ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ನಿನ್ನೆ ದೆಹಲಿಯಲ್ಲಿ ನಡೆದಿದ್ದು, ಕರ್ನಾಟಕ ನೀರು ಹರಿಸಬೇಕು ಅನ್ನೋ ನಿರ್ದೇಶನ ನೀಡಿದೆ. ಸುಪ್ರೀಂಕೋರ್ಟ್ ಸೂಚನೆಯಂತೆ ನಿನ್ನೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ, ಕಾವೇರಿ ನೀರು ನಿರ್ವಹಣಾ ಸಮಿತಿ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೂಚನೆ ನೀಡಿದೆ. ಹೀಗಾಗಿ ಕರ್ನಾಟಕದ ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ ಪ್ರತಿದಿನ 5 ಸಾವಿರ ನೀರನ್ನು ಹರಿಸುವ ಅನಿವಾರ್ಯತೆ ಎದುರಾಗಿದೆ. ಅದೂ ಅಲ್ಲದೆ ಕೆಆರ್ಎಸ್ ಜಲಾಶಯದಿಂದ ನೀರು ಹರಿಸುವುದು ಲೆಕ್ಕ ಅಲ್ಲ, ನೀರು ಮಾಪನಾ ಕೇಂದ್ರ ಬಿಳಿಗುಂಡ್ಲು ಬಳಿಕ ಪ್ರತಿ ದಿನ 5 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹೋಗುವುದು ದಾಖಲಾಗಬೇಕು ಎಂದಿರುವುದು ಕನ್ನಡಿಗರನ್ನು ಕೆರಳುವಂತೆ ಮಾಡಿದೆ.

ತಮಿಳುನಾಡಿನ ವಾದಕ್ಕೆ ಹೆಚ್ಚಿನ ಮನ್ನಣೆ ಯಾಕೆ..?
ಕಾವೇರಿ ನೀರು ನಿರ್ವಹಣಾ ಸಮಿತಿ ಎದುರು ತಮಿಳುನಾಡು ವಾದ ಮಂಡಿಸಿದ್ದು, ಕರ್ನಾಟಕದಲ್ಲಿ ಶೇಕಡ 22ರಷ್ಟು ಮಾತ್ರ ಮಳೆ ಕೊರತೆಯಾಗಿದೆ ಎಂಬುದನ್ನು ಮಾನದಂಡವಾಗಿ ಪರಿಗಣಿಸಲು ತಮಿಳುನಾಡು ಪಟ್ಟು ಹಿಡಿದಿತ್ತು. ಮಳೆ ಬಿದ್ದಿದ್ದಕ್ಕೂ ನೀರು ಹರಿಸುವುದಕ್ಕೆ ಸಂಬಂಧ ಕಲ್ಪಿಸುವುದು ಬೇಡ ಎಂದು ಕಾವೇರಿ ನೀರು ನಿರ್ವಹಣಾ ಸಮಿತಿ ಮುಖ್ಯಸ್ಥರು ತಿಳಿಸಿದ್ದಾರೆ. ಕಾವೇರಿ ನದಿಯಲ್ಲಿ ಒಳ ಹರಿವನ್ನು ಸಂಕಷ್ಟಕ್ಕೆ ಮಾನದಂಡವಾಗಿ ಪರಿಗಣಿಸಲು ಕರ್ನಾಟಕ ಒತ್ತಾಯ ಹೇರಿತ್ತು. ಆದರೆ ತಮಿಳುನಾಡು ಮುಂದಿನ 10 ದಿನಗಳ ಕಾಲ 24 ಸಾವಿರ ಕ್ಯೂಸೆಕ್ ನೀರು ಹರಿಸಲು ಬೇಡಿಕೆ ಇಟ್ಟಿತ್ತು. ಆಗ ಕರ್ನಾಟಕವು ಕೃಷಿಗೆ ನೀರು ಬಿಡದೇ ಡ್ಯಾಮ್ಗಳಲ್ಲಿ ನೀರು ಸಂಗ್ರಹಿಸುತ್ತಿದೆ .ಆದರೇ, ತಮಿಳುನಾಡು ಕೃಷಿಗೆ ಹೆಚ್ಚಾಗಿ ನೀರನ್ನು ಬಳಸಿಕೊಂಡು ಡ್ಯಾಮ್ ಖಾಲಿ ಮಾಡಿದೆ ಎಂದು ಕರ್ನಾಟಕದ ವಾದ ಮಂಡಿಸಿತು. ಅಂತಿಮವಾಗಿ ಕರ್ನಾಟಕವು ಮುಂದಿನ 15 ದಿನಗಳ ಕಾಲ ಬಿಳಿಗುಂಡ್ಲು ಜಲಮಾಪಕ ಕೇಂದ್ರಕ್ಕೆ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಶಿಫಾರಸ್ಸು ಮಾಡಿದೆ.

ಶುಕ್ರವಾರ ಸುಪ್ರೀಂಕೋರ್ಟ್ ಎದುರು ಅರ್ಜಿ ವಿಚಾರಣೆ..!
ಆಗಸ್ಟ್ 29 ರಿಂದ ಸೆಪ್ಟೆಂಬರ್ 12 ರವರೆಗೆ ಪ್ರತಿದಿನ ನೀರು ಹರಿಸಲು ಶಿಫಾರಸ್ಸು ಮಾಡಲಾಗಿದೆ. ಮಂಗಳವಾರ ಮತ್ತೊಮ್ಮೆ ಸಭೆ ನಡೆದು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಇದರ ಜೊತೆಗೆ ಶುಕ್ರವಾರ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆಗೆ ಬರಲಿದ್ದು, ಸುಪ್ರೀಂಕೋರ್ಟ್ ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಆದರೆ ರಾಜ್ಯದಲ್ಲಿ ಮಳೆಯೇ ಬೀಳದಿದ್ದ ಮೇಲೆ ತಮಿಳುನಾಡಿಗೆ ನೀರನ್ನು ಹೇಗೆ ಹರಿಸುವುದಕ್ಕೆ ಸಾಧ್ಯ..? ಕರ್ನಾಟಕದಲ್ಲಿ ಬಿದ್ದ ನೀರಿನಲ್ಲಿ ನದಿಗೆ ಇಂತಿಷ್ಟು ಪ್ರಮಾಣದ ನೀರು ಹರಿಸಲೇಬೇಕಿದೆ. ಆದರೆ ಹೆಚ್ಚುವರಿಯಾಗಿ ನೀರನ್ನು ಬಿಡಬೇಕು ಎಂದರೆ ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಮಾಡಿಕೊಳ್ಳುವುದು ಸೂಕ್ತವೇ ಎನ್ನುವ ಬಗ್ಗೆ ಕೋರ್ಟ್ನಲ್ಲಿಯೇ ಪ್ರಶ್ನಿಸಬೇಕಿದೆ.
ಕೃಷ್ಣಮಣಿ