ಜಗತ್ತಿನಾದ್ಯಂತ ಬಲವಾಗಿ ಬೇರೂರುತ್ತಿರುವ ಬಲಪಂಥೀಯ ರಾಜಕಾರಣದಿಂದ ಉಂಟಾಗಿರುವ ಒಂದು ಚಾರಿತ್ರಿಕ ವ್ಯತ್ಯಯ ಎಂದರೆ ಇಡೀ ಮಾನವ ಸಮಾಜವನ್ನು ನಿರ್ದಿಷ್ಟ ಮತೀಯ ಅಥವಾ ಧಾರ್ಮಿಕ ಅಸ್ಮಿತೆಗಳ ಚೌಕಟ್ಟಿನೊಳಗೆ ಬಂಧಿಸಿ, ಭೌಗೋಳಿಕ ಅಸ್ಮಿತೆಗಳನ್ನೂ ದಾಟಿ ಮನುಷ್ಯ ಕುಲವನ್ನು ಎರಡು ಗುಂಪುಗಳಾಗಿ ವಿಂಗಡಿಸುವುದು. ಇವತ್ತಿನ ಜಾಗತಿಕ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ವಿಭಜನೆಯ ಗೋಡೆಗಳು ಪ್ರತಿಯೊಂದು ದೇಶದಲ್ಲೂ ತಮ್ಮದೇ ಆದ ವಿಶಿಷ್ಟ ಲಕ್ಷಣಗಳೊಡನೆ ಗಟ್ಟಿಯಾಗುತ್ತಿವೆ. ಚಾರಿತ್ರಿಕ ಭೌತವಾದದ ಚಿಂತನಾ ಕ್ರಮಗಳಿಗೆ ತದ್ವಿರುದ್ಧವಾಗಿ ಮಾನವನ ಇಡೀ ಚರಿತ್ರೆಯನ್ನು ವಿವಿಧ ಮತೀಯ, ಧಾರ್ಮಿಕ, ಭಾಷಿಕ, ಪ್ರಾಂತೀಯ ಅಥವಾ ಪ್ರಾದೇಶಿಕ ನೆಲೆಗಳಲ್ಲೇ ವ್ಯಾಖ್ಯಾನಿಸುವ ಒಂದು ಬೌದ್ಧಿಕ ಪರಂಪರೆಗೆ ವರ್ತಮಾನದ ರಾಜಕೀಯ ಬೆಳವಣಿಗೆಗಳು ಪೂರಕವಾಗಿ ಪರಿಣಮಿಸಿವೆ. ಹಾಗಾಗಿಯೇ 1948ರಲ್ಲಿ ಸ್ಥಾಪನೆಯಾದ ಇಸ್ರೇಲ್ ಎಂಬ ರಾಷ್ಟ್ರ ತನ್ನ ಯಹೂದಿ ಧರ್ಮದ ಮೂಲ ನೆಲೆಯನ್ನು ಅವಲಂಬಿಸುವ ಮೂಲಕ ಶತಮಾನಗಳ ಅಸ್ತಿತ್ವವನ್ನು ಪ್ರತಿಪಾದಿಸಲು ಯತ್ನಿಸುತ್ತದೆ.
ಮತ್ತೊಂದೆಡೆ ಇಂದು ಇಸ್ರೇಲ್ ಆಕ್ರಮಿಸಿರುವ ಭೂ ಪ್ರದೇಶದಲ್ಲಿ ಶತಮಾನಗಳ ನಾಗರಿಕತೆಯನ್ನು ಪೋಷಿಸಿಕೊಂಡು ಬಂದಿರುವ ಪ್ಯಾಲೆಸ್ಟೈನೀಯರು ತಮ್ಮ ತಾಯ್ನೆಲದಲ್ಲೇ ಪರಕೀಯರಂತೆ, ಅನ್ಯರ ಅತಿಕ್ರಮಣ ಮತ್ತು ಆಕ್ರಮಣಕ್ಕೆ ತುತ್ತಾಗಿ ಬದುಕುತ್ತಿದ್ದಾರೆ. 1948ರಲ್ಲಿ ಪ್ಯಾಲೆಸ್ಟೈನೀಯರ ನೆಲದಲ್ಲಿ ಇಸ್ರೇಲ್ ಎಂಬ ರಾಷ್ಟ್ರದ ಉದಯವನ್ನು ಘೋಷಿಸಿದ ಸಂದರ್ಭದಲ್ಲಿ ಐದು ಅರಬ್ ರಾಷ್ಟ್ರಗಳು ಒಂದಾಗಿ ನೂತನ ಇಸ್ರೇಲ್ ವಿರುದ್ಧ ಸಮರ ಸಾರಿದ್ದವು. ಈ ಭೀಕರ ಕಾಳಗದಲ್ಲಿ ಏಳು ಲಕ್ಷ ಪ್ಯಾಲೆಸ್ಟೈನೀಯರು ತಮ್ಮ ನೆಲೆಯನ್ನು ಕಳೆದುಕೊಳ್ಳಬೇಕಾಯಿತು. ಈ ಖಾಲಿಯಾದ ಭೂ ಪ್ರದೇಶವನ್ನೇ ಯಹೂದ್ಯರ ರಾಷ್ಟ್ರ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಈ ಸಂದರ್ಭದಲ್ಲಿ ವಲಸೆ ಹೊರಟ ಏಳು ಲಕ್ಷ ಪ್ಯಾಲೆಸ್ಟೈನೀಯರಲ್ಲಿ ಬಹುಪಾಲು ಜನರು ಮೆಡಿಟರೇನಿಯನ್ ತಟದಲ್ಲಿರುವ ಗಾಝಾ ಪಟ್ಟಿಯಲ್ಲಿ ಆಶ್ರಯ ಪಡೆದರು. ಇನ್ನು ಕೆಲವರು ಜೋರ್ಡಾನ್ ನದಿಯ ಪಶ್ಚಿಮ ತಟ, ವೆಸ್ಟ್ ಬ್ಯಾಂಕ್ನಲ್ಲಿ ಆಶ್ರಯ ಪಡೆದರು.
ಇಸ್ರೇಲ್ ಬಹುಪಾಲು ಪ್ಯಾಲೆಸ್ಟೈನ್ ಭೂಮಿಯನ್ನು ಆಕ್ರಮಿಸಿತು, ಜೋರ್ಡಾನ್ ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸೆಲಂ ಪ್ರದೇಶಗಳನ್ನು ಆಕ್ರಮಿಸಿತ್ತು ಗಾಝಾ ಪಟ್ಟಿ ಇಜಿಪ್ಟ್ ಪಾಲಾಗಿತ್ತು. ಶತಮಾನಗಳ ಕಾಲ ಓಟೊಮನ್ ಸಾಮ್ರಾಜ್ಯದಡಿ ಬದುಕಿ ಬಾಳಿದ್ದ ಪ್ಯಾಲೆಸ್ಟೈನೀಯರು ತದನಂತರ ದಶಕಗಳ ಕಾಲ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಅಧೀನಕ್ಕೊಳಗಾಗಿದ್ದರು. ವಿಶ್ವದಾದ್ಯಂತ ವಸಾಹತು ಆಳ್ವಿಕೆ ಮತ್ತು ಸಾಮ್ರಾಜ್ಯಶಾಹಿ ಭೂ ಅಧಿಪತ್ಯದ ಪರ್ವ ಎರಡನೆ ಮಹಾಯುದ್ಧದೊಂದಿಗೆ ಅಂತ್ಯಗೊಂಡರೂ, ಪ್ಯಾಲೆಸ್ಟೈನೀಯರ ಬವಣೆಯಂತೂ ನೀಗಲಿಲ್ಲ. 1967ರಲ್ಲಿ ಇಸ್ರೇಲ್ ಪ್ಯಾಲೆಸ್ಟೈನ್ ಭೂ ಪ್ರದೇಶದ ಮೂರೂ ವಿಭಾಗಗಳನ್ನು ಆಕ್ರಮಿಸಿಕೊಂಡಿತ್ತು. ವೆಸ್ಟ್ ಬ್ಯಾಂಕ್ ಮತ್ತು ಜೆರುಸೆಲಂ ಪ್ರಾಂತ್ಯಗಳನ್ನು ಜೋರ್ಡಾನ್ನಿಂದ, ಗಾಝಾ ಪಟ್ಟಿಯನ್ನು ಇಜಿಪ್ಟ್ನಿಂದಲೂ ವಶಪಡಿಸಿಕೊಂಡ ಇಸ್ರೇಲ್ ಅಂದಿನಿಂದಲೂ ಈ ಭೂ ಪ್ರದೇಶದ ಮೇಲೆ ದಿಗ್ಬಂಧನಗಳ ಮೂಲಕ, ನಿರ್ಬಂಧಗಳ ಮೂಲಕ ತನ್ನ ಹಿಡಿತ ಸಾಧಿಸಿದೆ. ಜೋರ್ಡಾನ್ ನದಿಯ ಪಶ್ಚಿಮ ತಟದಲ್ಲಿರುವ ವೆಸ್ಟ್ ಬ್ಯಾಂಕ್ ಭೂ ಪ್ರದೇಶಕ್ಕೂ, ಇಸ್ರೇಲ್ ಮತ್ತು ಮೆಡಿಟರೇನಿಯನ್ ಸಮುದ್ರದ ನಡುವೆ ಇರುವ ಸಣ್ಣ ಗಾಝಾ ಪಟ್ಟಿಗೂ ಯಾವುದೇ ರೀತಿಯ ಭೌಗೋಳಿಕ ಸಾಮೀಪ್ಯ ಇಲ್ಲದಿದ್ದರೂ, ಇಸ್ರೇಲ್ 1967ರಿಂದಲೂ ವೆಸ್ಟ್ ಬ್ಯಾಂಕ್ ಮೇಲೆ ತನ್ನ ಪೂರ್ಣ ಸೇನಾ ನಿಯಂತ್ರಣವನ್ನು ಸಾಧಿಸಿದೆ. ಗಾಝಾ ಪಟ್ಟಿಯನ್ನು ತನ್ನ ದಿಗ್ಬಂಧನದಲ್ಲಿ ಇಟ್ಟುಕೊಂಡಿದೆ.
![](https://pratidhvani.com/wp-content/uploads/2023/10/HumanRightsCrisis1400-1024x682.jpg)
ಇಸ್ರೇಲ್ ಪ್ಯಾಲೆಸ್ಟೈನ್ ಸಂಘರ್ಷ
1980ರಲ್ಲಿ ಜೆರುಸೆಲಂ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಇಸ್ರೇಲ್ ಏಕೀಕೃತ ಜೆರುಸೆಲಂ ತನ್ನ ರಾಜಧಾನಿಯಾಗಿ ಘೋಷಿಸಿತು. ತತ್ಪರಿಣಾಮವಾಗಿ ಹಳೆಯ ಜರುಸೆಲಂ ನಗರ ಹಾಗೂ ಪೂರ್ವ ಪ್ರಾಂತ್ಯವನ್ನೂ ವಶಪಡಿಸಿಕೊಂಡಿತ್ತು. ಇದಕ್ಕೂ ಮುನ್ನ 1970ರಿಂದಲೂ ಇಸ್ರೇಲ್ ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸೆಲಂನಲ್ಲಿ ಯಹೂದಿ ವಸತಿ ನೆಲೆಗಳನ್ನು ಸ್ಥಾಪಿಸಲು ಮುಂದಾಗಿದ್ದು ಈಗ ಈ ಪ್ರದೇಶದಲ್ಲಿ ಏಳು ಲಕ್ಷಕ್ಕೂ ಹೆಚ್ಚು ಯಹೂದ್ಯರು ನೆಲೆಸಿದ್ದಾರೆ. ಪೂರ್ವ ಜೆರುಸೆಲಂನಲ್ಲಿ ನೆಲೆಸಿರುವ ಬಹುಸಂಖ್ಯಾತ ಅರಬ್ಬರು ಯಹೂದಿ ಪ್ರಜೆಗಳಲ್ಲದಿದ್ದರೂ, ಇದು ಇಸ್ರೇಲ್ ಅಧೀನದಲ್ಲಿದೆ. ವೆಸ್ಟ್ ಬ್ಯಾಂಕ್ನಲ್ಲಿ ಪ್ಯಾಲೆಸ್ಟೈನ್ ಪ್ರಾಧಿಕಾರ 1993ರ ಓಸ್ಲೋ ಒಪ್ಪಂದದ ಅನುಸಾರ ಸೀಮಿತ ಆಡಳಿತಾಧಿಕಾರವನ್ನು ಹೊಂದಿದ್ದರೂ ಇಡೀ ಪ್ರದೇಶವು ಇಸ್ರೇಲ್ ಸೇನೆಯ ಆಧಿಪತ್ಯಕ್ಕೊಳಗಾಗಿದೆ. ಪ್ಯಾಲೆಸ್ಟೈನ್ ಪ್ರಾಧಿಕಾರವನ್ನು ಸೆಕ್ಯುಲರ್ ಎಂದೇ ಪರಿಗಣಿಸಲ್ಪಡುವ ಫತಾಹ್ (ಪ್ಯಾಲೆಸ್ಟೈನ್ ಲಿಬರೇಷನ್ ಆರ್ಗನೈಸೇಷನ್ ಬೆಂಬಲಿತ) ನಿರ್ವಹಿಸುತ್ತಿದ್ದರೂ, ಹಮಾಸ್ ಬಂಡುಕೋರರ ಗುಂಪು ಗಾಝಾ ಪಟ್ಟಿಯನ್ನು ನಿಯಂತ್ರಿಸುತ್ತಿದೆ.
2005ರಲ್ಲಿ ಹಮಾಸ್ ಸಂಘಟನೆಯ ಒತ್ತಡಕ್ಕೆ ಮಣಿದು ಇಸ್ರೇಲ್ ಏಕಪಕ್ಷೀಯವಾಗಿ ಗಾಝಾ ಪಟ್ಟಿಯಿಂದ ತನ್ನ ಸೇನೆಯನ್ನು ಹಿಂತೆಗೆದುಕೊಂಡಿತ್ತು. 2006ರಲ್ಲಿ ಪ್ಯಾಲೆಸ್ಟೈನ್ ಪ್ರಾಂತ್ಯಗಳಲ್ಲಿ ನಡೆದ ಪ್ರಪ್ರಥಮ ಚುನಾವಣೆಗಳಲ್ಲಿ ಫತಾಹ್ ಗುಂಪನ್ನು ಸೋಲಿಸಿ ಹಮಾಸ್ ಅಧಿಕಾರಕ್ಕೆ ಬಂದಿತ್ತು. ಫತಾಹ್ ಮತ್ತು ಹಮಾಸ್ ಗುಂಪುಗಳು ರಚಿಸಿದ್ದ ಮೈತ್ರಿ ಸರ್ಕಾರವೂ ಹೆಚ್ಚು ಕಾಲ ಬಾಳಲಿಲ್ಲ. ಹಮಾಸ್ ಗುಂಪನ್ನು ಭಯೋತ್ಪಾದಕ ಸಂಘಟನೆ ಎಂದೇ ಪರಿಗಣಿಸಿದ್ದ ಪಶ್ಚಿಮ ರಾಷ್ಟ್ರಗಳು ನೇತೃತ್ವದ ಪ್ಯಾಲೆಸ್ಟೈನ್ ಪ್ರಾಧಿಕಾರಕ್ಕೆ ಹಣಕಾಸು ನಿಧಿಯನ್ನು ಪೂರೈಸಲು ನಿರಾಕರಿಸಿದ್ದರಿಂದ ಮೈತ್ರಿ ಸರ್ಕಾರವೂ ಪದಚ್ಯುತವಾಗಬೇಕಾಯಿತು. ಈ ಸನ್ನಿವೇಶದಲ್ಲಿ ಹಮಾಸ್ ಮತ್ತು ಫತಾಹ್ ನಡುವೆ ಉಂಟಾದ ನಾಗರಿಕ ಅಂತರ್ ಕಲಹದ ಪರಿಣಾಮ ಫತಾಹ್ ಸಂಘಟನೆಯು ಹಮಾಸ್ ಗುಂಪನ್ನು ವೆಸ್ಟ್ ಬ್ಯಾಂಕ್ನಿಂದ ಹೊರಹಾಕಿತ್ತು. 2007ರಲ್ಲಿ ಹಮಾಸ್ ಗಾಝಾ ಪಟ್ಟಿಯನ್ನು ಆಕ್ರಮಿಸಿಕೊಂಡು ಇವತ್ತಿನವರೆಗೂ ಆಳ್ವಿಕೆ ನಡೆಸುತ್ತಿದೆ.
ಆದರೆ ಹಮಾಸ್ ಸಂಘಟನೆಯನ್ನು ಭಯೋತ್ಪಾದಕ ಗುಂಪು ಎಂದೇ ಪರಿಗಣಿಸಿದ್ದ ಇಸ್ರೇಲ್ಗೆ ಗಾಝಾದಲ್ಲಿ ಹಮಾಸ್ ಆಳ್ವಿಕೆ ಇರುವುದು ಭದ್ರತೆಗೆ ಧಕ್ಕೆಯಾಗಿ ಕಾಣಹತ್ತಿತ್ತು. ಗಾಝಾ ಪಟ್ಟಿಯಿಂದ ಇಸ್ರೇಲ್ ಹಿಂತೆಗೆದರೂ, ಇತರ ಪ್ಯಾಲೆಸ್ಟೈನ್ ಪ್ರದೇಶದಲ್ಲಿ ಮುಂದುವರೆದಿದ್ದರಿಂದ, ಹಮಾಸ್ ಇಸ್ರೇಲ್ನೊಡಗಿನ ಸಂಘರ್ಷಕ್ಕೆ ಅಂತ್ಯ ಹಾಡಲೇ ಇಲ್ಲ. ಎರಡೂ ಬಣಗಳ ನಡುವೆ ಸಂಘರ್ಷಗಳು ನಿರಂತರವಾಗಿ ಸಾಗಿದ್ದವು. ಇದೇ ವೇಳೆ ಇಸ್ರೇಲ್ 2007ರಿಂದಲೇ ಗಾಝಾ ಪಟ್ಟಿಯ ಮೇಲೆ ನೆಲ, ವಾಯು, ಜಲ ದಿಗ್ಬಂಧವನ್ನು ಹೇರಿತ್ತು. ಹಾಗಾಗಿ ಗಾಝಾ ಪಟ್ಟಿಯ ಪ್ರವೇಶ ಮತ್ತು ನಿರ್ಗಮನ ಎರಡೂ ಸಹ ಇಸ್ರೇಲ್ ನಿಯಂತ್ರಣಕ್ಕೊಳಗಾಗಿತ್ತು. ಅಂದಿನಿಂದ ಇಂದಿನವರೆಗೂ ಗಾಝಾ ಪಟ್ಟಿ ಹಮಾಸ್ ಆಳ್ವಿಕೆಗೆ ಒಳಪಟ್ಟಿದ್ದರೂ ಪರಾವಲಂಬನೆಯ ಸ್ಥಿತಿಯಲ್ಲೇ ಇಸ್ರೇಲ್ ಅಧೀನದಲ್ಲಿದೆ. 23 ಲಕ್ಷ ಜನಸಂಖ್ಯೆ ಇರುವ “ ವಿಶ್ವದ ಅತಿ ದೊಡ್ಡ ಬಯಲುಸೆರೆಮನೆ ” ಎಂದೇ ಕರೆಯಲ್ಪಡುವ ಗಾಝಾ ಪಟ್ಟಿಯ ಎರಡೂ ಗಡಿಗಳಲ್ಲಿ ಇಸ್ರೇಲ್ ಬೇಲಿಗಳನ್ನು ನಿರ್ಮಿಸಿದೆ. ನೆಲದ ಮೇಲೆ ಮಾತ್ರವಲ್ಲದೆ ಭೂಗರ್ಭದಲೂ ತಡೆಗೋಡೆಗಳಿವೆ. ಇಸ್ರೇಲ್ನ ಆರ್ಥಿಕ ದಿಗ್ಬಂಧನದಿಂದ ಗಾಝಾ ಪಟ್ಟಿಯಲ್ಲಿ ಶೇ 47ರಷ್ಟು ನಿರುದ್ಯೋಗ ಇದ್ದು, ಇದರ ಪೈಕಿ ಶೇ 70ರಷ್ಟು ಯುವ ಸಮೂಹವೇ ಇದೆ. ದಿನಕ್ಕೆ ಎಂಟುಗಂಟೆ ವಿದ್ಯುತ್ ಪೂರೈಕೆಯಿಲ್ಲದ ಗಾಝಾದ ಏಕೈಕ ವಿಮಾನ ನಿಲ್ದಾಣವನ್ನೂ ಇಸ್ರೇಲ್ ನಾಶಪಡಿಸಿದೆ.
ವೆಸ್ಟ್ ಬ್ಯಾಂಕ್ ಹಾಗೂ ಗಾಝಾಪಟ್ಟಿಯಲ್ಲಿ ವಾಸಿಸುವ ಪ್ಯಾಲೆಸ್ಟೈನೀಯರ ಮೇಲಿನ ಈ ದಿಗ್ಬಂಧನಗಳ ಹೊರತಾಗಿ ಇಸ್ರೇಲ್ ತನ್ನದೇ ಆದ ಭದ್ರತಾ ಮಾದರಿಯೊಂದನ್ನು ರೂಪಿಸಿಕೊಂಡು, ಅಲ್ಲಿನ ಜನರ ಚಲನವಲನಗಳನ್ನೂ ನಿಯಂತ್ರಿಸುತ್ತಿದೆ. ವೆಸ್ಟ್ ಬ್ಯಾಂಕ್ ಪ್ರದೇಶದಲ್ಲೂ ಹಲವು ರೀತಿಯ ಚೆಕ್ ಪಾಯಿಂಟ್ಗಳನ್ನು, ಅಡೆತಡೆಗಳನ್ನು ನಿರ್ಮಿಸಿರುವ ಇಸ್ರೇಲ್ ತನ್ನ ನಿಯಂತ್ರಣದಲ್ಲಿರುವ ಪ್ಯಾಲೆಸ್ಟೈನೀಯರನ್ನು ಶಾಶ್ವತವಾಗಿ ಪರಾವಲಂಬಿಗಳನ್ನಾಗಿ ಮಾಡಿದೆ. ಏತನ್ಮಧ್ಯೆ ಪ್ಯಾಲೆಸ್ಟೈನ್ ಸಮಸ್ಯೆಯನ್ನು ಬದಿಗೊತ್ತಿ ಇಸ್ರೇಲ್ ಅರಬ್ ರಾಷ್ಟ್ರಗಳೊಡನೆ ಹಲವು ವಾಣಿಜ್ಯ ಒಪ್ಪಂದಗಳಿಗೂ ಸಹಿ ಮಾಡಿದೆ. ಕಳೆದ ವಾರದ ಹಮಾಸ್ ದಾಳಿಯವರೆಗೂ ಇಸ್ರೇಲ್ ಮತ್ತು ಸೌದಿ ಅರೇಬಿಯಾದ ನಡುವೆ ಸೌಹಾರ್ದಯುತ ಒಪ್ಪಂದದ ಮಾತುಕತೆಗಳು ಜಾರಿಯಲ್ಲಿದ್ದವು. ಇಸ್ರೇಲ್ನ ಈ ರಾಜಕೀಯ ಕುತಂತ್ರ ಮತ್ತು ವ್ಯಾವಹಾರಿಕ ತಂತ್ರಗಾರಿಕೆಗಳನ್ನು ಭಂಗಗೊಳಿಸುವ ಸಲುವಾಗಿಯೇ ಹಮಾಸ್ ಅಕ್ಟೋಬರ್ 7ರಂದು ತನ್ನ ಅಮಾನುಷ ದಾಳಿಯನ್ನು ನಡೆಸಿತ್ತು.
ಬಂಡವಾಳ ಮತ್ತು ಭೌಗೋಳಿಕ ರಾಜಕಾರಣ
ಈ ಭೌಗೋಳಿಕ ರಾಜಕಾರಣದ ಪ್ರಕ್ರಿಯೆಯ ನಡುವೆಯೇ 1973ರ ನಂತರದಲ್ಲಿ ಪ್ರಪ್ರಥಮ ಬಾರಿ ಇಸ್ರೇಲ್ ನೇರ ದಾಳಿಗೊಳಗಾಗಿದೆ. ಅರಬ್ ರಾಷ್ಟ್ರಗಳೊಡನೆ ಸ್ನೇಹ ಬಾಂಧವ್ಯವನ್ನು ವೃದ್ಧಿಸಿಕೊಂಡಿದ್ದರೂ ಇಸ್ರೇಲ್ಗೆ ಪ್ರಭುತ್ವಯೇತರ ಗುಂಪುಗಳಾದ ಹೆಜ್ಬೊಲ್ಲಾಹ್, ಹಮಾಸ್ ಹಾಗೂ ಇಸ್ಲಾಮಿಕ್ ಜಿಹಾದ್ ಮುಂತಾದ ಸಂಘಟನೆಗಳಿಂದ ಪ್ರತಿರೋಧ ವ್ಯಕ್ತವಾಗುತ್ತಲೇ ಇದೆ. ಲೆಬನಾನ್ನಲ್ಲಿ ನೆಲೆಯಾಗಿರುವ ಹೆಜ್ಬೊಲ್ಲಾಹ್ ಸದಾ ಪ್ಯಾಲೆಸ್ಟೈನೀಯರೊಡನೆ ಐಕಮತ್ಯ ಪ್ರದರ್ಶಿಸಿದ್ದು, ದಕ್ಷಿಣ ಲೆಬನಾನ್ನ ಇಸ್ರೇಲ್ ಆಕ್ರಮಿತ ಪ್ರದೇಶಗಳ ಮೇಲೆ ಸತತ ದಾಳಿ ನಡೆಸುತ್ತಲೇ ಇದೆ. ಇರಾನ್ ಪ್ಯಾಲೆಸ್ಟೈನೀಯರಿಗೆ ಬೆಂಬಲ ಸೂಚಿಸಿದರೂ ಸದ್ಯದ ಪರಿಸ್ಥಿತಿಯಲ್ಲಿ ಇಸ್ರೇಲ್ ವಿರುದ್ಧ ಯುದ್ಧ ಸಾರುವ ಇಂಗಿತ ತೋರಿಲ್ಲ.
ಬಂಡವಾಳಶಾಹಿಯು ತನ್ನ ಔದ್ಯಮಿಕ ವಿಸ್ತರಣೆ ಹಾಗೂ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ನಡೆಸುತ್ತಿರುವ ರಾಜತಾಂತ್ರಿಕ ಚಟುವಟಿಕೆಗಳಿಗೆ ಹಮಾಸ್ ದಾಳಿ ಒಂದು ರೀತಿಯಲ್ಲಿ ಧಕ್ಕೆ ಉಂಟುಮಾಡಿದೆ ಎನ್ನಬಹುದು. ಇಸ್ರೇಲ್-ಯುಎಇ ಬಾಂಧವ್ಯ, ಸೌದಿ ಅರೇಬಿಯ-ಇರಾನ್ ನಡುವಿನ ವೈಷಮ್ಯ ತಗ್ಗಿರುವುದು, ಕತಾರ್-ಸೌದಿ ಅರೇಬಿಯಾ ನಡುವೆ ಹೊಂದಾಣಿಕೆಯಾಗಿರುವುದು, ಟರ್ಕಿ ಹಾಗೂ ಸೌದಿ-ಯುಎಇ ನಡುವೆ ಇತ್ತೀಚೆಗೆ ಬಾಂಧವ್ಯ ವೃದ್ಧಿಯಾಗಿರುವುದು ಹಾಗು ಬಹುಮುಖ್ಯವಾಗಿ ಇಸ್ರೇಲ್-ಸೌದಿ ಅರೇಬಿಯಾ ನಡುವೆ ವಾಣಿಜ್ಯ-ಮೂಲ ಸೌಕರ್ಯಗಳ ಒಪ್ಪಂದ ಏರ್ಪಟ್ಟಿರುವುದು ಬಂಡವಾಳ ಹಾಗೂ ಮಾರುಕಟ್ಟೆಯ ಸಮಕಾಲೀನ ಅನಿವಾರ್ಯತೆಗಳನ್ನು ಸೂಚಿಸುತ್ತದೆ. ಈ ಒಪ್ಪಂದಗಳ ನಡುವೆ ಅರಬ್ ರಾಷ್ಟ್ರಗಳು ಪ್ಯಾಲೆಸ್ಟೈನ್ ಸಮಸ್ಯೆಯನ್ನು ನೇಪಥ್ಯಕ್ಕೆ ಸರಿಸುತ್ತಿವೆ ಎಂಬ ಅಭಿಪ್ರಾಯವೂ ಜಾಗತಿಕ ರಾಜಕಾರಣದ ಚರ್ಚೆಗಳಲ್ಲಿ ಒಂದಾಗಿತ್ತು. ಆದರೆ ಹಮಾಸ್ ನಡೆಸಿದ ಒಂದು ಅಮಾನುಷ ದುಷ್ಕೃತ್ಯ ಇಡೀ ಅರಬ್ ಜಗತ್ತನ್ನು ತಲ್ಲಣಗೊಳಿಸಿದೆ.
ಭೌಗೋಳಿಕ ರಾಜಕಾರಣದ ಈ ರಾಜತಾಂತ್ರಿಕ ಬೆಳವಣಿಗೆಗಳ ನಡುವೆ ಹಮಾಸ್ ಇಸ್ರೇಲ್ಮೇಲೆ ನಡೆಸಿರುವ ಭೀಕರ ದಾಳಿ ಇಸ್ರೇಲಿನ ಇತಿಹಾಸದಲ್ಲೇ ಪ್ರಭುತ್ವಯೇತರ ಶಕ್ತಿಗಳಿಂದ ನಡೆದ ಅತಿ ದೊಡ್ಡ ಆಕ್ರಮಣವಾಗಿದೆ. 1990 ಹಾಗೂ 2000ದಲ್ಲಿ ಆತ್ಮಹತ್ಯಾ ದಾಳಿಗಳನ್ನು ಅನುಸರಿಸುತ್ತಿದ್ದ ಹಮಾಸ್ ಈಗ ಪೂರ್ಣ ಪ್ರಮಾಣದ ಸೇನಾ ಆಕ್ರಮಣ ನಡೆಸಿರುವುದು, ಈ ಗುಂಪಿನ ಹಿಂದಿರುವ ಪ್ಯಾಲೆಸ್ಟೈನೀಯರ ರಾಷ್ಟ್ರೀಯತೆಯ ಬೆಂಬಲ, ಉಗ್ರಗಾಮಿ ಲಕ್ಷಣ ಮತ್ತು ಉನ್ಮಾದವನ್ನು ಸೂಚಿಸುತ್ತದೆ. ತನ್ನ ರಾಜಕೀಯ ವೈಷಮ್ಯಕ್ಕಾಗಿ ಇಸ್ರೇಲ್ನ ಸಾವಿರಾರು ಅಮಾಯಕ ನಾಗರಿಕರನ್ನು ಬಲಿತೆಗೆದುಕೊಂಡ ಹಮಾಸ್ ತನ್ನ ಈ ದಾಳಿಯ ಮೂಲಕ ಜಗತ್ತಿನಾದ್ಯಂತ ಖಂಡನೆಗೂ ಒಳಗಾಗಿದೆ. ಆದರೆ ಹಮಾಸ್ ನಡೆಸಿದ ದೃಷ್ಕೃತ್ಯಗಳು ಇಸ್ರೇಲ್ ಕಳೆದ ಹಲವು ದಶಕಗಳಿಂದ ನಡೆಸುತ್ತಿರುವ ಅಮಾನುಷ ದಾಳಿ ಮತ್ತು ಅತಿಕ್ರಮಣವನ್ನು ಮರೆಮಾಚಲು ನೆರವಾಗುವುದಿಲ್ಲ.
![](https://pratidhvani.com/wp-content/uploads/2023/10/PALESTINIAN-ISRAEL-CONFLICT-GAZA-5_1697442105411_1697458426649.jpg)
ಮನುಷ್ಯ ಸಂವೇದನೆಯ ಕೊರತೆ
ಹಮಾಸ್ ನಡೆಸಿರುವ ಅಮಾನುಷ ದಾಳಿ ಮತ್ತು ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ನರಮೇಧವನ್ನು ಖಂಡಿಸುತ್ತಲೇ ವಿಶ್ವದಾದ್ಯಂತ ಸಾಮ್ರಾಜ್ಯ ವಿಸ್ತರಣೆ ಹಾಗೂ ಸಂಪತ್ತಿನ ಒಡೆತನ ಹಾಗೂ ಧಾರ್ಮಿಕ ಆಧಿಪತ್ಯಕ್ಕಾಗಿ ಇಸ್ಲಾಮಿಕ್ ರಾಷ್ಟ್ರಗಳು ನಡೆಸುತ್ತಿರುವ ನರಮೇಧಗಳನ್ನು ಗಮನವಿಟ್ಟು ನೋಡಬೇಕಾಗಿದೆ. ಒಂದು ಉದಾಹರಣೆಯನ್ನು ಸೌದಿ ಅರೇಬಿಯಾ-ಯುಎಇ ಮೈತ್ರಿಕೂಟದ ಸೇನೆಯು ಯೆಮನ್ ಜನತೆಯ ಮೇಲೆ ನಡೆಸಿದ ನರಮೇಧದಲ್ಲಿ ಗುರುತಿಸಬಹುದು. ಈ ಅಮಾನುಷ ಕೃತ್ಯದಲ್ಲಿ 85 ಸಾವಿರಕ್ಕೂ ಹೆಚ್ಚು ಯೆಮನಿ ಮಕ್ಕಳು ಹಸಿವಿನಿಂದಲೇ ಸಾವನ್ನಪ್ಪಿದ್ದರು. ಇಸ್ಲಾಮಿಕ್ ರಾಷ್ಟ್ರಗಳ ನಡುವೆ ಇಂತಹ ಭ್ರಾತೃಘಾತುಕ ಯುದ್ಧಗಳು ನಡೆಯುತ್ತಲೇ ಇವೆ. ಮತ್ತೊಂದೆಡೆ ಜಗತ್ತಿನಾದ್ಯಂತ ಹರಡಿರುವ ಇಸ್ಲಮೋಫೋಬಿಯಾ ಅಥವಾ ಇಸ್ಲಾಂ ಭೀತಿಯಿಂದ ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಮತೀಯ ಘರ್ಷಣೆಗಳಲ್ಲಿ ಸಾವಿರಾರು ಅಮಾಯಕ ಮುಸ್ಲಿಮರು, ಇತರ ಅಲ್ಪಸಂಖ್ಯಾತರು ಬಲಿಯಾಗುತ್ತಿದ್ದಾರೆ. ಭಾರತದ ಕಾಶ್ಮೀರದಲ್ಲಿ ಮತಾಂಧರ ದಾಳಿಗೆ ಅಮಾಯಕರು ಬಲಿಯಾಗುತ್ತಿರುವ ದೀರ್ಘ ಇತಿಹಾಸವೇ ಇದೆ.
ದುರಂತ ಎಂದರೆ ಆಧುನಿಕ ಡಿಜಿಟಲ್ ಯುಗದಲ್ಲಿ ಮಾನವ ಪ್ರಜ್ಞೆಯನ್ನು ಆವರಿಸಿರುವುದು ಮತೀಯ, ಧಾರ್ಮಿಕ ಅಥವಾ ಜನಾಂಗೀಯ ಧೋರಣೆಗಳು. ಪ್ಯಾಲೆಸ್ಟೈನ್ ಸಮಸ್ಯೆಯನ್ನು, ಗಾಝಾ ಪಟ್ಟಿಯ ಜನರ ಬವಣೆಯನ್ನು, ಇಸ್ರೇಲ್ನಲ್ಲಿ ಮಡಿದ ಅಮಾಯಕರನ್ನು, ಪಾಕಿಸ್ತಾನ-ಬಾಂಗ್ಲಾದೇಶದಲ್ಲಿ ಸತತ ದಾಳಿಗೊಳಗಾಗುತ್ತಿರುವ ಹಿಂದೂ ಅಲ್ಪಸಂಖ್ಯಾತರನ್ನು, ಭಾರತದಲ್ಲೂ ಹಲ್ಲೆಗೊಳಗಾಗುತ್ತಿರುವ ಅಲ್ಪಸಂಖ್ಯಾತರನ್ನು ಧಾರ್ಮಿಕ ಮಸೂರಗಳ ಮೂಲಕವೇ ನೋಡುವ ಈ ಮನಸ್ಥಿತಿಯೇ ಜಗತ್ತಿನ ಸಾಮ್ರಾಜ್ಯಶಾಹಿ ಭೂದಾಹ ಹಾಗೂ ಬಂಡವಾಳಶಾಹಿಯ ಸಂಪತ್ತಿನ ದಾಹಕ್ಕೆ ಪೂರಕವಾದ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ. ವಸಾಹತು ಆಳ್ವಿಕೆ ಹಾಗೂ ಭೂ ವಿಸ್ತರಣೆಗೆ ನೆರವಾಗುವಂತೆಯೇ ಜನಸಾಮಾನ್ಯರನ್ನು ಒಡೆದು ಆಳುವ, ವೈಮನಸ್ಯಗಳ ಮೂಲಕ ಜನಾಂಗಗಳ ನಡುವೆ ಗೋಡೆಗಳನ್ನು ಕಟ್ಟುವ ಸಾಮ್ರಾಜ್ಯಶಾಹಿ ಮನಸ್ಥಿತಿಯು ಬಂಡವಾಳಶಾಹಿಯ ವಿಸ್ತರಣೆ ಹಾಗೂ ಆಧಿಪತ್ಯಕ್ಕೂ ನೆರವಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.
ಈ ವಿಷಮ ಸನ್ನಿವೇಶದಲ್ಲಿ ವಿಶ್ವ ಸಮುದಾಯ ನಿಲ್ಲಬೇಕಿರುವುದು ಯಾವುದೋ ಒಂದು ಗುಂಪು, ಸಂಘಟನೆ, ಧರ್ಮ ಅಥವಾ ಭೂ ಪ್ರದೇಶದ ಪರ ಅಥವಾ ವಿರೋಧಿ ನೆಲೆಯಲ್ಲಿ ಅಲ್ಲ. ಬದಲಾಗಿ ಜಾಗತಿಕ ಭೌಗೋಳಿಕ ರಾಜಕಾರಣವನ್ನು ನಿಯಂತ್ರಿಸುತ್ತಿರುವ ಬಂಡವಾಳಶಾಹಿ ವ್ಯವಸ್ಥೆ, ಇದನ್ನು ಮೂಲದಿಂದಲೇ ಪೋಷಿಸುವ ಶಸ್ತ್ರಾಸ್ತ್ರ ಉದ್ಯಮ, ಈ ಉದ್ಯಮಕ್ಕೆ ಅನಿವಾರ್ಯವಾಗಿ ಬೇಕಾದ ಹಿಂಸಾತ್ಮಕ ಯುದ್ಧಗಳು ಹಾಗೂ ರಾಷ್ಟ್ರೀಯತೆ ಅಥವಾ ಧಾರ್ಮಿಕ ಅಸ್ಮಿತೆಗಳು ಸೃಷ್ಟಿಸುವ ಯುದ್ಧೋನ್ಮಾದ ಈ ಜ್ವಲಂತ ಸಮಸ್ಯೆಗಳನ್ನು ವಿಶ್ವ ಸಮುದಾಯ ವಿರೋಧಿಸಿ ನಿಲ್ಲಬೇಕಿದೆ. ಲೆಬನಾನ್, ಸೂಡಾನ್, ಇಥಿಯೋಪಿಯಾ, ಯೆಮನ್, ಸೊಮಾಲಿಯಾ. ಲಿಬ್ಯಾ, ಸಿರಿಯಾ, ಇರಾಕ್, ಆಫ್ಘಾನಿಸ್ತಾನ ಹೀಗೆ ನಮ್ಮ ನಡುವಿನ ಹಲವು ದೇಶಗಳು ಭಯೋತ್ಪಾದನೆ, ಹಿಂಸಾತ್ಮಕ ಆಕ್ರಮಣ, ಅಮಾನುಷ ದಾಳಿ ಹಾಗೂ ಯುದ್ಧಕೋರ ದೇಶಗಳ ಸಮರದಾಹದಿಂದ ತತ್ತರಿಸಿ ಹೋಗುತ್ತಿರುವುದನ್ನು ವಿರೋಧಿಸಬೇಕಿದೆ.
ಸತ್ತವರ ಅಥವಾ ಕೊಂದವರ ಧಾರ್ಮಿಕ ಅಸ್ಮಿತೆಗಳ ಮಸೂರದ ಮೂಲಕ ಈ ದುರಂತಗಳನ್ನು ನೋಡುವ Myopic ದೃಷ್ಟಿಕೋನದಿಂದ ಹೊರಬಂದು, ಇಂದು ಸಾಯುತ್ತಿರುವ ಸಾವಿರಾರು ಅಮಾಯಕರು, ನಿರ್ಗತಿಕರಾಗುತ್ತಿರುವ ಲಕ್ಷಾಂತರ ಜನರು, ನಿರ್ವಸತಿಗರಾಗಿ ನಿರಾಶ್ರಿತರಾಗುತ್ತಿರುವ ಕೋಟ್ಯಂತರ ಜೀವಿಗಳು ತಮ್ಮ ತಪ್ಪಿಲ್ಲದೆಯೇ ಅಥವಾ ತಮ್ಮ ಸಂಭಾವ್ಯ ತಪ್ಪಿನ ಅರಿವಿಲ್ಲದೆಯೇ ಅನ್ಯರ ದಾಹಕ್ಕೆ ಬಲಿಯಾಗುತ್ತಿರುವುದನ್ನು ಮಾನವೀಯ ದೃಷ್ಟಿಕೋನದಿಂದ ನೋಡಬೇಕಿದೆ. ಈ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದು ಸಂವೇದನಾಶೀಲ ಮನಸ್ಸುಗಳ ಪ್ರಥಮ ಆದ್ಯತೆಯಾಗಬೇಕಿದೆ. ಸಾವಿರಾರು ಮೈಲು ದೂರದ ದೇಶದಲ್ಲಿ ಸಂಭವಿಸುವ ಸಾವುಗಳಿಗೆ ಅನುಕಂಪ ತೋರುತ್ತಲೇ ನಮ್ಮ ನಡುವೆಯೇ ದಿನನಿತ್ಯ ದಾಳಿಗೊಳಗಾಗುತ್ತಿರುವ ಅಮಾಯಕರತ್ತಲೂ ಕಣ್ಣು ಹಾಯಿಸಿದರೆ “ ಮಾನವ ಜನ್ಮ ಸಾರ್ಥಕ ” ಎಂದು ಬೆನ್ನುತಟ್ಟಿಕೊಳ್ಳಲು ಸಾಧ್ಯ.
-೦-೦-೦-೦-