2023 ವಿಧಾನಸಭಾ ಚುನಾವಣೆಗೆ ರಾಜ್ಯದ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ. ಮುಂದಿನ ಚುನಾವಣೆ ಗೆಲ್ಲಬೇಕು ಎನ್ನುವ ದೃಷ್ಟಿಯಿಂದಲೇ ಇತ್ತೀಚೆಗೆ ಬಿಜೆಪಿ ಹೈಕಮಾಂಡ್ ಬಿ.ಎಸ್ ಯಡಿಯೂರಪ್ಪನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿತ್ತು. ಬಳಿಕ ಇದೇ ಸಿಎಂ ಸ್ಥಾನಕ್ಕೆ ವೀರಶೈವ ಲಿಂಗಾಯತ ಸಮುದಾಯದ ಪ್ರಬಲ ನಾಯಕ ಮತ್ತು ಮಾಜಿ ಸಿಎಂ ಎಸ್.ಆರ್ ಬೊಮ್ಮಾಯಿ ಪುತ್ರ ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಈ ಬೆನ್ನಲ್ಲೀಗ ಹೈಕಮಾಂಡ್ ಬಿಜೆಪಿ ಕೋರ್ ಕಮಿಟಿ ಪುನಾರಚನೆಗೆ ಮುಂದಾಗಿದೆ.
ಬಿಜೆಪಿ ಕೋರ್ ಕಮಿಟಿ ಕಳೆದ ಬಾರಿ ಪುನಾರಚನೆಯಾಗಿದ್ದು 2016ರಲ್ಲಿ. ಪಕ್ಷದ ಸಂಘಟನೆ, ಮುಂಬರುವ ಜಿಲ್ಲಾ ಪಂಚಾಯತ್ ಮತ್ತು 2023ರ ವಿಧಾನಸಭೆ ಚುನಾವಣೆ ದೃಷ್ಟಿಕೋನದಿಂದ ಈಗ ಬಿಜೆಪಿ ಕೋರ್ ಕಮಿಟಿಯ ಮರು ರಚನೆ ಅಗತ್ಯ ಎಂದು ಹಲವರು ಬಯಸಿದ್ದಾರೆ.
ಹೌದು, ಶೀಘ್ರದಲ್ಲೇ ಕರ್ನಾಟಕ ರಾಜ್ಯ ಬಿಜೆಪಿ ಕೋರ್ ಕಮಿಟಿ ಪುನಾರಚನೆಯಾಗಲಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಕ್ಕೇರಿದ ಬೆನ್ನಲ್ಲೇ ಪುನಾರಚನೆ ಮಾಡಲಾಗುತ್ತಿದೆ. ಹೊಸ ಕೋರ್ ಕಮಿಟಿಯಲ್ಲಿ ಹಲವು ಬದಲಾವಣೆ ನಿಶ್ಚಿತವಾಗಿದ್ದು, ಕೆಲವರಿಗೆ ಕೋಕ್ ನೀಡಲಾಗುತ್ತಿದೆ.
ನಾಲ್ಕೈದು ಹಿರಿಯ ನಾಯಕರಿಗೆ ಕೋಕ್ ನೀಡಿ ಹೊಸಬರ ಸೇರ್ಪಡೆ ಚಿಂತನೆ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲೇ ರಾಜ್ಯ ಬಿಜೆಪಿ ಕೋರ್ ಕಮಿಟಿ ಶೀಘ್ರವೇ ಪುನಾರಚನೆ ಆಗಲಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಈ ಕೋರ್ ಕಮಿಟಿಗೆ ಬರಲಿದ್ದಾರೆ. ಬಿ.ಎಸ್. ಯಡಿಯೂರಪ್ಪ, ಪ್ರಲ್ಹಾದ್ ಜೋಶಿ ಕೋರ್ ಕಮಿಟಿಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ.

ಸಚಿವ ಸ್ಥಾನ ಕಳೆದುಕೊಂಡ ಜಗದೀಶ್ ಶೆಟ್ಟರ್ ಕೂಡ ಔಟ್ ಆಗಲಿದ್ದಾರೆ. ಮಾಜಿ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಕೋರ್ ಕಮಿಟಿಯಲ್ಲಿ ಮುಂದುವರಿಯಲಿದ್ದಾರೆ. ಲಕ್ಷ್ಮಣ ಸವದಿ, ಕೆ.ಎಸ್ ಈಶ್ವರಪ್ಪ, ಆರ್. ಅಶೋಕ್, ಬಿ. ಶ್ರೀರಾಮುಲುಗೆ ಕೋಕ್ ನೀಡುವ ಸಾಧ್ಯತೆ ಇದೆ.
ಬಿಜೆಪಿ ಕೋರ್ ಕಮಿಟಿ ಪುನಾರಚನೆಯಲ್ಲಿ ಬೊಮ್ಮಾಯಿಗೆ ಸ್ಥಾನ ಸಿಗಲಿದೆ. ಕೇಂದ್ರ, ರಾಜ್ಯದಲ್ಲಿ ಸಚಿವ ಸ್ಥಾನ ಪಡೆದಿರುವ ಕೆಲವರಿಗೆ ಸ್ಥಾನ ಸಿಗಲಿದೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಕೆಲವು ಕಳಂಕಿತ ಸದಸ್ಯರನ್ನು ಕೈಬಿಟ್ಟು ಕೋರ್ ಕಮಿಟಿಯನ್ನು ಸ್ವಚ್ಛಗೊಳಿಸುವ ಅಗತ್ಯದ ಬಗ್ಗೆ ಕೇಂದ್ರ ನಾಯಕತ್ವ ಬಯಸಿದೆ. ಮಾಜಿ ಕೇಂದ್ರ ಸಚಿವ ಹೆಚ್.ಎನ್ ಅನಂತ್ ಕುಮಾರ್ ನಿಧನ ಬಳಿಕ ಅತ್ಯಗತ್ಯ ಎಂದು ಭಾವಿಸಿದೆ. ಆದರೆ, ಬಿ ಎಸ್ ಯಡಿಯೂರಪ್ಪಗೆ ಯಾವುದೇ ತೊಂದರೆಯಾಗದಂತೆ ಮುಂಜಾಗೃತ ಹೆಜ್ಜೆ ಇಡಬೇಕಿದೆ.
ಈ ಹಿಂದೆಯೇ ಕೋರ್ ಕಮಿಟಿ ಮರುರಚನೆ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಬಳಿ ಕೆಲವು ನಾಯಕರು ಚರ್ಚೆ ನಡೆಸಿದ್ದರು. ಆದರೆ, ಅವರ ಕಡೆಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.

ಸದ್ಯ ಬಿ ಎಸ್ ಯಡಿಯೂರಪ್ಪನವರ ಕೈ ಮೇಲಾಗಿದೆ. ಲಿಂಗಾಯತ ಮತಗಳನ್ನು ಸೆಳೆಯುವ ಸಾಮಥ್ರ್ಯ ಇರುವ ಬಲಿಷ್ಠ ನಾಯಕ ಸದ್ಯ ಅವರೊಬ್ಬರೇ. ಹೀಗಾಗಿ ಅವರನ್ನು ಅಸಮಾಧಾನಗೊಳಿಸುವ ವಿಷಯಕ್ಕೆ ಹೈಕಮಾಂಡ್ ಸದ್ಯ ಕೈಹಾಕುವ ನಿರೀಕ್ಷೆಯಿಲ್ಲ. ಅವರ ಮಾತಿಗೆ ಮನ್ನಣೆ ಸಿಗುವ ಸಾಧ್ಯತೆಯಿದೆ.
ಕಳೆದ ಬಾರಿ ಪಕ್ಷದ ಕೋರ್ ಕಮಿಟಿಯ ಪುನಾರಚನೆ ಸಂದರ್ಭದಲ್ಲಿ, ಹೈಕಮಾಂಡ್ ಯಡಿಯೂರಪ್ಪ ಆಪ್ತರಾದ ಶೋಭಾ ಕರಂದ್ಲಾಜೆ, ಬಸವರಾಜ್ ಬೊಮ್ಮಾಯಿ, ರವಿ ಕುಮಾರ್ ಅವರನ್ನು ಕೈಬಿಟ್ಟು ರಾಜಕೀಯ ಸಂದೇಶ ಕಳುಹಿಸಿತ್ತು.
ಪಕ್ಷದಲ್ಲಿ ಅತಿ ಉನ್ನತ ನಿರ್ಧಾರ ಕೈಗೊಳ್ಳುವ ಸಂಸ್ಥೆ ಬಿಜೆಪಿ ಕೋರ್ ಸಮಿತಿಯ ಪುನಾರಚನೆ ಮಾಡಿದರೆ ಅಲ್ಲಿ ಒಂದು ಸ್ಥಾನಕ್ಕಾಗಿ ಬಿಜೆಪಿಯ ಹಲವು ಹಿರಿಯ ನಾಯಕರು ಕಾಯುತ್ತಿದ್ದಾರೆ. ಸಚಿವ ಸ್ಥಾನ ಕೈತಪ್ಪಿದ ಬಳಿಕ ಅತೃಪ್ತ ಬಿಜೆಪಿ ನಾಯಕರು ಕೋರ್ ಕಮಿಟಿಯಲ್ಲಾದರೂ ಒಂದು ಸ್ಥಾನ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.


