಟಕದ ‘ಭೂಗತ’ (ಅಂಡರ್ಗ್ರೌಂಡ್) ಮತ್ತು ‘ನೋಂದಾಯಿಸಲ್ಪಡದ’ (ಅನ್ರಿಜಿಸ್ಟರ್ಡ್) ಜನರು ಚುನಾವಣೆಗೆ ಸಂಬಂಧಿಸಿದ ಪಿತೂರಿಗಳಲ್ಲಿ ಭಾಗಿಯಾಗಿದ್ದಾರೆ. ಅವರ ಎಲ್ಲ ಚಟುವಟಿಕೆಗಳು ಈಗ ಬಹಿರಂಗಗೊಂಡಿವೆ ಎಂದು ಆಪಾದನೆ ಮಾಡಿದ್ದಾರೆ.
ನಿಜವಾದ ಸನಾತನಿಗಳು ಬಿಜೆಪಿಗೆ ಮತ ಹಾಕಬೇಡಿ..!
ಚೋರ್-ಚೋರ್ ಸೌತೆಲೇ ಭಾಯಿ, ಜಿನ್ಹೋನೆ ಚುರಾಯಿ ಭಗವಾನ್ ರಾಮ್ ಕಿ ಪೈ (ಕಳ್ಳರು ಭಗವಾನ್ ರಾಮನ ಕಾಣಿಕೆಗಳನ್ನು ಸಹ ಕದ್ದ ಮಲಸಹೋದರರಿದ್ದಂತೆ) ಆದರೆ ಆಡಳಿತಾರೂಢ ಬಿಜೆಪಿ ದೇಶಕ್ಕಿಂತ ದೇಣಿಗೆಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಸಾರ್ವಜನಿಕರ ನಂಬಿಕೆಗೆ ದ್ರೋಹ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಮನ ಹುಂಡಿಗೆ ಕನ್ನ ಹಾಕಿದವರು ಯಾರು ಎಂಬ ಸಾಲು ಪ್ರಶ್ನೆಗಳ ನಡುವೆಯೇ ‘ದೊಡ್ಡ ಮೀನುಗಳನ್ನು’ ರಕ್ಷಿಸಲಾಗುತ್ತಿರುವಾಗ ‘ಸಣ್ಣ ಮೀನುಗಳನ್ನು’ ಮಾತ್ರ ಪ್ರಕರಣದಲ್ಲಿ ಬಂಧಿಸಲಾಗುತ್ತಿದೆ. ಬಿಜೆಪಿ ಸರ್ಕಾರದ ಅಡಿಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಲೂಟಿ ನಡೆಯುತ್ತಿದೆ. ನಿಜವಾದ ಸನಾತನಿಗಳು ಬಿಜೆಪಿಗೆ ಮತ ಹಾಕಬಾರದು, ಬಿಜೆಪಿಯ ಚಿಹ್ನೆಯ ಮೇಲೆ ಚುನಾವಣೆಗೆ ನಿಲ್ಲಬಾರದು ಎಂದು ಅಖಿಲೇಶ್ ರಾಮ ಮಂದಿರದ ಹುಂಡಿ ಲೂಟಿಯನ್ನು ಖಂಡಿಸಿದ್ದಾರೆ.

ಮೇಲ್ನೋಟಕ್ಕೆ ಬಿಜೆಪಿ ಹಾಗೂ ಆರ್ಎಸ್ಎಸ್ನ ದೊಡ್ಡ ದೊಡ್ಡ ತಿಮಿಂಗಿಲಗಳು ಈ ಬೃಹತ್ ಲೂಟಿ ಹಗರಣದಲ್ಲಿ ಭಾಗಿಯಾಗಿವೆ ಎಂದು ಸಾರ್ವಜನಿಕ ವಲಯಲದಲ್ಲಿ ವ್ಯಾಪಕ ಚರ್ಚೆಗಳು ಮುಂದುವರೆದಿವೆ. ಮರ್ಯಾದಾ ಪುರುಷನ ಮರ್ಯಾದೆಗೆ ಭಂಗ ತಂದವರು, ರಾಮನಿಗೆ ನಾಮ ಹಾಕಿದವರು, ಅಸಂಖ್ಯಾತ ಭಕ್ತರ ಭಾವನೆಗಳಿಗೆ ಕೊಳ್ಳಿ ಇಟ್ಟವರು ಯಾರು ಎಂಬೆಲ್ಲ ಪ್ರಶ್ನೆಗಳಿಗೆ ಪಾರದರ್ಶನ ತನಿಖೆಯಿಂದಷ್ಟೇ ಸತ್ಯ ಬಯಲಾಗಬೇಕಿದೆ.
ಹಗರಣದ ಪಾರದರ್ಶಕತೆಯ ಬಗ್ಗೆ ಸಾಲು ಸಾಲು ಪ್ರಶ್ನೆಗಳು ಉದ್ಭವ..!
ಚುನಾವಣೆಯ ಹೊಸ್ತಿಲಲ್ಲಿರುವ ಉತ್ತರ ಪ್ರದೇಶದಲ್ಲಿ ಅಯೋಧ್ಯೆಯ ರಾಮನ ಕಾಣಿಕೆ ಹುಂಡಿ ಲೂಟಿ ಹಗರಣ ರಾಜಕೀಯವಾಗಿಯೂ ತೀವ್ರ ಸ್ವರೂಪ ಪಡೆದುಕೊಂಡಿದೆ. ಭಕ್ತರಲ್ಲಿ ಭಾವನಾತ್ಮಕವಾಗಿ ಆತಂಕ ಮನೆ ಮಾಡಿದರೆ, ಇತ್ತ ರಾಜಕೀಯ ನಾಯಕರು ಈ ಬಗ್ಗೆ ರಾಮ ಜನ್ಮಭೂಮಿ ಟ್ರಸ್ಟ್ ಹಾಗೂ ಯೋಗಿ ಸರ್ಕಾರದ ಮೇಲೆ ಕೊತ ಕೊತ ಕುದಿಯುತ್ತಿದ್ದಾರೆ.
ಹಗರಣದ ಪಾರ ದರ್ಶಕ ತನಿಖೆಯ ಬಗ್ಗೆ ಈಗಾಗಲೇ ವಿಪಕ್ಷಗಳಿಗೆ ಹಲವು ಗಂಭೀರ ಪ್ರಶ್ನೆಗಳು ಎದುರಾಗಿದ್ದು, ಇದಕ್ಕೆಲ್ಲ ನೇರ ಹೊಣೆ ಬಿಜೆಪಿ ಹಾಗೂ ಆಡಳಿತ ಮಂಡಳಿ ಎನ್ನುವ ಮೂಲಕ ಇನ್ನೊಂದು ಸುತ್ತಿನ ವಾಕ್ಸಮರಕ್ಕೆ ನಾಂದಿ ಹಾಡಿವೆ. ಈ ಹಗರಣದ ಹೊತ್ತಿನಲ್ಲೇ ರಾಮನಿಗೆ ಪೂಜೆ ಸಲ್ಲಿಸಲು ಮಂದಿರಕ್ಕೆ ಹೊರಟಿದ್ದ ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಅವರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ.
ಮೌನವಾಗಿದ್ದು ಕಳ್ಳರೆಂದು ಒಪ್ಪಿಕೊಳ್ಳುತ್ತಾರಾ ರಾಜ್ಯ ನಾಯಕರು..?
ಆದರೆ ಇಷ್ಟೊಂದು ದೊಡ್ಡ ಹಗರಣದ ಜಾಲ ಕರ್ನಾಟಕಕ್ಕೆ ಹಬ್ಬಿದ್ದು, ಹಲವು ರೀತಿಯ ವ್ಯಾಖ್ಯಾನ ಹಾಗೂ ಚರ್ಚೆಗಳಿಗೆ ಕಾರಣವಾಗಿದೆ. ದೇಶದಲ್ಲಿ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿವೆ. ಇವೆಲ್ಲವುಳ ನಡುವೆ ಕರ್ನಾಟಕಕ್ಕೆ ಅಖಿಲೇಶ್ ಬಾಣ ಬಿಟ್ಟಿರುವುದರ ಹಿಂದಿನ ಕಾರಣವೇನು? ಕರ್ನಾಟಕದಲ್ಲಿ ಹುಂಡಿ ಕಳ್ಳತನದಲ್ಲಿ ಭಾಗಿಯಾಗಿದ್ದವರು ಯಾರು..? ಎಂಬ ಪ್ರಶ್ನೆಗಳು ಉಧ್ಬವಿಸಿವೆ. ರಾಮನ ಮೇಲೆ ಅಪಾರ ಭಕ್ತಿ, ಶ್ರದ್ದೆ ಹಾಗೂ ನಂಬಿಕೆಯನ್ನು ಇಟ್ಟುಕೊಂಡಿರುವ ಭಕ್ತರಿಗೆ ಬೇಸರವನ್ನುಂಟು ಮಾಡಿರುವುದು ಸುಳ್ಳಲ್ಲ.
ಇನ್ನೂ ಉತ್ತರ ಪ್ರದೇಶದ ಸಮಾಜವಾದಿ ನಾಯಕನ ಹೇಳಿಕೆಯಲ್ಲಿ ಯಾವುದೇ ಉದ್ದೇಶವಿರಬಹುದು ಆದರೆ ಈ ಬಗ್ಗೆ ರಾಜ್ಯದ ನಾಯಕರು ಯಾವ ರೀತಿಯಾಗಿ ಪ್ರತಿಕ್ರಿಯಿಸುತ್ತಾರೆ ಎನ್ನುವುದು ಕೂಡ ಅತ್ಯಂತ ಮಹತ್ವದ ಸಂಗತಿಯಾಗಿದೆ. ನಾವು ಹುಂಡಿ ಕಳ್ಳರು ಎನ್ನುವುದನ್ನು ಮೌನವಾಗಿದ್ದು ಒಪ್ಪಿಕೊಳ್ಳುತ್ತಾರಾ ಅಥವಾ ಮುಲಾಯಂ ಸಿಂಗ್ ಯಾದವ್ ಪುತ್ರ ಹೇಳಿರುವುದು ತಪ್ಪು ಅಂತ ವಾದಮಾಡುತ್ತಾರಾ? ಎಂಬುವುದು ಕುತೂಹಲ ಕೆರಳಿಸಿದೆ. ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಯಾವುದೇ ಪಕ್ಷವಾಗಲಿ ರಾಜ್ಯದ ಘನತೆ, ಗೌರವವನ್ನು ಕಾಪಾಡುವ ಕೆಲಸ ಮಾಡಬೇಕಿದೆ. ಇಂತಹ ಗುರುತರ ಆರೋಪ ರಾಜ್ಯದ ಮೇಲೆ ಬಂದಿರುವುದು ನಿಜಕ್ಕೂ ಕನ್ನಡಿಗರಿಗೆ ಇದು ನೋವಿನ ಸಂಗತಿಯಾಗಿದೆ.






