ನವದೆಹಲಿ : ಇರಾನ್ ಸರ್ವೋಚ್ಚ ನಾಯಕನಾಗಿದ್ದ ಆಯತೊಲ್ಲಾ ಅಲಿ ಖಮೇನಿಯ ಹತ್ಯೆಯನ್ನು ಭಾರತ ಖಂಡಿಸಿದೆ. ಕಳೆದ ಐದು ದಿನಗಳಿಂದಲೂ ಈ ವಿಚಾರ ಸಾಕಷ್ಟು ಚರ್ಚೆಯಲ್ಲಿತ್ತು. ವಿಪಕ್ಷಗಳು ಖಮೇನಿ ಹತ್ಯೆಯ ಬಗ್ಗೆ ಸರ್ಕಾರದ ನಿಲುವನ್ನು ತಿಳಿಸಬೇಕೆಂದು ಆಗ್ರಹಿಸಿದ್ದವು.

ಆದರೆ ಇಂದು ಭಾರತದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಂ ಮಿಸ್ರಿ ಇಲ್ಲಿಯ ಇರಾನ್ನ ರಾಯಭಾರಿ ಕಚೇರಿಗೆ ತೆರಳಿ ಅಲ್ಲಿನ ರಾಯಭಾರಿಯನ್ನು ಭೇಟಿಯಾಗಿದ್ದಾರೆ. ಈ ವೇಳೆಯಲ್ಲಿ ಕಚೇರಿಯ ಡೈರಿಯಲ್ಲಿ ವಿಕ್ರಂ ಮಿಸ್ರಿ ಖಮೇನಿಯ ಹತ್ಯೆಯ ಕುರಿತು ಸಂತಾಪ ಸೂಚಿಸಿದ್ದಾರೆ.
ಇರಾನ್ – ಇಸ್ರೇಲ್ ಹಾಗೂ ಅಮೆರಿಕಗಳ ನಡುವೆ ಮುಂದುವರೆದಿರುವ ಯುದ್ಧದಲ್ಲಿ ಖಮೇನಿಯನ್ನು ಇಸ್ರೇಲ್ ಕ್ಷಿಪಣಿ ದಾಳಿಯಿಂದ ಹೊಡೆದುರುಳಿಸಿತ್ತು. ಇದು ಇರಾನ್ ಕೆರಳಿ ಕೆಂಡವಾಗಲು ಕಾರಣವಾಗಿದೆ. ಹೀಗಾಗಿ ಇರಾನ್ ಇಸ್ರೇಲ್, ಅಮೆರಿಕಕ್ಕೆ ಸಂಬಂಧಿಸಿದ ಸ್ಥಳಗಳ ಮೇಲೆ ನಿರಂತರ ದಾಳಿ ನಡೆಸುತ್ತಿದೆ.
ಇದನ್ನೂ ಓದಿ : ಜಾನಪದದ ಹೆಸರಲ್ಲಿ ಅಶ್ಲೀಲ, ಅಸಭ್ಯ ಗೀತೆ ರಚಿಸಿ, ಹಾಡುವವರ ವಿರುದ್ಧ : – ಡಿಜಿಪಿ ಕ್ರಮ ಏನು..?
ಭಾರತದಲ್ಲಿಯೂ ಕೆಲವು ಕಡೆಗಳಲ್ಲಿ ಖಮೇನಿ ಕೊಲೆಯನ್ನು ಖಂಡಿಸಿ ಪ್ರತಿಭಟನೆಗಳೂ ನಡೆಯುತ್ತಿವೆ. ಈ ನಡುವೆಯೇ ವಿಪಕ್ಷಗಳು ಆಯತೊಲ್ಲಾ ಅಲಿ ಖಮೇನಿ ಭಾರತದೊಂದಿಗೆ ರಾಜತಾಂತ್ರಿಕವಾಗಿ ಹೊಂದಿದ್ದ ಸಂಬಂಧದ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದವು. ಭಾರತ ಸರ್ಕಾರ ಯಾಕೆ ಮೌನಕ್ಕೆ ಶರಣಾಗಿದೆ ಎಂದು ರಾಜ್ಯಸಭಾ ಸಂಸದೆ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದರು.
ಗಲ್ಫ್ ರಾಷ್ಟ್ರಗಳ ನಾಯಕರೊಂದಿಗೆ ಚರ್ಚಿಸಿದ್ದ ಮೋದಿ..
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಗಲ್ಫ್ ರಾಷ್ಟ್ರಗಳ ರಾಜರು ಹಾಗೂ ನಾಯಕರೊಂದಿಗೆ ದೂರವಾಣಿ ಕರೆ ಮಾಡಿ ಸಂತಾಪ ಸೂಚಿಸಿದ್ದಾರೆ. ಯುದ್ಧ ಪೀಡಿತ ಪ್ರದೇಶಗಳಲ್ಲಿನ ಭಾರತೀಯರ ರಕ್ಷಣೆಯ ಕುರಿತು ಮನವಿ ಮಾಡಿದ್ದಾರೆ. ರಾಜತಾಂತ್ರಿಕವಾಗಿ ಅಂತಾರಾಷ್ಟ್ರೀಯ ಮಟ್ಟದ ಮಾತುಕತೆಗಳು ಅತ್ಯಂತ ಮುಖ್ಯವಾಗಿವೆ ಎಂದು ತಿಳಿಸಿದ್ದಾರೆ. ಈ ಬಳಿಕ ಇದೀಗ ಭಾರತ ಇರಾನ್ ನಾಯಕನ ಹತ್ಯೆಯನ್ನು ಖಂಡಿಸಿದೆ.






