ಮಾನವೀಯ ಪ್ರಜ್ಞೆ ಇಲ್ಲದ ಸಮಾಜದಲ್ಲಿ ಪಾಪಪ್ರಜ್ಞೆಯ ನಿವೇದನೆ ನಾಟಕೀಯವಾಗುತ್ತದೆ
ಆಳ್ವಿಕೆ ಮತ್ತು ಸಮಾಜ
ಸರ್ಕಾರಗಳ ದೃಷ್ಟಿಯಲ್ಲಿ ಇವೆಲ್ಲವೂ ಸಹ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳಾಗಿ ಮಾತ್ರ ಕಾಣುತ್ತವೆ. ಆರೋಪಿಗಳ ಬಂಧನ, ವಿಚಾರಣೆ, ವಿಳಂಬ ನ್ಯಾಯ, ಶಿಕ್ಷೆ ಅಥವಾ ಬಿಡುಗಡೆ ಹೀಗೆ ನ್ಯಾಯವ್ಯವಸ್ಥೆಯ ಸುದೀರ್ಘ ಪ್ರಕ್ರಿಯೆಯ ನಂತರ ಇಡೀ ಘಟನೆಯೇ ವಿಸ್ಮೃತಿಗೆ ಜಾರಿಬಿಡುತ್ತದೆ. ಇತ್ತೀಚೆಗೆ ಆಳುವ ವರ್ಗಗಳು ಆರೋಪಿಗಳ ಮನೆಗಳನ್ನು ಬುಲ್ಡೋಜ್ಮಾಡಿ ಧ್ವಂಸ ಮಾಡುವ ಒಂದು ಹೊಸ ಆಡಳಿತ ಸಂಸ್ಕೃತಿಯನ್ನೂ ರೂಢಿಸಿಕೊಂಡಿವೆ. ನ್ಯಾಯಶಾಸ್ತ್ರದ ಸಂಹಿತೆಗಳ ಅನುಸಾರ ಅಪರಾಧಿಗಳು ಶಿಕ್ಷೆಗೊಳಗಾಗಬೇಕು, ಅಪರಾಧ ಸಾಬೀತಾಗುವವರೆಗೂ ಆರೋಪಿಯನ್ನು ನಿರಪರಾಧಿ ಎಂದೇ ಭಾವಿಸಬೇಕು. ಆದರೆ ಬುಲ್ಡೋಜರ್ ನ್ಯಾಯದಲ್ಲಿ ಆರೋಪಿಯೇ ಶಿಕ್ಷೆಗೊಳಗಾಗುತ್ತಾನೆ. ಜೊತೆಗೆ ಆತನ ಪೋಷಕರು, ಕುಟುಂಬದವರೂ ಸಹ ಮನೆ ಕಳೆದುಕೊಂಡು ನಿರ್ಗತಿಕರಾಗುವ ಘೋರ ಶಿಕ್ಷೆ ಅನುಭವಿಸುತ್ತಾರೆ. ಒಂದು ಸಮಾಜ ತನ್ನ ಮನುಜ ಸೂಕ್ಷ್ಮತೆಯನ್ನು ಕಳೆದುಕೊಂಡಾಗ, ಆ ಸಮಾಜವನ್ನು ಆಳುವ ರಾಜಕೀಯ ಪಕ್ಷಗಳು ಸಹ ಸಂಯಮ ಮತ್ತು ಸಂವೇದನೆಯನ್ನು ಕಳೆದುಕೊಂಡು ಈ ರೀತಿಯ ಕ್ರೌರ್ಯ ಪ್ರದರ್ಶನ ಮಾಡುತ್ತವೆ.

ಈ ಎಲ್ಲಾ ಪ್ರಕರಣಗಳ ಬಗ್ಗೆ ಸರ್ಕಾರಗಳು ಸೂಕ್ತ ಕ್ರಮ ಜರುಗಿಸುವುದು ಆಳ್ವಿಕೆಯ ಕರ್ತವ್ಯ. ಆದರೆ ನಾಗರಿಕರು ಎಂದು ಬೆನ್ನುತಟ್ಟಿಕೊಳ್ಳುವ ಸಮಾಜದ ಕರ್ತವ್ಯವೇನು ? ಇತ್ತೀಚಿನ ಕೆಲವು ವಿದ್ಯಮಾನಗಳನ್ನು ಗಮನಿಸಿದಾಗ ಸಮಾಜದ ಪ್ರತಿಕ್ರಿಯೆಯಲ್ಲಿ ಕೆಲವು ವೈಪರೀತ್ಯಗಳನ್ನು ಗುರುತಿಸಬಹುದು. ಹಲ್ಲೆ/ದಾಳಿ/ಅತ್ಯಾಚಾರಕ್ಕೊಳಗಾದ ಸಂತ್ರಸ್ತ/ಸ್ತೆಯ ಜಾತೀಯ, ಧಾರ್ಮಿಕ ಅಸ್ಮಿತೆಗಳಿಗನುಸಾರವಾಗಿ ಅಮಾನುಷ ಘಟನೆಗಳ ವಿರುದ್ಧ ಪ್ರತಿಭಟನೆಗಳು ನಡೆಯುತ್ತವೆ. ಸಂತ್ರಸ್ತರನ್ನು ಮತ್ತು ಆರೋಪಿಗಳನ್ನು ಈ ಅಸ್ಮಿತೆಗಳ ನೆಲೆಯಲ್ಲೇ ಇಟ್ಟು ನೋಡುವುದರಿಂದ ಒಂದು ಇಡೀ ಸಮಾಜವನ್ನು ಬಲಿಪಶುವಾಗಿ ಅಥವಾ ದೋಷಿಯಾಗಿ ಕಾಣಲಾಗುತ್ತದೆ. ವ್ಯಕ್ತಿ ಜೀವನದ ಸಾಮುದಾಯಿಕ ಅಸ್ಮಿತೆಗಳೇ ಇಡೀ ಸಮಾಜದ ಪ್ರತಿಕ್ರಿಯೆ ಅಥವಾ ಪ್ರತಿರೋಧದ ಮೂಲ ಧಾತುವಿನಂತೆ ಕಾಣುತ್ತದೆ. ಸಮಾಜದೊಳಗಿನ ನೋವು-ವೇದನೆ-ಯಾತನೆ ಮತ್ತು ಹಿಂಸೆಗೆ ಪ್ರತಿಕ್ರಯಿಸುವಾಗ ಸಮಷ್ಟಿ ಚಿಂತನೆಯನ್ನು ಕಳೆದುಕೊಂಡಿರುವ ಅಸ್ಮಿತೆಗಳ ಗುಂಗಿನಲ್ಲೇ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತದೆ. ಒಂದು ಸಮಾಜಇಲ್ಲಿ ಕಳೆದುಹೋಗುವುದೇನು ? ಮಾನವ ಪ್ರಜ್ಞೆ ಅಲ್ಲವೇ ?
ಮಧ್ಯಪ್ರದೇಶದಲ್ಲಿ ನಡೆದಿರುವ ಮೂರೂ ಪ್ರಕರಣಗಳಲ್ಲಿ ಆರೋಪಿ/ಅಪರಾಧಿ ಮತ್ತು ಸಂತ್ರಸ್ತ ಎಂಬ ವಿಂಗಡನೆ ಮಾಡಿದರೆ ಅಲ್ಲಿ ನಮಗೆ ಮನುಷ್ಯರು ಮಾತ್ರ ಕಾಣುತ್ತಾರೆ. ಈ ಮನುಷ್ಯರು Vulnerable ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ. ಅಂದರೆ ಸಾಮಾಜಿಕವಾಗಿ ಕೆಳಸ್ತರದವರು, ಆರ್ಥಿಕವಾಗಿ ದುರ್ಬಲರು, ಸಾಂಸ್ಕೃತಿಕವಾಗಿ ನಿಕೃಷ್ಟವಾಗಿ ಕಾಣಲ್ಪಡುವವರು ಮತ್ತು ಒಟ್ಟಾರೆಯಾಗಿ ಶೋಷಣೆಗೆ ಗುರಿಯಾಗುವವರು. ಸಾಮುದಾಯಿಕ ನೆಲೆಯಲ್ಲಿ ನಿಂತು ನೋಡುವಾಗ ಇದು ಅದಲುಬದಲಾಗಿ ಕಾಣುವುದನ್ನೂ ಗಮನಿಸಲೇಬೇಕಿದೆ. ಇದನ್ನೇ ನಾವು ಸಾಮಾಜಿಕ ವೈಪರೀತ್ಯ ಎನ್ನಬಹುದಲ್ಲವೇ ? ವಿವಿಧ ಸಮುದಾಯಗಳು ಸಾರ್ವಜನಿಕ ವಲಯದಲ್ಲಿ ರೂಪಿಸುವ ನಿರೂಪಣೆಗಳು (Narratives) ಈ ವ್ಯತ್ಯಯಗಳನ್ನು, ವೈಪರೀತ್ಯಗಳನ್ನು ಗುರುತಿಸಲು ವಿಫಲವಾಗುತ್ತವೆ. ಏಕೆಂದರೆ ಅಲ್ಲಿ ಸಾಮಾಜಿಕ ಸ್ಥಾನಮಾನ, ಅಂತಸ್ತು, ರಾಜಕೀಯ ಪ್ರಭಾವ ಮತ್ತು ಪಾರಮ್ಯ ಹಾಗೂ ಸಾಂಸ್ಕೃತಿಕ ಔನ್ನತ್ಯ ಮುನ್ನೆಲೆಗೆ ಬರುತ್ತದೆ.

ನಾಗರಿಕರು ಎಂದು ಬೆನ್ನುತಟ್ಟಿಕೊಳ್ಳುವ ನಮ್ಮ ಸಮಾಜ ಈ ವರ್ತುಲದಿಂದ ಹೊರಬರಬೇಕಿದೆ. ಇದು ಸರ್ಕಾರಗಳಿಂದ ಅಥವಾ ರಾಜಕೀಯ ಪಕ್ಷಗಳಿಂದ ಆಗುವಂತಹುದಲ್ಲ. ಏಕೆ ಎನ್ನುವುದನ್ನು ಮೂತ್ರ ವಿಸರ್ಜನೆಗೆ ಒಳಗಾದ ಬುಡಕಟ್ಟು ವ್ಯಕ್ತಿಯ ಪಾದಪೂಜೆ ಮಾಡುವ ಮೂಲಕ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನಿರೂಪಿಸಿದ್ದಾರೆ. ಆಳ್ವಿಕರ ದೃಷ್ಟಿಯಲ್ಲಿ ಇಂತಹ ಅಮಾನುಷ ಕೃತ್ಯಗಳು ಪಾಪಕೃತ್ಯಗಳಾಗಿ ಮಾತ್ರ ಕಾಣುವುದರಿಂದ ಇಡೀ ಪಾಪವನ್ನು ತಮ್ಮ ತಲೆಯ ಮೇಲೆ ಹೊತ್ತು ಪರಿಭಾವಿತ ಪಾಪಪ್ರಜ್ಞೆಯನ್ನು ಕಳೆದುಕೊಳ್ಳುವುದು ಒಂದು ಮಾನವೀಯ ಪ್ರಕ್ರಿಯೆಯಾಗಿ ಕಾಣುತ್ತದೆ. ಅಥವಾ ರಾಜಕೀಯವಾಗಿ ಲಾಭದಾಯಕ ಕ್ರಿಯೆಯಾಗಿ ಪರಿಣಮಿಸುತ್ತದೆ. ಇದಕ್ಕಿಂತಲೂ ಹೆಚ್ಚಿನದನ್ನು ಯೋಚಿಸುವ ವ್ಯವಧಾನವಾಗಲೀ, ಸಂಯಮವಾಗಲೀ ನಮ್ಮ ರಾಜಕೀಯ ನಾಯಕರಲ್ಲಿ ಉಳಿದಿಲ್ಲ. ಮೂತ್ರ ವಿಸರ್ಜನೆ ಅಥವಾ ಮಲ ತಿನ್ನಿಸುವ ಪ್ರಕರಣದಲ್ಲಿ ಕಾಣಬೇಕಿರುವುದು ನಮ್ಮ ಸಮಾಜದ ಗರ್ಭದೊಳಗೇ ಜೀವಂತಿಕೆಯಿಂದಿರುವ ಕ್ರೌರ್ಯ, ಅಮಾನುಷತೆ ಮತ್ತು ಸಾಂಸ್ಕೃತಿಕ ಮೇಲರಿಮೆ. ಶ್ರೇಣೀಕೃತ ಸಮಾಜದ ಸಹಜ ಪ್ರವೃತ್ತಿಯಾದ ಈ ಮೇಲರಿಮೆಯೇ ದೇಶಾದ್ಯಂತ ನಡೆಯುತ್ತಿರುವ ಅಸ್ಪೃಶ್ಯತೆಯ ಪ್ರಕರಣಗಳಿಗೂ ಕಾರಣವಾಗಿದೆ. ಇದರೊಟ್ಟಿಗೆ ಪುರುಷಾಧಿಪತ್ಯವೂ ಮೇಳೈಸಿದಾಗ ಅಮಾಯಕ ಮಹಿಳೆಯರು ಅಮಾನುಷತೆಗೆ ಬಲಿಯಾಗುತ್ತಾರೆ.
ಸಾಮಾಜಿಕ ನೈತಿಕತೆ ಮತ್ತು ಜವಾಬ್ದಾರಿ
ಹಾಗಾದರೆ ನಮ್ಮ ಆಳ್ವಿಕರು ಮತ್ತು ವಿಶಾಲ ಸಮಾಜ ತೊಳೆಯಬೇಕಿರುವುದು ಯಾರ ಪಾದಗಳನ್ನು ? ಕಳೆದುಕೊಳ್ಳಬೇಕಿರುವುದು ಯಾವ ಪಾಪಪ್ರಜ್ಞೆಯನ್ನು ? ಪಾಪಪ್ರಜ್ಞೆಯ ನಿವೇದನೆಯಾಗಬೇಕಿರುವುದು ಯಾರ ಮುಂದೆ ? ಹಾಗೆ ನೋಡಿದರೆ ಅಧಿಕಾರ ರಾಜಕಾರಣವನ್ನು ಪ್ರತಿನಿಧಿಸುವವರು ತೊಳೆಯಬೇಕಾದ ಪಾದಗಳು ಕೋಟಿ ಸಂಖ್ಯೆಯಲ್ಲಿವೆ ಅಲ್ಲವೇ ? ದಾಳಿಗೊಳಗಾದ ಒಬ್ಬ ವ್ಯಕ್ತಿಯ ಪಾದ ತೊಳೆಯುವುದರಿಂದ ನಮ್ಮ ಚಾರಿತ್ರಿಕ ಪಾಪಗಳು ತೊಳೆದುಹೋಗುತ್ತವೆಯೇ ? ಒಂದು ಇಡೀ ಸಮುದಾಯ ಅಥವಾ ಸಮಾಜವೂ ಚಲಿಸುತ್ತದೆ ಆದರೆ ಅದರ ಪಾದಗಳು ತೊಳೆಯಲು ಸಿಗುವುದಿಲ್ಲ. ಏಕೆಂದರೆ ಸಮಾಜದ ಮುಂಚಲನೆಯ ಪ್ರತಿಯೊಂದು ಹೆಜ್ಜೆಯ ಹಿಂದೆ ನಾವೇ ರೂಢಿಸಿಕೊಂಡ ಸಂಸ್ಕೃತಿ ಇರುತ್ತದೆ. ಈ ಸಂಸ್ಕೃತಿಯನ್ನು ಮರುವಿಮರ್ಶೆಗೊಳಪಡಿಸುವುದು ಅವಶ್ಯವಲ್ಲವೇ ? ಇತಿಹಾಸ ಕಾಲದಿಂದಲೂ ನಡೆಯುತ್ತಿರುವ ಶೋಷಣೆ ಮತ್ತು ಕ್ರೌರ್ಯಗಳೇ ಇಂದಿಗೂ ಮರುಕಳಿಸುತ್ತಿರುವಾಗ ಪಾಪಪ್ರಜ್ಞೆ ಮೂಡಬೇಕಿರುವುದು ಆಳ್ವಿಕೆಯಲ್ಲೋ ಅಥವಾ ನಾಗರಿಕ ಎಂದು ಗುರುತಿಸಿಕೊಳ್ಳುವ ವಿಶಾಲ ಸಮಾಜದಲ್ಲೋ ? ಅರಿತೋ ಅರಿಯದೆಯೋ ಮಾಡಿದ ಪಾಪಗಳನ್ನೇನೂ ನಾವು ಕಾಣುತ್ತಿಲ್ಲ. ಎಲ್ಲವೂ ಸಹ ಪ್ರಜ್ಞಾಪೂರ್ವಕವಾಗಿಯೇ ಕಾಣುತ್ತವೆ. ಏಕೆಂದರೆ ಯಾವುದೋ ಒಂದು ಪ್ರಾಚೀನ ಸಂಹಿತೆ ನಮ್ಮೊಳಗಿನ ಅಮಾನುಷ ಕೃತ್ಯಗಳಿಗೆ ಅಧಿಕೃತತೆ ನೀಡುತ್ತದೆ. ಈ ಸಂಹಿತೆಗಳೇ ಸಾಮೂಹಿಕ ಹತ್ಯಾಕಾಂಡದಂತಹ ಕ್ರೌರ್ಯಗಳಿಗೂ ಮಾನ್ಯತೆ ನೀಡುತ್ತವೆ.
ಒಂದು ಪ್ರಜ್ಞಾವಂತ ಸಮಾಜದಲ್ಲಿ ಪಾಪಪ್ರಜ್ಞೆ ಮೂಡುವುದೇ ಆದರೆ ಇಂತಹ ಕ್ರೂರ ಸಂಹಿತೆಗಳ ವಿರುದ್ಧ ಮೂಡಬೇಕಾಗುತ್ತದೆ. ಜಾತಿ ಶ್ರೇಷ್ಠತೆ ಮತ್ತು ಮತಶ್ರೇಷ್ಠತೆಯ ನಂಬಿಕೆಗಳು ಎರಡೂ ನೆಲೆಗಳಲ್ಲಿ ಅಂಧಾನುಸರಣೆಯ ಪರಿಕರಗಳಾದಾಗ ಮೇಲರಿಮೆ ಮತ್ತು ಅಹಮಿಕೆಯ ಮನೋಭಾವ ಸಹಜಾಭಿವ್ಯಕ್ತಿಯಾಗಿಬಿಡುತ್ತದೆ. ಇಲ್ಲಿ ಸಮಾಜವೇ ಸೃಷ್ಟಿಸುವಂತಹ ಭಿನ್ನತೆಯ ಪರದೆಗಳು ಸಾಮಾಜಿಕ ಪ್ರಾಬಲ್ಯ ಮತ್ತು ಆರ್ಥಿಕ ಪಾರಮ್ಯದ ಪರಿಣಾಮವಾಗಿ ಶಾಶ್ವತ ಗೋಡೆಗಳಾಗಿ ಪರಿಣಮಿಸುತ್ತವೆ. ಇಲ್ಲಿ ಶೋಷಿತರೊಳಗಿನ ಶೋಷಕ ವರ್ಗವೊಂದು ಉದಯಿಸುವುದು ಚಾರಿತ್ರಿಕ ವಾಸ್ತವವೂ ಆಗಿದೆ. ನಮ್ಮ ಸುತ್ತಲೂ ದಿನನಿತ್ಯ ನಡೆಯುತ್ತಿರುವ ಕೊಲೆ, ಹತ್ಯೆ, ದೈಹಿಕ ಹಲ್ಲೆ, ಮಹಿಳಾ ದೌರ್ಜನ್ಯ ಮತ್ತು ಅತ್ಯಾಚಾರ, ಅಸ್ಪೃಶ್ಯತೆ, ಗುಂಪು ಥಳಿತ ಮುಂತಾದ ಅಮಾನುಷ ಕೃತ್ಯಗಳಿಗೆ ಈ ಗೋಡೆಗಳೇ ರಕ್ಷಾ ಕವಚಗಳಾಗುತ್ತವೆ.

ಸಾಮಾಜಿಕ-ಸಾಂಸ್ಕೃತಿಕ ಸಾಮರಸ್ಯ, ಸೌಹಾರ್ದತೆ ಮತ್ತು ಸಮಾನತೆಯನ್ನು ಕಾಪಾಡುವುದು ತಮ್ಮ ಸಾಂವಿಧಾನಿಕ ಆದ್ಯತೆ ಮತ್ತು ಕರ್ತವ್ಯ ಎಂದು ಭಾವಿಸಿ ಆಳ್ವಿಕೆ ನಡೆಸಬೇಕಾದ ಅಧಿಕಾರ ರಾಜಕಾರಣಕ್ಕೆ ಇವುಗಳನ್ನು ಕದಡುವ ಯಾವುದೇ ಒಂದು ಪ್ರವೃತ್ತಿ ಅಥವಾ ಚಟುವಟಿಕೆ ಕೇವಲ ಕಾನೂನು ಸುವ್ಯವಸ್ಥೆಯ ವಿಷಯವಾಗಿ ಕಂಡಾಗ, ಮಧ್ಯಪ್ರದೇಶದಲ್ಲಿ ನಡೆದಂತಹ ಪಾದಪೂಜೆಯ ಪ್ರಹಸನಗಳು ನಡೆಯುತ್ತವೆ. ಅಥವಾ ಧಾರ್ಮಿಕ ನಾಯಕರಿಂದ ದಲಿತ ಕೇರಿಯ ಪಾದಯಾತ್ರೆ, ದಲಿತರ ಮನೆಯ ಭೋಜನ ಮುಂತಾದ ಪ್ರಸಂಗಗಳು ಸಂಭವಿಸುತ್ತವೆ. ಇಲ್ಲಿ ಪಾಪಪ್ರಜ್ಞೆಯೂ ಸಹ ವ್ಯಕ್ತಿನಿಷ್ಠವಾಗಿ ಕಾಣುವುದೇ ಹೊರತು ವಸ್ತುನಿಷ್ಠ ನೆಲೆಯಲ್ಲಿ ವ್ಯಕ್ತವಾಗುವುದಿಲ್ಲ. ಈ ಸಾಂಸ್ಥಿಕ ವೈಪರೀತ್ಯಗಳ ಹೊರತಾಗಿಯೂ ನಮ್ಮ ನಡುವೆ ಒಂದು ಸಂವೇದನಾಶೀಲ ಸಮಾಜ ಉಸಿರಾಡುತ್ತಿರುತ್ತದೆ. ಆದರೆ ಈ ಉಸಿರಾಡುತ್ತಿರುವ ಸಮಾಜದ ಬಹುಸಂಖ್ಯೆಯು ಸುತ್ತಲಿನ ಅಮಾನುಷತೆಗೆ ಮೌನ ಪ್ರತಿಕ್ರಿಯೆ ನೀಡುವ ಮೂಲಕ ತನ್ನ ನಿರ್ಲಿಪ್ತತೆಯನ್ನು ಪ್ರದರ್ಶಿಸುತ್ತಿರುತ್ತದೆ. ಈ ನಿರ್ಲಿಪ್ತತೆ/ಬೌದ್ಧಿಕ ನಿಷ್ಕ್ರಿಯತೆಗೆ ಕಾರಣಗಳೇನೇ ಇದ್ದರೂ ಇದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಬೇಜವಾಬ್ದಾರಿತನವಾಗಿ ಕಾಣುತ್ತದೆ. ಈ ಸಮಾಜದಲ್ಲಿ ಸೂಕ್ಷ್ಮ ಸಂವೇದನೆಯನ್ನು ಮೂಡಿಸುವ ಮೂಲಕ ಮನುಜ-ಲಿಂಗ ಸೂಕ್ಷ್ಮತೆಯನ್ನು ಉದ್ಧೀಪನಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ನಾವು ಕಳೆದುಕೊಳ್ಳಬೇಕಿರುವುದು ಪಾಪಪ್ರಜ್ಞೆಯನ್ನಲ್ಲ ಬದಲಾಗಿ ಸಮಾಜದ ನರನಾಡಿಗಳಲ್ಲೂ ಪ್ರವಹಿಸುತ್ತಿರುವ ಪಾತಕ ಪ್ರಜ್ಞೆಯನ್ನು, ತೊಡೆದುಹಾಕಬೇಕಿರುವುದು ಬೇರುಬಿಟ್ಟಿರುವ ಮೇಲರಿಮೆಯ ಪ್ರಜ್ಞೆಯನ್ನು. ತನ್ಮೂಲಕ ಒಂದು ಸಂವೇದನಾಶೀಲ ಸಮಾಜವನ್ನು ಕಟ್ಟಲು ಮುಂದಾಗಬೇಕಿದೆ.
ತೊಳೆಯಲ್ಪಡುವ ಪಾದಗಳು ಎಂದೂ ಮಲಿನವಾಗಿರುವುದಿಲ್ಲ. ತೊಳೆಯುವ ಮನಸ್ಸುಗಳೊಳಗಿನ ಮಾಲಿನ್ಯವನ್ನು ಹೋಗಲಾಡಿಸುವುದು ಸಮಾಜದ ಆದ್ಯತೆಯಾದರೆ ನಾವು ಹಚ್ಚಿಕೊಂಡಿರುವ ʼನಾಗರಿಕತೆʼಯ ಲೇಬಲ್ ಸಾರ್ಥಕವಾದೀತು.
ನಾ ದಿವಾಕರ