ಜೆಡಿಎಸ್ ನಾಯಕ ಕುಮಾರಸ್ವಾಮಿ ನಡೆಸುತ್ತಿರುವ ಪಂಚರತ್ನ ಯಾತ್ರೆ ಹಳೇ ಮೈಸೂರು ಭಾಗ ಮಾತ್ರವಲ್ಲದೆ, ಉತ್ತರ ಕರ್ನಾಟಕ ಭಾಗದಲ್ಲೂ ಅಬ್ಬರಿಸುತ್ತಿದೆ. ಬೀದರ್, ಕಲಬುರಗಿ ಬಳಿಕ ಇದೀಗ ವಿಜಯನಗರದಲ್ಲಿ ಜೆಡಿಎಸ್ನ ರಥಯಾತ್ರೆ ಸಾಗುತ್ತಿದ್ದು, ಸಾವಿರಾರು ಜನರು ಸೇರುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ಗೆ ಸಿಗುತ್ತಿರುವ ಅಭೂತಪೂರ್ವ ಯಶಸ್ಸನ್ನು ನೋಡಿ ಕಾಂಗ್ರೆಸ್, ಬಿಜೆಪಿಗೆ ಶಾಕ್ ಆಗಿತ್ತು. ಈ ನಡುವೆ ಜೆಡಿಎಸ್ ಪಂಚರತ್ನ ರಥ ಯಾತ್ರೆಯಲ್ಲಿ ಭಾಗಿಯಾಗಿದ್ದ ಜೆಡಿಎಸ್ ಘೋಷಿತ ಅಭ್ಯರ್ಥಿ ದಿಢೀರ್ ನಿಧನರಾಗಿದ್ದಾರೆ. ವಿಜಯಪುರ ಜಿಲ್ಲೆ ಸಿಂದಗಿ ಜೆಡಿಎಸ್ ಘೋಷಿತ ಅಭ್ಯರ್ಥಿ ಸಾವನ್ನಪ್ಪಿರುವುದು ಚುನಾವಣೆ ಸಮಯದಲ್ಲಿ ಜೆಡಿಎಸ್ ನಾಯಕರಿಗೆ ಆಘಾತ ಉಂಟು ಮಾಡಿದೆ.
ಜನವರಿ 18ರಂದು ಪಂಚರತ್ನ ಯಾತ್ರೆಯಲ್ಲಿ ಭಾಗಿ..!
ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗಿದ್ದ ಶಿವಾನಂದ ಪಾಟೀಲ್ ಸೋಮಜಾಳ್ ನಿಧನರಾಗಿದ್ದಾರೆ. 54 ವರ್ಷದ ಶಿವಾನಂದ ಪಾಟೀಲ್ ಸೋಮಜಾಳ್ಗೆ ನಿನ್ನೆ ರಾತ್ರಿ 11 ಗಂಟೆಗೆ ಹೃದಯಾಘಾತ ಸಂಭವಿಸಿದ್ದು, ಸಿಂದಗಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ನಿನ್ನೆ ಸಂಜೆ ತನಕ ಹೆಚ್.ಡಿ ಕುಮಾರಸ್ವಾಮಿ ಜೊತೆಯಲ್ಲೇ ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದ ಶಿವಾನಂದ ಪಾಟೀಲ್ ಸೋಮಜಾಳ್, ಏಕಾಏಕಿ ವಿಧಿವಶ ಆಗಿರುವುದು ಜೆಡಿಎಸ್ಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ವಿಜಯಪುರ ನಗರ ಹಾಗೂ ನಾಗಠಾಣ ಕ್ಷೇತ್ರದಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದ ಶಿವಾನಂದ ಪಾಟೀಲ್ ಸೋಮಜಾಳ್, ಸಂಜೆ ಮನೆಗೆ ವಾಪಸ್ ಆಗಿದ್ದರು. ಆ ಬಳಿಕ ಮನೆಯಲ್ಲಿ ಕುಸಿದುಬಿದ್ದ ಶಿವಾನಂದ ಪಾಟೀಲ್ ಸೋಮಜಾಳ್, ಆಸ್ಪತ್ರೆಗೆ ಶಿಫ್ಟ್ ಮಾಡುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ಮಾಜಿ ಸೈನಿಕನಿಗೆ ಇತ್ತು ಈ ಬಾರಿ ಗೆಲುವಿನ ಅವಕಾಶ..!
ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗಿದ್ದ ಶಿವಾನಂದ ಪಾಟೀಲ್ ಸೋಮಜಾಳ್, ತಮ್ಮ ಕ್ಷೇತ್ರದಲ್ಲಿ ಭರ್ಜರಿ ಸಮಾವೇಶ ಮಾಡಿದ್ದರು. ಜನವರಿ 18ರಂದು ಶಿವಾನಂದ ಪಾಟೀಲ್ ಸೋಮಜಾಳ ಪರವಾಗಿ ಬೃಹತ್ ಸಮಾವೇಶ ಮಾಡಿದ್ದ ಕುಮಾರಸ್ವಾಮಿಗೆ ಅಪಾರ ಜನರ ಬೆಂಬಲ ಸಿಕ್ಕಿತ್ತು. ಮಾಜಿ ಸೈನಿಕರಾಗಿದ್ದ ಶಿವಾನಂದ ಪಾಟೀಲ್ ಸೋಮಜಾಳ್ಗೆ ಕ್ಷೇತ್ರದಲ್ಲಿ ಉತ್ತಮ ಹೆಸರು ಕೂಡ ಇತ್ತು. ಮಾಜಿ ಸೈನಿಕ ಎನ್ನುವ ಬಲವೂ ಇತ್ತು. ಜೊತೆಗೆ ಪ್ರಾದೇಶಿಕ ಪಕ್ಷದ ಮೇಲೆ ಈ ಬಾರಿ ಜನರಿಗೆ ಮೂಡಿರುವ ವಿಶ್ವಾಸದ ಅಲೆಯಲ್ಲಿ ಗೆದ್ದುವ ಬರುವ ನಿರೀಕ್ಷೆಯಲ್ಲಿದ್ದರು. ಆದರೆ 16 ವರ್ಷಗಳ ಕಾಲ ಸೇನೆಯಲ್ಲಿ ಮಳೆ ಗಾಳೀ ಚಳಿ ಎನ್ನದೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶಿವಾನಂದ ಪಾಟೀಲ್ ಸೋಮಜಾಳ್, ದಿಢೀರ್ ಸಾವು ನೋವುಂಟು ಮಾಡಿದೆ.