ಉತ್ತರಾಖಂಡದ ಸುರಂಗದಲ್ಲಿ ಕಾರ್ಮಿಕರು ಸಿಕ್ಕಿಬಿದ್ದು ಹತ್ತು ದಿನಗಳೇ ಕಳೆದಿದ್ದು, ರಕ್ಷಣಾ ಕಾರ್ಯಾಚಾರಣೆ ಭರದಿಂದ ಸಾಗುತ್ತಿದೆ. ಬರೋಬ್ಬರಿ ಹತ್ತು ದಿನಗಳ ಬಳಿಕ ಇಂದು ಮುಂಜಾನೆ ಮೊದಲ ಬಾರಿಗೆ ಹೊರ ಜಗತ್ತಿಗೆ ಕಾರ್ಮಿಕರು ಕಾಣಿಸಿಕೊಂಡಿದ್ದಾರೆ. ಪೈಪ್ ಮೂಲಕ ಸಾಗಿಸಲಾದ ಕ್ಯಾಮೆರಾ ಕಾರ್ಮಿಕರ ಪರಿಸ್ಥಿತಿಯನ್ನು ಚಿತ್ರೀಕರಿಸಿದ್ದು, ಕಾರ್ಮಿಕರ ಕುಟುಂಬಸ್ಥರು ತಮ್ಮ ಮನೆಯವರನ್ನು ನೋಡಿ ಕೊಂಚ ಸಮಾಧಾನಗೊಂಡಿದ್ದಾರೆ.
ನವೆಂಬರ್ 12 ರಂದು ಸುರಂಗದ ಒಂದು ಭಾಗವು ಕುಸಿದಿದ್ದರಿಂದ, ಅದರೊಳಗೆ 41 ಕಾರ್ಮಿಕರು ಸಿಲುಕಿಕೊಂಡಿದ್ದರು. ಅವರಿಗೆ ಆಹಾರವನ್ನು ಕಳುಹಿಸಲು ಆರು ಇಂಚಿನ ಪೈಪ್ ಅನ್ನು ಅಳವಡಿಸಲಾಗಿದ್ದು, ಅದರ ಮೂಲಕ ಎಂಡೋಸ್ಕೋಪಿಕ್ ಕ್ಯಾಮೆರಾವನ್ನು ಸುರಂಗದೊಳಗೆ ಕಳುಹಿಸಲಾಗಿದೆ.
ದೃಶ್ಯಗಳಲ್ಲಿ, ಕಾರ್ಮಿಕರು ಕ್ಯಾಮೆರಾದತ್ತ ಕೈ ಬೀಸಿದ್ದು, ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ್ದಾರೆ. ರಕ್ಷಣಾ ಅಧಿಕಾರಿಗಳು, ವಾಕಿ ಟಾಕೀಸ್ ಅಥವಾ ರೇಡಿಯೋ ಹ್ಯಾಂಡ್ಸೆಟ್ಗಳ ಮೂಲಕ ಕಾರ್ಮಿಕರೊಂದಿಗೆ ಮಾತನಾಡುತ್ತಾ, ಕಾರ್ಮಿಕರನ್ನು ಕ್ಯಾಮೆರಾ ಮುಂದೆ ಬರುವಂತೆ ಕೇಳಿಕೊಳ್ಳುತ್ತಿರುವುದು ಕಂಡುಬಂದಿದೆ.
ಕ್ಯಾಮೆರಾ ಮುಂದೆ ಬಂದು ವಾಕಿ ಟಾಕಿ ಮೂಲಕ ನಮ್ಮೊಂದಿಗೆ ಮಾತನಾಡಿ ಎಂದು ಅಧಿಕಾರಿಯೊಬ್ಬರು ಅವರನ್ನು ಕೇಳಿದರು.
VIDEO | First visuals of workers stuck inside the collapsed Silkyara tunnel in #Uttarkashi, Uttarakhand.
— Press Trust of India (@PTI_News) November 21, 2023
Rescuers on Monday pushed a six-inch-wide pipeline through the rubble of the collapsed tunnel allowing supply of larger quantities of food and live visuals of the 41 workers… pic.twitter.com/mAFYO1oZwv
ಕಳೆದ ರಾತ್ರಿ ಬಾಟಲಿಗಳಲ್ಲಿ ಖಿಚಡಿಯನ್ನು ಪೈಪ್ ಮೂಲಕ ಕಳುಹಿಸಲಾಗಿದ್ದು, ಕಾರ್ಮಿಕರು ಕಳೆದ 10 ದಿನಗಳಲ್ಲಿ ಮೊದಲ ಬಾರಿಗೆ ಬಿಸಿ ಆಹಾರವನ್ನು ಸೇವಿಸಿದ್ದಾರೆ. ಇಲ್ಲಿಯವರೆಗೆ, ಅವರು ಕೇವಲ ಒಣ ಹಣ್ಣುಗಳು ಮತ್ತು ನೀರಿನಿಂದ ಬದುಕುತ್ತಿದ್ದರು.
ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ಅಧಿಕಾರಿ ಕರ್ನಲ್ ದೀಪಕ್ ಪಾಟೀಲ್ ಮಾತನಾಡಿ, ಕಾರ್ಮಿಕರಿಗೆ ಶೀಘ್ರದಲ್ಲೇ ಮೊಬೈಲ್ ಮತ್ತು ಚಾರ್ಜರ್ಗಳನ್ನು ಪೈಪ್ ಮೂಲಕ ಕಳುಹಿಸಲಾಗುವುದು ಎಂದಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕಾರ್ಮಿಕರ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಮತ್ತು ಶೀಘ್ರದಲ್ಲೇ ರಕ್ಷಿಸಲಾಗುವುದು ಎಂದು ಹೇಳಿದರು.
ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸಲು ಮೂರು ಕಡೆಯಿಂದ ಡ್ರಿಲ್ಲಿಂಗ್ ಅನ್ನು ಒಳಗೊಂಡಿರುವ ಐದು ಆಯ್ಕೆಗಳ ಕ್ರಿಯಾ ಯೋಜನೆಯನ್ನು ಕೇಂದ್ರವು ರೂಪಿಸಿದೆ. ಪ್ರತಿ ಕಾರ್ಯಾಚರಣೆಯನ್ನು ಕೈಗೊಳ್ಳಲು ಐದು ವಿವಿಧ ಏಜೆನ್ಸಿಗಳಿಗೆ ವಹಿಸಲಾಗಿದೆ.
ಮುಖ್ಯ ಸುರಂಗದ ಬಲ ಮತ್ತು ಎಡ ಬದಿಗಳಿಂದ ಎರಡು ಸುರಂಗಗಳನ್ನು ಅಡ್ಡಲಾಗಿ ಕೊರೆಯಲಾಗುತ್ತಿದ್ದು, ಸುರಂಗದ ಮೇಲ್ಭಾಗದಿಂದ ಲಂಬವಾದ ರಂಧ್ರವನ್ನು ಕೊರೆಯಲಾಗುತ್ತಿದೆ.
NDRF, SDRF, BRO, ಮತ್ತು ITBP ಸೇರಿದಂತೆ ಅನೇಕ ಏಜೆನ್ಸಿಗಳು ದಿನದ ದಿನದ ರಕ್ಷಣಾ ಕಾರ್ಯವನ್ನು ನಿರ್ವಹಿಸುತ್ತಿವೆ. ಅಂತರಾಷ್ಟ್ರೀಯ ಸುರಂಗ ತಜ್ಞ ತಂಡ ನಿನ್ನೆ ಆಗಮಿಸಿ ಪ್ರಯತ್ನಕ್ಕೆ ಕೈಜೋಡಿಸಿದೆ. ರಕ್ಷಣಾ ಸಂಶೋಧನಾ ಸಂಸ್ಥೆ ಡಿಆರ್ಡಿಒದ ರೊಬೊಟಿಕ್ಸ್ ತಂಡವೂ ತಲುಪಿದೆ.
ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದು, ಉಕ್ಕಿನ ಪೈಪ್ಗಳ ಮೂಲಕ ಆಹಾರ ಮತ್ತು ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಸುರಂಗವು ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾಗಿದೆ, ಇದು ಹಿಂದೂ ಯಾತ್ರಾ ಸ್ಥಳಗಳಾದ ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗಳಿಗೆ ಸಂಪರ್ಕವನ್ನು ಹೆಚ್ಚಿಸಲು ರಾಷ್ಟ್ರೀಯ ಮೂಲಸೌಕರ್ಯ ಉಪಕ್ರಮವಾಗಿದೆ.