2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶತಾಯ ಗತಾಯ ಅಧಿಕಾರದ ಗದ್ದುಗೆ ಏರಬೇಕೆಂಬ ಹಂಬಲದಲ್ಲಿರುವ ಜೆಡಿಎಸ್ ಈಗಾಗಲೇ ತನ್ನ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಪಂಚರತ್ನ ಹಾಗೂ ಮಿಷನ್ 123ಎಂಬ ಕಾರ್ಯಾಗಾರವನ್ನ ಮಾಡುವ ಮೂಲಕ ತುಸು ವಿಭಿನ್ನ ಎನ್ನಿಸಿದೆ.
ಈಚೆಗೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪಂಚರತ್ನ ಕಾರ್ಯಾಗಾರ ನಡೆಸಿದ ಜೆಡಿಎಸ್ ಕಾರ್ಯಕ್ರಮದ ನಂತರ ಹಿರಿಯ ಶಾಸಕ ಜೆ.ಟಿ.ದೇವೇಗೌಡ ಮನೆಗೆ ಭೇಟಿ ದೇವೇಗೌಡ ಹಾಗೂ ಕುಮಾರಸ್ವಾಮಿ ಜಿಟಿಡಿಯನ್ನು ಪಕ್ಷದಲ್ಲೇ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಶುಕ್ರವಾರ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮೈಸೂರು ಭಾಗದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಚಾಮುಂಡೇಶ್ವರಿ, ಕೆ.ಆರ್.ನಗರ, ಟಿ.ನರಸೀಪುರ, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಗಳ ಹಾಲಿ ಜೆಡಿಎಸ್ ಶಾಸಕರಿಗೆ ಟಿಕೆಟ್ ಖಾತ್ರಿಯಾಗಿದ್ದು ಹುಣಸೂರಿನಿಂದ ಜೆಟಿಡಿ ಪುತ್ರ ಹರೀಶ್ ಗೌಡ ಹಾಗೂ ಹೆಚ್.ಡಿ.ಕೋಟೆಯಿಂದ ಮಾಜಿ ಶಾಸಕ ಚಿಕ್ಕಣ್ಣನವರ ಪುತ್ರ ಜಯಪ್ರಕಾಶ್ಗೆ ಟಿಕೆಟ್ ಘೋಷಣೆಯಾಗಿದೆ.

ಪಟ್ಟಿ ಬಿಡುಗಡೆ ನಂತರ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಜಿಲ್ಲೆಯ ಎಲ್ಲಾ ಉಸ್ತುವಾರಿಯನ್ನು ನಾನು ಸಂಪೂರ್ನವಾಗಿ ಜಿಟಿಡಿಗೆ ವಹಿಸುತ್ತಿದ್ದೇನೆ. ಜಿಟಿಡಿ ನಾಯಕತ್ವದಲ್ಲೇ ಎಲ್ಲವೂ ನಡೆಯುತ್ತದೆ ಅವರ ನಾಯಕತ್ವದ ಬಗ್ಗೆ ಒಂದೇ ಒಂದು ದೂರು ಕೇಳಿಬಂದರೂ ನಾನು ಸಹಿಸುವುದಿಲ್ಲ ಅಪಸ್ವರ ಎತ್ತುವವರು ಹೊರ ನಡೆಯಬಹುದು ಎಂದು ಪರೋಕ್ಷವಾಗಿ ಜಿಟಿಡಿ ವಿರೋಧಿ ಬಣಕ್ಕೆ ದೊಡ್ಡ ಗೌಡರು ಚಾಟಿ ಬೀಸಿದ್ದಾರೆ.
ಇನ್ನು ಅಬ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ ನಾನು ದೇವೇಗೌಡರು ಮನೆಗೆ ಬಂದ ದಿನವೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ನನ್ನ ಹಾಗೂ ಪಕ್ಷದ ನಡುವೆ ಯಾವುದೇ ಗೊಂದಲಗಳು ಉಳಿದಿಲ್ಲ ಎಂದಿದ್ದಾರೆ.
ಚಾಮುಂಡೇಶ್ವರಿ ತಾಯಿಗೆ ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ ಜನವರಿಯಲ್ಲಿ ಚಂಡಿಕಾ ಯಾಗ ನಡೆಸಲಿದ್ದಾರೆ ಅವರ ಉತ್ಸಾಹವೇ ನಮ್ಮಗೆ ಪ್ರೇರಣೆ ಎಂದು ಹೇಳಿದ್ದಾರೆ.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಜಿಟಿಡಿ
ಇನ್ನು ಚಾಮುಂಡೇಶ್ವರಿ ಕ್ಷೇತ್ರವನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿರುವ ಜಿಟಿಡಿ ತಮ್ಮ ಪುತ್ರ ಬಿಡಿಸಿಸಿ ಅಧ್ಯಕ್ಷ ಜಿ.ಡಿ.ಹರೀಶ್ ಗೌಡಗೆ ಹುಣಸೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೂಲಕ ತಮ್ಮ ರಾಜಕೀಯ ಕಡುವೈರಿ ಶಾಸಕ ಸಾ.ರಾ.ಮಹೇಶ್ ವಿರುದ್ದ ಹಳೇ ಸೇಡನ್ನು ತೀರಿಸಿಕೊಂಡರು ಮತ್ತು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವಲ್ಲಿ ಯಶಸ್ವಿಯಾಗಿದ್ದಾರೆ.






