ಚಾಮರಾಜನಗರ ಘಟನೆ ಮರೆಮಾಚಲು ಬೆಡ್ ಬ್ಲಾಕಿಂಗ್ ದಂಧೆ ಎಂದು ನಾಟಕ ಆರಂಭಿಸಿದ್ದಾರೆ. ಇದೊಂದು ಜನರನ್ನು ಹಾದಿ ತಪ್ಪಿಸುವ ಪರ್ಯಾಯ ಮಾರ್ಗ ಅಷ್ಟೇ ಎಂದು ಮಾಜಿ ಸಿ ಎಂ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ರಾಜ್ಯ ಬಿಜೆಪಿ ನಾಯಕರ ಮೇಲೆ ಹರಿಹಾಯ್ದಿದ್ದಾರೆ.
ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಇಬ್ಬರು ಶಾಸಕರು ಕರೋನಾ ವಾರ್ ರೂಂಗೆ ನುಗ್ಗಿ ಡ್ರಾಮ ಮಾಡಿ ಅಗ್ಗದ ಪ್ರಚಾರಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನಲ್ಲಿರುವ ವಾರ್ ರೂಂನಲ್ಲಿ ಮದರಸ ಮಾಡಲು ಹೊರಟಿದ್ದೀರಾ ಅಂತ ಆ ಸಂಸದ ಪ್ರಶ್ನೆ ಮಾಡಿದ್ದಾನೆ. ಇಲ್ಲಿ ಜನಗಳು ಸಾಯುತ್ತಿದ್ದಾರೆ. ಅಲ್ಲಿ ಹೋಗಿ ಇವರುಗಳು ರಾಜಕೀಯ ಮಾಡುತ್ತಿದ್ದಾರೆ. ಜಾತಿ ಇಲ್ಲಿ ಕೆಲಸ ಮಾಡಲ್ಲ, ಪ್ರಾಮಾಣಕತೆ ಮುಖ್ಯ ಎಂದಿದ್ದಾರೆ.
ಆಕ್ಸಿಜನ್ ಕೊರತೆ ಬಗ್ಗೆ ಜನಕ್ಕೆ ಸತ್ಯ ಹೇಳಬೇಕು. ಕರೋನಾನ ನಿರ್ವಹಣೆಗೆ 5 ಜನ ಮಂತ್ರಿಗಳಿಗೆ ಜವಾಬ್ದಾರಿ ಕೊಟ್ಟ ಮೇಲೆ ಆರೋಗ್ಯ ಮಂತ್ರಿ ಸುಧಾಕರ್ ಕ್ಯಾಬಿನೆಟ್ ಸಭೆ ಬಿಟ್ಟು ಎದ್ದು ಹೋದರು ಎಂಬ ಮಾಹಿತಿ ಇದೆ ಎಂದು ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ.
ಬೆಡ್ ಬ್ಲಾಕಿಂಗ್ ದಂಧೆ ವಿಚಾರವಾಗಿ ಕೆಲವರನ್ನ ಬಂಧಿಸಲಾಗಿದೆ. ಬಂಧಿತರು ಎನ್ಜಿಓ ನಡೆಸುತ್ತಿದ್ದರು ಎಂಬ ಮಾಹಿತಿ ಇದೆ. ಇವರಿಗೆ ಬೆಡ್ ಅಲರ್ಟ್ ಮಾಡಲು ಜವಾಬ್ದಾರಿ ಕೊಟ್ಟವರು ಯಾರು.? ಸಂಸದರು 8 ವಾರ್ ರೂಂಗಳ ಪೈಕಿ ಕೇವಲ ಒಂದಕ್ಕೆ ಹೋಗಿ ನೋಡಿದ್ದಾರೆ. ಕಂಪ್ಯೂಟರ್ನಲ್ಲಿರುವ ಮಾಹಿತಿಗಿಂತ ಆಸ್ಪತ್ರೆಗೆ ತೆರಳಿ ವಾಸ್ತವತೆ ನೋಡಬೇಕು. ಡ್ರಗ್ ದಂಧೆಯಲ್ಲಿ ಒಂದೆರಡು ಹೆಣ್ಣುಮಕ್ಕಳನ್ನು ಜೈಲಿಗೆ ಹಾಕಿದ್ದು ಬಿಟ್ಟರೆ ನಿಮ್ಮ ಸಾಧನೆ ಏನು? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಸಿಡಿ ವಿಚಾರ ಏನಾಯ್ತು, ಚಾಮರಾಜನಗರ, ಬೆಡ್ ಬ್ಕಾಕಿಂಗ್ ದಂಧೆ ಬಗ್ಗೆ ತನಿಖೆ ಮಾಡಿ ಏನು ಮಾಡ್ತೀರಿ..? ಇವೆಲ್ಲವೂ ಜನರನ್ನ ದಿಕ್ಕು ತಪ್ಪಿಸುವ ಕೆಲಸ ಆಗಿದೆ ಎಂದರು. ಬೆಡ್ ಬ್ಕಾಕಿಂಗ್ ಕೇಸನ್ನು ಸಿಸಿಬಿಗೆ ವಹಿಸಿದ್ದೀರಿ. ಪೊಲೀಸರು ವಾರ್ ರೂಂಗೆ ತೆರಳಿ ತನಿಖೆ ಮಾಡಿದರೆ ನಾಳೆಯಿಂದ ಅಲ್ಲಿ ಯಾರು ಕೆಲಸ ಮಾಡುತ್ತಾರೆ. ಜನರಿಗೆ ಬೆಡ್ ಕೊಡುವವರು ಯಾರು..? ಕೊವಿಡ್ ವಾರಿಯರ್ಸ್ ಪೈಕಿ 5-6% ಜನ ದುಡ್ಡು ಮಾಡಲು ಇರಬಹುದು. ಯಾಕೆಂದ್ರೆ ನೀವು ಪೊಸ್ಟಿಂಗ್ ಹಾಕಬೇಕಾದರೆ ಹಣ ಪಡೆದು ಹಾಕಿದ್ದೀರಿ. ಈಗ ಆತ ದುಡ್ಡು ಮಾಡಲು ಹೊರಟಿದ್ದಾನೆ. ನಿಮ್ಮಲ್ಲಿ ಲೂಪ್ ಹೋಲ್ಸ್ ಇಟ್ಟು ಕೊಂಡು ಜನರ ಹಾದಿ ತಪ್ಪಿಸಬೇಡಿ. ಜನರು ಬೀದಿಯಲ್ಲಿ ಸಾಯುತ್ತಿದ್ದರೆ ನೀವು ಹುಡುಗಾಟ ಆಡುತ್ತಿದ್ದೀರಾ.? ಎಂದು ಸರ್ಕಾರವನ್ನು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.