ಪ್ರಧಾನಿ ನರೇಂದ್ರ ಮೋದಿ ಮಾತು ಶುರು ಮಾಡಿದ್ರೆ ನ್ಯಾಯ, ಸಮಾನತೆ ಬಗ್ಗೆ ಭಾಷಣ ಮಾಡ್ತಾರೆ. ಆದರೆ ತನ್ನ ಕಾರ್ಯಕರ್ತನ್ನು ಹತೋಟಿಯಲ್ಲಿ ಇಟ್ಟುಕೊಳ್ಳದೆ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಮಾರಕವಾದ ಕೃತ್ಯಗಳನ್ನು ಮಾಡುವುದಕ್ಕೆ ಪ್ರಚೋದನೆ ನೀಡುತ್ತಾರೆಯೇ..? ಎನ್ನುವ ಅನುಮಾನ ದಟ್ಟವಾಗಿ ಕಾಡುವುದಕ್ಕೆ ಶುರುವಾಗಿದೆ. ದೇಶದಲ್ಲಿ ಪ್ರಭು ಶ್ರೀರಾಮ ಮಂದಿರ ಲೋಕಾರ್ಪಣೆ ಆಗಿದೆ. ಅಯೋಧ್ಯೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಧರ್ಮ, ದೇಶ, ಕೋಶದ ಬಗ್ಗೆ ಮಾತನಾಡಿದ್ದಾರೆ. ರಾಮನ ಹಾದಿಯಲ್ಲಿ ದೇಶ ಕಟ್ಟಲು ಕರೆ ನೀಡಿದ್ದಾರೆ. ಅಂದರೆ ರಾಮರಾಜ್ಯದ ಪರಿಕಲ್ಪನೆಯನ್ನು ನರೇಂದ್ರ ಮೋದಿ ಹೊಂದಿದ್ದಾರೆ. ಆದರೆ ದೇಶದ ಇತರೆ ಭಾಗದಲ್ಲಿ ಆಗುತ್ತಿರುವುದು ಏನು..? ಪ್ರಜಾಪ್ರಭುತ್ವದಲ್ಲಿ ಇದಕ್ಕೆಲ್ಲಾ ಅವಕಾಶ ಇದ್ಯಾ..? ಉತ್ತರ ಕೊಡಬೇಕಾದವರು ಮೌನಕ್ಕೆ ಶರಣಾದರೆ ಮುಗೀತು.
![](https://pratidhvani.com/wp-content/uploads/2024/01/WhatsApp-Image-2024-01-23-at-00.51.51-1024x630.webp)
ಕಾಂಗ್ರೆಸ್ ನಾಯಕನನ್ನು ತಡೆದು ನಿಲ್ಲಿಸಿದ್ದು ಸರೀನಾ..?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ್ ಯಾತ್ರೆ ನಡೆಸುತ್ತಿದ್ದಾರೆ. ಅಸ್ಸಾಂನಲ್ಲಿ ನಡೆಯುತ್ತಿರುವ ರಾಹುಲ್ ಗಾಂಧಿ ಯಾತ್ರೆ ವೇಳೆ ದೇಗುಲವನ್ನು ಪ್ರವೇಶ ಮಾಡಲು ರಾಹುಲ್ಗೆ ಅಡ್ಡಿ ಮಾಡಲಾಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಸ್ಸಾಂನಲ್ಲಿ ಬಿಜೆಪಿ ಸರ್ಕಾರವಿದ್ದು, ಕಳೆದ 2 ದಿನಗಳ ಹಿಂದೆ ರಾಹುಲ್ ಗಾಂಧಿ ಯಾತ್ರೆ ಸಾಗುವ ಮಾರ್ಗ ಮಧ್ಯೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದರು. ಮೋದಿಗೆ ಜೈಕಾರ ಹಾಕುತ್ತ, ಮೆರವಣಿಗೆ ಮಧ್ಯಕ್ಕೆ ನುಗ್ಗಿದ್ದರು. ಆ ಬಳಿಕ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮಾರ್ಗ ಬದಲಾವಣೆ ಮಾಡುವಂತೆ ತಿಳಿಸಿದ್ದರು. ಭದ್ರತೆಯ ಕಾರಣವನ್ನೂ ನೀಡಿದ್ದರು. ಆದರೆ ರಾಹುಲ್ ಗಾಂಧಿ ಒಪ್ಪದೆ ಇದ್ದಾಗ, ಮತ್ತಷ್ಟು ಕಿರಿಕಿರಿ ಮಾಡುವ ಕೆಲಸ ನಡೆದಿದೆ.
![](https://pratidhvani.com/wp-content/uploads/2024/01/rahul-gandhi-bharat-jodo-nyay-yatra-193428871-16x9_0-1-jpg.webp)
ದೇವಸ್ಥಾನ ಪ್ರವೇಶಕ್ಕೆ ರಾಹುಲ್ ಪರಿಪರಿಯ ಬೇಡಿಕೆ..
ಅಸ್ಸಾಂನಲ್ಲಿ ದೇಗುಲ ಪ್ರವೇಶಕ್ಕೆ ರಾಹುಲ್ ಗಾಂಧಿಗೆ ನಿರ್ಬಂಧ ವಿಧಿಸಲಾಗಿದೆ. ಈ ವೇಳೆ ಮಾತನಾಡಿರುವ ರಾಹುಲ್ ಗಾಂಧಿ, ನನ್ನ ತಪ್ಪೇನು ಹೇಳಿ ಎಂದು ಕೇಳಿದ್ದಾರೆ. ನನಗ ಆಹ್ವಾನ ಇದೆ ಬಂದಿದ್ದೇನೆ, ಮಂದಿರಕ್ಕೆ ಹೋಗ್ಬೇಕು. ಯಾಕೆ ತಡೆಯುತ್ತಿದ್ದೀರಾ? ನಾನು ಏನು ತಪ್ಪು ಮಾಡಿದ್ದೀನಿ? ಹಾಗಿದ್ದರೆ ನಾವು ಮಂದಿರಕ್ಕೆ ನಾವು ಹೋಗಬಾರದಾ? ಎಂದು ಪ್ರಶ್ನಿಸಿದ್ದಾರೆ. ನೀವೇ ಅನುಮತಿ ಕೊಟ್ಟಿದ್ದೀರಿ, ಆಗಿದ್ದರೂ ತಡೆಯುತ್ತಿದ್ದೀರಿ. ನಾನು ಕೈ ಮುಗಿದು ಕೇಳ್ತೀನಿ, ನನ್ನನ್ನ ದಯವಿಟ್ಟು ಬಿಡಿ. ನಾನೇನು ತಪ್ಪು ಮಾಡಿದ್ದೀನಿ ಹೇಳಿ. ಯಾಕೆ ನನಗೆ ದೇವಸ್ಥಾನಕ್ಕೆ ಹೋಗಲು ಬಿಡ್ತಿಲ್ಲ. ನಾನು ಮಂದಿರಕ್ಕೆ ಹೋಗ್ಬೇಕು ಕೈ ಮುಗಿತೀನಿ ಬಿಡಿ ಎಂದು ಗೋಗರೆದಿದ್ದಾರೆ. ಆ ಬಳಿಕ ಪೊಲೀಸ್ರು ಅವಕಾಶ ಕೊಟ್ಟಿದ್ದಾರೆ ಆದರೆ ಕೇವಲ ರಾಹುಲ್ ಗಾಂಧಿ ಬೆಂಬಲಿಗರಿಗೆ ಮಾತ್ರ. ಕಾಂಗ್ರೆಸ್ ನಾಯಕರನ್ನು ದೇವಸ್ಥಾನದಿಂದ ಆಚೆಯೇ ತಡೆದಿದ್ದಾರೆ.
![](https://pratidhvani.com/wp-content/uploads/2024/01/WhatsApp-Image-2024-01-23-at-00.51.52-jpeg.webp)
ದೇವಸ್ಥಾನಕ್ಕೆ ನಿರ್ಬಂಧ ಸಂವಿಧಾನ ಉಲ್ಲಂಘನೆ ಅಲ್ಲವೇ..?
ರಾಹುಲ್ ಗಾಂಧಿ ಪರಿಪರಿಯಾಗಿ ಬೇಡಿಕೊಂಡ ಬಳಿಕ ಅಸ್ಸಾಂ ಪೊಲೀಸರು ಅನುಮತಿ ಕೊಟ್ಟಿದ್ದಾರೆ. 15ನೇ ಶತಮಾನದ ಅಸ್ಸಾಮಿ ಸಂತ ಮತ್ತು ವಿದ್ವಾಂಸರಾದ ಶ್ರೀಮಂತ ಶಂಕರದೇವ ಜನ್ಮಸ್ಥಳವಾದ ನಾಗಾಂವ್ನಲ್ಲಿ ಬಟದ್ರವ ಸತ್ರ ದೇವಸ್ಥಾನ ಭೇಟಿಗೆ ಇಷ್ಟೆಲ್ಲಾ ಹೈಡ್ರಾಮ ನಡೆದಿದೆ. ರಾಹುಲ್ ಗಾಂಧಿ ಹೋಗದಂತೆ ಅರ್ಧದಲ್ಲೇ ಪೊಲೀಸರು ತಡೆದಿದ್ದರಿಂದ ಕುಪಿತಗೊಂಡ ರಾಹುಲ್, ಮಹಿಳಾ ಕಾರ್ಯಕರ್ತರ ಜೊತೆ ರಸ್ತೆಯಲ್ಲೇ ಕುಳಿತು ಭಜನೆ ಮಾಡುವ ಮೂಲಕ ಧರಣಿ ಮಾಡಿದ್ದಾರೆ. ಆ ಬಳಿಕ ರಾಹುಲ್ ಜೊತೆಗಿದ್ದವರನ್ನ ಮಂದಿರಕ್ಕೆ ಬಿಟ್ರೇ ಹೊರತು ರಾಹುಲ್ಗಾಂಧಿಯನ್ನ ದೇವಸ್ಥಾನಕ್ಕೆ ಕಳಿಸಲಿಲ್ಲ ಪೊಲೀಸರು.. ಇದು ಸಂವಿಧಾನ ವಿರೋಧಿ ನಡೆ ಆಗಿದ್ದು, ಯಾವುದೇ ಸರ್ಕಾರ, ಯಾವುದೇ ಸಂಸ್ಥೆ ಕೂಡ ಸಂವಿಧಾನದ ಆಶಯಕ್ಕೆ ಧಕ್ಕೆ ಆಗುವಂತೆ ನಡೆದುಕೊಳ್ಳುವಂತಿಲ್ಲ. ಸಂವಿಧಾನದ ಅಂಶಗಳನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋದರೆ ನಡೆಯಬಾರದ ಘಟನೆ ನಡೆಯುತ್ತದೆ ಎನ್ನುವುದಾದರೆ ಪೊಲೀಸ್ರು ಮಾಹಿತಿ ಕೊಟ್ಟು ತಡೆಯಬಹುದು. ಅದನ್ನು ಬಿಟ್ಟು ತಮಗೆ ಸರ್ಕಾರದ ಸೂಚನೆ ಇದೆ ಎಂದು ಪೊಲೀಸರು ತಡೆದು ನಿಲ್ಲಿಸಿದರೆ ಮುಂದಿನ ದಿನಗಳಲ್ಲಿ ಪಶ್ಚತ್ತಾಪ ಗ್ಯಾರಂಟಿ.
ಕೃಷ್ಣಮಣಿ