ಅಮೆರಿಕಾ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ನಡೆಸಿದ ಏರ್ ಸ್ಟ್ರೈಕ್ನಿಂದಾಗಿ ಜಾಗತಿಕ ವಿಮಾನಯಾನ ಸಂಸ್ಥೆಗಳು ಮುನ್ನೆಚ್ಚರಿಕಾ ಕ್ರಮವಾಗಿ ತಮ್ಮ ಹಾರಾಟವನ್ನು ರದ್ದುಗೊಳಿಸಿವೆ. ಹಾಗಾಗಿ ಈ ಬೆಂಗಳೂರಿಗೆ ವಾಪಸ್ ಬರಬೇಕಾಗಿದ್ದ ನೂರಾರು ಪ್ರಯಾಣಿಕರು ವಿವಿಧ ದೇಶಗಳ ವಿಮಾನ ನಿಲ್ದಾಣಗಳಲ್ಲೇ ಇರುವಂತಾಗಿದೆ! ಹೀಗೆ ವಿಮಾನರದ್ದಾಗಿದ್ದರಿಂದ ಹಾಗೂ ಅಲ್ಲಿನ ಯುದ್ಧ ವಾತಾವರಣದ ಭೀತಿಯಿಂದ ಜನ ಪರದಾಡುವಂತಾಗಿದೆ.

ಬಿಗ್ ಬಾಸ್ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ ಅಬುದಾಬಿಯಿಂದ ಬೆಂಗಳೂರಿಗೆ ಬರಬೇಕಿದ್ದು, ಅಲ್ಲಿನ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಬಗ್ಗೆ ಸೆಲ್ಫಿ ವಿಡಿಯೋ ಹಂಚಿಕೊಂಡಿದ್ದಾರೆ. ‘ನಾನು ಈಗ ಅಬುದಾಬಿ ಏರ್ಪೋರ್ಟ್ನಲ್ಲಿದ್ದೇನೆ. ಇರಾನ್-ಇಸ್ರೇಲ್ ಯುದ್ಧದ ಕಾರಣದಿಂದಾಗಿ ನಮ್ಮ ಇತಿಯಾಡ್ ವಿಮಾನ ಸೇರಿದಂತೆ ಮುಂದಿನ 12 ಗಂಟೆಗಳ ಕಾಲ ಹೊರಡಬೇಕಿದ್ದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇಲ್ಲಿ ನೂರಾರು ಪ್ರಯಾಣಿಕರು ಏನು ಮಾಡಬೇಕೆಂದು ತಿಳಿಯದೆ ಕಾಯುತ್ತಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳು ಎಲ್ಲರನ್ನೂ ಹೊರಗೆ ಕಾಯುವಂತೆ ಸೂಚಿಸಿದ್ದಾರೆ. ಮುಂದಿನ ಅಪ್ಡೇಟ್ಗಾಗಿ ನಾವು ಕಾಯುತ್ತಿದ್ದೇವೆ’ ಎಂದು ಪ್ರತಾಪ್ ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಒಂದೆಡೆ ವಿಮಾನ ಸಂಚಾರ ರದ್ದಾಗಿದ್ದರೆ, ಇನ್ನೊಂದೆಡೆ ಇರಾನ್ನ ಒಳಗಿರುವ ಕನ್ನಡಿಗರ ಸ್ಥಿತಿ ಗಂಭೀರವಾಗಿದೆ. ಇರಾನ್ನ ರಾಜಧಾನಿ ಟೆಹ್ರಾನ್ ಹಾಗೂ ಕುಮ್ಮು (Qom) ನಗರಗಳಲ್ಲಿ 150ಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದಾರೆ. ಇವರಲ್ಲಿ ಹೆಚ್ಚಿನವರು ಎಂಬಿಬಿಎಸ್ ವ್ಯಾಸಂಗಕ್ಕೆ ಹೋದ ವಿದ್ಯಾರ್ಥಿಗಳಾಗಿದ್ದಾರೆ. ಯುದ್ಧದ ಭೀತಿಯಿಂದಾಗಿ ಇರಾನ್ ಸರ್ಕಾರ ಇಂಟರ್ನೆಟ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.






