ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಲೋಕಸಭಾ ತಯಾರಿ ಶುವಾಗುವ ಮುನ್ನವೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಘರ್ ವಾಪ್ಸಿ ಆಗಿದ್ದಾರೆ. ಯಡಿಯೂರಪ್ಪ ಆಪರೇಷನ್ ಸಕ್ಸಸ್ ಮಾಡಿದ್ದು, ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿದ್ದಾರೆ. ಹೂಗುಚ್ಚ ನೀಡಿ, ಕೇಸರಿ ಶಾಲು ಹಾಕಿ ಜಗದೀಶ್ ಶೆಟ್ಟರ್ ಅವರನ್ನ ಪಕ್ಷಕ್ಕೆ ಸ್ವಾಗತಿಸಲಾಗಿದೆ. ಇನ್ನು ಇದೇ ವೇಳೆ ಮಾತನಾಡಿದ ಶೆಟ್ಟರ್, ಬಿಜೆಪಿ ಸೇರಿದ್ದು ಸಂತೋಷವಾಗಿದೆ.. ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.. ದೇಶದ ಹಿತರಕ್ಷಣೆಗಾಗಿ ನಾನು ಬಿಜೆಪಿ ಸೇರಿದ್ದೇನೆ.. ಮೋದಿ ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು ಎಂದಿದ್ದಾರೆ.
![](https://pratidhvani.com/wp-content/uploads/2024/01/IMG-20240125-WA0158-1024x567.webp)
ಯಾವುದೇ ಬೇಡಿಕೆ ಇಲ್ಲದೆ ಬಿಜೆಪಿಗೆ ಸೇರ್ಪಡೆ..!
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ ಯಾವುದೇ ಅಪೇಕ್ಷೆ ಇಲ್ಲದೆ ಜಗದೀಶ್ ಶೆಟ್ಟರ್ ಪಕ್ಷಕ್ಕೆ ವಾಪಸ್ ಬಂದಿದ್ದಾರೆ. ಅಮಿತ್ ಷಾ, ಜೆಪಿ ನಡ್ಡಾ ಸಂತೋಷ ಪಟ್ಟಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಜಗದೀಶ್ ಶೆಟ್ಟರ್ ಬಿಜೆಪಿಗೆ ಬಂದಿರೋರು ದೊಡ್ಡ ಶಕ್ತಿ ಬಂದಂತಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿಗೆ ಮರಳಿ ಸೇರ್ಪಡೆ ಆಗಿರೋ ಜಗದೀಶ್ ಶೆಟ್ಟರ್ ಅವರನ್ನು ಲೋಕಸಭಾ ಚುನಾವಣೆಗೆ ಅಭ್ಯರ್ಥಿಯನ್ನಾಗಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗ್ತಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಸಮರ್ಥ ಅಭ್ಯರ್ಥಿಗಳು ಸಿಕ್ಕಿಲ್ಲ. ಹೀಗಾಗಿ ಬೆಳಗಾವಿ ಅಥವಾ ಹಾವೇರಿಯಿಂದ ಜಗದೀಶ್ ಶೆಟ್ಟರ್ರನ್ನು ನಿಲ್ಲಿಸಲು ಅಮಿತ್ ಷಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ.
![](https://pratidhvani.com/wp-content/uploads/2024/01/WhatsApp-Image-2024-01-25-at-15.21.08-1024x707.webp)
ವಿಜಯೇಂದ್ರಗೆ ಶಕ್ತಿ ತುಂಬಲು ಯಡಿಯೂರಪ್ಪ ಪ್ಲ್ಯಾನ್:
ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡ್ತಾರೆ ಅನ್ನೋ ಚರ್ಚೆಯೂ ನಡೆಯುತ್ತಿದೆ. ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲೂ ಶೆಟ್ಟರ್ ಸ್ಪರ್ಧೆ ಮಾಡುವ ಬಗ್ಗೆಯೂ ಮಾತು ಕೇಳಿಬರ್ತಿದೆ. ಈ ನಡುವೆ ಮಾಜಿ ಸಿಎಂ ಯಡಿಯೂರಪ್ಪ ಲಿಂಗಾಯತ ಸಮುದಾಯದ ಮತಗಳನ್ನು ಕ್ರೂಢೀಕರಣ ಮಾಡಲು ಹೀಗೆ ಶೆಟ್ಟರ್ ಅವರನ್ನು ಮರಳಿ ಪಕ್ಷಕ್ಕೆ ಕರೆತಂದಿದ್ದಾರೆ ಅನ್ನೋ ಮಾತುಗಳೂ ಇವೆ. ಜೊತೆಗೆ ಬಿ.ಎಲ್ ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪ್ರಭಾವವನ್ನು ಕಡಿಮೆ ಮಾಡಲು ಹುಬ್ಬಳ್ಳಿ ಧಾರವಾಡದಲ್ಲಿ ವಿಜಯೇಂದ್ರಗೆ ಓರ್ವ ಬಲಾಢ್ಯ ನಾಯಕನ ಅವಶ್ಯಕತೆ ಇತ್ತು. ಅದೇ ಕಾರಣಕ್ಕೆ ಶೆಟ್ಟರ್ ಅವರ ಮನವೊಲಿಸಿ ಬಿಜೆಪಿ ಕರೆತಂದಿದ್ದಾರೆ ಎನ್ನುವ ಮಾತುಗಳೂ ರಾಜಕಾರಣದಲ್ಲಿ ಕೇಳಿಬರುತ್ತಿವೆ.
![](https://pratidhvani.com/wp-content/uploads/2022/05/Jagadish-Shettar.jpg)
ಆತ್ಮವಂಚನೆ ಮಾಡಿಕೊಂಡ್ರಾ ಮಾಜಿ ಸಿಎಂ ಶೆಟ್ಟರ್..?
ಜಗದೀಶ್ ಶೆಟ್ಟರ್ ಕಳೆದ ಬಾರಿ ಟಿಕೆಟ್ ಕೊಡದೆ ಇರುವ ಬಿಜೆಪಿ ನಿರ್ಧಾರವನ್ನು ಸ್ವಾಗತ ಮಾಡಬೇಕಿತ್ತು. ಅಥವಾ ಕರೆದು ಟಿಕೆಟ್ ಕೊಟ್ಟಾಗ ಸೋಲುಂಡರೂ ಕರೆದುಕೊಂಡು ಹೋಗಿ ಪರಿಷತ್ ಸದಸ್ಯರನ್ನಾಗಿ ಮಾಡಿದ ಕಾಂಗ್ರೆಸ್ಗೆ ಗೌರವ ಕೊಡಬೇಕಿತ್ತು. ಎರಡನ್ನೂ ಮಾಡದೆ ಶೆಟ್ಟರ್ ಬಿಜೆಪಿಯಿಂದ ಕಾಂಗ್ರೆಸ್ಗೆ ಹೋಗಿ, ಈಗ ಕಾಂಗ್ರೆಸ್ನಿಂದ ಬಿಜೆಪಿಗೆ ಬಂದಿದ್ದಾರೆ. ಇದು ರಾಜಕಾರಣದಲ್ಲಿ ಯಾವುದೇ ಪರಿಣಾಮ ಬೀರದೆ ಇದ್ದರೂ ಶೆಟ್ಟರ್ ತಮಗೆ ತಾವೇ ಆತ್ಮವಂಚನೆ ಮಾಡಿಕೊಂಡಂತಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಬಿಟ್ಟು ಬೇರೆ ಎಲ್ಲೂ ಹೋಗುವುದಕ್ಕೆ ಸಾಧ್ಯವೇ ಇಲ್ಲ. ಪಕ್ಷದಿಂದ ಪಕ್ಷಕ್ಕೆ ಜಂಪಿಂಗ್ ಸ್ಟಾರ್ ಎನ್ನುವ ಪಟ್ಟವನ್ನು ಶೆಟ್ಟರ್ ಅಲಂಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲೇ ಉಳಿಯಬೇಕು. ಅಲ್ಲಿನ ಏಳುಬೀಳುಗಳನ್ನು ಸಹಿಸಿಕೊಳ್ಳಬೇಕು ಅಷ್ಟೆ. ಬಿಜೆಪಿಗೆ ವಾಪಸ್ ಆಗಿರುವುದು ಮುಖಕ್ಕೆ ಮಸಿ ಬಳಿದುಕೊಂಡಂತಾಗಿದೆ.
ಕೃಷ್ಣಮಣಿ