ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಬಿಟ್ಟು ಮತ್ತೆ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಇದು ಕಾನೂನು ಸಂಘರ್ಷ ಸೃಷ್ಟಿಸುವ ಸಾಧ್ಯತೆಗಳನ್ನು ಸೃಷ್ಟಿಸಿದೆ. ಯಾವುದೇ ಒಂದು ಪಕ್ಷದ ಪ್ರಾಥಮಿಕ ಸದಸ್ಯತ್ವ ತೆಗೆದುಕೊಂಡು ಒಂದು ಸ್ಥಾನಕ್ಕೆ ಆಯ್ಕೆ ಆದ ಬಳಿಕ ಬೇರೊಂದು ಪಕ್ಷದ ಚಿನ್ಹೆ ಅಡಿಯಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಿಲ್ಲ. ಒಂದು ವೇಳೆ ಭಾಗಿಯಾಗಬೇಕಿದ್ದರೆ, ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗಬೇಕು. ಆದರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಈ ನಿಯಮವನ್ನು ಪಾಲಿಸಿಲ್ಲ. ಮೊದಲು ದೆಹಲಿಯಲ್ಲಿ ಬಿಜೆಪಿ ಪಕ್ಷ ಸೇರ್ಪಡೆ ಆಗಿ, ಬೆಂಗಳೂರಗೆ ಬಂದ ಬಳಿಕ ಸಭಾಪತಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
![](https://pratidhvani.com/wp-content/uploads/2024/01/WhatsApp-Image-2024-01-25-at-22.53.25-804x1024.webp)
ಪಕ್ಷ ಸೇರ್ಪಡೆ ಬಳಿಕ ಪರಿಷತ್ ಸ್ಥಾನಕ್ಕೆ ರಾಜೀನಾಮೆ..!
ದೆಹಲಿಯಿಂದ ವಾಪಸ್ ಆದ ಬಳಿಕ ಬೆಂಗಳೂರಿನಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ ನಿವಾಸಕ್ಕೆ ಆಗಮಿಸಿದ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೊರಟ್ಟಿ ಸಮ್ಮುಖದಲ್ಲಿಯೇ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿ ಸಲ್ಲಿಸಿದ್ದಾರೆ. ಈ ಮೂಲಕ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಾನು ಬಿಜೆಪಿ ಸೇರುತ್ತಿರುವ ಹಿನ್ನೆಲೆಯಲ್ಲಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಸಭಾಪತಿ ಅವರು ರಾಜೀನಾಮೆ ಪತ್ರ ಸ್ವೀಕರಿಸಿದ್ದಾರೆ. ನಾನು ಬೆಳಗ್ಗೆ ಫೋನ್ನಲ್ಲಿ ರಾಜೀನಾಮೆ ಕುರಿತು ಮಾಹಿತಿ ನೀಡಿದ್ದೇನೆ. ಇದಾದ ಬಳಿಕ ಬಿಜೆಪಿ ಸೇರ್ಪಡೆ ಆಗಿದ್ದೇನೆ. ನನ್ನ ಬೆಂಬಲಿಗರು ನನ್ನ ಜೊತೆ ಕಾಂಗ್ರೆಸ್ ಸೇರ್ಪಡೆ ಆಗಿದ್ದರು. ಅವರು ಅಂದು ಸ್ವ ಇಚ್ಚೆಯಿಂದ ಬಂದಿದ್ದರು. ಈಗಲೂ ಅವರು ಸ್ಚ ಇಚ್ಚೆಯಿಂದ ಪಕ್ಷಕ್ಕೆ ಸೇರ್ಪಡೆ ಆದರೆ ಆಗಲಿ. ಯಾರಿಗೂ ಒತ್ತಾಯ ಮಾಡಲ್ಲ ಎಂದಿದ್ದಾರೆ.
![](https://pratidhvani.com/wp-content/uploads/2024/01/IMG-20240125-WA0109-jpg.webp)
ಕಾನೂನು ಕ್ರಮದ ಭರವಸೆ ನೀಡಿದ ಸಭಾಪತಿ!
ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆ ಆಗಿರುವ ಜಗದೀಶ್ ಶೆಟ್ಟರ್ಗೆ ಸಂಕಷ್ಟ ಎದುರಾಗುವ ಬಗ್ಗೆ ಸ್ವತಃ ವಿಧಾನ ಪರಿಷತ್ ಸಭಾಪತಿಯೇ ಸ್ಪಷ್ಟನೆ ನೀಡಿದ್ದಾರೆ. ರಾಜೀನಾಮೆ ಸಲ್ಲಿಕೆಗೂ ಮುನ್ನ ಮಾತನಾಡಿದ್ದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗಲಿದೆ ಎಂದಿದ್ದಾರೆ. ಜಗದೀಶ್ ಶೆಟ್ಟರ್ ಫೋನ್ ಕಾಲ್ ಮಾಡಿ ಬಿಜೆಪಿಗೆ ಹೋಗ್ತೀನಿ ಎಂದಿದ್ದರು. ಇ-ಮೇಲ್ ಮಾಡ್ತೀನಿ ಎಂದಿದ್ದರು, ಆದರೆ ಯಾವುದೇ ಇ- ಮೇಲ್ ಬಂದಿಲ್ಲ. ಸದಸ್ಯರು ನೇರವಾಗಿಯೇ ಬಂದು ರಾಜೀನಾಮೆ ಕೊಡಬೇಕು. ಜಗದೀಶ್ ಶೆಟ್ಟರ್ ಅವರು ಈಗಲೂ ಕಾಂಗ್ರೆಸ್ ಸದಸ್ಯರು ಆಗಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆದರೂ ಆಗಬಹುದು. ಯಾರಾದರೂ ಈ ವಿಚಾರವಾಗಿ ದೂರು ಕೊಡಬಹುದು. ದೂರು ಬಂದರೆ ಕಾನೂನು ಪ್ರಕಾರವೇ ಎಲ್ಲ ಕ್ರಮ ಆಗುತ್ತೆ ಎಂದಿದ್ದರು.
ಕಾಂಗ್ರೆಸ್ ಪಕ್ಷವೇ ಸಭಾಪತಿಗೆ ದೂರು ಕೊಡುತ್ತಾ..?
ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಜಗದೀಶ್ ಶೆಟ್ಟರ್ ಅವರ ಅವಧಿ 2029ರ ವರೆಗೂ ಇತ್ತು. ಆದರೂ ಸದಸ್ಯತ್ವಕ್ಕೆ ರಾಜೀನಾಮೆ ಕೊಡದೆ ಬಿಜೆಪಿ ಸೇರ್ಪಡೆ ಆಗಿರುವುದು ಕಾನೂನು ಪ್ರಕಾರ ತಪ್ಪಾಗಿದೆ. ಈ ಬಗ್ಗೆ ಬಿಜೆಪಿ ಸೇರುವ ಮೊದಲು ರಾಜೀನಾಮೆ ಪತ್ರವನ್ನು ನೇರವಾಗಿಯೇ ಕೊಡಬೇಕಿತ್ತು. ಆದರೆ ಅದಕ್ಕೂ ಮೊದಲೇ ಬಿಜೆಪಿ ಪಕ್ಷ ಸೇರ್ಪಡೆ ಆಗಿರುವುದು ಕಾನೂನು ಬಾಹೀರ. ಇದನ್ನು ಕಾಂಗ್ರೆಸ್ ಹೇಗೆ ನೋಡುತ್ತದೆ ಎನ್ನುವುದನ್ನು ಕಾದು ನೋಡ್ಬೇಕು. ಇಲ್ಲೀವರೆಗೂ ನಡೆದಿರುವ ಬೆಳವಣಿಗೆಯನ್ನು ನೋಡಿದರೆ ಕಾಂಗ್ರೆಸ್ ದೂರು ಕೊಡುವ ಯಾವುದೇ ಲಕ್ಷಣ ಕಂಡು ಬರುತ್ತಿಲ್ಲ. ಈಗಲಾದರೂ ಕಾನೂನು ಅಸ್ತ್ರವನ್ನು ಕಾಂಗ್ರೆಸ್ ಬಳಸಿಕೊಳ್ಳಬೇಕಿದೆ. ಶೆಟ್ಟರ್ ಹೋದರೆ ಹೋಗಲಿ ಎನ್ನುವುದು ಬೇರೆ. ಆದರೆ ಕಾನೂನು ಮೀರಿದ್ದು ಸರೀನಾ..? ಇಲ್ಲ ಎನ್ನುವುದಾದರೆ ಕಾಂಗ್ರೆಸ್ ದೂರು ಕೊಡಬೇಕಿದೆ.