ಕಾವೇರಿ ನೀರಿನ ವಿಚಾರ ಬಂದಾಗ ಕನ್ನಡಿಗರು ವರ್ಸಸ್ ತಮಿಳುನಾಡು ಅನ್ನೋದು ಸರ್ವತಃ ಸತ್ಯ. ಇದೀಗ ಮತ್ತೆ ಕಾವೇರಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಕರ್ನಾಟಕದಲ್ಲಿ ಮಳೆಯೇ ಇಲ್ಲದೆ ಇದ್ದರೂ ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ. ಇದ್ರಿಂದ ಕರ್ನಾಟಕದಲ್ಲಿ ಕನ್ನಡಿಗರು ಹಾಗು ತಮಿಳು ಭಾಷಿಕರ ನಡುವೆ ವೈಮನಸ್ಯ ಸೃಷ್ಟಿಯಾಗುವ ಆತಂಕ ಎದುರಾಗಿದ್ದು, ತಮಿಳುನಾಡಿಗೆ ಸೇರಿದ ಸಾರಿಗೆ ಬಸ್ಗಳು ಹಾಗು ತಮಿಳುನಾಡಿನ ಜನರ ಆಸ್ತಿ ಪಾಸ್ತಿ ಹಾನಿಯಾಗುವ ಸಂಭವ ಹೆಚ್ಚಾಗಿದೆ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ಮಾಹಿತಿ ಕೊಟ್ಟಿದೆ ಎನ್ನಲಾಗಿದೆ. ಬೆಂಗಳೂರು ನಗರ ಆಯುಕ್ತರ ಸೂಚನೆಯಂತೆ ತಮಿಳುನಾಡಿ ಬಸ್ ನಿಲ್ದಾಣಗಳು ಹಾಗು ತಮಿಳಿಗರು ವಾಸ ಮಾಡುವ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿದೆ.
ಬೆಂಗಳೂರಿನಲ್ಲಿ ಇಂದು ಎಲ್ಲೆಲ್ಲಿ ಪ್ರತಿಭಟನೆ ಬಿಸಿ..?
ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್ನಲ್ಲಿ BJP ಪ್ರತಿಭಟನೆ ಹಮ್ಮಿಕೊಂಡಿದೆ. ಮಲ್ಲೇಶ್ವರಂನಲ್ಲಿ ಕರವೇ ಶಿವರಾಮೇಗೌಡ ಬಣದ ಪ್ರತಿಭಟನೆ ನಡೆಸಲಿದೆ. ಇನ್ನು ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಸಭೆ ಆಯೋಜನೆ ಮಾಡಿದ್ದು, ಹೋರಾಟದ ರೂಪುರೇಷೆ ಸಿದ್ದವಾಗಲಿದೆ. ಅತ್ತಿಬೆಲೆ ಗಡಿಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣ ಪ್ರತಿಭಟನೆ ಮಾಡಲಿದ್ದು, ರಸ್ತೆ ತಡೆಗೆ ನಿರ್ಧಾರ ಮಾಡಲಾಗಿದೆ. ಹಾಸನದಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಸ್ತೆ ತಡೆ ಮಾಡಲು ಕರವೇ ನಿರ್ಧಾರ ಮಾಡಿದೆ. ಮೈಸೂರು, ರಾಮನಗರದಲ್ಲೂ ಪ್ರತಿಭಟನೆಗೆ ಕರವೇ ಯೋಜನೆ ರೂಪಿಸಿದೆ. ಒಟ್ಟಾರೆ ಬೆಂಗಳೂರಿನಲ್ಲಿ ಪ್ರತಿಭಟನೆಯ ಕಾವು ವಾಹನ ಸವಾರರ ಮೇಲೆ ತಟ್ಟಲಿದ್ದು, ಟ್ರಾಫಿಕ್ ಪೊಲೀಸರು ಸಂಚಾರ ನಿರ್ವಹಣೆಗೆ ಹರಸಾಹಸ ಮಾಡಬೇಕಾದ ಸ್ಥಿತಿ ನಿರ್ಮಾಣ ಆಗಲಿದೆ.
ಮೂರು ಬೆಳೆ ಬೆಳೆಯುವ ತಮಿಳುನಾಡಿಗೆ ಬಿಡಬೇಕಿದೆ ನೀರು..!
ಕಾವೇರಿ ಕಣಿವೆ ಮಳೆ-ಬೆಳೆ ಎರಡೂ ಇಲ್ಲ. ಆದರೂ ತಮಿಳುನಾಡಿಗೆ ನೀರು ಬಿಡಲೇಬೇಕು. ಕರ್ನಾಟಕದ ಕಾವೇರಿ ಕಣಿವೆಯಲ್ಲಿ ವಾರ್ಷಿಕವಾಗಿ ಬೆಳೆಯೋದು 2 ಬೆಳೆ ಮಾತ್ರ. ಮುಂಗಾರು, ಹಿಂಗಾರು ಬೆಳೆಗಳು ಮಾತ್ರ ಕರ್ನಾಟಕ ರೈತರಿಗೆ ಸಾಧ್ಯ. ಈ ಬಾರಿ ಮುಂಗಾರು ಮಳೆ ಕೈ ಕೊಟ್ಟಿದ್ರಿಂದ ಮುಂಗಾರೂ ಇಲ್ಲ, ಹಿಂಗಾರೂ ಇಲ್ಲ ಎಂಬಂತೆ ಆಗಿದೆ. ಆದರೆ ತಮಿಳುನಾಡಿನಲ್ಲಿ ಮುಂಗಾರಿಗಿಂತ ಹಿಂಗಾರು ಮಳೆಯೇ ಹೆಚ್ಚು ಸುರಿಯುತ್ತದೆ. ಕಾವೇರಿ ನೀರು ಬಳಸಿಕೊಂಡು ತಮಿಲುನಾಡಿನ ರೈತರು ಕುರುವೈ, ತಾಲಡಿ, ಸಾಂಬಾ ಬೆಳೆ ಬೆಳೆಯುತ್ತಾರೆ. ಮೂರೂ ಬೆಳೆಗಳಿಗೆ ಸಾಕಾಗುವಷ್ಟು ನೀರು ಸಂಗ್ರಹ ಮಾಡಿಕೊಳ್ತಾರೆ. ಕೆಲವೊಮ್ಮೆ ಕೃಷಿ ಭೂಮಿ ವಿಸ್ತರಣೆ ಮಾಡಿಕೊಂಡು ಬೆಳೆ ಬೆಳೆಯುತ್ತಾರೆ. ತಮಿಳಿಗರಿಗೆ ಹಿಂಗಾರು ಹೆಚ್ಚಾಗಿ ಬೀಳೋದ್ರಿಂದ ಮೂರೂ ಬೆಳೆಗೆ ಯಾವುದೇ ಸಮಸ್ಯೆ ಆಗಲ್ಲ. ಆದರೂ ಕಾನೂನು ಅಸ್ತ್ರ ಬಳಕೆ ಮಾಡಿ ಕರ್ನಾಟಕದ ವಿರುದ್ಧ ಕತ್ತಿ ಮಸೆಯುತ್ತಾರೆ.
ರೈತರ ನಾಯಕತ್ವದಲ್ಲೇ ‘ಕಾವೇರಿ ಕುಟುಂಬ’ ಜೀವ ಪಡೆದಿತ್ತು..!
ಈ ಹಿಂದೆ ಸರ್ಕಾರಗಳು ಕೈ ಚೆಲ್ಲಿ ಕುಳಿತಾಗ ಕಾವೇರಿ ಕುಟುಂಬ ಎಂಬ ರೈತರ ಒಕ್ಕೂಟ ಜಾರಿಗೆ ಬಂದಿತ್ತು. ಕರ್ನಾಟಕ ಹಾಗು ತಮಿಳುನಾಡು ರೈತ ಮುಖಂಡರು ಈ ಕಾವೇರಿ ಕುಟುಂಬದಲ್ಲಿದ್ರು. ದಿವಂಗತ ರೈತನಾಯಕ K.S.ಪುಟ್ಟಣ್ಣಯ್ಯ ಬದುಕಿರುವ ತನಕ ಕಾವೇರಿ ಕುಟುಂಬ ಸಕ್ರಿಯವಾಗಿತ್ತು. ಬರ ಸೇರಿದಂತೆ ಮಳೆ ಕಡಿಮೆ ಬಿದ್ದಾಗ ರೈತರಲ್ಲೇ ಸಂಕಷ್ಟ ಸೂತ್ರ ರಚನೆ ಆಗುತ್ತಿತ್ತು. ರಾಜಕಾರಣದ ಹೊರಗೆ ಸಮಸ್ಯೆ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಲಾಗ್ತಿತ್ತು. ನೀರು ಹಂಚಿಕೆ, ಬೆಳೆ..? ನೀರಿನ ಪ್ರಮಾಣ..? ಹೇಗಿದೆ ಅನ್ನೋ ಬಗ್ಗೆ ನಿರ್ಧಾರ ಮಾಡ್ತಿದ್ದ ಕಾರಣಕ್ಕೆ ಸಮಸ್ಯೆ ಕೊಂಚ ಮಟ್ಟಿಗೆ ಕಡಿಮೆ ಆಗ್ತಿತ್ತು. ಆದರೆ ಕಾರಣಾಂತರಗಳಿಂದ ಅದು ಸ್ಥಗಿತವಾಗಿದೆ. ಇದೀಗ ಕನ್ನಡಿಗರು ವರ್ಸಸ್ ತಮಿಳಿಗರು ಎನ್ನುವಂತಾಗಿದೆ. ಬೆಂಗಳೂರಿನಲ್ಲಿ ಹೇಳಿಕೇಳಿ ತಮಿಳಿಗರೇ ಹೆಚ್ಚಾಗಿ ವಾಸವಾಗಿದ್ದಾರೆ. ಯಾರು ಯಾರು ಮೇಲೇ ದಾಳಿ ಮಾಡಿದ್ರು ಕಾನೂನು ಸುವ್ಯವಸ್ಥೆ ಹಾಳಾಗುವುದು ಶತಸಿದ್ಧ.
ಕೃಷ್ಣಮಣಿ