ಕಂಬಳವೂ ಕೂಡಾ ಬ್ರಿಜ್ ಭೂಷನ್ ಸಿಂಗ್ ನಂತದ್ದೇ ಇತಿಹಾಸ ಹೊಂದಿದೆ. ಹಾಗಾಗಿಯೇ ಬೆಂಗಳೂರು ಕಂಬಳದಲ್ಲಿ ಸಾಧಕರನ್ನು ಸನ್ಮಾನಿಸಲು ಕುಸ್ತಿ ಫೆಡರೇಷನ್ ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷನ್ ಸಿಂಗ್ ರನ್ನು ಆಯ್ಕೆ ಮಾಡಿರಬಹುದು. ನವೆಂಬರ್ 26 ರಂದು ರವಿವಾರ 1 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬ್ರಿಜ್ ಭೂಷನ್ ಸಿಂಗ್ ಪ್ರಧಾನ ಅತಿಥಿಯಾಗಿದ್ದಾರೆ.
ಭಾರತೀಯ ಕುಸ್ತಿ ಫೆಡರೇಷನ್ (WFI) ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಅವಕಾಶ ಸಿಕ್ಕಾಗಲೆಲ್ಲಾ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾರೆ. ಅದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಕಳೆದ ಜೂನ್ 15 ರಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಲೈಂಗಿಕ ಕಿರುಕುಳದ ಘೋಷಿತ ಆರೋಪಿಯನ್ನು ಕಂಬಳದ ಕಾರ್ಯಕ್ರಮಕ್ಕೆ ಕರೆಯುವ ಉದ್ದೇಶವೇನು ?
ಬ್ರಿಜ್ ಭೂಷನ್ ಸಿಂಗ್ ನ ಕ್ರೀಡಾ ಇತಿಹಾಸಕ್ಕೂ ಕಂಬಳದ ಕ್ರೀಡಾ ಇತಿಹಾಸಕ್ಕೂ ಸಾಮ್ಯತೆ ಇದೆ. ಒಂದು ಕಾಲದಲ್ಲಿ ಕಂಬಳಕ್ಕಿಂತ ಮುಂಚಿನ ದಿನ ರಾತ್ರಿ ಕಂಬಳದ ಗದ್ದೆಯ ಪಕ್ಕದ ಗದ್ದೆಯಲ್ಲಿ ಅತ್ಯಂತ ಹಿಂದುಳಿದ, ಸೂಕ್ಷ್ಮ ಸಮುದಾಯವೊಂದರ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿತ್ತು. ಇದಕ್ಕೆ ಸಾಂಸ್ಕೃತಿಕ, ಧಾರ್ಮಿಕ ಆಯಾಮವನ್ನೂ ನೀಡಲಾಗಿತ್ತು. ತುಳುನಾಡಿನ ಜಾತಿ ವ್ಯವಸ್ಥೆಯಲ್ಲಿ ಬಹಿರಂಗವಾಗಿ ನಡೆಯುತ್ತಿದ್ದ ಈ ಲೈಂಗಿಕ ಶೋಷಣೆ ಈಗ ಸಂವಿಧಾನದ ಭಯದಿಂದ ನಿಂತಿದೆಯಷ್ಟೆ. ಇಂತವೆಲ್ಲಾ ಕಂಬಳದ ಭಾಗವಾಗಿತ್ತು ಎಂಬ ಕನಿಷ್ಠ ಪಶ್ಚಾತಾಪವೂ ಇಲ್ಲದೇ ಕಂಬಳವು ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕ ಎಂದು ಹೇಳುವವರ ವೇದಿಕೆಗೆ ಬ್ರಿಜ್ ಭೂಷನ್ ಸಿಂಗ್ ಸೂಕ್ತ ವ್ಯಕ್ತಿ !
ಹಾಗೆ ನೋಡಿದರೆ, ಕಂಬಳ ಪ್ರಾರಂಭವಾಗಿದ್ದೇ ಒಕ್ಕಲು ರೈತರನ್ನು ಸುಲಿಯಲು ಮತ್ತು ಕೆಳ ಸಮುದಾಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಸಲುವಾಗಿ !. ತುಳುನಾಡಿನಲ್ಲಿ ಜಾತಿ ಶ್ರೇಣೀಕರಣದ ಉಳಿವು ಮತ್ತು ಮುಂದುವರಿಕೆಯಲ್ಲಿ ಕಂಬಳದ ಪಾತ್ರ ಗಣನೀಯವಾಗಿದೆ.
ಕಂಬಳ ಜಾತಿ ಶ್ರೇಣೀಕರಣದ ಅಸಮಾನ ಮತ್ತು ಶೋಷಕ ಸ್ವರೂಪದೊಂದಿಗೆ ಅವಿಭಾಜ್ಯ ಸಂಬಂಧವನ್ನು ಹೊಂದಿದೆ. ಹಲವು ಅಮಾನವವೀಯ ಅಸ್ಪೃಶ್ಯತಾ ಆಚರಣೆಗಳು ಮತ್ತು ಅಜಲು ಪದ್ದತಿ ಈ ಕಂಬಳ ಕ್ರೀಡೆಯ ಮೂಲಕ ತೀರಾ ಇತ್ತಿಚ್ಚಿನವರೆಗೂ ನಡೆಯುತ್ತಿದ್ದವು. ಕಂಬಳ ಅನ್ನೋದು ಹಲವು ಊರಿನ ಗುತ್ತು ಮನೆತನಗಳ ನಡುವೆ ನಡೆಯುತ್ತಿದ್ದ ಪ್ರತಿಷ್ಟಿತ ಸ್ಪರ್ಧೆಯಾಗಿದ್ದರಿಂದ ಪ್ರತಿಸ್ಪರ್ಧಿ ಗುತ್ತಿನ ಜನರು ಬಂದು ಕಂಬಳದ ಗದ್ದೆಯನ್ನು ಹಾಳು ಮಾಡಬಹುದು ಎಂಬ ಕಾರಣಕ್ಕಾಗಿ ಕೊರಗ ಎಂಬ ಅತಿ ಶೋಷಿತ ಸಮುದಾಯ ‘ಪನಿ ಕುಲ್ಲುನು’ ಎಂಬ ಸಂಪ್ರದಾಯವನ್ನು ಆಚರಿಸಬೇಕಿತ್ತು.

‘ಪನಿ ಕುಲ್ಲುನು’ ಅಂದರೆ ಕೊರಗರು ತಮ್ಮ ಹೆಂಡತಿ ಮಕ್ಕಳ ಜೊತೆ ಇಡೀ ರಾತ್ರಿ ಕಂಬಳ ಗದ್ದೆಯನ್ನು ಕಾಯಬೇಕು. ಇದಕ್ಕಿಂತಲೂ ಅಮಾನುಷವೆಂದರೆ, ಕಂಬಳ ನಡೆಯುವ ಒಂದೆರಡು ಗಂಟೆಗಳ ಮೊದಲು ಕಂಬಳ ಗದ್ದೆಯಲ್ಲಿ ಕೊರಗರು ಓಡಬೇಕು. ಕಂಬಳ ಗದ್ದೆಯಲ್ಲಿ ಗುತ್ತಿನ ಮನೆಯ ವೈರಿಗಳು ಗಾಜು, ಕಲ್ಲುಗಳನ್ನು ಹಾಕಿರುವ ಸಾಧ್ಯತೆ ಹಿನ್ನಲೆಯಲ್ಲಿ ಕೊರಗರು ಓಡಿ ಪರಿಶೀಲನೆಯನ್ನು ಮಾಡಬೇಕು. ಗುತ್ತಿನ ಕೊಣಗಳಿಗೆ ಗಾಜು ಚುಚ್ಚುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತದೆ. ಜಮೀನ್ದಾರಿ ಕುಟುಂಬಗಳ ಮಧ್ಯೆ ನಡೆಯುವ ಪಕ್ಕಾ ಫ್ಯೂಡಲ್ ಕ್ರೀಡೆಯಾಗಿರುವ ಕಂಬಳ ಈಗ ಸ್ವರೂಪದಲ್ಲಿ ಸ್ವಲ್ಪ ಮಾರ್ಪಾಡುಗಳನ್ನು ಹೊಂದಿದೆಯಾದರೂ ಆಳದಲ್ಲಿ ಫ್ಯೂಡಲ್ ವ್ಯವಸ್ಥೆಯನ್ನು ಜಾರಿಯಲ್ಲಿಡುವ ತಂತ್ರವೇ ಆಗಿದೆ.
ಕಂಬಳ ಎಂಬುದು ಕೇವಲ ಕ್ರೀಡೆಯಾಗಿ ಪ್ರಾರಂಭವೂ ಆಗಿಲ್ಲ. ಮುಂದುವರಿಕೆಯೂ ಅಲ್ಲ. ಕಂಬಳ ಎಂಬುದು ಜಮೀನ್ದಾರಿಗಳ ಐಶಾರಾಮಿ ಬದುಕಿನ ಪಳಿಯುಳಿಕೆಯಾಗಿ ಮುಂದುವರೆಯುತ್ತಿದೆ. ಕಂಬಳ ಎಂಬುದು ಬಹುಜನರ ಸಂಸ್ಕೃತಿಯೂ ಅಲ್ಲ. ಜನಪದ ಕ್ರೀಡೆಯೂ ಅಲ್ಲ. ಕಂಬಳ ಎಂಬುದು ಪಕ್ಕಾ ಬಹುಜನ ವಿರೋಧಿ ಫ್ಯೂಡಲ್ ವರ್ಗದ ಮೋಜಿನ ಆಟವಷ್ಟೆ. ಹಾಗಾಗಿ ಕಂಬಳದ ಅತಿಥಿಗಳ ಆಯ್ಕೆಯೂ ಸರಿಯಾಗಿದೆ.












