ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಇದಕ್ಕೂ ಮೊದಲು ದೂರವಾಣಿ ಮೂಲಕ ಮಂಡ್ಯ ಫಲಿತಾಂಶ ಮಾಹಿತಿ ಪಡೆದಿದ್ದಾರೆ.
ಗಂಗಾಧರೇಶ್ಚರ ಸ್ವಾಮಿಗೆ ನಿರ್ಮಾಲಾನಂದ ಶ್ರೀಗಳ ಜೊತೆಯಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಶ್ರೀಗಳ ಜೊತೆ ಜೊತೆಗೆ ಗೆಲುವಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆ ಬಳಿಕ ಮಾತನಾಡಿರುವ ಕುಮಾರಸ್ವಾಮಿ, ಆರಂಭಿಕವಾಗಿ ಕಾಯ್ದುಕೊಂಡ ಮುನ್ನಡೆ ಕೊನೆವರೆಗೂ ಇರುತ್ತದೆ ಎಂದಿದ್ದಾರೆ. ಜೊತೆಗೆ ಮೂರಕ್ಕೆ ಮೂರು ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ ಅಂತಾನೂ ತಿಳಿಸಿದ್ದಾರೆ.
ನಾನು ಚುನಾವಣೆ ಶುರು ಮಾಡಿದಾಗಿನಿಂದಲೂ ಬಹಳ ಉತ್ಸುಕನಾಗಿದ್ದೇನೆ. 25ಕ್ಕೂ ಹೆಚ್ಚು ಎನ್ಡಿಎ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಬೆಂಗಳೂರು ಗ್ರಾಮಾಂತರದಲ್ಲೂ ಬಿಜೆಪಿ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಪ್ರಜ್ವಲ್ ಗೆಲುವಿನ ಬಳಿಕ ಏನು ಮಾಡಬೇಕು ಎಂದು ಈಗಾಗಲೇ ನಿರ್ಧಾರ ಮಾಡಿದ್ದೇವೆ ಎಂದಿದ್ದ ಕುಮಾರಸ್ವಾಮಿ, ಈಗ ಆ ವಿಚಾರದ ಬಗ್ಗೆ ಏನನ್ನೂ ಹೇಳಿಲ್ಲ.